ಶಿರಸಿಯಲ್ಲಿ ಏ.27ರಂದು ಚಾಂದನೀ ಕೇದಾರ ಪೂರ್ಣಚಂದ್ರ ಸಂಗೀತ ರಾತ್ರಿ
*ಇನ್ಫೋ ಇನ್ಸೈಟ್
ಶಿರಸಿ : ಅಂದು ಭಾರತೀಯ ಆಸನ ಪದ್ಧತಿ. ಅಲ್ಲಿ ನಾವು- ನೀವು, ಜತೆಗಿರುವನು ಚಂದಿರ ! ಹೀಗೊಂದು ಸಂಗೀತದ ಕರೆಯೋಲೆ....
ಪುಣೆಯ ಪೂರ್ಣಿಮಾ ಕುಲಕರ್ಣಿ, ಪಂಡಿತ್ ಪರಮೇಶ್ವರ ಹೆಗಡೆ, ಪಂಡಿತ್ ಗಣಪತಿ ಭಟ್ ಹಾಸಣಗಿ, ಮುಂಬಯಿಯ ವಿದುಷಿ ಪದ್ಮಾ ತಲವಾಲ್ಕರ್- ಇವರೆಲ್ಲರ ಸಂಗೀತ ಒಂದೇ ವೇದಿಕೆಯಲ್ಲಿ ; ಏಪ್ರಿಲ್ 27ರ ಶನಿವಾರ ರಾತ್ರಿ 9 ಗಂಟೆಗೆ, ಇಲ್ಲಿನ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ.
ಪಂಡಿತ್ ಗಣಪತಿ ಭಟ್ ಮ್ಯೂಸಿಕ್ ಅಕಾಡೆಮಿ ಗುರುಕುಲ ಹಾಗೂ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ ಸಹಾಯಾರ್ಥ ಈ ಸಂಗೀತ ರಾತ್ರಿ. ತಿಂಗಳ ಬೆಳಕಿನ ಛತ್ರಿಯಡಿ ‘ಚಾಂದನೀ ಕೇದಾರ ಪೂರ್ಣಚಂದ್ರ ಸಂಗೀತ ರಾತ್ರಿ’. ಶಿರಸಿಯ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಮಾರಿಕಾಂಬಾ ಜೆಸೀಸ್, ದೈವಜ್ಞ ಯುವಕ ಸಂಘ ಹಾಗೂ ಪೌಲ್ಟ್ರಿ ಫಾರ್ಮರ್ಸ್ ಅಸೋಸಿಯೇಷನ್ ಈ ಸಂಗೀತ ರಾತ್ರಿಯ ಆಯೋಜಕರು.
ಮುಂಬಯಿಯ ನೀಲಾದ್ರಿಕುಮಾರ್ ಅವರ ಸಿತಾರ ವಾದನ ಸಂಗೀತಾನುಭಾವಿಗಳಿಗೆ ಬೋನಸ್ಸು. ಗೋಪಾಲಕೃಷ್ಣ ಹೆಗಡೆ, ಉದಯರಾಜ ಕರ್ಪೂರ್ ಹಾಗೂ ಸತ್ಯಜಿತ್ ತಲವಾಲ್ಕರ್ ಸಂಗೀತಕ್ಕೆ ತಬಲಾ ಸಾಥಿಗಳು. ರವೀಂದ್ರ ಕಾಟೋಟಿ ಮತ್ತು ಪಂಚಾಕ್ಷರಿ ಹಿರೇಮಠ ಅವರ ಸಂವಾದಿನೀ ಇರುತ್ತದೆ. ಅಂದಹಾಗೆ, ಈ ಕಾರ್ಯಕ್ರಮಕ್ಕೆ ನೀವು ತೆರಬೇಕಾಗಿರುವುದು ಟಿಕೇಟು ದರವಲ್ಲ, ಅದು ಅತಿಥಿ ಕಾಣಿಕೆ- ನೂರೇ ರುಪಾಯಿ! ದಿಗ್ಗಜಾತಿ ದಿಗ್ಗಜರ ಸಂಗೀತ ಕೇಳುವುದರ ಮೂಲಕ ಸಂಗೀತಕ್ಕೆ ಸಂಬಂಧಿಸಿದ ಒಂದು ಒಳ್ಳೆ ಕೆಲಸದಲ್ಲಿ ನಿಮ್ಮ ಹವಿಸ್ಸನ್ನೂ ಸಲ್ಲಿಸುವ ಅಪರೂಪದ ಅವಕಾಶ ಇದಲ್ಲವೇ?