ವಿವೇಕ ಶಾನಭಾಗರ ‘ದೇಶ ಕಾಲ’ ಶುರು
- ದಟ್ಸ್ ಕನ್ನಡ ಡೆಸ್ಕ್
ಪ್ರಸ್ತುತ ದೃಶ್ಯ ಮಾಧ್ಯಮದ ಮುಂದೆ ಓದುವ ಸಂಸ್ಕೃತಿ ಬದಿಗೆ ಸರಿದಿದೆ. ಪತ್ರಿಕೆಗಳನ್ನು, ಅದರಲ್ಲೂ ಸಾಹಿತ್ಯಕ ಪತ್ರಿಕೆಗಳನ್ನು ಹೊರತರುವುದು ಗೌರಿಶಂಕರ ಹತ್ತಿದಷ್ಟೇ ಕಷ್ಟ ಎನ್ನುವ ಅಭಿಪ್ರಾಯ ಸಾರ್ವತ್ರಿಕವಾಗಿ ಕೇಳಿ ಬರುತ್ತಿದೆ. ಅದಕ್ಕೆ ಪುಷ್ಟಿ ನೀಡುವಂತೆ ಎಷ್ಟೋ ಮಹತ್ವದ ಸಾಹಿತ್ಯ ಪತ್ರಿಕೆಗಳು ಹುಟ್ಟಿದಷ್ಟೇ ವೇಗವಾಗಿ ಕಣ್ಮರೆಯಾದ ನಿದರ್ಶನಗಳು ನಮ್ಮ ಮುಂದಿವೆ.
ಇಂತಹ ಸಂಕಷ್ಟದ ವಾತಾವರಣದಲ್ಲಿಯೇ ಕನ್ನಡದ ಹೆಮ್ಮೆಯ ಕತೆಗಾರರಾದ ವಿವೇಕ ಶಾನಭಾಗ ಅವರು, ಹೊಸ ಸಾಹಸಕ್ಕೆ ಹೆಗಲು ಕೊಟ್ಟಿದ್ದಾರೆ. ಸಾಹಿತ್ಯಕ ಪತ್ರಿಕೆ ‘ದೇಶಕಾಲ ’ಕ್ಕೆ ಜೀವತುಂಬಲು ಸಜ್ಜಾಗಿದ್ದಾರೆ.
ವಿವೇಕ ಶಾನಭಾಗರ ಕತೆಗಳನ್ನು ಓದಿದವರಿಗೆ ಅವರ ಕನಸುಗಳ ಬಗ್ಗೆ ಅಚ್ಚರಿಯೇನೂ ಆಗುವುದಿಲ್ಲ. ಬದುಕಿನಲ್ಲಿನ ಎಲ್ಲ ಪುಳಕಗಳನ್ನು, ತಲ್ಲಣಗಳನ್ನು ಮತ್ತು ಸೂಕ್ಷ್ಮಗಳನ್ನು ಹತ್ತಿರದಿಂದ ನೋಡುವ, ಅದನ್ನು ಅಕ್ಷರಗಳಲ್ಲಿ ಕಟ್ಟಿಕೊಡುವ ಕಸುವು ಅವರಲ್ಲಿದೆ. ಸಾಹಿತ್ಯಾಸಕ್ತರ ಮೂರನೇ ಕಣ್ಣನ್ನು ತೆರೆಸುವ, ಸಾಂಸ್ಕೃತಿಕ ಯಾತ್ರೆಗೆ ಅವರು ಎಲ್ಲರ ಸಹಕಾರವನ್ನು ಕೋರುತ್ತಿದ್ದಾರೆ.
ಏಪ್ರಿಲ್ 9ರಂದು ಯುಗಾದಿಯ ಸಂಭ್ರಮ ಒಂದು ಪಕ್ಕದಲ್ಲಿದ್ದರೇ, ಅಂದು ಕನ್ನಡದ ನೆಲದಲ್ಲಿ ‘ದೇಶಕಾಲ’ಕ್ಕೆ ಪ್ರಸವ. ತ್ರೆೃಮಾಸಿಕವಾಗಿ ಹೊರತರುತ್ತಿರುವ ‘ದೇಶಕಾಲ’ವನ್ನು ಸಾಂಸ್ಕೃತಿಕ ಬದುಕಿನ ದಾಖಲೆಯಾಗಿ ಉಳಿಸುವ ಹಂಬಲ ವಿವೇಕ್ ಅವರಲ್ಲಿದೆ.
ಪಂಪ ಮಹಾಕವಿ ರಸ್ತೆಯಲ್ಲಿರು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಬೆಳಗ್ಗೆ 10ಕ್ಕೆ ದೇಶಕಾಲದ ಬಿಡುಗಡೆ ಸಮಾರಂಭವನ್ನು ಏರ್ಪಡಿಸಲಾಗಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಗಿರೀಶ್ಕಾರ್ನಡ್, ಡಾ.ಯು.ಆರ್.ಅನಂತಮೂರ್ತಿ, ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ, ದೇವನೂರು ಮಹಾದೇವ, ಜಿ.ಎಸ್. ಅಮೂರ, ವೈದೇಹಿ, ಕೆ.ವಿ.ಅಕ್ಷರ, ಅಬ್ದುಲ್ ರಶೀದ್, ಎಸ್.ದಿವಾಕರ್, ಮೋಳಿ ವರ್ಗೀಸ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಜಯಂತ ಕಾಯ್ಕಿಣಿ ಕಾರ್ಯಕ್ರಮವನ್ನು ನಿರ್ವಹಿಸುವರು.
ಜೀವನ, ಸಾಕ್ಷಿ, ಪುಬುದ್ಧ ಕರ್ನಾಟಕ, ಸಂಚಯ, ಸಂಕ್ರಮಣ, ಸಂಕಲನ, ಮಾತುಕತೆ, ಅನ್ವೇಷಣೆ ಮತ್ತಿತರ ಪತ್ರಿಕೆಗಳು ತಲುಪಲಾಗದ ಅಂತರವನ್ನು ಕ್ರಮಿಸುವ ಬಯಕೆಯಿಂದ ‘ದೇಶಕಾಲ’ ರೂಪುಕೊಳ್ಳುತ್ತಿದೆ.
ಕನ್ನಡಕ್ಕಷ್ಟೇ ಸೀಮಿತವಾಗದೇ, ದೇಶ-ಪರದೇಶಗಳ ಸಾಹಿತ್ಯವಲಯಗಳಲ್ಲಿನ ಹೊಸ ಪ್ರಯೋಗಗಳನ್ನು ಕನ್ನಡ ಓದುಗರಿಗೆ ತಲುಪಿಸುವ ಸೇತುವೆಯಂತೆ ಈ ಪತ್ರಿಕೆ ಕಾರ್ಯನಿರ್ವಹಿಸಲಿದೆ ಎನ್ನುತ್ತಾರೆ ವಿವೇಕ್.
ಅವರ ಮಾತುಗಳು ಪಕ್ಕಕ್ಕಿರಲಿ. ನಿಜಕ್ಕೂ ದೇಶಕಾಲದ ಮೊದಲ ಸಂಚಿಕೆ ಮುತ್ತಿಕ್ಕುವಷ್ಟು ಅಂದವಾಗಿದೆ. ಚಂದ್ರಶೇಖರ ಕಂಬಾರ, ಅನಂತಮೂತಿ, ಸುಬ್ಬಣ್ಣ, ತಿರುಮಲೇಶ, ದಿವಾಕರ್, ವೈದೇಹಿ ಮತ್ತಿತರರು ಪತ್ರಿಕೆಯ ತೂಕವನ್ನು ಹೆಚ್ಚಿಸಿದ್ದಾರೆ. ಚನ್ನಕೇಶವ ಅವರು ಸಂಚಿಕೆಯನ್ನು ವಿನ್ಯಾಸಗೊಳಿಸಿದ್ದಾರೆ. ಪತ್ರಿಕೆಯಲ್ಲಿನ ವಾಸುದೇವ್ ಮತ್ತು ರಾವ್ಬೈಲ್ ಅವರ ರೇಖಾಚಿತ್ರಗಳು ಲವಲವಿಕೆಯಿಂದ ಕೂಡಿವೆ.
ನಿಮ್ಮ ಗಮನಕ್ಕೆ :
ದೇಶಕಾಲ(ತ್ರೆೃಮಾಸಿಕ)
ಪುಟಗಳ ಸಂಖ್ಯೆ-100
ಅಂಚೆ ವೆಚ್ಚ ಸೇರಿ ಚಂದಾಹಣ 300ರೂಪಾಯಿ. ಬಿಡಿ ಪ್ರತಿ 100ರೂಪಾಯಿ.
ಚಂದಾದಾರರಾಗಲು ಸಂಪರ್ಕಿಸಬೇಕಾದ ವಿಳಾಸ :
‘ದೇಶ ಕಾಲ’
ಡಿ-1, ವಿಕ್ಟೋರಿಯನ್ ವಿಲ್ಲಾ,
ಅಲೆಕ್ಸಾಂಡ್ರಾ ರಸ್ತೆ, ರಿಚ್ಮಂಡ್ ಟೌನ್, ಬೆಂಗಳೂರು-560025.
ದೂರವಾಣಿ ಸಂಖ್ಯೆ: 9341968523












Click it and Unblock the Notifications