ಕನ್ನಡ ಪತ್ರಿಕೋದ್ಯಮದ ‘ ಒಳದನಿ ’ ಕೆ . ಶ್ರೀಧರ ಆಚಾರ್
ಶ್ರೀಧರ ಆಚಾರ್ ನಾಡಿನ ಹಿರಿಯ ಪತ್ರಕರ್ತರು. ಪುತ್ತೂರಿನವರು. 8-4-1943ರಲ್ಲಿ ಜನನ. ವಾಣಿಜ್ಯ ಪದವೀಧರರು. ಪ್ರಸ್ತುತ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಸಹ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1965ರಲ್ಲಿ ಮಂಗಳೂರಿನ ನವಭಾರತ ದಿನಪತ್ರಿಕೆಯಿಂದ ವೃತ್ತಿ ಜೀವನ ಆರಂಭಿಸಿದ ಶ್ರೀಧರ್ ಆಚಾರ್ 1967ರಲ್ಲಿ ಪ್ರಜಾವಾಣಿ ವರದಿಗಾರರಾಗಿ ಸೇರಿದರು. ಅದೇ ಪತ್ರಿಕೆಯಲ್ಲಿ ಹಿರಿಯ ವರದಿಗಾರರಾಗಿ, ಸಹಾಯಕ ಸಂಪಾದಕರಾಗಿಯೂ ಸೇವೆ ಸಲ್ಲಿಸಿದವರು.
ವಿದ್ಯಮಾನ, ಒಳದನಿ, ವಾರದ ರಾಜಕೀಯ ಮೊದಲಾದ ಜನಪ್ರಿಯ ಅಂಕಣಗಳಿಂದ ಮನೆಮಾತಾದ ಶ್ರೀಧರ ಆಚಾರ್ ಪ್ರೆಸ್ಕ್ಲಬ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವೂ ಸೇರಿದಂತೆ ಹಲವು ಸಂಘಟನೆಗಳ ಪದಾಧಿಕಾರಿಗಳಾಗಿಯೂ ದುಡಿದವರು. ಕರ್ನಾಟಕ ರಾಜ್ಯ ಸರಕಾರ ಇವರನ್ನು ಕರ್ನಾಟಕ ಪತ್ರಿಕಾ ಅಕಾಡಮಿಯ ಅಧ್ಯಕ್ಷರನ್ನಾಗಿಯೂ ನೇಮಿಸಿತ್ತು.
ಸುಧಾ, ಮಯೂರ, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲಿ ಇವರ ನೂರಾರು ಅತ್ಯುತ್ತಮ ಲೇಖನಗಳನ್ನು ಬರೆದಿದ್ದಾರೆ. ಮಲೆನಾಡು ಸಂಘದ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಶ್ರೀಧರ ಆಚಾರ್ ಅವರಿಗೆ ದಕ ಕನ್ನಡ ವೇದಿಕೆ ಈ ಬಾರಿಯ ಭಾರ್ಗವ ಪ್ರಶಸ್ತಿ ಯನ್ನು (ಪತ್ರಿಕೋದ್ಯಮ ವಿಭಾಗ) ನೀಡಿ ಗೌರವಿಸಿದೆ.
ದೇಶ - ವಿದೇಶಗಳನ್ನು ಸುತ್ತಿ ಬಂದಿರುವ ಶ್ರೀಧರ ಆಚಾರ್ ತಮ್ಮ ಅನುಭವಗಳನ್ನೆಲ್ಲಾ ಲೇಖನಗಳ ಮೂಲಕ ಕನ್ನಡಿಗರಿಗೆ ನೀಡಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ, ವಿ.ಪಿ. ಸಿಂಗ್ ಅವರ ಜತೆಯಲ್ಲಿ ವಿದೇಶ ಯಾತ್ರೆ ಕೈಗೊಂಡಿದ್ದ ಇವರು, ಅಮೆರಿಕಾ ದಕ್ಷಿಣ ಏಷ್ಯಾ ಸಂಬಂಧ ಕುರಿತು ಅಧ್ಯಯನವನ್ನೂ ಮಾಡಿದ್ದಾರೆ. ಈ ಅಧ್ಯಯನಕ್ಕಾಗಿ ಅಮೆರಿಕಾ ಸರಕಾರದ ಆಹ್ವಾನದ ಮೇರೆಗೆ 30 ದಿನಗಳ ಅಮೆರಿಕಾ ಪ್ರವಾಸವನ್ನೂ ಇವರು ಕೈಗೊಂಡಿದ್ದರು.