ತ್ರಿಕೋನ ಯುದ್ಧಕ್ಕೆ ಬೆಂಗಳೂರು ಸಿದ್ಧ

ರಾತ್ರೋರಾತ್ರಿ ತಿರುವಳ್ಳುವರ್ ಪ್ರತಿಮೆಯನ್ನು ಬದಲಾಯಿಸಲಾಗಿದೆ ಎಂಬ ಪುಕಾರನ್ನು ಕೆಲವು ಇಲೆಕ್ಟ್ರಾನಿಕ್ ಮಾಧ್ಯಮಗಳು ಬುಧವಾರ ಸೃಷ್ಟಿಸಿದ್ದವು. ಆದರೆ, ತಾತ್ಕಾಲಿಕ ಪ್ರತಿಮೆಯನ್ನು ಕೆಳಗಿಳಿಸಿ ಉದ್ದೇಶಿತ ಮೂಲ ಪ್ರತಿಮೆಯನ್ನು ಮಾತ್ರ ಕುಳ್ಳಿರಿಸಲಾಗಿದೆಯಷ್ಟೆ ಎಂದು ತಮಿಳು ಸಂಘದ ಪದಾಧಿಕಾರಿಗಳು ದಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ. ಇನ್ನೊಂದೆಡೆ, ಕನ್ನಡ ಸಾಹಿತಿಗಳು ಹಾಗೂ ವಿರೋಧ ಪಕ್ಷಗಳ ಬೆಂಬಲದಿಂದ ಮತ್ತು ಭದ್ರತಾದಳದ ತೋಳ್ಬಲದಿಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಪ್ರತಿಮೆ ಅನಾವರಣ ಮಾಡಲು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ.
ತಿರುವಳ್ಳುವರ್ ಪ್ರತಿಮೆ ಅನಾವರಣ ವಿವಾದದಲ್ಲಿ ಮೂರು ಮುಖ್ಯ ಅಂಗಗಳು ಕಾರ್ಯೋನ್ಮುಖವಾಗಿವೆ. ಒಂದು ಸರಕಾರ. ಇನ್ನೊಂದು, ಅನಾವರಣಕ್ಕೆ ವಿರೋಧ ಪಡಿಸುತ್ತಿರುವ ವಾಟಾಳ್ ಮತ್ತು ಕರವೇ ಕನ್ನಡ ಚಳವಳಿ ಗುಂಪುಗಳು. ಮೂರನೆಯ ಅಂಗ ಹರ್ಷೋಲ್ಲಾಸದಿಂದ ತುಂಬಿರುವ ಕರ್ನಾಟಕದಲ್ಲಿರುವ ತಮಿಳು ಸಮುದಾಯ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ತಮಿಳರ ಆರಾಧ್ಯ ಗುರು ತಿರುವಳ್ಳುವರ್ ಪ್ರತಿಮೆ ಅನಾವರಣ ಸಮಾರಂಭಕ್ಕೆ ರಾಜ್ಯದಲ್ಲಿರುವ ಎಲ್ಲ ತಮಿಳು ಬಂಧುಗಳು ಆಗಮಿಸಬೇಕೆಂದು ಬೆಂಗಳೂರು ತಮಿಳು ಸಂಘ ಕರೆಕೊಟ್ಟಿದೆ. ರಾಜ್ಯದಲ್ಲಿರುವ ಎಲ್ಲ ತಮಿಳು ಸಂಘ ಸಂಸ್ಥೆಗಳಿಗೆ ತಲುಪಿರುವ ಈ ಆಹ್ವಾನ ಸುತ್ತೋಲೆಯಲ್ಲಿ ಈ ವಿಷಯವನ್ನು ಸಾರಲಾಗಿದೆ. ಸಾವಿರ ಸಾವಿರ ಸಂಖ್ಯೆಯಲ್ಲಿ ತಮಿಳರು ಹಲಸೂರಿಗೆ ಲಗ್ಗೆ ಇಡಲು ಸನ್ನದ್ಧರಾಗಿದ್ದಾರೆ. ತಮಿಳರ ಮುಖ್ಯಮಂತ್ರಿ ಕರುಣಾನಿಧಿ ಇದೀಗ ಬೆಂಗಳೂರಿನಲ್ಲಿ ಠಿಕಾಣಿ ಹೂಡಿರುವುದು ತಮಿಳರ ಉತ್ಸಾಹಕ್ಕೆ ಬಿಸಿನೀರು ಎರಚಿದೆ. ಇದೇ ವೇಳೆ ಕಾರ್ಯಕ್ರಮ ನಡೆಸುವುದಕ್ಕೆ ತಮಿಳುನಾಡು ಸರಕಾರ ತಮಿಳು ಸಂಘಕ್ಕೆ 40 ಲಕ್ಷರೂ ಕೊಟ್ಟಿದೆ.
ಅತ್ತ ಚೆನ್ನೈನಲ್ಲಿ ಸರ್ವಜ್ಞಮೂರ್ತಿಯ ಪ್ರತಿಮೆ ಅನಾವರಣಕ್ಕೂ ಸಿದ್ಧತೆಗಳು ಸಾವಧಾನದಿಂದ ನಡೆಯುತ್ತಿವೆ. 9.1 ಅಡಿ ಎತ್ತರದ ಮೂರ್ತಿ ಪ್ರತಿಷ್ಠಾಪನೆಗೆ ಚೆನ್ನೈನ ಜನನಿಬಿಡ, ಆದರೆ ಪ್ರಶಾಂತ ಜೀವಾ ಪಾರ್ಕಿನಲ್ಲಿ ಕಾಮಗಾರಿ ಕೆಲಸಗಳು ನಡೆಯುತ್ತಿವೆ. ಈ ಕೆಲಸಕ್ಕಾಗಿಯೇ ಕರ್ನಾಟಕದಿಂದ 20 ಮಂದಿ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಮತ್ತಿತರ ಸಿಬ್ಬಂದಿವರ್ಗವನ್ನು ನೇಮಿಸಲಾಗಿದೆ. ಸರ್ವಜ್ಞ ಮೂರ್ತಿಯ ವಿಗ್ರಹವನ್ನು ರೂಪಿಸಿರುವವರು ಹೊಸಕೋಟೆಯ ಹೆಸರಾಂತ ಶಿಲ್ಪಿ ಶಂಕರ ಸ್ತಪತಿ. ಚೆನ್ನೈನಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಊರಿಗೆ ಸರ್ವಜ್ಞ ಬರುತ್ತಿರುವುದನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ. 53 ವರ್ಷಗಳಿಂದ ತಮಿಳಿನಾಡಿನಲ್ಲಿದ್ದರೂ ಅಷ್ಟೇನೂ ಸುದ್ದಿಯಲ್ಲಿರದ ಅಯನಾವರಂ ಕನ್ನಡ ಸಂಘ ಪ್ರತಿಮೆ ಅನಾವರಣದ ಹಿನ್ನೆಲೆಯಲ್ಲಿ ಸ್ವಲ್ಪ ಸುದ್ದಿ ಮಾಡುತ್ತಿದೆ.
ತಿರುವಳ್ಳುವರ್ ಪ್ರತಿಮೆ ಅನಾವರಣ ಗಲಾಟೆ ಕರ್ನಾಟಕದಲ್ಲಿ ಸಾಕಷ್ಟು ಧೂಳು ಎಬ್ಬಿಸಿದೆ. ಯಡಿಯೂರಪ್ಪ ಕನ್ನಡಿಗರ ದ್ರೋಹಿ ಎಂದು ಕನ್ನಡ ಕಾರ್ಯಕರ್ತರು ಆಪಾದಿಸುತ್ತಿದ್ದರೆ, ಉಭಯ ರಾಜ್ಯಗಳ ಸಂಬಂಧ ವೃದ್ಧಿಯಾಗುವುದಕ್ಕೆ ಪ್ರತಿಮೆ ಅನಾವರಣ ಮಹತ್ವದ ಹೆಜ್ಜೆ ಎಂದು ಸರಕಾರಿ ಗಂಟಲುಗಳು ಹೇಳುತ್ತಿವೆ. ಬುದ್ಧಿಜೀವಿ ಸಾಹಿತಿಗಳು ಕೂಡ ಇದಕ್ಕೆ ದನಿಗೂಡಿಸಿದ್ದಾರೆ. ಅನಾವರಣ ಕಾರ್ಯಕ್ರಮ ಭಂಗಕ್ಕೆ ತಾವು ಶತಸ್ಸಿದ್ದ ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡರು ಘೋಷಿಸಿರುವುದು ನಗರದಲ್ಲಿ ಕಾನೂನು ಮತ್ತು ಶಿಸ್ತು ಅಲ್ಲೋಲಕಲ್ಲೋಲವಾಗುವ ಸೂಚನೆ ಕೊಡುತ್ತಿದೆ. ಕಾನೂನನ್ನು ಕೈಗೆತ್ತಿಕೊಂಡು ಗಲಾಟೆ ಸೃಷ್ಟಿಸುವ ಶಕ್ತಿಗಳ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಒಂದು ಸರಕಾರ ಏನು ಮಾಡುತ್ತದೋ ಅದನ್ನು ತಾನೂ ಮಾಡಲು ಯಡ್ಡಿ ಮತ್ತು ಗೃಹಮಂತ್ರಿ ಆಚಾರ್ಯ ರೆಡಿ ಆಗಿದ್ದಾರೆ.
ಇತ್ತೀಚೆಗೆ ಬಂದಿರುವ ಸುದ್ದಿಯೇನೆಂದರೆ, ತಿರುವಳ್ಳುವರ್ ಪ್ರತಿಮೆ ಅನಾವರಣವನ್ನು ತಡೆಯಬೇಕೆಂದು ವಾಟಾಳ್ ನಾಗರಾಜ್ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಕನ್ನಡಿಗರು ಮತ್ತು ತಮಿಳರ ಬಾಂಧವ್ಯ ವರ್ಧನೆಗೆ ಅಡ್ಡಗಾಲು ಹಾಕುತ್ತಿರುವುದಕ್ಕೆ ಅರ್ಜಿದಾರರನ್ನು ಕರ್ನಾಟಕ ಹೈಕೋರ್ಟ್ ನೇರವಾಗಿ ತರಾಟೆಗೆ ತೆಗೆದುಕೊಂಡಿದೆ. ಇದರಿಂದ ಅನಾವರಣದ ಕೆಲಸ ಮತ್ತಷ್ಟು ಸುಗಮವಾದಂತಾಗಿದೆ.
ಈಗತಾನೆ ವಾಹಿನಿಗೆ ಬಂದ ಒಂದು ಕವನವನ್ನು ದಟ್ಸ್ ಕನ್ನಡ ಸಾದರಪಡಿಸುತ್ತಿದೆ.
ಪ್ರತಿಮೆ ಅನಾವರಣ
ಇಂದೆಲ್ಲಿ ನೋಡಿದರಲ್ಲಿ ಗಲ್ಲಿ
ಗಲ್ಲಿಗಳಲ್ಲಿ ನಡೆಯುತಿಹುದು
ಪ್ರತಿಮೆಗಳ ಅನಾವರಣ
ಶಿಲ್ಪವಾಗಿ ನಿಲ್ಲುವವರೇ
ಇಳಿದು ಬಂದು ಮಾಡುತಿಹರು
ಅವರದೇ ಪ್ರತಿಮೆಗಳ ಅನಾವರಣ
ಹಿಂದೆಯೂ ನಡೆಯುತ್ತಿತ್ತು
ರಾಜ ಬೀಧಿಗಳಲ್ಲಿ
ಪ್ರತಿಮೆಗಳ ಅನಾವರಣ
ಮೂರ್ತಿಗಳಾಗಿ ನಿಲ್ಲಿರೆಂದು ಆ
ದೇವರುಗಳನೇ ಕೋರಿದರೂ ತಪ್ಪದೇ
ಮಾಡುತ್ತಿದ್ದರು ಪ್ರತಿಮೆಯ ನಿರಾಕರಣ
ಅಂದಿನ ಪ್ರತಿಮೆಗಳು ಆಗಿದ್ದವು
ನಮ್ಮೆಲ್ಲರಿಗೆ ಸ್ಪೂರ್ತಿಯಾಗಿ
ಇಂದಿನ ಪ್ರತಿಮೆಗಳೂ ಆಗುವವು
ರಾಜಕಾರಣಿಗಳ ಸಾಧನೆಗಳಾಗಿ
ಚಳುವಳಿಗಾರರ ಬ್ರಹ್ಮಾಸ್ತ್ರಗಳಾಗಿ
ಸರ್ಕಾರೀ ಪುಸ್ತಕದ ಅಂಕಿಗಳಾಗಿ
ಮುಂಪೀಳಿಗೆ ಉತ್ತರಿಸಬೇಕಾದ ಪ್ರಶ್ನೆಗಳಾಗಿ
ರಘುನಾಥ್. ಪಿ.ಜಿ, ಬೆಂಗಳೂರು
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications