ಎಂಟಿಆರ್ ಪರಿಮಳವನ್ನು ವಿಶ್ವಾದ್ಯಂತ ಪಸರಿಸಿದ ಪಿ. ಸದಾನಂದ ಮಯ್ಯ
ಬೆಂಗಳೂರಿನ ಹೆಮ್ಮೆಯ ಲಾಲ್ಬಾಗ್ ಬಳಿಯಾಂದು ಹೋಟೆಲ್. ಈ ಹೋಟೆಲ್ ಹೆಸರು ಕೇಳದವರೇ ವಿರಳ. ಜನ ಗಂಟೆಗಟ್ಟಲೆ ಕ್ಯೂ ನಿಂತಾದರೂ ಸರಿ ಇಲ್ಲೇ ದೋಸೆ ತಿನ್ನ ಬೇಕು ಎಂದು ಕಾಯುತ್ತಾರೆಂದರೆ, ಈ ಹೋಟೆಲ್ನ ಹಿರಿಮೆ ತಿಳಿದೀತು. ಅದುವೇ ಎಂ.ಟಿ.ಆರ್. ಅರ್ಥಾತ್ ಮಾವಳ್ಳಿ ಟಿಫಿನ್ ರೂಂ.
ಇಂದು ಈ ಹೋಟೆಲ್ ಒಂದು ಅತ್ಯಾಧುನಿಕ ಆಹಾರ ಘಟಕವನ್ನೂ ಹೊಂದಿದೆ. ಈ ಘಟಕದ ಉತ್ಪನ್ನಗಳು ವಿಶ್ವಾದ್ಯಂತ ಮಾರುಕಟ್ಟೆ ಹೊಂದಿದ್ದು, ಎಂ.ಟಿ.ಆರ್. ಪರಿಮಳ ವಿಶ್ವದ ಮೂಲೆ ಮೂಲೆಗೂ ಪಸರಿಸಿದೆ. ಈ ಕೀರ್ತಿಯ ಹಿಂದಿರುವ ಶಕ್ತಿ ಪಿ. ಸದಾನಂದ ಮಯ್ಯ ಅವರು. ಉಡುಪಿ ತಾಲೂಕಿನ ಪಾರಂಪಳ್ಳಿಯಲ್ಲಿ 13-7-1949ರಲ್ಲಿ ಜನಿಸಿದ ಮಯ್ಯರು ಹೋಟೆಲ್ನ ಸಂಸ್ಥಾಪಕರಲ್ಲಿ ಒಬ್ಬರು.
ಇವರು ಓದಿದ್ದು ಎಲೆಕ್ಟ್ರಾನಿಕ್ ಎಂಜಿನಿಯರ್ ಆದರೂ ವೃತ್ತಿಯಲ್ಲಿ ಆಯ್ಕೆ ಮಾಡಿಕೊಂಡಿದ್ದು ಆಹಾರ ಘಟಕವನ್ನು. ಬೆಂಗಳೂರಿನ ಬೊಮ್ಮಸಂದ್ರದಲ್ಲಿ ಆಹಾರ ಘಟಕದ ಕಾರ್ಖಾನೆ ಹೊಂದಿರುವ ಮಯ್ಯರು ಎಂ.ಟಿ.ಆರ್. ಫುಡ್ಸ್ ಲಿಮಿಟೆಡ್ನ ಅಧ್ಯಕ್ಷರು ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್. ಜನರ ಬೇಡಿಕೆಗೆ ಅನುಗುಣವಾಗಿ ಆಹಾರ ಸಾಮಗ್ರಿ ಉತ್ಪಾದಿಸಲು ಅತ್ಯಾಧುನಿಕ ಉಪಕರಣಗಳನ್ನು ಹೊಂದಿರುವ ಈ ಸಂಸ್ಥೆಯಲ್ಲಿ ಪರಿಶುದ್ಧತೆಯ ಮೌಲ್ಯ ಮಾಪನಕ್ಕೂ ಮಯ್ಯರು ಹೆಚ್ಚಿನ ಒತ್ತು ನೀಡಿದ್ದಾರೆ.
ದಿಢೀರ್ ತಿನಿಸುಗಳ ಕ್ಷೇತ್ರದಲ್ಲಿ ಮಯ್ಯರು ಮಾಡಿರುವ ಆವಿಷ್ಕಾರಗಳು, ಐಸ್ ಕ್ರೀಂ ಕ್ರಾಂತಿ ಜನಮನ್ನಣೆ ಪಡೆದಿವೆ. ಕೇವಲ ಉದ್ಯಮಿಯಾಗಷ್ಟೇ ತಮ್ಮನ್ನು ಗುರುತಿಸಿಕೊಳ್ಳದ ಮಯ್ಯರು ಧಾರ್ಮಿಕ - ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೋತ್ಸವ, ಮೆಡಿಕಲ್ ಕ್ಯಾಂಪ್, ಶೈಕ್ಷಣಿಕ ಕಾರ್ಯಕ್ರಮಗಳಿಗೂ ಸಹಾಯ ಹಸ್ತ ನೀಡತ್ತಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಗೌರವ ಕೋಶಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ನರಸಿಂಹ ಪ್ರಶಸ್ತಿ ಪುರಸ್ಕೃತರಾದ ಸದಾನಂದ ಮಯ್ಯ ಅವರಿಗೆ ದಕ್ಷಿಣ ಕನ್ನಡ ಕನ್ನಡಿಗರ ಬಳಗ ಈ ಬಾರಿಯ (ಉದ್ಯಮ) ಭಾರ್ಗವ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications