ಮುಚ್ಚುವ ಭೀತಿಯಲ್ಲಿ ಮಾಳ ಎಡಪಾಡಿ ಶಾಲೆ
ಐವತ್ತಾರು ವರ್ಷಗಳನ್ನು ಪೂರೈಸಿದ ಈ ಪುಟ್ಟ ಶಾಲೆಯಲ್ಲಿ ಮಕ್ಕಳಿಗೆ ಬೇಕಾದ ಕೊಠಡಿ ಸೌಲಭ್ಯವಿದೆ. ಜತೆಗೆ ಶಾಲೆಗಿರಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳಿವೆ. ಅಕ್ಷರ ದಾಸೋಹದಿಂದ ಹಿಡಿದು ಸರಕಾರದ ಎಲ್ಲಾ ಸೌಲತ್ತುಗಳು ಈ ಶಾಲೆಯಲ್ಲಿ ಅಚ್ಚುಕಟ್ಟಾಗಿ ಅನುಷ್ಠಾನಗೊಂಡಿದೆ. ಆದರೆ ಕಳೆದ ಐದು ವರ್ಷಗಳಿಂದ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಾ ಬಂದಿದ್ದು, ಇದೀಗ ಶಾಲೆಯಲ್ಲಿ ಕೇವಲ ಮೂರೇ ಮೂರು ವಿದ್ಯಾರ್ಥಿಗಳ ಓಡಾಟವನ್ನು ಕಂಡು ತೃಪ್ತಿ ಪಡಬೇಕಾಗಿದೆ. 2009-10ರ ಸಾಲಿನಲ್ಲಿ 6 ವಿದ್ಯಾರ್ಥಿಗಳಿದ್ದರು. ಈ ಬಾರಿ ಅದು ಮೂರಕ್ಕಿಳಿದಿದೆ. ಒಂದೇ ಬೆಂಚಿನಲ್ಲಿ ಮೂರು ತರಗತಿಯ ವಿದ್ಯಾರ್ಥಿಗಳು ಕುಳಿತುಕೊಂಡು ಶಿಕ್ಷಕರಿಂದ ಪಾಠ ಕಲಿತುಕೊಳ್ಳಬೇಕಾಗಿದೆ.
ತಾಲೂಕಿನ ಗಡಿ ಭಾಗದಲ್ಲಿರುವ ಈ ಶಾಲೆ ಮಾಳ ಮಲ್ಲಾರಿನಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿರುವ ಎಡಪಾಡಿ ಪರಶುರಾಮ ದೇವಾಲಯದ ಸಮೀಪದಲ್ಲಿ 1954ರಲ್ಲಿ ಸ್ಥಾಪನೆಯಾಗಿತ್ತು. ಸಮೀಪದ ಎಡಪಾಡಿ, ಕೊಚ್ಚಿ, ಬಿಜ್ಜಾಲೆ ಪರಿಸರದ ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದರು. ಬೆಟ್ಟಗುಡ್ಡಗಳಿಂದ ಇಳಿದು ಹತ್ತಿ ದೂರದೂರುಗೆ ವಿದ್ಯಾಭ್ಯಾಸಕ್ಕಾಗಿ ತೆರಳಬೇಕಾಗಿದ್ದ ಮಕ್ಕಳಿಗೆ ಈ ಶಾಲೆಯೇ ಆಧಾರವಾಗಿತ್ತು.
ಸರಕಾರಿ ಕನ್ನಡ ಶಾಲೆಗಳನ್ನು ಏಕೆ ಮುಚ್ಚಬೇಕು? | |
ಮೂರು ಮಂದಿ ಮಕ್ಕಳು ಉಳಿದಿರುವುದು ಶಾಲೆ ಉಳಿಸಬೇಕೆಂಬ ಹೆತ್ತವರ ಅಭಿಲಾಷೆಯಿಂದ. ಅದೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮತ್ತು ಸದಸ್ಯರೋರ್ವರ ಮಕ್ಕಳು ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅದರಲ್ಲೂ 1, 2 ಮತ್ತು 5ನೇ ತರಗತಿಯ ಈ ಮಕ್ಕಳು, ಮಳೆಗಾಲದಲ್ಲಿ ತುಂಬಿ ಹರಿಯುವ ತೋಡು, ಗುಡ್ಡ ಬೆಟ್ಟಗಳ ಹಾದಿಯಲ್ಲೇ ಬರಬೇಕಾಗಿದೆ. ಇದೀಗ ಈ ಶಾಲೆಯ ಶಿಕ್ಷಕಿ ರಜೆಯಲ್ಲಿದ್ದಾರೆ. ಪರ್ಯಾಯ ವ್ಯವಸ್ಥೆಗಾಗಿ ಮಾಳ ಕೂಡಬೆಟ್ಟು ಶಾಲಾ ಅಧ್ಯಾಪಕ, ಕಾರ್ಕಳದ ರತ್ನವರ್ಮ ಅವರು ಈ ಮೂರು ಮಕ್ಕಳಿಗೆ ಪಾಠ ಬೋಧನೆಗೆ ನಿಯೋಜಿತರಾಗಿ ಹೋಗುತ್ತಿದ್ದಾರೆ.
ದಟ್ಸ್ ಕನ್ನಡದ ವಿಚಿತ್ರಾನ್ನ ಅಂಕಣಕಾರರಾಗಿದ್ದ ಶ್ರೀವತ್ಸ ಜೋಶಿ, ಕಾರ್ಕಳದಲ್ಲಿ ನಿಷ್ಠಾವಂತ ಸರಕಾರಿ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ನಿವೃತ್ತ ತಹಶೀಲ್ದಾರ ಶಾಂತರಾಮ ಚಿಪಳೂಣ್ಕರ್ ಮೊದಲಾದವರು ಕಲಿತಂತಹ ಈ ಶಾಲೆಯಿದು. ತಾಲೂಕಿನಲ್ಲಿ ಮಕ್ಕಳ ಕೊರತೆಯಿಂದ ಈಗಾಗಲೇ ಕಬ್ಬಿನಾಲೆಯ ಕುಚ್ಚೂರು ಆಶ್ರಮ ಶಾಲೆ, ಚಾರದ ಹದಿಕಲ್ಲು , ನರೆಯ ಸಾಗು ಶಾಲೆಗಳು ಮುಚ್ಚಿವೆ. ಇದೀಗ ಮಾಳ ಎಡಪಾಡಿ ಮತ್ತು ಮಿಯಾರು-2 ಶಾಲೆಗಳು ಮುಚ್ಚುವ ಸಾಧ್ಯತೆಗಳು ದಟ್ಟವಾಗಿದೆ. ಆಂಗ್ಲ ಮಾಧ್ಯಮದ ಪ್ರಭಾವ ಗ್ರಾಮೀಣ ಪ್ರದೇಶದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಿಗೂ ತಟ್ಟಿದ್ದು, ಈಗಾಗಲೇ ತಾಲೂಕಿನ ಹಲವಾರು ಶಾಲೆಗಳು ವಿದ್ಯಾರ್ಥಿಗಳ ಕೊರತೆ ಅನುಭವಿಸುತ್ತಿವೆ.
ಚಿತ್ರ : ಸುಶಾಂತ್ ಬಜಗೋಳಿ