ಕಳ್ ಮಂಜ ಸುಪ್ರಭಾತಮ್
'ಎದ್ದೇಳು ಮಂಜುನಾಥ' ಚಿತ್ರದ ನಾಯಕ 'ಕಳ್ ಮಂಜ' ಜಗ್ಗೇಶ್ ಗೊರಕೆ ಹೊಡೆಯುವಂತೆ 'ಮಠ' ಖ್ಯಾತಿಯ ಗುರುಪ್ರಸಾದ್ ನಿರ್ದೇಶನದ ಚಿತ್ರ ಇನ್ನೂ ಗೊರಕೆ ಹೊಡೆಯುತ್ತಲೇ ಇದೆ. ಚಿತ್ರ ಇನ್ನೂ ನಿದ್ದೆಯಿಂದ ಮೇಲೇಳದಿದ್ದರೂ ಚಿತ್ರದ ಶೀರ್ಷಿಕೆ ಗೀತೆ ಪಡ್ಡೆಗಳ ಪಾಲಿಗೆ ಬೆಳಗಿನ ಸುಪ್ರಭಾತದಂತಾಗಿದೆ. ಎಂಥ ಕುಂಭಕರ್ಣನನ್ನೂ ಬಡಿದೆಬ್ಬಿಸುವ ಗೀತೆಯ ಸಾಲುಗಳು ಹೇಗಿವೆ ನೋಡಿ.
* ಪ್ರಕಾಶ್ ಉಪಾಧ್ಯಾಯ, ಚಿಕ್ಕಮಗಳೂರು
'ಮಠ' ಚಿತ್ರದಿಂದ ನಮ್ಮ ಮನ ಗೆದ್ದ ಗುರುಪ್ರಸಾದ್ ಯಾಕೋ 'ಎದ್ದೇಳು ಮಂಜುನಾಥ'ನನ್ನು ಏಳಿಸಲು ತುಂಬಾ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಅವರ ಮಠದ ಮಹಿಮೆ ನಮೆಲ್ಲರನ್ನೂ ಮಂಜುನಾಥನ ಬಿಡುಗಡೆ ಯಾವಾಗ ಆಗುತ್ತದೋ ಎಂದು ತುದಿಗಾಲಿನಲ್ಲಿ ಕಾಯುವಂತೆ ಮಾಡಿದೆ. 'ಮಠ' ಚಿತ್ರ ನನ್ನ ಕಂಪ್ಯೂಟರ್ನಲ್ಲಿ ಸಿಲ್ವರ್ ಜ್ಯುಬಿಲಿ ಕಂಡಿದೆ. ಈಗ ಮಂಜುನಾಥನ ಹಾಡುಗಳು ನನ್ನನ್ನು ಮೂರೂ ಹೊತ್ತೂ ಅದರ ಸಾಲುಗಳನ್ನು ಗುನುಗುವಂತೆ ಮಾಡಿದೆ.
ಅನೂಪ್ ಸೀಳಿನ್ ಅವರ ಸಂಗೀತವಿದೆ. ಚಿತ್ರದ ಟೈಟಲ್ ಸಾಂಗ್ "ಆರತಿ ಎತ್ತಿರೇ ಕಳ್ಳ ಮಂಜಗೆ" ಎಂಬ ಸಾಲು ತುಂಬಾ ಕ್ಯಾಚಿಯಾಗಿದ್ದು ಟ್ಯೂನ್ಗೆ ಸಾಹಿತ್ಯ ಚೆನ್ನಾಗಿ ಹೊಂದಿಕೊಂಡಿದೆ. ಈ ಹಾಡು ನಮ್ಮ ಮಂಜನ ಇ೦ಟ್ರೊಡಕ್ಷನ್ ಸಾಂಗ್ ಎಂದು ನನ್ನ ಭಾವನೆ. ಹಾಡು ಹಂಸಲೇಖಾರ ಪ್ರಾಸಬದ್ದ ಸಾಹಿತ್ಯವನ್ನು ನೆನಪಿಸುತ್ತದೆ. ಇದರಲ್ಲಿ ಸೋಮಾರಿ ಮಂಜನ ವರ್ಣನೆ ತುಂಬಾ ಚೆನ್ನಾಗಿದೆ. ಶಬ್ದ ಪ್ರಯೋಗ ಕೂಡ ಅರ್ಥಗರ್ಭಿತವಾಗಿದ್ದು, ಪಾತ್ರಕ್ಕೆ ಸರಿಹೊಂದುವಂತಿದೆ. ಕಡೆಯ ಸಾಲಿನಲ್ಲಿ ಬರುವ "ರಾಜ್ಯ ಪ್ರಶಸ್ತಿ ವಂಚಿತನಾದ ಮಗನೇ..." ಎಂಬ ಸಾಲುಗಳು ಮಠ ಚಿತ್ರದ ಅಭಿನಯಕ್ಕೆ ರಾಜ್ಯ ಪ್ರಶಸ್ತಿಯಿ೦ದ ವಂಚಿತರಾದ ಜಗ್ಗೇಶ್ ಅವರ ನೋವನ್ನು ಹೊರಹಾಕುವ೦ತಿದೆ. ಈ ಹಾಡಿನ ಸಾಹಿತ್ಯ ಹೀಗಿದೆ.
ಆರತಿ ಎತ್ತಿರೇ ಕಳ್ ಮಂಜಗೆ ನಮ್ ಸುಳ್ಳ್ ಮಂಜಂಗೆ
ಆರತಿ ಎತ್ತಿರೇ ಕಳ್ ಮಂಜಗೆ ನಮ್ ಸುಳ್ಳ್ ಮಂಜಂಗೆ
ಸುಸ್ತ್ ಆಗದ ಮನ್ಮಥ, ಸದಾ ಸುಖಿ ಶ್ರೀಯುತ
ಬಾಯಿಬಿಟ್ಟರೆ ಸಂಸ್ಕೃತ, ತಲೆಕೆಟ್ಟರೆ ವಿಕೃತ
ನವರಸಗಳನ್ನು ಗಟಗಟ ಕುಡಿದ ಮಗನೇ
ಆರತಿ ಎತ್ತಿರೇ ಕಳ್ ಮಂಜಗೆ ನಮ್ ಸುಳ್ಳ್ ಮಂಜಂಗೆ.....
ಅಡ್ಡ ಅರಳಿಕಟ್ಟೆ, ದುಂದು ಸಿಕ್ಕಾಬಟ್ಟೆ, ಸೋಮಾರಿ ಗೆಳೆಯರ ಬಳಗದ ಲೀಡರ್
ಮಾತಲ್ಲಿ ಬಲುತೀಟೆ, ಕಾಸ್ ಕೊಟ್ರೆ ಮೇಲ್ ಕೋಟೆ, ಯಾಮಾರ್ದ್ರೆ ಬಿಳಿ ಯರಡು ಒಂದ್ ಕೆಂಪು
ರಾತ್ರಿಯೆಲ್ಲಾ ಮಲಗೋಲ್ಲ, ಮಧ್ಯಾಹ್ನವಾದ್ರೂ ಏಳಲ್ಲಾ
ಉರಲೆಲ್ಲಾ ಕೈ ಸಾಲ, ಮುಂಡೇದು ಶೋಕಿಲಾಲ
ಅತ್ತೆಯ ಒಡವೆ ದಾನ ಮಾಡುವ ಅಳಿಯಾ...
ಆರತಿ ಎತ್ತಿರೇ ಕಳ್ ಮಂಜಗೆ ನಮ್ ಸುಳ್ಳ್ ಮಂಜಂಗೆ
ಅಪ್ಪ ಲೆಕ್ಕಕಿಲ್ಲ, ಅಮ್ಮನ ಮಾತ್ ಕೇಳಲಿಲ್ಲ, ಗಿಡವಾಗಿ ಬಗ್ಗದ ಮುದ್ದು ಲೋಫರ್
ಶಾಲೇಲಿ ಕಲೀಲಿಲ್ಲ, ಕಾಲೇಜ್ನಲ್ಲಿ ಬರೀಲಿಲ್ಲ, ನೂರೆಂಟು ವಿದ್ಯೇಲೂ ಮಾಸ್ಟರ್
ತಲೆಹರಟೆ ಜಾತಕ, ಹೆಗ್ಹೆಜೆಗೂ ನಾಟಕ. ಅಣಕ ಮಾಡುವ ಗಟ್ಟ, ಅತ್ಯುತ್ತಮ ಈ ನಟ
ರಾಜ್ಯ ಪ್ರಶಸ್ತಿ ವಂಚಿತನಾದ ಮಗನೇ...
ಆರತಿ ಎತ್ತಿರೇ ಕಳ್ ಮಂಜಗೆ ನಮ್ ಸುಳ್ಳ್ ಮಂಜಂಗೆ
ಎದ್ದೇಳು ಮಂಜುನಾಥ, ಎದ್ದೇಳು ಮಂಜುನಾಥ, ಎದ್ದೇಳಲೋ
ಎದ್ದೇಳು ಮಂಜುನಾಥ, ಎದ್ದೇಳು ಮಂಜುನಾಥ, ಎದ್ದೇಳಲೋ
ಎಲ್ಲಯ್ಯ ಎವೆರೆಸ್ಟು, ಎಸ್ಟ್ ಮಾಡ್ತೀಯ ರೆಸ್ಟು
ಸತ್ತ ಮೇಲೆ ಕೋಟಿ ವರುಷ ಬದುಕಿದ್ದರೆ ಎಷ್ಟು
ಎದ್ದೇಳು ಮಂಜುನಾಥ, ಎದ್ದೇಳು ಮಂಜುನಾಥ, ಎದ್ದೇಳು ಮಂಜುನಾಥ, ಎದ್ದೇಳಲೋ ಎದ್ದೇಳಲೋ ಎದ್ದೇಳಲೋ
ಎದ್ದೇಳು ಮಂಜುನಾಥ, ಎದ್ದೇಳು ಮಂಜುನಾಥ, ಎದ್ದೇಳಲೋ
ಕಡೆಯೆಲ್ಲಿ ಸಂಗೀತ ಪ್ರಿಯರನ್ನು ಈ ಚಿತ್ರದ ಸಂಗೀತವನ್ನು ಕೇಳಿ ಆನಂದಿಸಿ ಎಂದು ಹೇಳುತ್ತಾ , ಗುರು ಪ್ರಸಾದ್ ರವರಿಗೆ ಶುಭಾಹಾರೈಸುತ್ತಾ "ಆರತಿ ಎತ್ತಿರೆ ನಮ್ಮ ಗುರು ಪ್ರಸಾದ್ಗೆ, ಸಿನಿಮಾ ರಿಲೀಸ್ ಮಾಡೋಕೆ" ಎಂದು ಗುನುಗುತ ಅವರಿಗೆ ಚಿತ್ರವನ್ನು ಬೇಗ ರಿಲೀಸ್ ಮಾಡಿ ಎಂದು ಕೋರುತ ನನ್ನ ಕಳ್ಳ ಮಂಜನ ಸುಪ್ರಭಾತವನ್ನು ಮುಗಿಸುತ್ತಿದ್ದೇನೆ.












Click it and Unblock the Notifications