ಪುನರ್ವಸು ಪುಷ್ಯ ನಕ್ಷತ್ರಕ್ಕೆ ಗ್ರಹಣದ ಬಿಸಿ

ಬುಧವಾರ ಜುಲೈ 22ರಂದು ಸಂಭವಿಸಲಿರುವ ಪೂರ್ಣ ಸೂರ್ಯಗ್ರಹಣದ ಬಗೆಗೆ ನಿಮ್ಮೊಂದಿಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳಬಯಸುತ್ತೇನೆ. ನಾಳೆ ನಸುಕಿನ 5.31 ಗಂಟೆಗೆ ಗ್ರಹಣ ಆರಂಭ. ಆದರೆ ಗ್ರಹಣ ನೋಡಲು ನಾವು, ಭಾರತದಲ್ಲಿರುವವರು ಇನ್ನೂ ಒಂದು ಗಂಟೆ ಹೆಚ್ಚಿಗೆ ಕಾಯಬೇಕು. ಏಕೆಂದರೆ, ಸೂರ್ಯೋದಯ ಭಾರತೀಯ ಕಾಲಮಾನ 6.25ಕ್ಕೆ. ಮಹತ್ವದ ಸಂಗತಿಯೆಂದರೆ ಪುನರ್ವಸು ನಕ್ಷತ್ರದಿಂದ ಆರಂಭವಾಗುವ ಗ್ರಹಣ ಪುಷ್ಯಮಿ ನಕ್ಷತ್ರದೊಂದಿಗೆ ಅಂತ್ಯಗೊಳ್ಳುತ್ತದೆ. ಎರಡು ಪ್ರಮುಖ ನಕ್ಷತ್ರಗಳನ್ನು ತಳುಕು ಹಾಕಿಕೊಂಡು ಸಂಭವಿಸುತ್ತಿರುವ ಅತ್ಯಂತ ಅಪರೂಪದ ಗ್ರಹಣ ಇದಾಗಿದೆ. ಈ ವಿದ್ಯಮಾನದ ಗುಣಲಕ್ಷಣಗಳು ಭಾರತೀಯ ಪಾರಂಪರಿಕ ವಿಜ್ಞಾನದ ರೀತ್ಯ ಈ ಕೆಳಕಂಡಂತಿವೆ.
ಗ್ರಹಣದ ದಿವಸ ಅಗಲಿದ ಆತ್ಮಗಳಿಗೆ, ಪಿತೃ ವರ್ಗಕ್ಕೆ ತರ್ಪಣ ನೀಡಬೇಕು. ಕರಿ ಎಳ್ಳು ಮತ್ತು ನೀರು ಸಮೇತ ನೀಡುವ ತರ್ಪಣಕ್ಕೆ ವಿಶೇಷ ಅರ್ಥವಿದೆ. ಹಿರಿಯರು ಎಂದರೆ ತಂದೆ, ತಾಯಿ, ಅಜ್ಜ, ಅಜ್ಜಿ, ಸೋದರ, ಸೋದರಿ, ತಂದೆಯ ಸೋದರ ಸೋದರಿ, ತಾಯಿಯ ಸೋದರ ಸೋದರಿ, ಗೊತ್ತಿದ್ದೋ ಗೊತ್ತಿಲ್ಲದೆಯೋ ನಮ್ಮನ್ನು ಎಳವೆಯಿಂದಲೇ ಸಾಕಿ ಸಲುಹಿದ, ಪರೋಕ್ಷವಾಗಿ ಅಥವಾ ಅಪರೋಕ್ಷವಾಗಿ ನಮ್ಮ ಜೀವನವನ್ನು ರೂಪಿಸಿ ಅಗಲಿದ ಎಲ್ಲ ಚೇತನಗಳಿಗೆ ತರ್ಪಣ ಕೊಡುವುದು ಒಬ್ಬ ವ್ಯಕ್ತಿಯ ಜೀವಿತಾವಧಿಯ ಅತ್ಯಂತ ಧನ್ಯ ಕ್ಷಣಗಳಲ್ಲಿ ಒಂದಾಗಿರುತ್ತದೆ.
ತರ್ಪಣವನ್ನು ಗ್ರಹಣ ಮುಗಿದ ನಂತರ ಕೊಡತಕ್ಕದ್ದು. ಸಂಧ್ಯಾವಂದನೆ ಮುಂತಾದ ನಿತ್ಯ ಕರ್ಮಗಳನ್ನು ಪೂರೈಸಿದ ನಂತರವೇ ತರ್ಪಣ ನೀಡಬೇಕು. ಈ ವಿಚಾರಗಳು ಅಷ್ಟಾಗಿ ಗೊತ್ತಿಲ್ಲದವರ ಪ್ರಯೋಜನಕ್ಕಾಗಿ ತರ್ಪಣ ನೀಡುವ ಆದ್ಯಂತ ವಿವರಗಳನ್ನು ನನ್ನ ಬ್ಲಾಗ್ ನಲ್ಲಿ ನಮೂದಿಸಿರುತ್ತೇನೆ. ನೋಡಿ. ಅನೇಕರಿಗೆ ಅರ್ಥವಾಗುವ ಉದ್ದೇಶದಿಂದ ಇಂಗ್ಲಿಷಿನಲ್ಲಿ ಅತ್ಯಂತ ಸರಳ ಭಾಷೆಯಲ್ಲಿ ಬರೆದಿದ್ದೇನೆ.
ಭಾರತೀಯ ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪುನರ್ವಸು ಮತ್ತು ಪುಷ್ಯಮಿ ನಕ್ಷತ್ರದಲ್ಲಿ ಜನಿಸಿದವರು ಈ ಗ್ರಹಣ ನಿಮಿತ್ತ ವಿಶೇಷ ಕಾಳಜಿ, ಎಚ್ಚರ ವಹಿಸಬೇಕಾಗುತ್ತದೆ. ಈ ನಕ್ಷತ್ರದಲ್ಲಿ ಹುಟ್ಟಿದವರು ಶಾಂತಿ ಮಾಡಿಸಬೇಕು. ಶಾಂತಿ ಎಂದರೆ ಅಕ್ಕಿ, ಧಾನ್ಯ, ತರಕಾರಿ ಮತ್ತು ನಾಕಾರು ನಾಣ್ಯಗಳನ್ನು ಗ್ರಹಣದ ಮುನ್ನ ಅಥವಾ ಗ್ರಹಣದ ನಂತರ ದಾನ ಮಾಡಬೇಕು.
ಓಂ ಶಾಂತಿ: ಆಧ್ಯಾತ್ಮಿಕ ರತ್ನ, ಶ್ರೀ ಯಾಗ ವಿದ್ಯಾ ಪ್ರವೀಣ, ಸಹಸ್ರಾಧಿಕ ಯಾಗಕರ್ತ, ಡಾ. ಪಿ. ವಿ. ಶೇಷಸಾಯಿ ಅಶ್ವಮೇಧಯಾಜಿ, ಹೈದರಾಬಾದ್. ಮೊಕ್ಕಾಂ : ನ್ಯೂಯಾರ್ಕ್.











Click it and Unblock the Notifications