ಕಾಳಿಂಗ ನಾವಡ ಯಶೋಗಾಥೆ ಸಾಕ್ಷ್ಯಚಿತ್ರ ವಿಡಿಯೋ

Kalinga Navada, Yakshagana maestro
ಯಕ್ಷಗಾನದ ಕಂಚಿನ ಕಂಠ ಅಂದಾಗಲೆಲ್ಲ ನಮ್ಮ ಕಣ್ಮುಂದೆ ಬರುವುದು ಭಾಗವತ ದಿ.ಗುಂಡ್ಮಿ ಕಾಳಿಂಗ ನಾವಡರ (1958-1990 - 32 ವರ್ಷ) ಚಿತ್ರ. ಅವರಿದ್ದಷ್ಟು ಕಾಲ ಭಾಗವತಿಕೆಗೆ ಪರ್ಯಾಯ ಪದವೇ ಕಾಳಿಂಗ ನಾವಡ ಅನ್ನುವಷ್ಟರ ಮಟ್ಟಿಗೆ ಯಕ್ಷರಂಗದಲ್ಲಿ ಏಕಮೇವಾದ್ವಿತೀಯರಾಗಿ ಮೆರೆದವರವರು. ಇಂದಿಗೂ ಅವರ ಹಾಡುಗಾರಿಕೆಯ ಧ್ವನಿಮುದ್ರಿಕೆಯನ್ನು ಕೇಳಿದಾಗ ಆ ಸ್ವರಾನುಭೂತಿಯ ಮೋಡಿಯಲ್ಲಿ ಮೈಮರೆಯುವ ಲಕ್ಷಾಂತರ ಯಕ್ಷಪ್ರೇಮಿಗಳ ಮನಸ್ಸಿನಲ್ಲಿ ಅವರ ಕಂಚಿನ ಕಂಠದ ನೆನಪು ಸದಾ ಹಸಿರು.

ಕಾಳಿಂಗ ನಾವಡರು 1958ರಲ್ಲಿ ಪದ್ಮಾವತಿ ಹಾಗೂ ರಾಮಚಂದ್ರ ನಾವಡರ ಐದನೇ ಪುತ್ರನಾಗಿ ಉಡುಪಿ ಜಿಲ್ಲೆಯ ಕೋಟ-ಗುಂಡ್ಮಿಯಲ್ಲಿ ಜನಿಸಿದರು. ಇವರ ತಂದೆ 1960 - 80ರ ದಶಕದಲ್ಲಿ ಪ್ರಸಿದ್ದ ಭಾಗವತರಾಗಿದ್ದರು. ತಮ್ಮ ತಂದೆಯವರಿಂದ ಶಿಕ್ಷಣ ಪಡೆದ ಇವರು 'ಹೂವಿನ ಕೋಲು', 'ಜಾಪು', 'ಚಾಪು'ಗಳ ಮೂಲಕ ತಮ್ಮದೇ ಆದ ಪ್ರಯೋಗಗಳನ್ನು ಮಾಡಿ ಯಶಸ್ವಿಯಾದರು. ತಮ್ಮ ಗುರು ನಾರಣಪ್ಪ ಉಪ್ಪೂರು(1918-1984)ರವರ ಜೊತೆಗೂಡಿ, 1971ರಲ್ಲಿ, ಅಂದರೆ ಕೇವಲ 14ನೇ ವಯಸ್ಸಿನಲ್ಲಿ ಕೋಟ ಶ್ರೀ ಅಮೃತೇಶ್ವರಿ ಮೇಳದಿಂದ ತಮ್ಮ ಯಕ್ಷಕಲಾ ಸೇವೆ ಆರಂಭಿಸಿದ ನಾವಡರು, ನಂತರ 1977ರಲ್ಲಿ ಶ್ರೀ ವಿಜಯಶ್ರೀ ಮೇಳ, ಪೆರ್ಡೂರು, ನಂತರ 1978ರಿಂದ 1990ರವರೆಗೆ ಶ್ರೀ ಗುರುಪ್ರಸಾದಿತ ಯಕ್ಷಗಾನ ಮೇಳ, ಸಾಲಿಗ್ರಾಮ ಮೇಳದಲ್ಲಿ ತಮ್ಮ ಕಲಾಸೇವೆಯನ್ನು ಮುಂದುವರೆಸಿದರು.

ಕಾಳಿಂಗ ನಾವಡರು ಅತೀ ಚಿಕ್ಕ ವಯಸ್ಸಿನಲ್ಲಿ, ಅಂದರೆ ತಮ್ಮ 32ನೆ ವಯಸ್ಸಿನಲ್ಲಿ (1990) ರಸ್ತೆ ಅಪಘಾತವೊಂದಲ್ಲಿ ವಿಧಿವಶರಾದರು. ರೇವತಿ, ಕಲಾವತಿ, ಚಾಂದ್, ಬಿಹಾಗ್ ಮುಂತಾದ ರಾಗಗಳನ್ನು ಯಕ್ಷಗಾನಕ್ಕೆ ಅಳವಡಿಸಿ, ತಮ್ಮ ಕಂಠಸಿರಿಯಿಂದ ಯಕ್ಷಗಾನಕ್ಕೆ ಹೊಸ ಭಾಷ್ಯ ಬರೆದ ನಾವುಡರು 'ಅಮೃತಮತಿ, ಕಾಂಚನಶ್ರೀ, ವಿಜಯಶ್ರೀ, ರೂಪಶ್ರೀ, ಭಾಗ್ಯಶ್ರೀ, ನಾಗಶ್ರೀ' ಮುಂತಾದ ಪ್ರಸಿದ್ದ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಜೀವಮಾನವಿಡೀ ಪ್ರಯತ್ನಿಸಿದರೂ ಸಾಧಿಸಲು ಅಸಾಧ್ಯವಾದುದನ್ನು ಕೆಲವೇ ಕೆಲವು ವರ್ಷಗಳಲ್ಲಿ ಸಾಧಿಸಿ (1958 -1990 - 32 ವರ್ಷ) ತೆರಳಿದ "ಕರಾವಳಿ ಕೋಗಿಲೆ" ಗುಂಡ್ಮಿ ಕಾಳಿಂಗ ನಾವಡರಿಗೆ, 1990ರಲ್ಲಿ ಕರ್ನಾಟಕ ಸರಕಾರ ಮರಣೋತ್ತರವಾಗಿ 'ರಾಜ್ಯೋತ್ಸವ ಪ್ರಶಸ್ತಿ'ಯನ್ನು ನೀಡಿ ಗೌರವಿಸಿದೆ. ಹಾಗೆಯೇ ಯಕ್ಷಕಲಾರಸಿಕರಿಂದ 'ಕರಾವಳಿ ಕೋಗಿಲೆ', 'ರಸರಾಗ ಚಕ್ರವರ್ತಿ' ಮುಂತಾದ ಬಿರುದುಗಳು, ಸನ್ಮಾನಗಳು, ಪ್ರಶಸ್ತಿಗಳು ನಾವಡರಿಗೆ ಸಂದಿವೆ.

ಕಾಳಿಂಗ ನಾವಡರ ಕಟ್ಟಾ ಅಭಿಮಾನಿಗಳಲ್ಲಿ ಒಬ್ಬರಾಗಿರುವ ಯಕ್ಷಕರ್ಮಿ ಹಾಗೂ ನಿರ್ದೇಶಕ ರಮೇಶ್ ಬೇಗಾರ್ ರವರ ನಿರ್ದೇಶನದಲ್ಲಿ ಕಾಳಿಂಗ ನಾವಡ ಸಾಂಸ್ಕೃತಿಕ ಪ್ರತಿಷ್ಠಾನ, ಶೃಂಗೇರಿ ಚಿತ್ರಿಸಿರುವ ಯಕ್ಷಗಾನದ ಕಂಚಿನ ಕಂಠ, ಭಾಗವತ 'ಕಾಳಿಂಗ ನಾವಡ ನೆನಪಿನ ನಾವೆ' - ಕಾಳಿಂಗ ನಾವಡರ ಯಶೋಗಾಥೆಯ ಪ್ರಪ್ರಥಮ ವಿಡಿಯೋ ಸಾಕ್ಷ್ಯಚಿತ್ರವನ್ನು (ವಿಡಿಯೋ ಹಾಗೂ ಗಾನ ನಮನ ಆಡಿಯೋ) ಹೊರತಂದಿದ್ದು, ಪ್ರತಿಯೊಬ್ಬ ಯಕ್ಷಪ್ರೇಮಿಯ ಮನೆಯಲ್ಲಿ ಇರಲೇಬೇಕಾದ ಸಂಗ್ರಹವಾಗಿದ್ದು, ಹೆಚ್ಚಿನ ಮಾಹಿತಿಗಾಗಿ 'ಕಾಳಿಂಗ ನಾವಡ ಫೇಸ್ ಬುಕ್' ಪೇಜನ್ನು ನೋಡಬಹುಹುದು.

ಸಿಡಿ ಸಿಗುವ ವಿಳಾಸ :
ಕ್ಯಾಸೆಟ್ ಕಾರ್ನರ್, ಅದಮಾರು ಮಠದ ಹತ್ತಿರ, ಉಡುಪಿ - 576 101, ದೂ: 0820 -2527148.
ಕ್ಯಾಸೆಟ್ ಕಾರ್ನರ್, ನಂ. 138, ಗಜೇಂದ್ರ ಕಾಂಪ್ಲೆಕ್ಸ್, ಶ್ರೀನಗರ ಅಪೆಕ್ಸ್ ಬ್ಯಾಂಕ್ ಬಸ್ ನಿಲ್ದಾಣದ ಹತ್ತಿರ, 50 ಅಡಿ ರಸ್ತೆ, ಹನುಮಂತನಗರ, ಬೆಂಗಳೂರು - 560 050 , ದೂ: 98452 15995.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+