'ಕಾರಂತ ನಮನ' ಕಲಾವಿದರಿಗೆ ಮೂರು ನಾಮ
"ಕಾರ್ಯಕ್ರಮದ ಉಸ್ತುವಾರಿ ಹೊತ್ತಿರುವ ಸಂಘಟಕ ಶ್ರೀನಿವಾಸ್ ಜಿ. ಕಪ್ಪಣ್ಣ ಮತ್ತು ಖ್ಯಾತ ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ರಂಗ ಕಲಾವಿದರ ಬಗ್ಗೆ ಉಪೇಕ್ಷೆ ತಾಳಿದ್ದಾರೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲೂ ಕಲಾವಿದರ ಹೆಸರುಗಳನ್ನು ಹಾಕುವ ಕಾಳಜಿ ವಹಿಸಿಲ್ಲ. ಕಾರಂತರಿಂದ ತರಬೇತಿ ಪಡೆದು ರಂಗ ಗೀತೆ ಹಾಡುತ್ತಿದ್ದ ಶೈಲಾ ಅವರಂತಹ ಮೂಲ ಕಲಾವಿದರಿಗೆ ಸಿಡಿ ರೆಕಾರ್ಡಿಂಗ್ನಲ್ಲಿ ಹಾಡಲು ಅವಕಾಶ ನೀಡದೆ ತಮಗೆ ಬೇಕಾದವರಿಂದ ಹಾಡಿಸಿದ್ದಾರೆ. ಕಾರಂತರ ಹೆಸರು ಹೊತ್ತ ರಂಗಸಂಗೀತ ಹಾಳಾದರೆ ಅದು ಕಾರಂತರಿಗೆ ಮಾಡಲಾದ ಅವಮಾನವಲ್ಲವೆ?" ಎಂದು ಹಿರಿಯ ರಂಗಕಲಾವಿದ ಜನ್ನಿ (ಜನಾರ್ದನ್) ಪ್ರಶ್ನಿಸುತ್ತಾರೆ.
"ಕಾರ್ಯಕ್ರಮದಲ್ಲಿ ರಂಗಗೀತೆಗಳನ್ನು ಹಾಡಿದ ಮತ್ತು 'ಗೋಕುಲ ನಿರ್ಗಮನ' ನಾಟಕದ ಹಿಮ್ಮೇಳದಲ್ಲಿದ್ದ ಮೈಸೂರಿನ ಆರು ಕಲಾವಿದರಿಗೆ ಸಂಭಾವನೆಯನ್ನೇ ನೀಡಿಲ್ಲ. ಅಷ್ಟೇ ಅಲ್ಲ, ಕಾರ್ಯಕ್ರಮದ ನಂತರ ಸಿಡಿ ರೆಕಾರ್ಡಿಂಗ್ಗಾಗಿ ಸುಮಾರು 40 ರಂಗಗೀತೆಗಳನ್ನು ಹಾಡಿದ್ದಕ್ಕೂ ತಮಗೆ ಯಾವುದೇ ಸಂಭಾವನೆ ನೀಡಿಲ್ಲ" ಎಂದು ಕಲಾವಿದ ಚಂದ್ರಶೇಖರ್ ಆಚಾರ್ ದೂರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಘಟಕ ಕಪ್ಪಣ್ಣ, "ಕಾರಂತರ ಮೂಲ ರಂಗಸಂಗೀತ ಹಾಡುತ್ತಿದ್ದ ಕಲಾವಿದರ ಹಲವು ಸಿಡಿಗಳು ಈಗಾಗಲೇ ಬಿಡುಗಡೆಯಾಗಿವೆ. ಹೀಗಾಗಿ ಅವರಿಂದಲೇ ಮತ್ತೆ ಹಾಡಿಸಬೇಕೆಂದೇನೂ ಇಲ್ಲ. ಹೊಸ ಕಲಾವಿದರಿಗೆ ಅವಕಾಶ ನೀಡುವುದು ತಪ್ಪೇನೂ ಅಲ್ಲ. ಆದರೆ ರಂಗಕಲಾವಿದರಿಗೆ ಸಂಭಾವನೆ ನೀಡದಿದ್ದರೆ ಅದು ಅಕ್ಷಮ್ಯ. ಈ ಬಗ್ಗೆ ಗಮನ ಹರಿಸುತ್ತೇವೆ" ಎನ್ನುತ್ತಾರೆ.
ಕಳೆದ ತಿಂಗಳು ನಡೆದ ಐದು ದಿನಗಳ ಕಾರ್ಯಕ್ರಮಕ್ಕೆ ಒಟ್ಟು ಏಳು ಲಕ್ಷ ರು. ಖರ್ಚಾಗಿದ್ದು ರಂಗಗೀತೆಗಳ ಸಿಡಿ ಮತ್ತು ಪುಸ್ತಕ ಬಿಡುಗಡೆಗೆ ಐದು ಲಕ್ಷ ರು. ಅಂದಾಜು ಮಾಡಲಾಗಿದೆ. ಆದರೆ ಹಣದ ಕೊರತೆಯಿಂದ ಈ ಕಾರ್ಯಗಳು ವಿಳಂಬವಾಗುತ್ತಿವೆ ಎಂದಿದ್ದಾರೆ.