ಪ್ರಕೃತಿಯ ಪಾಠಕ್ಕೆ ಮಕ್ಕಳನ್ನು ಒಡ್ಡಿದ ಅರಿವು ಶಾಲೆ

Arivu Education and Cultural Trust, Mysore
ಕನ್ನಡ ಶಾಲೆಗಳ ಬಗ್ಗೆ ಮಾತಾಡ್ತಾ ಈ ಬಾರಿ ಮೈಸೂರಿಗೆ ಹೋಗಿ ಬರೋಣ ಬನ್ನಿ. ಮೈಸೂರಲ್ಲಿ ಲಿಂಗಾಂಬುದಿ ಪಾಳ್ಯದ ರಸ್ತೆಯಲ್ಲಿ ಒಂದು ಶಾಲೆಯಿದೆ. 'ಒಳ್ಳೆಯ ಕಲಿಕೆಯಿಂದಲೇ ಮುಂದಿನ ಜನಾಂಗ, ನಾಡು, ನುಡಿ, ಪರಿಸರ ಇವುಗಳ ಬೆಳವಣಿಗೆ' ಎಂದು ನಂಬಿರುವ ಕೆಲವು ಸಮಾನ ಮನಸ್ಕರು ಒಟ್ಟಾಗಿ "ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್" ಮಾಡಿಕೊಂಡು ಈ ಶಾಲೆಯನ್ನು ನಡೆಸುತ್ತಿದ್ದಾರೆ. ಸದ್ಯಕ್ಕೆ ಎಲ್.ಕೆ.ಜಿಯಿಂದ 2ನೇ ತರಗತಿಯವರೆಗೆ ಇರೋ ಈ ಶಾಲೆಗೆ ಈಗ 3 ವರ್ಷ ತುಂಬಿದ್ದು ಮುಂದಿನ ವರ್ಷದಿಂದ 3ನೇ ಹಾಗು 8ನೇ ತರಗತಿಗಳು ಪ್ರಾರಂಭವಾಗುವುದರಲ್ಲಿದೆ.

ಕಲಿಕೆಯ ಹೊಸತಂತ್ರ!

ಮಕ್ಕಳಲ್ಲಿ ಸಾಮಾಜಿಕ ಕಳಕಳಿ, ಸಾಂಸ್ಕೃತಿಕ ಬದ್ಧತೆ, ಪರಿಸರದೊಂದಿಗೆ ಹೊಂದಾಣಿಕೆ, ನಾಯಕತ್ವ ಮತ್ತು ಸಹಕಾರದ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಇಲ್ಲಿ ಪರಿಸರಕ್ಕೂ, ಮಕ್ಕಳಿಗೂ ಹಿತವೆನ್ನಿಸೋ ಕಲಿಕೆಯನ್ನು ನೀಡುತ್ತಿದೆ. ಮಕ್ಕಳಿಗೆ ತಾವಿರುವ ಪರಿಸರದಿಂದಲೇ ಶಿಕ್ಷಣ ನೀಡುತ್ತಾ ಇಂದಿನ ಸ್ಫರ್ಧಾ ಪ್ರಪಂಚದಲ್ಲಿ ತಮ್ಮತನ ಕಾಯ್ದುಕೊಳ್ಳುವಂತಹ ಸುಲಭ - ಸಹಜ ಕಲಿಕೆಗೆ ಅನುವು ಮಾಡಿಕೊಡುತ್ತಿದೆ. ಪರಿಸರದ ಮೂಲಕ ಕಲಿಕೆ ಎಂದೇ ಹೊರಟಿರುವ ಅರಿವು ಶಾಲೆ ಪ್ರಕೃತಿಯ ಪಾಠಕ್ಕೆ ಮಕ್ಕಳನ್ನು ಒಡ್ಡಿದೆ. ತರಗತಿಯಲ್ಲಿ ನಡೆಯುವ ಪಠ್ಯಪುಸ್ತಕ ಶಿಕ್ಷಣದ ಜೊತೆಯಲ್ಲೇ ಪ್ರತಿವಾರ ಕೆರೆ, ಗುಡ್ಡ, ಪಕ್ಷಿ ವೀಕ್ಷಣೆ, ಸುತ್ತಲ ಗಿಡಮರಗಳ ಅಧ್ಯಯನಕ್ಕೆ ಹೋಗುತ್ತಾರೆ. ಪೊಲೀಸ್ ಸ್ಟೇಷನ್, ಇಟ್ಟಿಗೆ ಕಾರ್ಖಾನೆ, ಮ್ಯೂಸಿಯಂಗಳು, ಎಣ್ಣೆ ಗಾಣ ಹೀಗೆ ಊರಿನಲ್ಲಿರುವ ಎಲ್ಲ ಬಗೆಯ ಸ್ಥಳಗಳಿಗೆ ಹೋಗಿ ತಿಳಿವು ಹೆಚ್ಚಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಈ ರೀತಿ ತಮ್ಮ ಕಣ್ಣಿಗೆ ಕಾಣುವ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಮಕ್ಕಳಲ್ಲಿ ಸಹಜವಾಗಿಯೇ ಕಲಿಯುವ ಆಸಕ್ತಿ ಹೆಚ್ಚುತ್ತದೆ.

ನುರಿತ ತರಬೇತುದಾರರಿಂದ ಪಠ್ಯೇತರ ಕಲಿಕೆ

"ಅರಿವು ಶಾಲೆ" ಮಕ್ಕಳಿಗೆ ವಿವಿಧ ಕ್ಷೇತ್ರದಲ್ಲಿ ವಿಪುಲ ಅವಕಾಶಗಳನ್ನು ಒದಗಿಸುತ್ತಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವ ಸುಮಾರು 8 ತರಬೇತುದಾರರು ನಿಜವಾದ ಶಿಕ್ಷಣದತ್ತ ಮಕ್ಕಳನ್ನು ಒಯ್ಯುತ್ತಿದ್ದಾರೆ. ಈಜು, ತಬಲಾ, ರಂಗಗೀತೆಗಳು, ಶಾಸ್ತ್ರೀಯ ಸಂಗೀತ, ದೇಸಿ ಆಟಗಳು, ಇಂಗ್ಲಿಷ್ ಸಂವಹನ, ಚಾರಣ ಮುಂತಾದ ಹಲವು ಕ್ಷೇತ್ರಗಳನ್ನು ಮಕ್ಕಳಿಗೆ ಪರಿಚಯಿಸುತ್ತಾ, ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಹಾಕಿಸುತ್ತಾರೆ. ಹಾಂ... ನೀವು ಈ ಶಾಲೆಯ 1-2ನೇ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳು ರಕ್ತ ಪರಿಚಲನೆ, ಮೂತ್ರೋತ್ಪತ್ತಿ, ಅಯಸ್ಕಾಂತ, ಮಸೂರಗಳ ಬಗ್ಗೆ ಮಾತನಾಡಿದರೆ ಅಚ್ಚರಿ ಪಡಬೇಕಿಲ್ಲ! ಆಡುನುಡಿಯಲ್ಲಿ ಕಲಿಯುವುದರಿಂದ ಮತ್ತು ಅನುಭವಗಳ ಸಮೇತ ಕಲಿಸುವ ಪದ್ದತಿ ಇರುವುದರಿಂದ ಅರ್ಥವಾಗುವಷ್ಟನ್ನು ಹೇಳುತ್ತಾರೆ. ಈ ಮಕ್ಕಳಲ್ಲಿ ಕಂಡದ್ದನ್ನೆಲ್ಲಾ ಇದೇನು? ಇದೇನು? ಎಂದು ತಿಳಿದುಕೊಳ್ಳಬೇಕೆನ್ನುವ ಕುತೂಹಲ ತೋರಿಸುವುದು ಹೆಚ್ಚಿದೆ. ಮಕ್ಕಳ ಸಹಜವಾದ ಈ ಕುತೂಹಲವನ್ನು ತುಳಿಯದೆ ತಣಿಸುವ ವಾತಾವರಣ ಇಲ್ಲಿದೆ. ಸಾಹಸ ಕ್ರೀಡೆಗಳು, ಪರ್ವತಾರೋಹಣ, ಕೆರೆ ಓಡಾಟ ಮಕ್ಕಳಿಗೆ ಸಾಕಷ್ಟು ಧೈರ್ಯ ಕಲಿಸಿದೆ.

ಪರಿಸರ ಪಾಠದ ಗುರುಗಳಾದ ಗುರು ಸಾರ್ ಮಕ್ಕಳಿಗೆ ಹಾವು ಹಿಡಿಯುವುದನ್ನು ಹೇಳಿಕೊಟ್ಟಿದ್ದಾರೆ ಅಂದ್ರೆ ನಂಬ್ತೀರಾ? ನೋಡಿ ಈ ಫೋಟೋನಾ.. ಜೀವ ಸಂಕುಲದ ಬಗ್ಗೆ ಪ್ರೀತಿ ಬೆಳೆಸಿಕೊಂಡಿರುವ ಮಕ್ಕಳು ಮುಂದೆ ಪರಿಸರ ಹಾನಿಯ ಕೆಲಸ ಮಾಡಲಾರರು ಎಂಬ ಭರವಸೆ ಮೂಡುತ್ತದೆ. ಸತತವಾಗಿ ಅರಿವು ಬಳಗ ತಮ್ಮನ್ನು ತಾವು ಕಲಿಕೆಗೆ ಒಡ್ದಿಕೊಂಡು ಮಕ್ಕಳೊಡನೆ ಒಂದಾಗಿ ಕಲಿಸುವ, ಕಲಿಕೆಯ ರೀತಿಯ ಬಗ್ಗೆ ನಿರಂತರತೆ ಕಾಯ್ದುಕೊಳ್ಳುವ ಗುರಿ ಹೊಂದಿದೆ.

ಹೆಚಿನ ಮಾಹಿತಿಗಾಗಿ ಸಂಪರ್ಕಿಸಿ:

ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್
ಲಿಂಗಾಂಬುದಿ ಪಾಳ್ಯ ರಸ್ತೆ,
ಲಿಂಗಾಂಬುದಿ ಪಾಳ್ಯ, ಶ್ರೀರಾಂಪುರ,
ಮೈಸೂರು
ದೂರವಾಣಿ: 0821-2363399
ಡಾ ಮನೋಹರ - 9901225074
ಸುದರ್ಶನ - 9480326758
ಜನಾರ್ದನ - 9008512188
ಬರ್ಟಿ ಒಲಿವೆರಾ - 9448481968
ಮಾರುತಿ - 9880530404 (ಕೃಪೆ : ಕಲಿಕೆಯು...)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+