ಶನಿವಾರ ಅಂಜಲಿ ರಾಮಣ್ಣ 2 ಪುಸ್ತಕಗಳ ಬಿಡುಗಡೆ

ಅಲ್ಲಿ ಮರೆತೇ ಹೋಗಿದ್ದ, ವರ್ಷಾನುಗಟ್ಟಲೆ ಭೇಟಿಯೇ ಆಗದಿದ್ದ ಗೆಳೆಯರು ಧುತ್ತನೆ ಸಿಕ್ಕುಬಿಡುತ್ತಾರೆ, ಕೆಲವರು ಗುರುತು ಸಿಕ್ಕರೂ ಇನ್ನೋಸೆಂಟಾಗಿ ಗುರುತೇ ಇಲ್ಲದವರಂತೆ ಇನ್ನೊಬ್ಬರ ಕೈಕುಲುಕುತ್ತ ನಿಂತಿರುತ್ತಾರೆ, ಪರಿಚಯವೇ ಇಲ್ಲದವರು 'ನೀವು ಅವರಲ್ವಾ' ಎಂದು ಉಭಯ ಕುಶಲೋಪರಿ ವಿಚಾರಿಸುತ್ತ ಗೆಳೆಯರಾಗುತ್ತಾರೆ. ಕೆಲವರು ಪುಸ್ತಕ ಕೊಳ್ಳುತ್ತಾರೆ, ಮತ್ತೆ ಕೆಲವರು ಪುಸ್ತಕದ ಹಿಂದೆ ನೋಡಿ ಅಲ್ಲೇ ಇಟ್ಟು ಜಾಗ ಖಾಲಿ ಮಾಡಿರುತ್ತಾರೆ.
ಇನ್ನು ಅದ್ಭುತ ವಾಗ್ಮಿಗಳು ವೇದಿಕೆಯ ಮೇಲಿದ್ದರಂತೂ ಕೇಳುಗರ ಕಿವಿಗಳಿಗೆ ಹಬ್ಬ. ಪುಸ್ತಕ ಬಿಡುಗಡೆಗಿಂತ ಹೊತ್ತಗೆಯನ್ನು ಯಾರು ಬಿಡುಗಡೆ ಮಾಡಲು ಬರುತ್ತಾರೆ? ಚೆನ್ನಾಗಿ ಮಾತಾಡುತ್ತಾರಾ ಇಲ್ಲವಾ? ಅಥವಾ ಸಿಕ್ಕಾಪಟ್ಟೆ ಕೊರೀತಾರಾ? ಎಂಬುದನ್ನು ನೋಡಿಕೊಂಡೇ ಬರುವವರಿದ್ದಾರೆ. ಜೊತೆಗೆ, 'ಉಪಹಾರ ಇರುತ್ತದೆ' ಎಂದು ಆಹ್ವಾನ ಪತ್ರಿಕೆಯ ಬುಡದಲ್ಲಿ ಹಾಕಿದ್ದನ್ನು ಕನ್ಫರ್ಮ್ ಮಾಡಿಕೊಂಡು ಬರುವವರೂ ಇರುತ್ತಾರೆ.
ಏನೇ ಆಗಲಿ, ಈ ಶನಿವಾರ ಮತ್ತೆರಡು ಪುಸ್ತಕಗಳು ಲೋಕಾರ್ಪಣೆಗೊಳ್ಳುತ್ತಿವೆ. ಲೇಖಕಿ, ಅಂಕಣಗಾರ್ತಿ, ವಕೀಲೆ, ಸಮಾಜ ಸೇವಕಿ ಅಂಜಲಿ ರಾಮಣ್ಣ ಅವರು ಎರಡು ಪುಸ್ತಕಗಳಾದ 'ರಶೀತಿಗಳು - ಮನಸ್ಸು ಕೇಳಿ ಪಡೆದದ್ದು' (35 ಲಲಿತ ಪ್ರಬಂಧಗಳ ಸಂಕಲನ) ಮತ್ತು 'ಚೌಕಟ್ಟು - Legally yours' (ಕಾನೂನಿಗೆ ಸಂಬಂಧಿಸಿದ 25 ಲೇಖನಗಳು) ಬೆಳಕು ಕಾಣುತ್ತಿವೆ. ಸಾವಣ್ಣ ಪ್ರಕಾಶನ ಈ ಎರಡು ಹೊತ್ತಗೆಗಳನ್ನು ಅರ್ಪಿಸುತ್ತಿದೆ.
ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಪತ್ರಕರ್ತೆ ಮತ್ತು ಝಲಕ್ 90.4 ಸಮುದಾಯ ರೇಡಿಯೋ ಸಂಸ್ಥಾಪಕಿ ಡಿ.ಎಸ್. ಶಮಂತಾ, ಲೇಖಕ ಮತ್ತು ಪತ್ರಕರ್ತ ಜೋಗಿ, 'ಎದ್ದೇಳು ಮಂಜುನಾಥ' ಖ್ಯಾತಿಯ ಕನ್ನಡ ಚಲನಚಿತ್ರ ನಿರ್ದೇಶಕ ಗುರುಪ್ರಸಾದ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ಮಾತಿಗಂತೂ ಖಂಡಿತ ಕೊರತೆಯಿರುವುದಿಲ್ಲ.
ಕಾರ್ಯಕ್ರಮ ನಡೆಯುವ ಸ್ಥಳ : ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು - 560 018.
ದಿನಾಂಕ : ಡಿಸೆಂಬರ್ 8, 2012, ಶನಿವಾರ
ಸಮಯ : ಸಂಜೆ 6 ಗಂಟೆಗೆ
ಎಲ್ಲರಿಗೂ ಸ್ವಾಗತ ಕೋರಿದ್ದಾರೆ ಅಂಜಲಿ ರಾಮಣ್ಣ.












Click it and Unblock the Notifications