ಲಿಂಗಾಯತ ಧರ್ಮದ ಹೋರಾಟ ದಾರಿ ತಪ್ಪುತ್ತಿದೆಯೇ?
ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟವು ದಾರಿ ತಪ್ಪುತ್ತಿದೆಯೇ ಎಂಬ ದಟ್ಟವಾದ ಅನುಮಾನ ಅನೇಕರಲ್ಲಿ ಬರುತ್ತಿದೆ. ಇದನ್ನು ರಾಜಕೀಯ ಪಕ್ಷಗಳು ತಮ್ಮ ಮತಗಳ ದಾಳವನ್ನಾಗಿ ಮಾಡಿಕೊಳ್ಳುವ ಎಲ್ಲಾ ಮುನ್ಸೂಚನೆಗಳು ಕಾಣುತ್ತಿವೆ.
ಕಾರಣ ಕಾಂಗ್ರೆಸ್ ಸರಕಾರದ ಸಚಿವರಲ್ಲಿಯೇ ಎರಡು ಗುಂಪುಗಳು, ಒಂದು ಲಿಂಗಾಯತ, ಇನ್ನೊಂದು ವೀರಶೈವರ ಪರವಾಗಿ ನಿಂತು ಗೊಂದಲ ಮೂಡಿಸುತ್ತಿವೆ. ಎಂಬಿ ಪಾಟೀಲ ಹಾಗು ವಿನಯ ಕುಲಕರ್ಣಿ ಲಿಂಗಾಯತ ಪರವಾಗಿ ಗಟ್ಟಿಯಾಗಿ ನಿಂತಿದ್ದಾರೆ. ಆದರೆ ಈಶ್ವರ ಖಂಡ್ರೆ ವೀರಶೈವರ ಪರ ನಿಂತಿದ್ದಾರೆ. ಎಸ್ಎಸ್ ಮಲ್ಲಿಕಾರ್ಜುನ ಅವರಿಗೆ ಯಾವುದರಲ್ಲಿಯೂ ಆಸಕ್ತಿ ಇಲ್ಲ. ಬಸವರಾಜ ರಾಯರೆಡ್ಡಿ ಹಾಗು ಡಾ ಶರಣ ಪ್ರಕಾಶ್ ಪಾಟೀಲ ಇವರು ಯು ಟರ್ನ್ ಹೊಡೆದಿದ್ದಾರೆ.

ಸಮಾಜವಾದ, ಬಸವಣ್ಣ, ಲಿಂಗಾಯತ ಎಂದೆನ್ನುವ ಶಾಸಕ ಬಿಆರ್ ಪಾಟೀಲ್ ಅವರಿಗೆ ಈಗ ಅಲ್ಪಸಂಖ್ಯಾತ ಮತಗಳು ತಮ್ಮಿಂದ ದೂರವಾಗಬಹುದೆನ್ನುವ ಭಯ. ಡಾ ಮಾಲಕರೆಡ್ಡಿ ಮುಂತಾದವರು ಜಾಣ ಮೌನ ವಹಿಸಿದ್ದಾರೆ. ಬಿಜೆಪಿಯವರು ಕಾಯ್ದು ನೋಡುವ ತಂತ್ರ ಕೈಕೊಂಡಿದೆ.
ಲಿಂಗಾಯತ ವೀರಶೈವ ವಾದ ವಿವಾದ ಟೀಕೆ ಟಿಪ್ಪಣಿ, ಚರ್ಚೆಗಳು ತಾರಕಕ್ಕೆ ಏರಿದಾಗಲೇ ಸಚಿವ ಎಂ ಬಿ ಪಾಟೀಲ ಅವರು ಕಲ್ಬುರ್ಗಿಯ ಲಿಂಗಾಯತ ಮಹಾ ಅಧಿವೇಶನದಲ್ಲಿ ವಿಶ್ವಲಿಂಗಾಯತ ಮಹಾಸಭೆಯನ್ನು ಘೋಷಿಸುವುದಾಗಿ ತೆಗೆದುಕೊಂಡ ನಿರ್ಣಯವನ್ನು ಸಮಿತಿಯ ಉಚ್ಚ ಮಟ್ಟದ ನಾಯಕರೊಬ್ಬರು ಹೇಳಿರುವುದನ್ನು ಕೆಲ ದಿನ ಪತ್ರಿಕೆಗಳಲ್ಲಿ ನೋಡಿದ್ದೇವೆ.

ಅಖಿಲ ಭಾರತ ವೀರಶೈವ ಮಹಾಸಭೆಗೆ ಒತ್ತಾಯಪೂರ್ವಕವಾಗಿ ಅಖಿಲ ಭಾರತ ಲಿಂಗಾಯತ ಮಹಾಸಭೆಯನ್ನಾಗಿ ನಾಮಕರಣ ಮಾಡಲು ಮೊದಲು ಒತ್ತಾಯಿಸಬೇಕು.
ಅಖಿಲ ಭಾರತ ವೀರಶೈವ ಮಹಾಸಭೆಯ ಬಹುತೇಕ ಸದಸ್ಯರು ಲಿಂಗಾಯತ ಮತ್ತು ಬಸವಣ್ಣನವರನ್ನು ಒಪ್ಪಿಕೊಳ್ಳುವ ಕಾರಣ ಮತ್ತು ಈಗಾಗಲೇ ಬೆಳಗಾವಿ ಮತ್ತಿತರ ಜಿಲ್ಲೆಗಳಲ್ಲಿ ಅಖಿಲ ಭಾರತ ವೀರ ಮಹಾಸಭೆ ವಿಸರ್ಜಿಸಿ ಅಖಿಲ ಭಾರತ ಲಿಂಗಾಯತ ಮಹಾಸಭೆಯನ್ನು ಘೋಷಿಸಿ ಎಂಬ ಅಭಿಯಾನ ಆರಂಭಿಸಿದ್ದು ಸ್ವಾಗತ.
ವೀರಶೈವ ಮತ್ತು ಲಿಂಗಾಯತ ಒಂದೇ ಎಂದು ನಿರಂತರವಾಗಿ ಪ್ರತಿಪಾದಿಸುತ್ತ, ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಅಡ್ಡಿ ವ್ಯಕ್ತಪಡಿಸುತ್ತಿರುವ ಅಖಿಲ ಭಾರತ ವೀರಶೈವ ಮಹಾಸಭೆಗೆ ಮೊದಲು ನೋಟೀಸ್ ನೀಡಿ ಲಿಂಗಾಯತ ಮತ್ತು ವೀರಶೈವ ಒಂದೇ ಅಲ್ಲ ಎಂದು ನ್ಯಾಯಾಲಯದಲ್ಲಿ ಕಾನೂನು ಸಮರ ಹೂಡಿ
ಯಶವನ್ನು ಪಡೆಯಬೇಕು.

ಸೈದ್ಧಾಂತಿಕವಾಗಿ ನೆಲ ಮುಗಿಲು ಅಂತರದ ಲಿಂಗಾಯತ -ವೀರಶೈವ ವಾದಗಳು ಒಂದಾಗಲು ಹೇಗೆ ಸಾಧ್ಯ? ಸಮಸ್ಯೆಯನ್ನು ಜೀವಂತವಿಟ್ಟು ಇನ್ನೊಂದು ಸಂಸ್ಥೆಯನ್ನು ಹುಟ್ಟು ಹಾಕುವುದು ಸಮಂಜಸವೇ?
ಜಂಗಮ ಜ್ಞಾನದ ಬೇರಿಗೆ ಲಿಂಗ ತತ್ವವೆಂಬ ಹನಿ ನೀರಾವರಿ ಅಗತ್ಯ, ಸಮಾವೇಶವೆಂಬ ಸುನಾಮಿಗಳಲ್ಲ.
ಲಾಂಛನಧಾರಿಗಳು ಕಾವಿಗಳಿಗೆ ಮಠಗಳು ಬೇಕು, ಖಾದಿ ನಾಯಕರಿಗೆ ಮತಗಳು ಬೇಕು, ಮಾಧ್ಯಮ ಪತ್ರಿಕೆಗಳಿಗೆ ವಾದ ವಿವಾದಗಳ ಸುದ್ದಿ ಬೇಕು.ಇವರೆಲ್ಲರಿಗೂ ಬಲಿಯಾಗಲು ಮುಗ್ಧ ಲಿಂಗಾಯತರೆಂಬ ಹರಕೆಯ ಕುರಿಗಳು ಬೇಕು. ಹಾಗಾಗಬಾರದು ಧರ್ಮ ರಾಜಕೀಯ ದಾಳಕ್ಕೆ ಲಿಂಗಾಯತ ಧರ್ಮದ ಬೇಡಿಕೆಗಳು ಬಲಿಯಾಗಬಾರದು.
ಕೆಲವರು ತರಾತುರಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಸಾಮಾಜಿಕವಾಗಿ ವ್ಯತಿರಿಕ್ತ ಪರಿಣಾಮ ಬೀರುತ್ತವೆ.
ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಅಲ್ಪಸಂಖ್ಯಾತ ಸ್ಥಾನಮಾನ ಒದಗಿಸುವುದು ಕರ್ನಾಟಕ ಘನ ಸರಕಾರದ ಮುಖ್ಯಮಂತ್ರಿ ಹಾಗೂ ಅವರ ಮಂತ್ರಿ ಮಂಡಲದ ಜವಾಬ್ದಾರಿಯಾಗಿದೆ.
ಇಲ್ಲಿಯವರೆಗೆ ಹಲವು ಸಂಘ ಸಂಸ್ಥೆಗಳು ಸರಕಾರಕ್ಕೆ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗೆ ಕೊಟ್ಟ ಅರ್ಜಿಗಳು ಈಗ ಯಾವ ಸ್ಥಿತಿಯಲ್ಲಿವೆ ಸನ್ಮಾನ್ಯ ಮುಖ್ಯ ಮಂತ್ರಿಗಳೇ ಉತ್ತರಿಸಬೇಕು.












Click it and Unblock the Notifications