ಸ್ವಚ್ಛ ಭಾರತ ಅಭಿಯಾನಕ್ಕೆ ಮಾಡೆಲ್ ನಂತಿದೆ ನೋಡಿ ಈ ಮಂಗ...
ಮಂಗಗಳು ಸಭ್ಯತೆಯ ಪರಿಧಿಗೆ ಬರುವುದಿಲ್ಲ ಎಂಬುದು ಜನಜನಿತವಾದ ಮಾತು. ಆದರೆ ಅವುಗಳಲ್ಲಿಯೂ ಸಭ್ಯತೆ ಕಂಡುಬರುವುದುಂಟು. ಇದೇ ಪ್ರಾಣಿ ಲೋಕದ ವೈಶಿಷ್ಟ್ಯ. ಶ್ರೀನಿವಾಸಪುರ ಪಟ್ಟಣದ ಅವಲುಕುಪ್ಪ ಮುಖ್ಯ ರಸ್ತೆಯಲ್ಲಿ ಇಂಥ ಸಭ್ಯ ಮಂಗನನ್ನು ಕಾಣಬಹುದು.
ಈ ಕೋತಿ ತನಗೆ ಹಸಿವೆಯಾದಾಗ ರಸ್ತೆ ಬದಿಯ ಹಣ್ಣು-ತರಕಾರಿಗಳ ಅಂಗಡಿ, ಗಾಡಿಗಳ ಬಳಿ ಕಾಣಿಸಿಕೊಳ್ಳುತ್ತದೆ. ಸ್ವಲ್ಪ ಹೊತ್ತು ಅಲ್ಲಿನ ಅಂಗಡಿಗಳತ್ತ ಕಣ್ಣು ಹಾಯಿಸುತ್ತದೆ. ತನಗೆ ಆ ಹೊತ್ತಿಗೆ ಬೇಕೆನಿಸಿದ ಗಾಡಿಯ ಹತ್ತಿರಕ್ಕೆ ಹೋಗುತ್ತದೆ. ಗಾಡಿಯವರು ತಮ್ಮ ಪಾಡಿಗೆ ತಾವಿರುತ್ತಾರೆ.

ಇದು ಗಾಡಿ ಏರಿ ಕುಳಿತು ನಿರುಮ್ಮಳವಾಗಿ ತನಗೆ ಬೇಕಾದಷ್ಟನ್ನು ತಿನ್ನುತ್ತದೆ. ಇನ್ನೂ ಬೇಕೆನಿಸಿದರೆ ಒಂದಷ್ಟನ್ನು ತೆಗೆದುಕೊಂಡು ಹೊರಟು ಹೋಗುತ್ತದೆ. ತಿನ್ನುವಾಗಲಾಗಲಿ, ಹೋಗುವಾಗಲಾಗಲಿ ಕೋತಿ ಬುದ್ಧಿಯಂತೆ ಚೆಲ್ಲಾಡುವುದಿಲ್ಲ. ಗಿರಾಕಿಗಳಿಗೆ ಉಪದ್ರವಿಯಾಗಿ ವರ್ತಿಸುವುದಿಲ್ಲ.
ಕಡ್ಲೇಕಾಯಿ ಗಾಡಿಯಲ್ಲಿ ಕುಳಿತು ತಿನ್ನುವಾಗಲೂ ಒಂದೇ ಒಂದು ಕಾಯಿಯನ್ನೂ ಕೆಳಗೆ ಬೀಳಿಸುವುದಿಲ್ಲ. ಚೊಕ್ಕವಾಗಿ ಸುಲಿದು ಬೀಜವನ್ನು ತಿನ್ನುತ್ತದೆ. ಇದಕ್ಕೆ ಕಡ್ಲೇಕಾಯಿಯೂ ಸೇರಿದಂತೆ ಹೀರೇಕಾಯಿ, ಹೂಕೋಸು, ಹುರಳೀಕಾಯಿಯಂತಹ ಮೃದುವಾದ, ಸಿಹಿರುಚಿಯ ತರಕಾರಿಗಳೆಂದರೆ ಇಷ್ಟ. ಹಣ್ಣುಗಳಲ್ಲಿ ಬಾಳೇಹಣ್ಣೆಂದರೆ ಪಂಚಪ್ರಾಣ. ಈ ಸಭ್ಯ ಜೀವಿಗೆ ಎಲ್ಲ ಅಂಗಡಿಯೂ ಮುಕ್ತ.
ಈ ಮಂಗವನ್ನು ನೋಡಿದವರೊಬ್ಬರು ಕೈವಾರದ ಬಳಿಯ ಡಬ್ಬಾ ಅಂಗಡಿಗಳಲ್ಲಿ ಪಳಗಿದ ಕೋತಿಯ ಬಗ್ಗೆ ಹೇಳಿ, ಆ ಕೋತಿಗೆ ಬಾಳೆ, ಕಲ್ಲಂಗಡಿ, ಕಿತ್ತಳೆಯಂಥ ಹಣ್ಣುಗಳನ್ನು ಕೊಟ್ಟರೆ ಹಣ್ಣನ್ನು ತಿಂದು ಸಿಪ್ಪೆಯನ್ನು ಜನ ಕುಳಿತುಕೊಳ್ಳಲು ಹಾಕಿದ್ದ ಜಗುಲಿ ಅಡಿಗೆ ಹಾಕುತ್ತಿತ್ತು ಎಂದು ತಿಳಿಸಿದರು.
ಇದನ್ನು ಗಮನಿಸಿದರೆ ನಮ್ಮಲ್ಲಿ ಅನೇಕರಿಗೆ ಇಂಥ ಪ್ರಾಣಿಗಳಿಂದ ಟ್ಯೂಷನ್ ಕೊಡಿಸಬಹುದು ಎನಿಸುತ್ತದೆ. ಸ್ವಚ್ಛ ಭಾರತ ಅಭಿಯಾನದ ಪ್ರಚಾರಕ್ಕೆ ಇವನ್ನು ಮಾಡೆಲ್ ಗಳಾಗಿ ಬಳಸಿಕೊಂಡರೆ ಚೆನ್ನ ಎಂಬುದು ನಿಜಕ್ಕೂ ವ್ಯಂಗ್ಯವಲ್ಲ.












Click it and Unblock the Notifications