Get Updates
Get notified of breaking news, exclusive insights, and must-see stories!

ತ್ರಿಕೋನ ಯುದ್ಧಕ್ಕೆ ಬೆಂಗಳೂರು ಸಿದ್ಧ

Thiruvalluvar statue will be installed at Ulsoor lake in Bengaluru
ಬೆಂಗಳೂರು, ಆ. 6 : ಬೆಂಗಳೂರಿನ ಪ್ರಶಾಂತ ಹಲಸೂರು ಕೆರೆ ಆವರಣದಲ್ಲಿ ಉದ್ದೇಶಿತ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ಅಗತ್ಯವಾದ ಸರಕಾರಿ ಸಿದ್ಧತೆಗಳು ಭರದಿಂದ ಸಾಗಿವೆ. ಅಂತೆಯೇ, ಪ್ರತಿಮೆ ಅನಾವರಣಕ್ಕೆ ಪ್ರತಿಭಟಿಸಲು ಸಜ್ಜಾಗಿರುವ ಕನ್ನಡ ಗುಂಪುಗಳು ತಮ್ಮ ಅಸ್ತ್ರಗಳನ್ನು ಮೊನಚುಗೊಳಿಸುತ್ತಿವೆ. ಈ ಮಧ್ಯೆ, ಪ್ರತಿಮೆ ಅನಾವರಣ ನೆನೆಗುದಿಗೆ ಬಿದ್ದಿದ್ದರಿಂದ ಕಳೆದ 18 ವರ್ಷಗಳಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ ನಲ್ಲಿ ತಯಾರಾಗಿದ್ದ ತಿರುವಳ್ಳವರ್ ಪ್ರತಿಮೆಯನ್ನು ಬಟ್ಟೆ ಕಟ್ಟಿ ಇಡಲಾಗಿತ್ತು. ಇದೀಗ ಆ ಪ್ರತಿಮೆಯನ್ನು ತೆಗೆದು ಮೂಲ ಕಂಚಿನ ಪ್ರತಿಮೆಯನ್ನು ಉದ್ದೇಶಿತ ಜಾಗದಲ್ಲಿ ಕುಳ್ಳಿರಿಸಲಾಗಿದೆ.

ರಾತ್ರೋರಾತ್ರಿ ತಿರುವಳ್ಳುವರ್ ಪ್ರತಿಮೆಯನ್ನು ಬದಲಾಯಿಸಲಾಗಿದೆ ಎಂಬ ಪುಕಾರನ್ನು ಕೆಲವು ಇಲೆಕ್ಟ್ರಾನಿಕ್ ಮಾಧ್ಯಮಗಳು ಬುಧವಾರ ಸೃಷ್ಟಿಸಿದ್ದವು. ಆದರೆ, ತಾತ್ಕಾಲಿಕ ಪ್ರತಿಮೆಯನ್ನು ಕೆಳಗಿಳಿಸಿ ಉದ್ದೇಶಿತ ಮೂಲ ಪ್ರತಿಮೆಯನ್ನು ಮಾತ್ರ ಕುಳ್ಳಿರಿಸಲಾಗಿದೆಯಷ್ಟೆ ಎಂದು ತಮಿಳು ಸಂಘದ ಪದಾಧಿಕಾರಿಗಳು ದಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ. ಇನ್ನೊಂದೆಡೆ, ಕನ್ನಡ ಸಾಹಿತಿಗಳು ಹಾಗೂ ವಿರೋಧ ಪಕ್ಷಗಳ ಬೆಂಬಲದಿಂದ ಮತ್ತು ಭದ್ರತಾದಳದ ತೋಳ್ಬಲದಿಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಪ್ರತಿಮೆ ಅನಾವರಣ ಮಾಡಲು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ.

ತಿರುವಳ್ಳುವರ್ ಪ್ರತಿಮೆ ಅನಾವರಣ ವಿವಾದದಲ್ಲಿ ಮೂರು ಮುಖ್ಯ ಅಂಗಗಳು ಕಾರ್ಯೋನ್ಮುಖವಾಗಿವೆ. ಒಂದು ಸರಕಾರ. ಇನ್ನೊಂದು, ಅನಾವರಣಕ್ಕೆ ವಿರೋಧ ಪಡಿಸುತ್ತಿರುವ ವಾಟಾಳ್ ಮತ್ತು ಕರವೇ ಕನ್ನಡ ಚಳವಳಿ ಗುಂಪುಗಳು. ಮೂರನೆಯ ಅಂಗ ಹರ್ಷೋಲ್ಲಾಸದಿಂದ ತುಂಬಿರುವ ಕರ್ನಾಟಕದಲ್ಲಿರುವ ತಮಿಳು ಸಮುದಾಯ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ತಮಿಳರ ಆರಾಧ್ಯ ಗುರು ತಿರುವಳ್ಳುವರ್ ಪ್ರತಿಮೆ ಅನಾವರಣ ಸಮಾರಂಭಕ್ಕೆ ರಾಜ್ಯದಲ್ಲಿರುವ ಎಲ್ಲ ತಮಿಳು ಬಂಧುಗಳು ಆಗಮಿಸಬೇಕೆಂದು ಬೆಂಗಳೂರು ತಮಿಳು ಸಂಘ ಕರೆಕೊಟ್ಟಿದೆ. ರಾಜ್ಯದಲ್ಲಿರುವ ಎಲ್ಲ ತಮಿಳು ಸಂಘ ಸಂಸ್ಥೆಗಳಿಗೆ ತಲುಪಿರುವ ಈ ಆಹ್ವಾನ ಸುತ್ತೋಲೆಯಲ್ಲಿ ಈ ವಿಷಯವನ್ನು ಸಾರಲಾಗಿದೆ. ಸಾವಿರ ಸಾವಿರ ಸಂಖ್ಯೆಯಲ್ಲಿ ತಮಿಳರು ಹಲಸೂರಿಗೆ ಲಗ್ಗೆ ಇಡಲು ಸನ್ನದ್ಧರಾಗಿದ್ದಾರೆ. ತಮಿಳರ ಮುಖ್ಯಮಂತ್ರಿ ಕರುಣಾನಿಧಿ ಇದೀಗ ಬೆಂಗಳೂರಿನಲ್ಲಿ ಠಿಕಾಣಿ ಹೂಡಿರುವುದು ತಮಿಳರ ಉತ್ಸಾಹಕ್ಕೆ ಬಿಸಿನೀರು ಎರಚಿದೆ. ಇದೇ ವೇಳೆ ಕಾರ್ಯಕ್ರಮ ನಡೆಸುವುದಕ್ಕೆ ತಮಿಳುನಾಡು ಸರಕಾರ ತಮಿಳು ಸಂಘಕ್ಕೆ 40 ಲಕ್ಷರೂ ಕೊಟ್ಟಿದೆ.

ಅತ್ತ ಚೆನ್ನೈನಲ್ಲಿ ಸರ್ವಜ್ಞಮೂರ್ತಿಯ ಪ್ರತಿಮೆ ಅನಾವರಣಕ್ಕೂ ಸಿದ್ಧತೆಗಳು ಸಾವಧಾನದಿಂದ ನಡೆಯುತ್ತಿವೆ. 9.1 ಅಡಿ ಎತ್ತರದ ಮೂರ್ತಿ ಪ್ರತಿಷ್ಠಾಪನೆಗೆ ಚೆನ್ನೈನ ಜನನಿಬಿಡ, ಆದರೆ ಪ್ರಶಾಂತ ಜೀವಾ ಪಾರ್ಕಿನಲ್ಲಿ ಕಾಮಗಾರಿ ಕೆಲಸಗಳು ನಡೆಯುತ್ತಿವೆ. ಈ ಕೆಲಸಕ್ಕಾಗಿಯೇ ಕರ್ನಾಟಕದಿಂದ 20 ಮಂದಿ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಮತ್ತಿತರ ಸಿಬ್ಬಂದಿವರ್ಗವನ್ನು ನೇಮಿಸಲಾಗಿದೆ. ಸರ್ವಜ್ಞ ಮೂರ್ತಿಯ ವಿಗ್ರಹವನ್ನು ರೂಪಿಸಿರುವವರು ಹೊಸಕೋಟೆಯ ಹೆಸರಾಂತ ಶಿಲ್ಪಿ ಶಂಕರ ಸ್ತಪತಿ. ಚೆನ್ನೈನಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಊರಿಗೆ ಸರ್ವಜ್ಞ ಬರುತ್ತಿರುವುದನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ. 53 ವರ್ಷಗಳಿಂದ ತಮಿಳಿನಾಡಿನಲ್ಲಿದ್ದರೂ ಅಷ್ಟೇನೂ ಸುದ್ದಿಯಲ್ಲಿರದ ಅಯನಾವರಂ ಕನ್ನಡ ಸಂಘ ಪ್ರತಿಮೆ ಅನಾವರಣದ ಹಿನ್ನೆಲೆಯಲ್ಲಿ ಸ್ವಲ್ಪ ಸುದ್ದಿ ಮಾಡುತ್ತಿದೆ.

ತಿರುವಳ್ಳುವರ್ ಪ್ರತಿಮೆ ಅನಾವರಣ ಗಲಾಟೆ ಕರ್ನಾಟಕದಲ್ಲಿ ಸಾಕಷ್ಟು ಧೂಳು ಎಬ್ಬಿಸಿದೆ. ಯಡಿಯೂರಪ್ಪ ಕನ್ನಡಿಗರ ದ್ರೋಹಿ ಎಂದು ಕನ್ನಡ ಕಾರ್ಯಕರ್ತರು ಆಪಾದಿಸುತ್ತಿದ್ದರೆ, ಉಭಯ ರಾಜ್ಯಗಳ ಸಂಬಂಧ ವೃದ್ಧಿಯಾಗುವುದಕ್ಕೆ ಪ್ರತಿಮೆ ಅನಾವರಣ ಮಹತ್ವದ ಹೆಜ್ಜೆ ಎಂದು ಸರಕಾರಿ ಗಂಟಲುಗಳು ಹೇಳುತ್ತಿವೆ. ಬುದ್ಧಿಜೀವಿ ಸಾಹಿತಿಗಳು ಕೂಡ ಇದಕ್ಕೆ ದನಿಗೂಡಿಸಿದ್ದಾರೆ. ಅನಾವರಣ ಕಾರ್ಯಕ್ರಮ ಭಂಗಕ್ಕೆ ತಾವು ಶತಸ್ಸಿದ್ದ ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡರು ಘೋಷಿಸಿರುವುದು ನಗರದಲ್ಲಿ ಕಾನೂನು ಮತ್ತು ಶಿಸ್ತು ಅಲ್ಲೋಲಕಲ್ಲೋಲವಾಗುವ ಸೂಚನೆ ಕೊಡುತ್ತಿದೆ. ಕಾನೂನನ್ನು ಕೈಗೆತ್ತಿಕೊಂಡು ಗಲಾಟೆ ಸೃಷ್ಟಿಸುವ ಶಕ್ತಿಗಳ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಒಂದು ಸರಕಾರ ಏನು ಮಾಡುತ್ತದೋ ಅದನ್ನು ತಾನೂ ಮಾಡಲು ಯಡ್ಡಿ ಮತ್ತು ಗೃಹಮಂತ್ರಿ ಆಚಾರ್ಯ ರೆಡಿ ಆಗಿದ್ದಾರೆ.

ಇತ್ತೀಚೆಗೆ ಬಂದಿರುವ ಸುದ್ದಿಯೇನೆಂದರೆ, ತಿರುವಳ್ಳುವರ್ ಪ್ರತಿಮೆ ಅನಾವರಣವನ್ನು ತಡೆಯಬೇಕೆಂದು ವಾಟಾಳ್ ನಾಗರಾಜ್ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಕನ್ನಡಿಗರು ಮತ್ತು ತಮಿಳರ ಬಾಂಧವ್ಯ ವರ್ಧನೆಗೆ ಅಡ್ಡಗಾಲು ಹಾಕುತ್ತಿರುವುದಕ್ಕೆ ಅರ್ಜಿದಾರರನ್ನು ಕರ್ನಾಟಕ ಹೈಕೋರ್ಟ್ ನೇರವಾಗಿ ತರಾಟೆಗೆ ತೆಗೆದುಕೊಂಡಿದೆ. ಇದರಿಂದ ಅನಾವರಣದ ಕೆಲಸ ಮತ್ತಷ್ಟು ಸುಗಮವಾದಂತಾಗಿದೆ.

ಈಗತಾನೆ ವಾಹಿನಿಗೆ ಬಂದ ಒಂದು ಕವನವನ್ನು ದಟ್ಸ್ ಕನ್ನಡ ಸಾದರಪಡಿಸುತ್ತಿದೆ.

ಪ್ರತಿಮೆ ಅನಾವರಣ

ಇಂದೆಲ್ಲಿ ನೋಡಿದರಲ್ಲಿ ಗಲ್ಲಿ
ಗಲ್ಲಿಗಳಲ್ಲಿ ನಡೆಯುತಿಹುದು
ಪ್ರತಿಮೆಗಳ ಅನಾವರಣ
ಶಿಲ್ಪವಾಗಿ ನಿಲ್ಲುವವರೇ
ಇಳಿದು ಬಂದು ಮಾಡುತಿಹರು
ಅವರದೇ ಪ್ರತಿಮೆಗಳ ಅನಾವರಣ

ಹಿಂದೆಯೂ ನಡೆಯುತ್ತಿತ್ತು
ರಾಜ ಬೀಧಿಗಳಲ್ಲಿ
ಪ್ರತಿಮೆಗಳ ಅನಾವರಣ
ಮೂರ್ತಿಗಳಾಗಿ ನಿಲ್ಲಿರೆಂದು ಆ
ದೇವರುಗಳನೇ ಕೋರಿದರೂ ತಪ್ಪದೇ
ಮಾಡುತ್ತಿದ್ದರು ಪ್ರತಿಮೆಯ ನಿರಾಕರಣ

ಅಂದಿನ ಪ್ರತಿಮೆಗಳು ಆಗಿದ್ದವು
ನಮ್ಮೆಲ್ಲರಿಗೆ ಸ್ಪೂರ್ತಿಯಾಗಿ
ಇಂದಿನ ಪ್ರತಿಮೆಗಳೂ ಆಗುವವು
ರಾಜಕಾರಣಿಗಳ ಸಾಧನೆಗಳಾಗಿ
ಚಳುವಳಿಗಾರರ ಬ್ರಹ್ಮಾಸ್ತ್ರಗಳಾಗಿ
ಸರ್ಕಾರೀ ಪುಸ್ತಕದ ಅಂಕಿಗಳಾಗಿ
ಮುಂಪೀಳಿಗೆ ಉತ್ತರಿಸಬೇಕಾದ ಪ್ರಶ್ನೆಗಳಾಗಿ

ರಘುನಾಥ್. ಪಿ.ಜಿ, ಬೆಂಗಳೂರು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+