Get Updates
Get notified of breaking news, exclusive insights, and must-see stories!

ಮುಚ್ಚುವ ಭೀತಿಯಲ್ಲಿ ಮಾಳ ಎಡಪಾಡಿ ಶಾಲೆ

Kananda govt school at Edapadi, Karkala, DK
ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಮಾಳ ಗ್ರಾಮದ ಎಡಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಚ್ಚುವ ಭೀತಿ ಎದುರಿಸುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಅತೀ ಎತ್ತರ ಪ್ರದೇಶದಲ್ಲಿರುವ ಶಾಲೆ ಎಂದೇ ಗುರುತಿಸಿಕೊಂಡ ಈ ಶಾಲೆ, ಇದೀಗ ಇತಿಹಾಸದ ಕಾಲಗರ್ಭ ಸೇರುವ ದಿನಗಳು ಸನಿಹವಾಗಿದೆ. ಸುವರ್ಣ ಸಂಭ್ರಮವನ್ನು ಕಂಡ ಈ ಶಾಲೆಯಲ್ಲಿ ಈಗಿರುವ ವಿದ್ಯಾರ್ಥಿಗಳ ಸಂಖ್ಯೆ ಬರೇ ಮೂರು ಮಾತ್ರ!

ಐವತ್ತಾರು ವರ್ಷಗಳನ್ನು ಪೂರೈಸಿದ ಈ ಪುಟ್ಟ ಶಾಲೆಯಲ್ಲಿ ಮಕ್ಕಳಿಗೆ ಬೇಕಾದ ಕೊಠಡಿ ಸೌಲಭ್ಯವಿದೆ. ಜತೆಗೆ ಶಾಲೆಗಿರಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳಿವೆ. ಅಕ್ಷರ ದಾಸೋಹದಿಂದ ಹಿಡಿದು ಸರಕಾರದ ಎಲ್ಲಾ ಸೌಲತ್ತುಗಳು ಈ ಶಾಲೆಯಲ್ಲಿ ಅಚ್ಚುಕಟ್ಟಾಗಿ ಅನುಷ್ಠಾನಗೊಂಡಿದೆ. ಆದರೆ ಕಳೆದ ಐದು ವರ್ಷಗಳಿಂದ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಾ ಬಂದಿದ್ದು, ಇದೀಗ ಶಾಲೆಯಲ್ಲಿ ಕೇವಲ ಮೂರೇ ಮೂರು ವಿದ್ಯಾರ್ಥಿಗಳ ಓಡಾಟವನ್ನು ಕಂಡು ತೃಪ್ತಿ ಪಡಬೇಕಾಗಿದೆ. 2009-10ರ ಸಾಲಿನಲ್ಲಿ 6 ವಿದ್ಯಾರ್ಥಿಗಳಿದ್ದರು. ಈ ಬಾರಿ ಅದು ಮೂರಕ್ಕಿಳಿದಿದೆ. ಒಂದೇ ಬೆಂಚಿನಲ್ಲಿ ಮೂರು ತರಗತಿಯ ವಿದ್ಯಾರ್ಥಿಗಳು ಕುಳಿತುಕೊಂಡು ಶಿಕ್ಷಕರಿಂದ ಪಾಠ ಕಲಿತುಕೊಳ್ಳಬೇಕಾಗಿದೆ.

ತಾಲೂಕಿನ ಗಡಿ ಭಾಗದಲ್ಲಿರುವ ಈ ಶಾಲೆ ಮಾಳ ಮಲ್ಲಾರಿನಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿರುವ ಎಡಪಾಡಿ ಪರಶುರಾಮ ದೇವಾಲಯದ ಸಮೀಪದಲ್ಲಿ 1954ರಲ್ಲಿ ಸ್ಥಾಪನೆಯಾಗಿತ್ತು. ಸಮೀಪದ ಎಡಪಾಡಿ, ಕೊಚ್ಚಿ, ಬಿಜ್ಜಾಲೆ ಪರಿಸರದ ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದರು. ಬೆಟ್ಟಗುಡ್ಡಗಳಿಂದ ಇಳಿದು ಹತ್ತಿ ದೂರದೂರುಗೆ ವಿದ್ಯಾಭ್ಯಾಸಕ್ಕಾಗಿ ತೆರಳಬೇಕಾಗಿದ್ದ ಮಕ್ಕಳಿಗೆ ಈ ಶಾಲೆಯೇ ಆಧಾರವಾಗಿತ್ತು.

ಸರಕಾರಿ ಕನ್ನಡ ಶಾಲೆಗಳನ್ನು ಏಕೆ ಮುಚ್ಚಬೇಕು?
2004ರಲ್ಲಿ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಒಂದಷ್ಟು ಮಕ್ಕಳನ್ನು ಹೊಂದಿದ್ದ ಈ ಶಾಲೆಯಲ್ಲಿ, ನಂತರದ ದಿನಗಳಲ್ಲಿ ಮಕ್ಕಳ ಸಂಖ್ಯೆಯೂ ಕಡಿಮೆಯಾಯಿತು. ದೂರದ ದಾರಿ ಅಧ್ಯಾಪಕರಿಗೆ ಕಷ್ಟ ತಂದರೆ, ಆ ಪರಿಸರದ ಹೆಚ್ಚಿನ ಮಕ್ಕಳು ದೂರದ ಶಾಲೆಯ ದಾರಿ ಹಿಡಿದರು. ಹಿಂದೆ ಈ ಶಾಲೆಯಲ್ಲಿದ್ದ ಅಧ್ಯಾಪಕಿಯೋರ್ವರು ಶಾಲೆ ಮುಚ್ಚಬಹುದು ಎಂಬ ದೂರದೃಷ್ಟಿಯಿಂದಲೇ ಹಲವು ಮಕ್ಕಳಿಗೆ ವರ್ಗಾವಣೆ ಪತ್ರವನ್ನು ನೀಡಿದ್ದರು.

ಮೂರು ಮಂದಿ ಮಕ್ಕಳು ಉಳಿದಿರುವುದು ಶಾಲೆ ಉಳಿಸಬೇಕೆಂಬ ಹೆತ್ತವರ ಅಭಿಲಾಷೆಯಿಂದ. ಅದೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮತ್ತು ಸದಸ್ಯರೋರ್ವರ ಮಕ್ಕಳು ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅದರಲ್ಲೂ 1, 2 ಮತ್ತು 5ನೇ ತರಗತಿಯ ಈ ಮಕ್ಕಳು, ಮಳೆಗಾಲದಲ್ಲಿ ತುಂಬಿ ಹರಿಯುವ ತೋಡು, ಗುಡ್ಡ ಬೆಟ್ಟಗಳ ಹಾದಿಯಲ್ಲೇ ಬರಬೇಕಾಗಿದೆ. ಇದೀಗ ಈ ಶಾಲೆಯ ಶಿಕ್ಷಕಿ ರಜೆಯಲ್ಲಿದ್ದಾರೆ. ಪರ್ಯಾಯ ವ್ಯವಸ್ಥೆಗಾಗಿ ಮಾಳ ಕೂಡಬೆಟ್ಟು ಶಾಲಾ ಅಧ್ಯಾಪಕ, ಕಾರ್ಕಳದ ರತ್ನವರ್ಮ ಅವರು ಈ ಮೂರು ಮಕ್ಕಳಿಗೆ ಪಾಠ ಬೋಧನೆಗೆ ನಿಯೋಜಿತರಾಗಿ ಹೋಗುತ್ತಿದ್ದಾರೆ.

ದಟ್ಸ್ ಕನ್ನಡದ ವಿಚಿತ್ರಾನ್ನ ಅಂಕಣಕಾರರಾಗಿದ್ದ ಶ್ರೀವತ್ಸ ಜೋಶಿ, ಕಾರ್ಕಳದಲ್ಲಿ ನಿಷ್ಠಾವಂತ ಸರಕಾರಿ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ನಿವೃತ್ತ ತಹಶೀಲ್ದಾರ ಶಾಂತರಾಮ ಚಿಪಳೂಣ್ಕರ್ ಮೊದಲಾದವರು ಕಲಿತಂತಹ ಈ ಶಾಲೆಯಿದು. ತಾಲೂಕಿನಲ್ಲಿ ಮಕ್ಕಳ ಕೊರತೆಯಿಂದ ಈಗಾಗಲೇ ಕಬ್ಬಿನಾಲೆಯ ಕುಚ್ಚೂರು ಆಶ್ರಮ ಶಾಲೆ, ಚಾರದ ಹದಿಕಲ್ಲು , ನರೆಯ ಸಾಗು ಶಾಲೆಗಳು ಮುಚ್ಚಿವೆ. ಇದೀಗ ಮಾಳ ಎಡಪಾಡಿ ಮತ್ತು ಮಿಯಾರು-2 ಶಾಲೆಗಳು ಮುಚ್ಚುವ ಸಾಧ್ಯತೆಗಳು ದಟ್ಟವಾಗಿದೆ. ಆಂಗ್ಲ ಮಾಧ್ಯಮದ ಪ್ರಭಾವ ಗ್ರಾಮೀಣ ಪ್ರದೇಶದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಿಗೂ ತಟ್ಟಿದ್ದು, ಈಗಾಗಲೇ ತಾಲೂಕಿನ ಹಲವಾರು ಶಾಲೆಗಳು ವಿದ್ಯಾರ್ಥಿಗಳ ಕೊರತೆ ಅನುಭವಿಸುತ್ತಿವೆ.

ಚಿತ್ರ : ಸುಶಾಂತ್ ಬಜಗೋಳಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+