ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಈಗ ಹೊಯ್ಸಳ ರತ್ನ
ಹಾಸನ : ಮಂಗಳವಾರ ಸಂಜೆ ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲೊಂದು ಸುಂದರ ಕಾರ್ಯಕ್ರಮ. ಅದು ರಸಸಂಜೆ. ಸಂಗೀತ ಸಂಜೆ. ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಮಂಜುಳಾ ಗುರುರಾಜ್ ತಂಡದವರು, ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಸಂಗೀತ ಪ್ರಿಯರನ್ನು ರಂಜಿಸಿದರು.
ಕಾರ್ಯಕ್ರಮದ ಉದ್ದೇಶವೂ ಮಹತ್ತರವಾದದ್ದೇ. ಗುಜರಾತ್ ಭೂಕಂಪ ಸಂತ್ರಸ್ತರ ನೆರವಿಗಾಗಿ ಜಿಲ್ಲಾಡಳಿತ ಈ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಿತ್ತು. ಸುಮಾರು 15ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಸೇರಿದ್ದ ಈ ಕಾರ್ಯಕ್ರಮದಲ್ಲಿ ಸಂಜೆ 7 ಗಂಟೆಯಿಂದ ರಾತ್ರಿ 1 ಗಂಟೆಯವರೆಗೆ ಎಸ್.ಪಿ. ಹಾಗೂ ತಂಡದವರು ಗಾನಸುಧೆಯನ್ನು ಹರಿಸಿದರೆ, ಮಿಮಿಕ್ರಿ ದಯಾನಂದ್ ಚಲನಚಿತ್ರನಟರನ್ನು ಅನುಕರಣೆ ಮಾಡಿ ನಗೆಗಡಲಲ್ಲಿ ತೇಲಿಸಿದರು.
ಹೊಯ್ಸಳ ರತ್ನ : ಈ ಸಂದರ್ಭದಲ್ಲಿ ಜಿಲ್ಲಾಡಳಿತವು ಎಸ್ಪಿ ಅವರಿಗೆ ಗಾನಸಿಂಧು ಎಂಬ ಬಿರುದು ನೀಡಿ ಗೌರವಿಸಿದರೆ, ಡಾ. ರಾಜ್ಕುಮಾರ್ ಅಭಿಮಾನಿಗಳ ಸಂಘದವರು ಹೊಯ್ಸಳ ರತ್ನ ಪ್ರಶಸ್ತಿ ನೀಡಿ, ಮೈಸೂರು ಪೇಠ ತೊಡಿಸಿ ಸನ್ಮಾನಿಸಿದರು. ರಾಜ್ಯ ಕಂದಾಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಶ್ರೀಕಂಠಯ್ಯ ಎಸ್.ಪಿ. ಅವರಿಗೆ ಗಾನಸಿಂಧು ಪ್ರಶಸ್ತಿ ಪ್ರದಾನ ಮಾಡಿದರು.
ಇದೇ ಸಂದರ್ಭದಲ್ಲಿ ಹಿನ್ನೆಲೆ ಗಾಯಕಿ ಮಂಜುಳ ಗುರುರಾಜ್ ಅವರಿಗೂ ಶಾಲು ಹೊದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬಿ.ಪಿ. ಖನಿರಾಂ, ಶಾಸಕರಾದ ಹನುಮೇಗೌಡ, ಕರೀಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಸಲೀಂ ಮೊದಲಾದವರು ಭಾಗವಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು