ಡೆಟ್ರಾಯಿಟ್ ಕನ್ನಡ ಮೇಳದಲೇಖನ ಗುಚ್ಛ ಸಂಪಾದಿಸಲಿರುವ ಕುಂಭಾಸಿ ಪ್ರತಿಭೆ
ಕುಂಭಾಸಿ ಶ್ರೀನಿವಾಸ ಭಟ್ ಹಿಂದೆ ಪಂಪಕನ್ನಡ ಕೂಟದ ಅಧ್ಯಕ್ಷರಾಗಿದ್ದವರು. ಈ ಬಾರಿ ಡೆಟ್ರಾಯಿಟ್ನಲ್ಲಿ ನಡೆಯುವ ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಯ ಸಂಪಾದಕರಾಗಿ ಆಯ್ಕೆಯಾಗಿದ್ದಾರೆ.
ಶ್ರೀನಿವಾಸ ಭಟ್ಟರ ಹುಟ್ಟೂರು ಉಡುಪಿಯ ಕುಂಭಾಸಿ. ವೃತ್ತಿ ಜೀವನದಲ್ಲಿ ಮೇಲೇರುತ್ತಾ 1977ರಲ್ಲಿ ಅಮೆರಿಕಾಕ್ಕೆ ಹೋದರು. ಮೈಸೂರು ವಿಶ್ವ ವಿದ್ಯಾಲಯದಲ್ಲಿ ಬಿಎಸ್ಎಂಇ ಪದವಿ ಪಡೆದ ಭಟ್ಟರದು ಗೋಲ್ಡ್ ಮೆಡಲ್ ಪ್ರತಿಭೆ. ಪೂನಾದ ಟಾಟಾ ಇಂಜಿನಿಯರಿಂಗ್ ಸಂಸ್ಥೆ, ಹರಿಹರದ ಕಿರ್ಲೋಸ್ಕರ್ , ಕಾನ್ಸಾಸ್ನ ಸೆಸ್ನಾ ಏರ್ಕ್ರಾಫ್ಟ್ನಲ್ಲಿ ದುಡಿದ ಅನುಭವ. ಜೊತೆಗೇ ಕನ್ನಡದ ಕೈಂಕರ್ಯ. ಪ್ರಸ್ತುತ ಜನರಲ್ ಮೋಟಾರ್ಸ್ ಕಾರ್ಪೊರೇಷನ್ನಲ್ಲಿ ದುಡಿಮೆ. 1998ರಲ್ಲಿ ಭಟ್ಟರಿಗೆ ದಕ್ಕಿದ ಪ್ರೆಸಿಡೆಂಟ್ಷಿಪ್ ಕೌನ್ಸಿಲ್ ಪ್ರಶಸ್ತಿ ಅವರ ವೃತ್ತಿ ಜೀವನ ನಿಯತ್ತಿಗೆ ಸಂದ ಪುರಸ್ಕಾರ.
ಭಟ್ಟರದು ಬಹುಮುಖ ದುಡಿಮೆ
ಶ್ರೀನಿವಾಸ ಭಟ್ಟರ ಬದುಕು ಆಫೀಸು, ಮನೆ, ಹೆಂಡತಿ ಮಕ್ಕಳ ನಡುವೆ ಮಾತ್ರ ಹುದುಗಿ ಹೋಗಿಲ್ಲ. ಅಧ್ಯಯನದ ಜೊತೆ ಜೊತೆಗೆ, ಸ್ನೇಹಿತರ ಪಟಾಲಂನೊಂದಿಗೆ ಸಮಾಜ ಸೇವೆ ಮಾಡುತ್ತಿದ್ದಾರೆ. ಉದಾಹರಣೆಗೆ ನೋಡಿ, ವಿಶ್ವ ಮಾಧ್ವ ಸಂಘ ಮತ್ತು ಕಿವಾನಿಸ್ ಕ್ಲಬ್ನ ನಿರ್ದೇಶನ. ಮಿಚಿಗನ್ ಹವ್ಯಾಸೀ ಕನ್ನಡ ನಾಟಕ ತಂಡ ‘ಗೆಳೆಯರ ಬಳಗ’ ದ ಸದಸ್ಯತ್ವ. ಫ್ಲಿಂಟ್ ಮಿಚಿಗನ್ನ ಭಾರತೀಯ ದೇವಸ್ಥಾನದ ಸ್ವಯಂ ಸೇವಕ. ‘ಸತ್ಕಾರ್ಯ’ ಎಂಬ ಚಾರಿಟೇಬಲ್ ಫೌಂಡೇಷನ್ ನಿರ್ವಹಣೆ.
ಆರೋಗ್ಯ ಶಿಬಿರಗಳು, ಗ್ರಂಥಾಲಯ ವ್ಯವಸ್ಥೆ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು, ದೇವಸ್ಥಾನದ ಜೀರ್ಣೋದ್ಧಾರ, ಬಡ ಮಕ್ಕಳಿಗೆ ಸಮವಸ್ತ್ರ ನೀಡುವಂತಹ ಕಾರ್ಯಗಳಲ್ಲಿ ಶ್ರೀನಿವಾಸ ಭಟ್ಟರು ಸಂತೋಷದಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಸಂಸ್ಕೃತ ಕೋವಿದ ಸರ್ಟಿಫಿಕೇಟ್ ಗಿಟ್ಟಿಸಿಕೊಂಡ ಭಟ್ಟರ ಸಂಸ್ಕೃತ ಜ್ಞಾನಕ್ಕೆ ಇದು ಮಿತಿಯಲ್ಲ. ಬರಹಗಾರ ಶ್ರೀನಿವಾಸರ ಲೇಖನಗಳು ಅಮೆರಿಕನ್ನಡ, ಸ್ಪಂದನ, ಸುಧಾ, ತರಂಗದಂತಹ ಪ್ರಸಿದ್ಧ ನಿಯತ ಕಾಲಿಕಗಳಲ್ಲಿ ಪ್ರಕಟವಾಗಿವೆ. ಕಳೆದ ಬಾರಿ ಹೂಸ್ಟನ್ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಇವರ ಕವನಗಳೂ ಪ್ರಕಟವಾಗಿವೆ. ಮಧ್ವಾಚಾರ್ಯರ ಬಗೆಗೆ ಬರೆದ ಪುಸ್ತಕದ ಸಹ ಸಂಪಾದಕರೂ ಹೌದು. ಪಂಪ ಕನ್ನಡ ಕೂಟದ ದ್ವೈಮಾಸಿಕ ‘ಸ್ಪಂದನ’ದ ಸಂಪಾದಕರಾಗಿ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಶ್ರೀನಿವಾಸ ಭಟ್ಟರ ಸೃಜನಶೀಲತೆಯ ಉದಾಹರಣೆಗೆ ಅವರ ಕವನಗಳನ್ನೋದಿ.