ಬಾನಂಗಳದಲ್ಲಿ ಬೆಳ್ಳಿಹಕ್ಕಿ
ಛಲವಿದ್ದೊಡೆ ಗಗನ ಮುಟ್ಟಬಹುದು. ‘ಉಡಾನ್’ ಎಂಬ ಹಿಂದಿ ಧಾರಾವಾಹಿಯಲ್ಲಿ ಹೆಣಗಾಟಗಳನ್ನೂ ಮೀರಿ ಗಗನದತ್ತ ಹಾರುವ ಹೆಣ್ಣು ಮಗಳೊಬ್ಬಳನ್ನು ನಾವು ನೋಡಿದ್ದೇವೆ. ಅಂಥಾ ಒಂದು ಸಾಧನೆಯನ್ನು ದೇಶದ ವಿವಿಧ ಭಾಷೆ, ಜಾತಿಯ ಮಂದಿಯೂ ನೋಡಿದ್ದಾರೆ. ಮರು ದಿನವೇ ಅವರ ಮನೆಯ ಹೆಣ್ಣು ಮಗಳು ನಾನೂ ಅವಳಂತೆ ಆಗುತ್ತೇನೆ ಅಂತ ಹಠ ಹಿಡಿದರೆ, ಅದಕ್ಕೆ ಒಲ್ಲೆ ಎಂಬುವರೇ ಹೆಚ್ಚು. ‘ನಮ್ಮ ಜಾತಿಯಲ್ಲಿ ಹೆಣ್ಣು ಮಕ್ಕಳು ಹೆಚ್ಚು ಓದಕೂಡದು. ಅದೇನಿದ್ದರೂ ಗಂಡು ಮಕ್ಕಳ ಕೆಲಸ ಎಂಬ ತಾಕೀತು’ ಇಂದಿಗೂ ಇಣುಕುತ್ತದೆ. ಇಂಥಾ ಜಾತಿ- ಕೋಮು ಜನತೆಯ ಮಾತಿನ ಗುಂಡುಗಳಿಗೆ ಎದೆಗೊಟ್ಟು, ಮೈಸೂರಿನ ಹೆಣ್ಣು ಮಗಳೊಬ್ಬಳು ಎತ್ತರೆತ್ತರ ಹಾರಿದ್ದಾಳೆ.
ಹೆಸರು ಶ್ವೇತ. ವಯಸ್ಸು 19. ಇವತ್ತಿನ ಅತಿ ಕಿರಿಯ ಕಮರ್ಷಿಯಲ್ ಪೈಲಟ್. ಈಗಾಗಲೇ 1600 ತಾಸುಗಳ ಕಾಲ ಗಗನ ಬೇಧಿಸಿದ ಅನುಭವ. ತರಾವರಿ ಅಂತರರಾಷ್ಟ್ರೀಯ ವಿಮಾನಗಳನ್ನು ಆಕಾಶಕ್ಕೊಯ್ದು ಶಹಭಾಸ್ಗಿರಿ ಪಡೆದವಳು. ಫ್ಲೋರಿಡಾ ಮೂಲದ ಫೆಡರೇಷನ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಕೋರ್ಸ್ ಮಾಡಿರುವ ಅತಿ ಕಿರಿಯಳು ಈಕೆ. ಈ ಸಾಧ-ನೆ-ಯ ಹೋಮಕ್ಕಾಗಿ, ಮಾಡಿರುವ ಸಾಲ ಸುಮಾರು 45,000 ಡಾಲರ್ಗಳು ! ಶ್ವೇತಾಗೆ ಇನ್ನೂ ಹಾರುವಾಸೆ. ಹಿಂತಿರುಗಿ ನೋಡಿದರೆ ಸಣ್ಣದೊಂದು ಭಯ. ಅಬ್ಬಾ ಎಷ್ಟೊಂದು ಸಾಲ.
ಮೂರು ವರ್ಷಗಳ ಹಿಂದೆ ಬೆಳಗಾವಿಯ ಎನ್ಸಿಸಿ ಶಿಬಿರ. ಅಂದು ಶ್ವೇತಾಳ ಮನ್ವಂತರ. ಗ್ಲೈಡರ್ ವ್ಯಾಯಾಮದ ಸರಬರ ತಾಲೀಮಿನಲ್ಲಿ ನೋಡುಗರು ಶ್ವೇತಾಳ ಸೆರೆಯಾದರು. ಅಷ್ಟು ಅದ್ಭುತವಾಗಿತ್ತು ಅವಳಲ್ಲಿ ಪ್ರತಿಭೆ. ‘ನೀನು ಎತ್ತರಕ್ಕೆ ಹಾರಬೇಕು. ತರಾವರಿ ವಿಮಾನಗಳ ಹಾರಿಸಬೇಕು’ ಅಂತ ಅದೆಷ್ಟೋ ಜನ ಬೆನ್ನುತಟ್ಟಿದರು. ಮನೆಗೆ ಓಡಿ ಬಂದು ತನ್ನ ಹಾರಾಟದ ಪರಾಕ್ರಮವನ್ನು ತೋಡಿಕೊಂಡ ಶ್ವೇತಾ ತಲೆಯನ್ನಷ್ಟೇ ಸವರಲು ಶಕ್ತವಾಗಿದ್ದರು ಅಮ್ಮ- ಅಣ್ಣ. ಕಾರಣ, ಅವರದು ಮಧ್ಯಮ ವರ್ಗದ ದರ್ಜಿ ಕೆಲಸ. ಭವಸಾರ ಕ್ಷತ್ರಿಯ ಕುಟುಂಬದ ಹೆಂಗಸರು ಹಾರಕೂಡದೆಂಬ ಯಾರದೋ ತಾಕೀತು.
ಸೋದರ ನಂದಾ ಟೇಮ್ಕರ್ ತನ್ನ ಕೈಮೀರಿ ಯತ್ನಿಸುವುದೂ ಅಸಾಧ್ಯವಾಗಿತ್ತು. ಅಮೆರಿಕೆಗೆ ತರಪೇತಿಗೆ ಕಳುಹಿಸಲು ಮೊದಲೇ ಹೊಂದಿಸಬೇಕಾದ ಸಾವಿರಾರು ರುಪಾಯಿ ಕೈಗೆಟುಕುವಂತಿರಲಿಲ್ಲ. ಅಷ್ಟೊಂದು ಸಾಲ ಕೇಳುವ ಧೈರ್ಯವೂ ಅವರಲ್ಲಿರಲಿಲ್ಲ. ಕೊಡಬಲ್ಲ ಯಾರೂ ಗೊತ್ತಿರಲಿಲ್ಲ. ಶ್ವೇತಾ ಮಂಡಿಗೆ ಮುಖ ಅಂಟಿಸಿ ಕೂತಳು. ಆದರೆ ಹಾಗೇ ಕಳೆದುಹೋಗಲಿಲ್ಲ. ಮನೆಯವರು ಸಮಾಧಾನ ಹೇಳಿದರು. ಹಾರೇ ತೀರುವೆ ಎನ್ನುವುದಾದರೆ ಬ್ಯಾಂಕಿನಲ್ಲಿ ಸಾಲ ತೆಗೆಯೋಣ ಎಂದರು. ಶ್ವೇತಾ ಅರಳಿದಳು. ಕೆನರಾ ಬ್ಯಾಂಕ್ ಸಾಲಕೊಟ್ಟಿತು.
‘ನಮ್ಮ ದೇಶದ ಮಹಿಳಾ ಕಮರ್ಷಿಯಲ್ ಪೈಲಟ್ಗಳ ಸಂಖ್ಯೆ ಕೇವಲ 5. ಈ ಪೈಕಿ ನಿನ್ನ ತಂಗಿ ಅತಿ ಚಿಕ್ಕವಳು’ ಎಂಬ ಸಿಹಿ ಸುದ್ದಿಯನ್ನು ನಮಗೆ ಸಾಲ ಕೊಟ್ಟು, ಸಹಾಯ ಮಾಡಿರುವ ಕೆನರಾ ಬ್ಯಾಂಕ್ ಅಧಿಕಾರಿಗಳು ಹೇಳಿದಾಗ ಮಾತೇ ಹೊರಡಲಿಲ್ಲ. ನಮ್ಮ ಜನಾಂಗದವರಿಗೆ ಅವಳನ್ನು ಕೋರ್ಸಿಗೆ ಕಳುಹಿಸುವುದು ಸುತಾರಾಂ ಇಷ್ಟವಿರಲಿಲ್ಲ. ಎಲ್ಲರನ್ನೂ ಎದುರು ಹಾಕಿಕೊಂಡು ಅವಳು ಕೊನೆಗೂ ಸಾಧಿಸಿದ್ದಾಳೆ ಅನ್ನುತ್ತಲೇ ಶ್ವೇತಾ ಅಣ್ಣ ನಂದಾ ಟೇಮ್ಕರ್ ಕಣ್ಣಲ್ಲಿ ಆನಂದ ಭಾಷ್ಪ.
ಜೆ.ಎಚ್.ಪಟೇಲರು ಬದುಕಿದ್ದಾಗ ಎಂಥಾ ಒಳ್ಳೆಯ ಕೆಲಸ ಮಾಡಿದ್ದರು...
‘ಸುತ್ತೂರು ಮಠದ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್.ಪಟೇಲ್ ಹಾಗೂ ಅವರ ಮಗ ಮಹಿಮಾ ಪಟೇಲ್ ನಮಗೆ ಸಹಾಯ ಮಾಡದಿದ್ದರೆ ಶ್ವೇತಾ ಅಮೆರಿಕೆಗೆ ಹಾರುತ್ತಲೇ ಇರಲಿಲ್ಲ. ನಿಮ್ಮ ಮಗಳನ್ನು ಪೈಲಟ್ ಮಾಡಕೂಡದೆಂದು ನಮ್ಮ ಜನ ಪದೇ ಪದೇ ಹೇಳಿದರು. ಅಂಥಾ ಸಮಯದಲ್ಲಿ ಇವರು ನಮಗೆ ಸಹಾಯ ಮಾಡಿದರು’, ನೆನಪಿಸಿಕೊಳ್ಳುತ್ತಾರೆ ಶ್ವೇತಾಳ ತಾಯಿ ಸ್ವರ್ಣಲತ.
ಫೀಸು ಕೊಟ್ಟಿದ್ದು ಕೆನರಾ ಬ್ಯಾಂಕ್. ಆ ಸಾಲ ಬಡ್ಡಿ ಸೇರಿ ಸಾಕಷ್ಟು ಬೆಳೆದಿದೆ. ಬೋರ್ಡಿಗ್ ಮತ್ತು ಊಟಕ್ಕೆ ಶ್ವೇತಾ ಓದುತ್ತಲೇ ಹಣ ಸಂಪಾದಿಸುತ್ತಿದ್ದಳು; ಅಂಗಡಿಗಳಲ್ಲಿ ಪಾರ್ಟ್ ಟೈಂ ಕೆಲಸ ಮಾಡಿ. ಈಗ ಶ್ವೇತಾಗೆ ಎಟಿಎಯಲ್ಲಿ ಕೆಲಸ ಸಿಕ್ಕಿದೆ. ಎಸ್ಎಎಪಿ 320 ವಿಮಾನಗಳನ್ನು ಹಾರಿಸುತ್ತಾಳೆ. ಯಶಸ್ಸಿನ ಬಗ್ಗೆ ಕೇಳಿದರೆ ಸಣ್ಣಗೆ ನಗುತ್ತಾಳೆ. ಮನೆಯವರು ಮನಸ್ಸು ಮಾಡದಿದ್ರೆ ಏನೂ ಸಾಧಿಸಲಾಗುತ್ತಿರಲಿಲ್ಲ. ಇನ್ನೂ ಓದುವಾಸೆ, ಮತ್ತೆ ನಗು.
ಸದ್ಯಕ್ಕೆ ಶ್ವೇತಾ ಠಿಕಾಣಿ ಅಮೆರಿಕೆಯಲ್ಲಿ. ಕೆನರಾ ಬ್ಯಾಂಕಿನ ಸಾಲ ಕರಗುವವರೆಗೆ ಸಾಧ್ಯವಾದಷ್ಟು ಸಂಪಾದಿಸಲೇಬೇಕು. ಸಾಲವೇನೋ ತೀರಿಹೋಗುತ್ತದೆ. ಆದರೂ ಶ್ವೇತಾ ಇನ್ನೂ ಎತ್ತರೆತ್ತರ ಹಾರುತ್ತಲೇ ಇರುತ್ತಾಳೆ. ಯಾಕೆಂದರೆ, ಅವಳು ಹಾರುಹಕ್ಕಿ !
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications