‘ಸಮಗ್ರ ಸಾಹಿತ್ಯ ಲೋಕ’ ಕೃತಿ ಬಿಡುಗಡೆ
ಬೆಂಗಳೂರು : ಭಾನುವಾರ ಬನಶಂಕರಿ 3ನೇ ಹಂತದ ‘ತನ್ಮಯ’ದಲ್ಲಿ ನಡೆದ ಸರಳ ಹಾಗೂ ಸುಂದರ ಸಮಾರಂಭದಲ್ಲಿ ಕನ್ನಡದ ಹೆಸರಾಂತ ನುಡಿಕಾರ ಹಾಗೂ ಭಾಷಾತಜ್ಞ ಜಿ. ವೆಂಕಟಸುಬ್ಬಯ್ಯ ಅವರು ಕಡೂರು ರಾಮಸ್ವಾಮಿ ಅವರ ಸಮಗ್ರ ಕಥಾ ಸಂಕಲನ ‘ಸಮಗ್ರ ಸಾಹಿತ್ಯ ಲೋಕ -1’ ಕೃತಿ-ಯನ್ನು ಬಿಡುಗಡೆ ಮಾಡಿದರು.
ಮಧ್ಯಮ ವರ್ಗದ ಕೌಟುಂಬಿಕ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಈ ಕಥಾ ಸಂಕಲನ ಸುಂದರವಾಗಿ ಬಿಂಬಿಸಿದೆ. ಸರಕಾರಿ ಶಾಲೆಯ ಶಿಕ್ಷಕರು ಲೇಖಕರಾದರೆ, ಶಿಕ್ಷಣ ಕ್ಷೇತ್ರದ ನೈಜ ಸಮಸ್ಯೆಗಳು ಏನು ಎಂಬುದು ಜನರಿಗೆ ತಿಳಿಯುತ್ತದೆ. ವಿದ್ಯಾರ್ಥಿ ಹಾಗೂ ಬೋಧಕರ ನಡುವಿನ ಸಂಬಂಧ ಹೇಗಿರಬೇಕು ಎಂಬುದನ್ನೂ ಕಡೂರು ರಾಮಸ್ವಾಮಿ ಅವರು ಮನೋಜ್ಞವಾಗಿ ಚಿತ್ರಿಸಿದ್ದಾರೆ ಎಂದು ವೆಂಕಟಸುಬ್ಬಯ್ಯ ಹೇಳಿದರು.
ಆಹ್ವಾನ ಪತ್ರಿಕೆಯಲ್ಲಿ ಈ ಕಾರ್ಯಕ್ರಮಕ್ಕೆ ಬರುವ ಎಲ್ಲ ಸಾಹಿತ್ಯ ಪ್ರಿಯರೂ ಕಾರ್ಯಕ್ರಮದ ಮುಖ್ಯಅತಿಥಿಗಳು ಎಂದು ವಿಶೇಷವಾಗಿ ನಮೂದಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಂದಿದ್ದವರೆಲ್ಲರೂ ನಿಜಕ್ಕೂ ಮುಖ್ಯ ಅತಿಥಿಗಳೇ. ಕರ್ನಾಟಕ ಪತ್ರಿಕಾ ಅಕಾಡಮಿ ಅಧ್ಯಕ್ಷ ಗರುಡನಗಿರಿ ನಾಗರಾಜ್, ಸಾಹಿತಿಗಳಾದ ಎಂ.ಎನ್. ವ್ಯಾಸರಾವ್, ಎಸ್.ಆರ್. ರಾಮಸ್ವಾಮಿ, ಎಂ.ಎಸ್. ನರಸಿಂಹಮೂರ್ತಿ, ರಾಜಾ ಚಂಡೂರ್, ಮಾಸ್ಟರ್ ಹಿರಣ್ಣಯ್ಯ, ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಎಸ್.ಎನ್.ಎಸ್. ಮೂರ್ತಿ ಮೊದಲಾದವರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಲೇಖಕರಿಗೆ ಶುಭ ಕೋರಿದರು. ಶ್ರೀಕಂಠ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಕನ್ನಡದ ಹೆಸರಾಂತ ಪತ್ರಿಕೆಗಳು, ನಿಯತ ಕಾಲಿಕಗಳಲ್ಲಿ ಹತ್ತಾರು ವರ್ಷಗಳಿಂದ ಪ್ರಕಟವಾದ ಕಡೂರು ರಾಮಸ್ವಾಮಿ ಅವರ ಅತ್ಯುತ್ತಮ ಕಥೆಗಳ ಸಂಗ್ರಹವೇ ಈ ಸಮಗ್ರ ಸಾಹಿತ್ಯ ಲೋಕ -1. ಸಾಹಿತ್ಯ ಲೋಕ ಭಾಗ- 2 ನ್ನು ಅತಿ ಶೀಘ್ರದಲ್ಲೇ ಪ್ರಕಟಿಸುವ ಆಶಯ ಲೇಖಕರದು. ನೆಮ್ಮ-ದಿ ಪ್ರಕಾ-ಶ-ನ ಈ ಪುಸ್ತ-ಕ-ವ-ನ್ನು -ಹೊ-ರ-ತಂ-ದಿ-ದೆ.
ಕೃತಿಯಲ್ಲಿರುವ ಕಥೆಗಳ ಬಗ್ಗೆ ಹಿನ್ನುಡಿಯಲ್ಲಿರುವ ತ.ಸು. ಶಾಮರಾಯರ ಅನಿಸಿಕೆ ಇದು :
ಇಲ್ಲಿನ ಕಥೆಗಳ ಆವರಣ ಮತ್ತು ಪಾತ್ರಗಳು ನಮ್ಮ ಸಮಾಜದ ಮಧ್ಯಮ ವರ್ಗದಿಂದ ಎದ್ದು ಬಂದವು. ಸ್ವಲ್ಪ ಹೆಚ್ಚು ಕಡಿಮೆ ದಾಂಪತ್ಯ ಜೀವನದ ಪ್ರಣಯ ಪ್ರಪಂಚದಲ್ಲಿ ಹೊಸದಾಗಿ ಪದಾರ್ಪಣೆ ಮಾಡಿದ ನವದಂಪತಿಗಳು ‘ಸಾಯಂಕಾಲೇವನಾಂತೆ ಕುಸುಮಿತ ಸಮಯೇ ಚಂದ್ರಿಕಾಯಾಂ’ ವಿಹರಿಸುವ ಕನಸು ಕಾಣುತ್ತಿದ್ದಾರೆ. ಆದ್ದರಿಂದ ಇಲ್ಲಿ ಆವರಣವೆಲ್ಲವೂ ಹೂಬಿಸಿಲು ಚೆಲ್ಲಿದಂತೆ ಹಿತಕರವಾಗಿ ಮೃದುಮಧುರವಾಗಿದೆ.. ಜೀವನಕ್ಕೆ ಸವಿಯನ್ನು ತರುವ ಮೋಡಗಳ - ಅವು ಕಾರ್ಮೋಡಗಳಲ್ಲ, ಬಿಳಿಯ ಮೋಡಗಳು - ಛಾಯೆ ಕ್ಷಣಕಾಲ ಮೂಡಿ ಮರೆಯಾಗುತ್ತವೆ. ಮತ್ತೆ ಹೂಬಿಸಿಲನ್ನು ಚೆಲ್ಲುತ್ತವೆ. ಬಾಳು ಹೀಗಿದ್ದರೆ ಎಷ್ಟು ಚೆನ್ನ! ಅನ್ನಿಸುತ್ತದೆ...
ಕಥೆಗಾರರ ಅನುರಕ್ತಿ, ಮನಸ್ಸಿನ ಲಹರಿ, ಜೀವನಾದರ್ಶ ರಾಜಮಾರ್ಗವನ್ನು ಹಿಡಿದಿವೆಯೆಂಬುದಕ್ಕೆ ಇಲ್ಲಿನ ಒಂದೊಂದು ಕಥೆಯೂ ಸಾಕ್ಷಿ...