ಆಕಾಡೆಮಿ ‘ಪುಸ್ತಕ ಪ್ರಶಸ್ತಿ’ಗೆ ಉಚಿತ ಪುಸ್ತಕ ಕಳಿಸೊಲ್ಲ - ಪ್ರಕಾಶಕರು
ಬೆಂಗಳೂರು : ಕರ್ನಾಟಕ ಸಾಹಿತ್ಯ ಅಕಾಡೆಮಿಯ 2000 ಇಸವಿಯ ಪುಸ್ತಕ ಪ್ರಶಸ್ತಿಗಾಗಿ ಪುಸ್ತಕಗಳನ್ನು ಆಹ್ವಾನಿಸಿದ್ದು, ಯಾವುದೇ ಪುಸ್ತಕವನ್ನು ಉಚಿತವಾಗಿ ಕಳುಹಿಸದೇ ಇರಲು ರಾಜ್ಯ ಪುಸ್ತಕ ಪ್ರಕಾಶಕ ಸಂಘಟನೆ ನಿರ್ಧರಿಸಿದೆ.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಂಬತ್ತಳ್ಳಿ ಈ ವಿಷಯವನ್ನು ಸೋಮವಾರ ತಿಳಿಸಿದ್ದಾರೆ. ಇಷ್ಟು ವರ್ಷಗಳ ಕಾಲ ಅಕಾಡೆಮಿಯು ಪ್ರಕಾಶಕರಿಂದ ಮತ್ತು ಲೇಖಕರಿಂದ ಪುಸ್ತಕಗಳನ್ನು ಖರೀದಿಸುತ್ತಿತ್ತು. ಆದರೆ ಈ ಬಾರಿ ಹಣದ ಮುಗ್ಗಟ್ಟೆನ್ನೆದುರಿಸುತ್ತಿರುವುದರಿಂದ ಪ್ರಕಾಶಕರಿಂದ ಪುಸ್ತಕಗಳನ್ನು ಖರೀದಿಸಲು ಅಕಾಡೆಮಿ ನಿರಾಕರಿಸಿದೆ. ಬದಲಿಗೆ ಪ್ರಶಸ್ತಿಗಾಗಿ ಉಚಿತವಾಗಿಯೇ ಪುಸ್ತಕಗಳನ್ನು ಕಳುಹಿಸುವಂತೆ ಕೋರಿದೆ.
ಕಂಬತ್ತಳ್ಳಿಯವರ ಪ್ರಕಾರ, ಪ್ರತಿಯಾಬ್ಬ ಪ್ರಕಾಶಕರೂ ಪ್ರತಿ ವರ್ಷ 10ರಿಂದ 70 ಪುಸ್ತಕಗಳನ್ನು ಹೊರತರುತ್ತಾರೆ. ಪ್ರಕಟವಾದ ಎಲ್ಲ ಪುಸ್ತಕಗಳನ್ನು ಉಚಿತವಾಗಿ ಕಳುಹಿಸುವುದು ಪ್ರಕಾಶಕನ ಕೈ ಮೀರಿದ ಸಂಗತಿಯಾಗಿರುತ್ತದೆ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಸಾಹಿತ್ಯ ಅಕಾಡೆಮಿಗೆ ಈ ವರ್ಷ ಯಾವುದೇ ಪುಸ್ತಕವನ್ನು ಕಳುಹಿಸದೇ ಇರಲು ಪುಸ್ತಕ ಪ್ರಕಾಶಕರ ಸಂಘ ನಿರ್ಧರಿಸಿದೆ ಎಂದು ಕಂಬತ್ತಳ್ಳಿ ಹೇಳಿದರು.
(ಇನ್ಫೋ ವಾರ್ತೆ)