ಶ್ರೀಮಂತ ರಾಷ್ಟ್ರದ ವಿಜ್ಞಾನ ಸಂಶೋಧನಾ ಭಂಡಾರಕ್ಕೇಉಳಿತಾಯದ ಮಾರ್ಗ ತೋರಿದ ಈ ಕನ್ನಡಿಗ ಯಾರು?
* ಹಾಲ್ದೊಡ್ಡೇರಿ ಸುಧೀಂದ್ರ
ಹಿನ್ನೆಲೆ:ತಡಸದಲ್ಲಿನ ದೈವಜ್ಞ ಬ್ರಾಹ್ಮಣ ತಿಮ್ಮಪ್ಪ-ಕಾಮಾಕ್ಷಿಯವರದು ದೊಡ್ಡ ಕುಟುಂಬ. ಐದು ಜನ ಗಂಡು ಮಕ್ಕಳು, ಆರು ಹೆಣ್ಣು ಮಕ್ಕಳಲ್ಲಿ ಕೊನೆಯವರೇ ಶ್ರೀಪಾದ. ಮನೆಯಲ್ಲಿ ಕೊನೆಯವರಾದರೂ ಬುದ್ಧಿವಂತಿಕೆಯಲ್ಲಿ ಮೊದಲಿಗರು. ಚುರುಕುಮತಿ. ಹಳ್ಳಿಯ ಶಾಲೆಯಲ್ಲಿ ಕನ್ನಡದಲ್ಲೇ ಕಲಿತು, ಎಸ್ಎಸ್ಎಲ್ಸಿಯನ್ನು ಪ್ರಥಮ ದರ್ಜೆಯಲ್ಲಿ ಪಾಸ್ ಮಾಡಿದಾಗ ಕೈಬೀಸಿ ಕರೆದದ್ದು, ಹುಬ್ಬಳ್ಳಿಯ ಬಾಸೆಲ್ ಮಿಷನ್ ಸಂಸ್ಥೆ. ಅಲ್ಲಿ ಪ್ರಥಮ ದರ್ಜೆಯಲ್ಲಿ ಪಿ.ಯು.ಸಿ. ಮುಗಿಸಿ ಮುನ್ನಡೆದದ್ದು, ಪಿ.ಸಿ. ಜಾಬಿನ್ ವಿಜ್ಞಾನ ಕಾಲೇಜಿಗೆ.
ಬಿಎಸ್ಸಿಯಲ್ಲಿ ಕರ್ನಾಟಕ ವಿ.ವಿಗೇ ಏಳನೇ ರ್ಯಾಂಕ್ ಗಳಿಸಿದ ಶ್ರೀಪಾದ್ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಆದರೆ, ಶ್ರೀಪಾದರ ನೈಜ ಹಾಗೂ ಸುಪ್ತ ಪ್ರತಿಭೆ ಪ್ರಕಾಶಕ್ಕೆ ಬಂದದ್ದು, ಅವರು 1977ರಲ್ಲಿ . ಭೌತಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದಾಗ.
ಸ್ನಾತಕೋತ್ತರ ಪದವಿಯಲ್ಲಿ ದ್ವಿತೀಯ ರ್ಯಾಂಕ್ ಪಡೆಯುವುದರ ಜೊತೆಗೆ ರೇವಣಕರ್, ಪಿಎಚ್ಡಿಗೆ ಪ್ರವೇಶ ಪಡೆದರು. 1981ರಲ್ಲಿ ಡಾಕ್ಟರೇಟ್ ಪಡೆದರು. ಈ ಮಧ್ಯೆ ಭಾಬಾ ಪರಮಾಣು ಸಂಶೋಧನಾ ಕೇಂದ್ರದಿಂದ ‘ನಿರ್ವಾತ ತಂತ್ರಜ್ಞಾನ’ದ ಬಗ್ಗೆ ಒಂದು ಅಂತಾರಾಷ್ಟ್ರೀಯ ಪದವಿಯನ್ನೂ ಪಡೆದರು.
ಕೆನಡಾದ ಮೆಕ್ ಮಾಸ್ಟರ್ ವಿವಿಯಲ್ಲಿ ಪ್ರವೇಶ ಗಿಟ್ಟಿಸಿದ ಈ ಪ್ರಚಂಡ ಪ್ರತಿಭಾವಂತ, ಎರಡೇ ವರ್ಷದಲ್ಲಿ ಬೈಜಿಕ ಎಂಜಿನಿಯರಿಂಗ್ನ ಉನ್ನತ ಪದವಿಗೆ ಪಾತ್ರರಾದರು. ಒಂದು ವರ್ಷ ಸಂಶೋಧಕರಾಗಿ ಕೆಲಸ ಮಾಡಿ, ಅಮೆರಿಕದ ಬರ್ಕ್ಲೆ ವಿವಿಗೆ ವಲಸೆಹೋದ ಶ್ರೀಪಾದರು, 1987ರ ತನಕ ತಮ್ಮ ಸಂಶೋಧನೆ ಮುಂದುವರಿಸಿದರು.
ಕಳೆದ 14 ವರ್ಷಗಳಿಂದ ಬೈಜಿಕ ಎಂಜಿನಿಯರಿಂಗ್ ವಿಭಾಗದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶ್ರೀಪಾದರ ಬಗ್ಗೆ ಪರ್ಡ್ಯೂ ವಿವಿಗೆ ಅಪಾರ ಹೆಮ್ಮೆ ಇದೆ. ಶಾಖ ಪ್ರಸರಣೆ ವಿಷಯದಲ್ಲಿ ಪಾಂಡಿತ್ಯ ಗಳಿಸಿರುವ ಅವರಿಗೆ ವಿಶ್ವ ಮನ್ನಣೆ ದೊರೆತಿದೆ.
ಪ್ರತಿಷ್ಠಿತ ಎಂಜಿನಿಯರಿಂಗ್ ಸಂಘಟನೆಗಳಾದ ‘ಅಮೆರಿಕನ್ ನ್ಯೂಕ್ಲಿಯಾರ್ ಸೊಸೈಟಿ’ ‘ಅಮೆರಿಕನ್ ಸೊಸೈಟಿ ಆಫ್ ಮೆಕ್ಯಾನಿಕಲ್ ಎಂಜಿನಿಯರ್ಸ್’ ಮತ್ತು ‘ಅಮೆರಿಕನ್ ಸೊಸೈಟಿ ಫಾರ್ ಎಂಜಿನಿಯರಿಂಗ್ ಎಜುಕೇಷನ್’ಗಳ ಸಕ್ರಿಯ ಸದಸ್ಯರಾಗಿರುವ ಶ್ರೀಪಾದ್, ಅಂತಾರಾಷ್ಟ್ರೀಯ ಮಟ್ಟದ ತಂತ್ರಜ್ಞಾನ ಪತ್ರಿಕೆಗಳಲ್ಲಿ - ಸಮಾವೇಶಗಳಲ್ಲಿ ನೂರಕ್ಕೂ ಹೆಚ್ಚು ಪ್ರೌಢ ಪ್ರಬಂಧಗಳನ್ನು ಮಂಡಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವುದರ ಜೊತೆಗೆ ವಿವಿಗಳಿಗೆ, ಉದ್ದಿಮೆಗಳಿಗೆ ತಾಂತ್ರಿಕ ಸಲಹೆಗಳನ್ನೂ ನೀಡುತ್ತಾರೆ. ಜೊತೆಗೆ ತಂತ್ರಜ್ಞಾನ ಪತ್ರಿಕೆಗಳಿಗೆ ಬರುವ ಪ್ರಬಂಧಗಳ ವಿಮರ್ಶೆ ಮಾಡುತ್ತಾರೆ.
ಅನೇಕ ಅಂತಾರಾಷ್ಟ್ರೀಯ ಗೌರವಗಳಿಗೆ ಪಾತ್ರರಾಗಿರುವ ಶ್ರೀಪಾದ್ ತಮ್ಮ ಹಳ್ಳಿಯ ಬೇರುಗಳನ್ನು ಮರೆತಿಲ್ಲ. ಕನ್ನಡ ಮಾಧ್ಯಮದ ಅಂದಿನ ತಮ್ಮ ಕಲಿಕೆಯನ್ನೂ ಇಂದಿಗೂ ಸ್ಮರಿಸುತ್ತಾರೆ. ಸರಳತೆಯ ಸಾಕಾರ ಮೂರ್ತಿ ಹಾಗೂ ನಿಗರ್ವಿ ಶ್ರೀಪಾದರಿಗೆ ದೊರೆತಿರುವ ಈ ಅಂತಾರಾಷ್ಟ್ರೀಯ ಮನ್ನಣೆ, ಅಮೆರಿಕನ್ನಡಿಗರ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ.
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications