ಜೇಸುದಾಸ್ಗೆ 62 : ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಭಕ್ತಿಗೀತೆ
ಕುಂದಾಪುರ : ಕಿರಸ್ತಾನದವರು ಎಂಬ ಕಾರಣಕ್ಕೆ ಈ ಹಿಂದೆ ದೇವಾಲಯವೊಂದಕ್ಕೆ ಪ್ರವೇಶ ದಕ್ಕದೆ, ಶಾಸ್ತ್ರೀಯ ಸಂಗೀತದ ಮೂಲಕವೇ ಅಲ್ಲಿನವರ ಮನ ಕರಗಿಸಿ ದೇವರ ದರ್ಶನ ಮಾಡಿದ್ದ ಜೇಸುದಾಸ್ ಉರುಫ್ ಯೇಸುದಾಸ್ ಗುರುವಾರ ಕೊಲ್ಲೂರಲ್ಲಿ ಬಡಿಸಿದ್ದು ಕಂಠದೂಟ. ಜೇಸುದಾಸ್ರ ಅರುವತ್ತೆರಡನೇ ಹುಟ್ಟುಹಬ್ಬವನ್ನು ಮೂಕಾಂಬಿಕೆಯ ಸನ್ನಿಧಿಯಲ್ಲಿ ಆಡರಿಸಿದ ಪರಿಯಿದು.
ಚಂಡಿಕಾ ಹೋಮ ಮಾಡಿಸಿದ ಜೇಸುದಾಸ್ ತಾವೇ ಹಾಡಿರುವ ‘ಸೌಪರ್ಣಿಕಾ ತೀರಂ’ ಎಂಬ ಕೊಲ್ಲೂರು ಕುರಿತ ಕೆಸೆಟ್ಟನ್ನೂ ಅರ್ಪಿಸಿದರು. ದೇವಳದ ಆಡಳಿತ ಮುಖ್ಯಸ್ಥ ಬಿ.ಎಂ.ಸುಕುಮಾರ ಶೆಟ್ಟಿ ಅರ್ಚಕ ಗೋವಿಂದ ಅಡಿಗರಿಗೆ ಕೊಡುವ ಮೂಲಕ ಕೆಸೆಟ್ ಬಿಡುಗಡೆಯಾಯಿತು.
‘ಕುಂಯ್’ ಮೈಕಿನಲ್ಲಿ ಭಕ್ತಿ ಗೀತೆ
ಹೊಸ ಬಣ್ಣ ಹೊದ್ದು ನಳನಳಿಸುತ್ತಿರುವ ಕೊಲ್ಲೂರು ಕ್ಷೇತ್ರದ ಸೌಂದರ್ಯದ ಬಗೆಗೊಂದಿಷ್ಟು ಮಾತು. ಅಲ್ಲಿನ ಆಡಳಿತ ಮಂಡಳಿಯವರಿಗೆ ಶಹಬ್ಬಾಸ್ಗಿರಿ. ಮಿಕ್ಕೆಲ್ಲಾ ಮಾತುಗಳು ಜೇಸುದಾಸ್ ಕಂಠದ ಮೂಲಕ ಹಾಡಾದವು. ಗಜವದನಾ ಬೇಡುವೆ... ಆಲಾಪ ಶುರುವಾದೊಡನೆ ಮೈಕ್ ‘ಕುಂಯ್’ ಎಂದು ಚೀರತೊಡಗಿತು. ಪ್ರೇಕ್ಷಕರಲ್ಲಿ ಕ್ಷಮೆ ಕೇಳಿದ ಜೇಸುದಾಸ್ ಖುದ್ದು ಮೈಕನ್ನು ಸರಿ ಪಡಿಸಲು ಪ್ರಯತ್ನಿಸಿದರು. ಆದರೂ ಅದು ಫಲ ಕೊಡಲಿಲ್ಲ. ‘ಕುಂಯ್’ ತೊಂದರೆಯ ನಡುವೆಯೇ ಜೇಸುದಾಸ್ ಗಾಯನ ಮುಗಿಯಿತು. ಒಳ್ಳೆಯ ಹಾಡುಗಾರನಿಗೆ ಇದು ಅವಮಾನ ಅಂತ ಅಲ್ಲಿ ನೆರೆದಿದ್ದ ಭಕ್ತರು ಗೊಣಗುಟ್ಟಿದರು.
(ಇನ್ಫೋ ವಾರ್ತೆ)
ಕೊಲ್ಲೂರಲ್ಲೊಂದು ಸುತ್ತು
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications