ಈ ಹೊತ್ತು ಕ್ಯಾಸೆಟ್ ಕಂಪನಿಗಳ ಕಾಪಾಡುತಿಹನು ಅಯ್ಯಪ್ಪ
ಬೆಂಗಳೂರು : ಹಲವು ಹನ್ನೊಂದು ಸಮಸ್ಯೆಗಳಿಂದ ಸೊರಗಿರುವ ಕನ್ನಡ ಕ್ಯಾಸೆಟ್ ಉದ್ದಿಮೆಯನ್ನು ಕಾಪಾಡುತ್ತಿರುವುದೇ ದೇವರು ಎಂಬುದನ್ನು ನಾವೀಗಾಗಲೇ ಹೇಳಿದ್ದೇವೆ. ಈ ಹೊತ್ತು ರಾಜ್ಯದಲ್ಲಿ ಸ್ವಾಮಿ ಶರಣಂ ಅಯ್ಯಪ್ಪನ ಸೀಸನ್, ಶಬರಿಗಿರಿವಾಸನ ನೋಡಲು ಲಕ್ಷಾಂತರ ಮಂದಿ ಪ್ರಯಾಣ ಹೊರಟಿದ್ದಾರೆ.
ಈ ಎಲ್ಲರ ಮನೆಯಲ್ಲೂ, ಅವರು ಪ್ರಯಾಣಿಸುತ್ತಿರುವ ವಾಹನಗಳಲ್ಲೂ ಸ್ವಾಮಿ ಅಯ್ಯಪ್ಪನ ಗೀತೆಗಳು ಮೊಳಗುತ್ತಿವೆ. ಈ ಸೀಸನ್ ಲಾಭ ಪಡೆಯಲು, ವಿವಿಧ ಕ್ಯಾಸೆಟ್ ಕಂಪನಿಗಳು ನವೆಂಬರ್ ತಿಂಗಳಿನಲ್ಲಿ ಹತ್ತಿರ ಹತ್ತಿರ ಹತ್ತು ಅಯ್ಯಪ್ಪನ ಕ್ಯಾಸೆಟ್ಗಳನ್ನು ಬಿಡುಗಡೆ ಮಾಡಿವೆ. ಈ ಕ್ಯಾಸೆಟ್ಗಳು ಹಾಟ್ ಕೇಕ್ನಂತೆ ಮಾರಾಟವಾಗುತ್ತಿವೆ.
ಜಗವಂದ್ಯ ಶ್ರೀ ಅಯ್ಯಪ್ಪ : ಅಯ್ಯಪ್ಪ ಸ್ವಾಮಿಯ ಭಜನೆಗಳನ್ನು ಒಳಗೊಂಡ ಈ ಕ್ಯಾಸೆಟ್ ಸ್ವಾಮಿ ಅಯ್ಯಪ್ಪನ ಭಕ್ತರಿಗೆ ಝೇಂಕಾರದ ಕೊಡುಗೆ. ಇದರಲ್ಲಿರುವ ಭಜನೆಗಳನ್ನು ವೀರೇಶ್ ಬೆಳಗಾಲಪೇಟೆ ರಚಿಸಿದ್ದು, ಡಿ. ಶ್ರೀನಿವಾಸ ರಾಗ ಸಂಯೋಜನೆ ಮಾಡಿದ್ದಾರೆ. ರಮೇಶ್ ಚಂದ್ರ ಅವರ ಕಂಠಸಿರಿ ಧ್ವನಿಸುರುಳಿಯನ್ನು ಶ್ರೀಮಂತಗೊಳಿಸಿದೆ. ಕ್ಯಾಸೆಟ್ ದರ - 30 ರುಪಾಯಿ.
ಉಸಿರಲಿ ಅಯ್ಯಪ್ಪ : ಚಂದ್ರು ರಚಿಸಿರುವ ಎಂಟು ಭಕ್ತಿಗೀತೆಗಳನ್ನು ಒಳಗೊಂಡ ಈ ಕ್ಯಾಸೆಟ್ನ ಪ್ರಥಮ ಗೀತೆ 'ಈ ಉಸಿರು ಇರುವವರೆಗೆ ....’ ಎಂದೇ ಆರಂಭವಾಗುತ್ತಿದೆ. ದಿವಂಗತ ಜಿ.ವಿ. ಅತ್ರಿ ರಾಗಸಂಯೋಜಿಸಿ ಸುಶ್ರಾವ್ಯವಾಗಿ ಹಾಡಿರುವ ಕ್ಯಾಸೆಟ್ ಅನ್ನು ಝೇಂಕಾರ ಕಂಪನಿ ಈ ಸೀಸನ್ನಲ್ಲಿ ಮತ್ತೆ ಬಿಡುಗಡೆ ಮಾಡಿದೆ. ಕ್ಯಾಸೆಟ್ ದರ - 30 ರುಪಾಯಿ.
ಹಿಮಾಲಯ ಈ ಶಬರಿಮಲೆ: ಈ ಕ್ಯಾಸೆಟ್ನಲ್ಲಿ ಶಬರಿಗಿರಿಯನ್ನು ಕೈಲಾಸನಾಥನಿರುವ ಹಿಮಾಲಯಕ್ಕೆ ಹೋಲಿಸಲಾಗಿದೆ. ಕ್ಯಾಸೆಟ್ ಶೀರ್ಷಿಕೆಯ ಗೀತೆಯೂ ಇದರಲ್ಲಿದೆ. 8 ಭಕ್ತಿಗೀತೆಗಳನ್ನು ಕೆ. ವೆಂಕಟೇಶ್ ರಚಿಸಿದ್ದಾರೆ. ಕೆ. ಯುವರಾಜ್ ಸಂಗೀತ ಸಂಯೋಜಿಸಿ, ಹಾಡಿದ್ದಾರೆ. ಕ್ಯಾಸೆಟ್ ದರ - 30 ರುಪಾಯಿ.
ಈ ಭೂಮಿಯಲವತಾರ : ಸ್ವಾಮಿ ಅಯ್ಯಪ್ಪನ ಬೀಡನ್ನು ಮಲೆನಾಡೆಂದು ಬಣ್ಣಿಸಿ, ಡಾ. ಸಂತೋಷ್ಶೆಟ್ಟಿ ಅವರು ರಚಿಸಿರುವ ಎಂಟು ಭಕ್ತಿಗೀತೆಗಳನ್ನೊಳಗೊಂಡ ಈ ಕ್ಯಾಸೆಟ್ ಬೆಲೆ 30 ರುಪಾಯಿ. ಕೆ. ಯುವರಾಜ್ ಎಲ್ಲ ಗೀತೆಗಳಿಗೆ ಸಂಗೀತ ಸಂಯೋಜಿಸಿ, ಜಾನಪದ ದಾಟಿಯಲ್ಲಿ ಹಾಡಿದ್ದಾರೆ.
ಮಕರ ಜ್ಯೋತಿ: ಪುತ್ತೂರು ನರಸಿಂಹ ನಾಯಕ್ ಮತ್ತು ಗಂಗೋತ್ರಿ ರಂಗಸ್ವಾಮಿ ಅವರು ಹಾಡಿರುವ 9 ನವನವೀನ ಭಕ್ತಿಗೀತೆಗಳನ್ನು ಒಳಗೊಂಡ ಈ ಕ್ಯಾಸೆಟ್ ಅನ್ನು ಅಯ್ಯಪ್ಪನ ಭಕ್ತರಿಗಾಗಿ ಟಿ. ಸೀರೀಸ್ ಹೊರತಂದಿದೆ. ಗೋಟೂರಿ ಅವರು ರಚಿಸಿರುವ ಈ ಎಲ್ಲ ಗೀತೆಗಳಿಗೆ ಸಾಧುಕೋಕಿಲಾ ಸಂಗೀತ ಸಂಯೋಜಿಸಿದ್ದಾರೆ. ಕ್ಯಾಸೆಟ್ ಬೆಲೆ 30 ರುಪಾಯಿ.
ಶ್ರೀ ಮಣಿಕಂಠ ಅಯ್ಯಪ್ಪ ರಾಗಾಂಜಲಿ : ಜಿ.ಎಸ್.ಎಲ್.ಎನ್. ಮೂರ್ತಿ ಮತ್ತು ಶ್ರೀಚಂದ್ರು ರಚಿಸಿರುವ ಒಟ್ಟು 10 ಅಯ್ಯಪ್ಪನ ಭಕ್ತಿಗೀತೆಗಳನ್ನು ಒಳಗೊಂಡ ಸಂಪುಟವಿದು. ಶಂಕರ್ -ಗಣೇಶ್ ಇದಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಪುತ್ತೂರು ನರಸಿಂಹನಾಯಕ್, ಶಶಿದವ ಕೋಟೆ, ಬದ್ರೀ ಪ್ರಸಾದ್, ರಮೇಶ್ ಚಂದ್ರ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದ್ದಾರೆ.
ಕಾರ್ತೀಕ ಮಾಸ, ಶಬರಿಗಿರಿಯ ಮಹಿಮೆ, ಅಯ್ಯಪ್ಪನ ಹಿರಿಮೆ ಸಾರುವ ಈ ಕ್ಯಾಸೆಟ್ ಬೆಲೆ 30 ರುಪಾಯಿ. ಇದೂ ಸಹ ಟಿ ಸೀರೀಸ್ ಕೊಡುಗೆ.
ಅಯ್ಯಪ್ಪನ ಹರಿಕಥೆ: ಟಿ. ಸೀರೀಸ್ ಮತ್ತೆ ಬಿಡುಗಡೆ ಮಾಡಿರುವ ಈ ಕ್ಯಾಸೆಟ್ ಈಗಾಗಲೇ ಜನಪ್ರಿಯವಾಗಿರುವ ಹರಿಕಥೆಯ ಧ್ವನಿಸುರುಳಿ. ದಿವಂಗತ ಗುರುರಾಜಲು ನಾಯಿಡು ಅವರು ಪ್ರಸ್ತುತಪಡಿಸಿರುವ ಈ ಕ್ಯಾಸೆಟ್ನಲ್ಲಿ ಹಾಡು, ಕಥೆ, ಉಪಕಥೆಗಳಿವೆ. ಗುರುರಾಜಲು ನಾಯಿಡು ಅವರ ಕಂಠ ಸಿರಿಗೆ ಪಕ್ಕವಾದ್ಯಗಳೂ ಅಚ್ಚುಕಟ್ಟಾಗಿವೆ. ಕ್ಯಾಸೆಟ್ಬೆಲೆ 30 ರುಪಾಯಿ.