ಹೀಗೊಬ್ಬ ರಸ್ತೆ ರಾಜ...
*ವಿಶಾಖ ಎನ್.
ಬೆಂಗಳೂರಿನ ಎಂಜಿ ರಸ್ತೆಯ ಫುಟ್ಪಾತ್. ಅಲ್ಲೊಬ್ಬ ಭಿಕ್ಷುಕ. ಬಗಲಲ್ಲೊಂದು ಗೋಣಿತಾಟು. ಅದರ ಮೇಲೊಂದು ಅಲ್ಯುಮಿನಿಯಂ ತಟ್ಟೆ. ಅಲ್ಲೇ ಒಂದು ಎರಡು ಎಲ್ಲಾ ಆಗಿಬಿಟ್ಟಿದೆ. ಅಕ್ಷರಶಃ ಕೊಳೆತು ನಾರುತ್ತಿದ್ದಾನೆ. ಅವನನ್ನು ನೋಡುವ ನೀವು ಏನು ಮಾಡುವಿರಿ?
ಚಿಲ್ಲರೆ ಕಾಸು ಎಸೆದು ಮುಂದೆ ಹೋಗಬಹುದು. ಅಯ್ಯೋ ಪಾಪ ಅನ್ನಬಹುದು. ಇಲ್ಲವೇ ಥೂ ಅಂತ ಹೇವರಿಕೆ ಪಟ್ಟುಕೊಂಡು ಮುನ್ನಡೆಯಬಹುದು. ಆದರೆ, ಸಾಮಾನ್ಯ ಮನಸ್ಸುಗಳನ್ನು ಮೀರಿದ ಒಬ್ಬರು ನಮ್ಮ ನಡುವೆಯೇ ಇದ್ದಾರೆ. ಆತ ಅಯ್ಯೋ ಪಾಪ ಎಂದು ಮುಗುಮ್ಮಾಗಿ ಮುಂದೆ ಹೋಗುವುದಿಲ್ಲ. ಚಿಲ್ಲರೆ ಎಸೆದು ಸುಮ್ಮಗಾಗುವುದಿಲ್ಲ. ಭಿಕ್ಷೆ ಬಿಸುಡದೆ, ಭಿಕ್ಷುಕನಿಗೆ ಜೀವನ ಕೊಡುತ್ತಾರೆ. ಹೊತ್ತೊಯ್ದು ಸಾಕುತ್ತಾರೆ !
ಹೆಸರು ಟಿ.ರಾಜ. 6 ವರ್ಷಗಳಿಂದ ಮನಸ್ಸು ಅನಾಥ ಜೀವಗಳಿಗೆ ತುಡಿಯುತ್ತಿದೆ. ದೊಡ್ಡ ಗುಬ್ಬಿ ಬಳಿಯ ಮನೆಯಲ್ಲಿ ಈತನದು 30 ಜನಗಳ ಕುಟುಂಬ. ಅದರಲ್ಲಿ ಹೊತ್ತು ತಂದು ಸಾಕುತ್ತಿರುವ ಜೀವಗಳು 22. ಒಂದೂವರೆ ವರ್ಷದ ಮಗುವಿನಿಂದ ಹಿಡಿದು ಮಲಗಿದಲ್ಲೇ ಸೇವೆ ಮಾಡಿಸಿಕೊಳ್ಳುವ 101 ವರ್ಷದ ವಯೋವೃದ್ಧರವರೆಗೆ ಎಲ್ಲರಿಗೂ ರಾಜು ಅಂಡ್ ಫ್ರೆಂಡ್ಸ್ ಸೇವೆ. ಕಕ್ಕಸ್ಸು ಮೆತ್ತಿಕೊಂಡ ಶರೀರಗಳನ್ನು ತೊಳೆದು, ಶೇವ್ ಮಾಡಿ, ಹಸನಾದ ಬಟ್ಟೆ ಹಾಕಿ ಅವರೂ ನಮ್ಮೊಳಗೊಬ್ಬರಂತೆ ಬಾಳುವಂತೆ ಮಾಡುವ ಉಮೇದಿ ರಾಜ ಅವರದು.
ಆಟೋ ರಾಜ ರಸ್ತೆ ರಾಜ ಆದದ್ದಾದರೂ ಯಾಕೆ?
ಹತ್ತು ವರುಷದ ಹಿಂದೆ ಇದೇ ರಾಜು ರೌಡಿ ಎಂಬ ಪಟ್ಟ ಹೊತ್ತಿದ್ದರು. ಮನೆಗೆ ಹೋದರೆ ಅಪ್ಪ- ಅಮ್ಮ ಊಟ ಹಾಕುತ್ತಿರಲಿಲ್ಲ. 3ನೇ ಕ್ಲಾಸಿನವರೆಗೆ ಮಾತ್ರ ಶಾಲೆ ಕಂಡು, ಅದು ತನಗಲ್ಲ ಎಂಬ ಧೋರಣೆ ತಳೆದು ಕೆಟ್ಟ ಸಹವಾಸಕ್ಕೆ ಬಿದ್ದ ರಾಜು ಹೊಡಿ- ಚಚ್ಚು ಎಂಬಂಥಾ ಮಾತುಗಳನ್ನಾಡುತ್ತಿದ್ದವರು. ಕಾಸಿಲ್ಲದಿದ್ದರೂ ಸರಿ, ಬೀದೀಲಿ ಬಿದ್ದ ಮೋಟು ಬೀಡಿಯನ್ನೇ ಕಾಲುಮೇಲೆ ಕಾಲು ಹಾಕಿಕೊಂಡು ಸೇದಿ, ತನ್ನನ್ನು ತಾನೇ ಬಾದಶಹ ಅಂದುಕೊಂಡವರು. ಮೂರ್ನಾಲ್ಕು ವರ್ಷ ಇದೇ ಜೀವನ; ಉಂಡಾಡಿಗುಂಡನಾಗಿ ಪುಂಡ ಪೋಕರಿಯಾಗಿ. ರಾಜನ ಈ ವಿಶ್ವರೂಪ ನೋಡಿದವರಲ್ಲೂ ಇದೀಗ ಸಾಲಿಲೊಕಿ- ಕಲ್ಲರಳಿ ಹೂವಾಗಿ.
ಅಬ್ಬಾಸ್ ಎಂಬ ಜೀವನ ಚಾಲಕ : ಶೋಕಿಗೋ ಏನೋ ಡ್ರೆೃವಿಂಗ್ ಕಲಿಯಲು ಅಬ್ಬಾಸ್ ಡ್ರೆೃವಿಂಗ್ ಸ್ಕೂಲ್ಗೆ ಸೇರಿದರು ರಾಜ. ಆ ಅಬ್ಬಾಸ್ ಇವರ ಜೀವನದ ಚಾಲಕರಾಗಿಬಿಟ್ಟರು. ಕೆಟ್ಟ ಚಾಳಿ ಬಿಡು, ಒಳ್ಳೆಯವನಾಗಿ ಸಿಗುವ ಸುಖ ಅನುಭವಿಸು ಅಂತ ಪಾಠ ಹೇಳಿದರು. ಕರ್ನಾಟಕ ಇವ್ಯಾಂಟಿಕ್ ಅಸೋಸಿಯೇಷನ್ನಲ್ಲಿ ರಾಜನಿಗೆ ಡ್ರೆೃವರ್ ಕೆಲಸ ಸಿಕ್ಕಿತು. ಅಲ್ಲಿ ರೋಗಿಗಳಿಗೆ ಸೇವೆ ಮಾಡುವ ಅವಕಾಶ. ಔಷಧಿಗಳನ್ನು ತಂದು ಕೊಡುವುದರಿಂದ ಹಿಡಿದು ಶುಶ್ರೂಷೆಗೂ ರಾಜನ ನೆರವು. ಆಮೇಲೆ ಆಟೋ ಓಡಿಸತೊಡಗಿದರು.
ಒಮ್ಮೆ ಚರ್ಚೊಂದರ ಪಾದ್ರಿ ಹೇಳಿದರು- ‘ಒಬ್ಬರಿಗೆ ಊಟ ಹಾಕಿದರೆ ಅದು ಏಸುವಿಗೆ ಹಾಕಿದಂತೆ, ಬಟ್ಟೆ ಕೊಟ್ಟರೆ ಏಸುವಿಗೆ ಅರ್ಪಿಸಿದಂತೆ. ಇದು ನನ್ನ ಮಾತಲ್ಲ. ಬೈಬಲ್ನಲ್ಲಿದೆ’. ಈ ಮಾತು ರಾಜನನ್ನು ತೀವ್ರವಾಗಿ ಕಾಡಿತು. ಅಂದಿನಿಂದ ರಸ್ತೆ ಬದಿಯವರ ಕಂಡರೆ ಕರುಳು ಚುರ್ರು. ತೀರಾ ನೋವಿನಿಂದ ಬಳಲುವವರನ್ನು ಆಸ್ಪತ್ರೆಗೆ ಸಾಗಿಸಲು ರಾಜ ಅನುವು. ಅದೊಂದು ವಿಫಲ ಯತ್ನ. ಆರೇಳು ಜನ ಸತ್ತುಹೋದರು. ನಮ್ಮ ವೈದ್ಯಕೀಯ ವ್ಯವಸ್ಥೆ ಅಷ್ಟು ಫಾಸ್ಟು ! ಅದಕ್ಕೆ ರಾಜನ ಮನಸ್ಸು ಇನ್ನೂ ದೊಡ್ಡದಾಯಿತು. ನಿರ್ಗತಿಕರನ್ನು ಹೊತ್ತು ತಂದು ಸಾಕಲು ಶುರುವಿಟ್ಟರು.
ಹೆಂಡತಿ- ಒಂದು ಮಗುವಿನ ಸಂಸಾರದ ನೊಗ, ನಿರ್ಗತಿಕರ ದೊಡ್ಡ ಜಗ ಹೆಗಲ ಮೇಲೆ ಹೊತ್ತ ರಾಜ ಕುಬೇರನಲ್ಲ. ರೌಡಿ ಅಂತ ಹೆಸರು ಹೇಳಿಕೊಂಡು ದುಡ್ಡೇನೂ ಮಾಡಿರಲಿಲ್ಲವಲ್ಲ. ಗೆಳೆಯರ ಬಳಗದಲ್ಲೇ ಹಣ ಎತ್ತಿದರು. ಗೊತ್ತಿರುವವರಿಗೆ ಅಕ್ಕಿ, ಬೇಳೆ, ಎಣ್ಣೆ ಕೊಡಿಸಿ ಅಂತ ಕೇಳಿಕೊಂಡರು. ಕಂಡಕಂಡಲ್ಲಿ ಸಿಕ್ಕ ಶ್ವಪಚ ಅನಾಥರ ಸ್ವರೂಪವನ್ನೇ ಬದಲಿಸುವ ರಾಜ ಯಾಗ ಚುರುಕಾಯಿತು. ಪಾಲ್ ತಂಗಯ್ಯ ಎಂಬ ಪಾದ್ರಿಯಾಬ್ಬರು ಕೊಡಿಸಿದ ಆಟೋ ನೊಂದ ಜೀವಗಳನ್ನು ಹೊತ್ತು ತಂದಿತು.
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications