ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆದ್ದ ಕನ್ನಡಿಗಕ್ಯಾಮೆರಾ ಕಣ್ಣಿನ ‘ಪ್ರವೀಣ’

By Staff
|
Google Oneindia Kannada News

(ಮುಂದುವರಿದ ಭಾಗ)

ಛಾಯಾಗ್ರಹಣದಲ್ಲಿ ಛಾಯಾಗ್ರಾಹಕನ ಮನಃಸ್ಧಿತಿ ಎಷ್ಟು ಮುಖ್ಯವೋ ಪ್ರಕೃತಿಮಾತೆಯ ಸಹಕಾರವೂ ಅಷ್ಟೇ ಮುಖ್ಯ ಎನ್ನುವುದು ಪ್ರವೀಣ್‌ ಅವರ ಅಭಿಪ್ರಾಯ. ‘ಅದೃಷ್ಟ’ ಕೂಡ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂಬುದು ಅವರು ಅನುಭವದಿಂದ ಕಂಡುಕೊಂಡ ಸಂಗತಿ.

‘‘ಛಾಯಾಗ್ರಹಣಕ್ಕೆ ಹೊರಟ ಸಮಯ ಅತ್ಯಂತ ಪ್ರಶಸ್ತವಾಗಿದ್ದರೂ ಕೆಲಬಾರಿ ಸಡನ್ನಾಗಿ ಮಳೆ ಬರುವುದುಂಟು, ಮಳೆ ಬರದಿದ್ದರೂ ಮೋಡ ಮುಸುಕಿದ ವಾತಾವರಣ ಸೃಷ್ಟಿಯಾಗಬಹುದು. ಕೆಲಬಾರಿ ಬೆಳಕು ಚೆನ್ನಾಗಿದ್ದರೂ ಪ್ರಾಣಿಗಳು ಹತ್ತಿರ ಹಾಯುವುದಿಲ್ಲ. ಮತ್ತೆ ಕೆಲವು ಸಲ ಪ್ರಾಣಿಗಳಿದ್ದರೂ ಬೆಳಕು ಚೆನ್ನಾಗಿರುವುದಿಲ್ಲ’’ ಎಂಬುದು ಪ್ರವೀಣ್‌ ಅವರ ಮನುಷ್ಯ, ಪ್ರಾಣಿ, ಪ್ರಕೃತಿಗಳ ಹೊಂದಾಣಿಕೆ ಕುರಿತಂಥ ವಿಶ್ಲೇಷಣೆ.

ಅಕಾಡೆಮಿ ಕೂಡ ಗುರುತಿಸಿಲ್ಲ

ಈ ದುಬಾರಿಯಾದ ಹವ್ಯಾಸವನ್ನು ಪೋಷಿಸಲು ತಾಳ್ಮೆ, ಅದೃಷ್ಟ ಮಾತ್ರ ಸಾಲದು, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುವ ಉಮೇದಿ ಇರಬೇಕು ಎಂಬುದು ಪ್ರವೀಣ್‌ ಅವರ ಅನುಭವದಿಂದ ಬಂದಂಥ ಮಾತು. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಛಾಯಾಚಿತ್ರಣದಲ್ಲಿ ಕರ್ನಾಟಕದ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ ಸಿ. ರಾಜಗೋಪಾಲ್‌, ಪೆರುಮಾಳ್‌, ಘೋರ್ಪಡೆ ಅಂಥವರನ್ನು ಸರ್ಕಾರ ಗೌರವಿಸಿದರೂ, ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿದ ಶ್ರೀನಿವಾಸ್‌, ಸತೀಶ್‌ ಮುಂತಾದ ಛಾಯಾಚಿತ್ರಕಾರರನ್ನು ಗುರುತಿಸುವಲ್ಲಿ ಕರ್ನಾಟಕ ಸರ್ಕಾರ ಸೋತಿದೆ. ಛಾಯಾಗ್ರಹಣವನ್ನು ಒಂದು ಸೃಜನಶೀಲ ಕಲೆಯಾಗಿ ಲಲಿತಕಲಾ ಅಕಾಡೆಮಿ ಕೂಡ ಗುರುತಿಸಿಲ್ಲ ಎಂದು ಪ್ರವೀಣ್‌ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಅಭಿಜಾತ ಪ್ರತಿಭೆ

ಕೇಂದ್ರ ಅಬಕಾರಿ ಇಲಾಖೆಯ ಕೆಲಸದೊಂದಿಗೆ ಛಾಯಾಚಿತ್ರಣ ಮತ್ತು ಅಭಿನಯವನ್ನು ಪ್ರವೀಣ್‌ ಅವರು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಬಾಲ್ಯದಿಂದಲೂ ನಾಟಕಗಳಲ್ಲಿ ಅಭಿನಯಿಸುತ್ತಿದ್ದರೂ ಕಿರು ಪರದೆಗೆ ಅವರು ಕಾಲಿಟ್ಟಿದ್ದು ಎಚ್‌.ಎಂ.ಆರ್‌. ಮೂರ್ತಿ ನಿರ್ದೇಶನದ ‘ರೀ ಮರಿಬೇಡಿ’ ಧಾರಾವಾಹಿಯ ಮುಖಾಂತರ; 1990ರಲ್ಲಿ. ಹಾಸ್ಯ ಅಭಿನಯವನ್ನು ಮೆಚ್ಚುವ ಅವರ ವಿಶಿಷ್ಟ ಶೈಲಿಯ ಹಾಸ್ಯಭರಿತ ಅಭಿನಯ ಪ್ರೇಕ್ಷಕರಿಗೆ ಮನೋರಂಜನೆಯ ಮಹಾಪೂರವನ್ನೇ ಹರಿಸಿತ್ತು. ತದನಂತರ, ಅಪರಾಧಿ ಯಾರು?, ಬೇಡವಾದ ಮಗು, ಮೂರು ಗಂಟು, ನಾನು ನೀನು ಜೋಡಿ... ಮುಂತಾದ ಧಾರಾವಾಹಿಗಳಲ್ಲಿ ಅವರು ಅಭಿನಯಿಸಿದ್ದಾರೆ.

ಎಂಇಎಸ್‌ ಕಾಲೇಜಿನಲ್ಲಿ ಅವರು ನಿರ್ದೇಶಿಸಿದ್ದ ಎಲ್ಲಾ ಆರು ನಾಟಕಗಳು ರಾಜ್ಯಮಟ್ಟದ ಪ್ರಶಸ್ತಿ ಗಳಿಸಿದ್ದು ಇಲ್ಲಿಯತನಕ ದಾಖಲೆಯಾಗಿಯೇ ಉಳಿದಿದೆ. ಯಶವಂತ ಚಿತ್ತಾಲರ ಅಬೋಲಿನಾ, ಟಿಪಿ ಕೈಲಾಸಂ ಅವರ ಸೂಳೆ, ಹುತ್ತದಲ್ಲಿ ಹುತ್ತ, ಅಮ್ಮಾವ್ರ ಗಂಡ... ಹೀಗೆ ‘ಮುಟ್ಟಿದ್ದೆಲ್ಲ ಚಿನ್ನ’ ಎಂಬಂತೆ ಪ್ರವೀಣ್‌ ಅವರಿಗೆ ಪ್ರಶಸ್ತಿ, ಗೌರವ ತಂದುಕೊಟ್ಟಿವೆ.

ಉಲ್ಲೇಖಿಸಲೇಬೇಕಾದ ಮತ್ತೊಂದು ವಿಷಯವೆಂದರೆ, ಪ್ರವೀಣ್‌ ಅವರ ಬಾಳಸಂಗಾತಿಯಾಗಿರುವ ಸೌಮ್ಯ ಪ್ರವೀಣ್‌ಕುಮಾರ್‌ ಅವರು ಕೂಡ ಉತ್ತಮ ನಟಿಯಾಗಿದ್ದು, ಅನೇಕ ನಾಟಕ, ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ ಮತ್ತು ಪ್ರವೀಣ್‌ ಅವರ ಯಶಸ್ಸಿನಲ್ಲಿ ಪಾಲು ಹೊಂದಿದ್ದಾರೆ. ಯಶಸ್ವಿ ಪುರುಷನ ಹಿಂದೆ ಒಂದು ಮಹಿಳೆಯ ಕೈ ಇರುತ್ತದೆಂಬ ಮಾತು ಸುಳ್ಳಲ್ಲ.

ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನೀವು ಖುದ್ದಾಗಿ ಎಚ್‌.ವಿ. ಪ್ರವೀಣ್‌ ಕುಮಾರ ಅವರನ್ನು ಸಂಪರ್ಕಿಸಬಹುದು.


ಎಎಫ್‌ಐಎಪಿ- ಇದು ನಿಮಗೆ ಗೊತ್ತೆ?
What do you think about this story ?


ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X