ಬುದ್ಧಿಜೀವಿಗಳೋ ಲದ್ದಿಜೀವಿಗಳೋ?
ತಮ್ಮ ‘ಬ್ರಾಹ್ಮಣಶ್ರೇಷ್ಠ’ ಮೂಢನಂಬಿಕೆ ಹಾಗೂ ‘ಬ್ರಾಹ್ಮಣ ವೈಭವೀಕರಣ’ ಚಪಲಗಳನ್ನು ಭೈರಪ್ಪನವರು ದೂರ ಸರಿಸಬೇಕು. ಹಾಗೇ ಅನಂತಮೂರ್ತಿಯವರು ತಮ್ಮ ಆಷಾಢಭೂತಿ ಮುಖವಾಡವನ್ನು ಕಿತ್ತೊಗೆದು, ನಿಜವಾದ ‘ಸೆಕ್ಯೂಲರಿಸ್ಟ್’ ಆಗಿ ಬದಲಾಗಬೇಕು. ಆಗ ಅವರಿಬ್ಬರಿಂದ ಇನ್ನೂ ಉತ್ತಮ, ಅರ್ಥಪೂರ್ಣ ಹಾಗೂ ಸಾರ್ವಕಾಲಿಕ ಮಾನ್ಯತೆ ಪಡೆಯಬಲ್ಲ ಕೃತಿಗಳನ್ನು ನಾವು ನಿರೀಕ್ಷಿಸಬಹುದು!
- ಪ್ರೇಮಶೇಖರ, ಪಾಂಡಿಚೇರಿ
ಕಳೆದ ವರ್ಷ ಬಾಲ್ಟಿಮೋರ್ನಲ್ಲಿ ನಡೆದ ‘‘ಅಕ್ಕ’’ ಸಮ್ಮೇಳನದಲ್ಲಿ ಎಸ್. ಎಲ್. ಭೈರಪ್ಪನವರು, ಯು. ಆರ್. ಅನಂತಮೂರ್ತಿಯವರನ್ನು ಹೀಗಳೆದಿದ್ದರು. ‘‘ಸಂಸ್ಕಾರ’’ದ ಪ್ರಾಣೇಶಾಚಾರ್ಯರನ್ನು ‘‘ಅವನೊಬ್ಬ ಪಾದ್ರಿ, ವೈದಿಕ ಬ್ರಾಹ್ಮಣನಲ್ಲ’’ ಎಂದು ಭೈರಪ್ಪ ಲೇವಡಿ ಮಾಡಿದ್ದರು. ಅನಂತಮೂರ್ತಿಯವರು ಈಗ ‘‘ಆವರಣ’’ ಮತ್ತು ಭೈರಪ್ಪನವರ ಬಗ್ಗೆ ಹಗುರವಾಗಿ ಮಾತಾಡುವುದರ ಮೂಲಕ ಸೇಡು ತೀರಿಸಿಕೊಂಡಿದ್ದಾರೆ! ಹೀಗೆ ಸಮಯ ಕಾದು ಸೇಡು ತೀರಿಸಿಕೊಳ್ಳುವುದನ್ನು ಚಿಕ್ಕಮಕ್ಕಳಾಗಿದ್ದಾಗ ನಾವೂ ಮಾಡುತ್ತಿದ್ದೆವು.
ಭೈರಪ್ಪನವರು ಅಲ್ಲಿ ಮಾಡಿದ್ದೂ ತಪ್ಪು, ಅನಂತಮೂರ್ತಿಯವರು ಇಲ್ಲಿ ಮಾಡಿದ್ದೂ ತಪ್ಪು. ಪ್ರಾಣೇಶಾಚಾರ್ಯ ಒಬ್ಬ ವೈದಿಕ ಬ್ರಾಹ್ಮಣನಾಗಿದ್ದರೆ ಅವನು ಹೊಲೆಯ ಹೆಣ್ಣು ಚಂದ್ರಿಯೊಡನೆ ಮಲಗುತ್ತಿರಲಿಲ್ಲ ಎಂದು ಭೈರಪ್ಪನವರು ಭಾವಿಸುವುದು ಮಾನವ ಸ್ವಭಾವದ ಬಗ್ಗೆ, ಕಾಮದಂಥ ಅತೀ ಸಂಕೀರ್ಣ ವಿಷಯದ ಬಗ್ಗೆ ಅವರಿಗಿರುವ ಜ್ಞಾನದ ಪರಿಮಿತಿಯನ್ನು ತೋರಿಸುತ್ತದೆ. ಜತೆಗೇ ವೈದಿಕ ಬ್ರಾಹ್ಮಣ ಗಂಡಸರೆಲ್ಲರೂ ಪರಸ್ತ್ರೀ ಸಂಗ ಅದರಲ್ಲೂ ‘ಕೀಳು’ ಜಾತಿಯ ಹೆಣ್ಣಿನ ಸಂಗ ಮಾಡದಷ್ಟು ಸದ್ಗುಣಸಂಪನ್ನರು ಎಂಬ ಅವರ ಅನಿಸಿಕೆ ಅವರಲ್ಲಿ ‘ಅಗತ್ಯಕ್ಕಿಂತ ಹೆಚ್ಚಾಗಿರುವ’ ಬ್ರಾಹ್ಮಣಾಭಿಮಾನವನ್ನು ಬಯಲು ಮಾಡುತ್ತದೆ. ಕಚ್ಚೆಹರುಕ ಬ್ರಾಹ್ಮಣರು ನಮ್ಮ ಸಮಾಜದಲ್ಲಿ ಅದೆಷ್ಟಿಲ್ಲ! ನಮ್ಮ ಪುರಾಣಗಳಲ್ಲಿ ಬರುವ ಅನೇಕ ಋಷಿಮುನಿಗಳೇ ಆ ಕೆಲಸ ಮಾಡಿದ್ದಾರೆ. ಮಹರ್ಷಿ ವ್ಯಾಸರ ತಂದೆ ಪರಾಶರ ಮುನಿ ಮಾಡಿದ್ದು ಅದನ್ನೇ ಅಲ್ಲವೇ? ಅವನೇನು ಪಾದ್ರಿಯೇ?
ಹಾಗೆಯೇ ‘‘ಆವರಣ’’ದ ನಾಯಕಿ ಲಕ್ಷ್ಮಿ ಉರುಫ್ ರಜಿಯಾ ಬಹುಕಾಲದ ನಂತರ ಗಂಡನ ಬಳಿ ಹೋದಾಗ ಹಾಸಿಗೆಯಲ್ಲಿ ಮುಸ್ಲಿಮರಿಂದಾಗಿ ನಾಶವಾದ ಹಿಂದೂ ದೇವಾಲಯಗಳ ಪಟ್ಟಿ ನೀಡುತ್ತಾ ಹೋಗುವುದು ಅಸಹಜ ಎಂದು ಅನಂತಮೂರ್ತಿಯವರು ಅಪ್ಪಣೆ ಕೊಡಿಸಿದ್ದು ಮಾನವ ಸಂಬಂಧಗಳ ಬಗ್ಗೆ, ವಿವಿಧ ಸನ್ನಿವೇಶಗಳಲ್ಲಿ ಗಂಡು ಹೆಣ್ಣಿನ -ಅವರು ಗಂಡಹೆಂಡತಿಯೇ ಆಗಿರಲಿ- ವರ್ತನೆಯಲ್ಲಿ ಕಂಡುಬರುವ ವೈವಿಧ್ಯತೆಯ ಬಗ್ಗೆ ಅವರಿಗಿರುವ ಅರಿವು ಒಬ್ಬ ಸಾಹಿತಿಗಿರಬೇಕಾದಷ್ಟಿಲ್ಲ ಎಂಬ ದಾರುಣ ಸತ್ಯವನ್ನೂ ತೆರೆದಿಡುತ್ತದೆ.
ಬೇರೆಲ್ಲವನ್ನೂ ಬದಿಗೊತ್ತಿ ಕೇವಲ ಮಧ್ಯಕಾಲೀನ ಇತಿಹಾಸದ ಬಗ್ಗೆ ತಿಳಿಯುವುದರಲ್ಲೇ ಮುಳುಗಿಹೋಗಿರುವ ರಜಿಯಾಳ ಮನಸ್ಥಿತಿಯನ್ನು ನಾವು ಊಹಿಸಿಕೊಳ್ಳುವುದೇ ಆದರೆ ಅವಳ ವರ್ತನೆಯಲ್ಲಿ ಯಾವ ಅಸಹಜತೆಯೂ ನಮಗೆ ಕಾಣುವುದಿಲ್ಲ. ಬಹುಕಾಲದ ನಂತರ ಹಾಸಿಗೆ ಸೇರಿದೊಡನೇ ಎಲ್ಲಾ ಗಂಡ ಹೆಂಡತಿಯರೂ ಜಗತ್ತನ್ನೇ ಮರೆತು ಪ್ರಣಯಲೀಲೆಯಲ್ಲಿ ತೊಡಗಿಬಿಡುತ್ತಾರೆ ಎಂದು ಅನಂತಮೂರ್ತಿಯವರು ತಿಳಿಯುವುದು ಹಾಸ್ಯಾಸ್ಪದವೆನಿಸುತ್ತದೆ. ಗಂಡು - ಹೆಣ್ಣಿನ ನಡುವಿನ ಸಂಬಂಧದ ಸೂಕ್ಷ್ಮತೆ ಹಾಗೂ ಸಂಕೀರ್ಣತೆಯ ಬಗೆಗಿನ ಈ ಅರೆಜ್ಞಾನದಿಂದಲೇ ಇರಬೇಕು ಅನಂತಮೂರ್ತಿಯವರ ಕೃತಿಗಳಲ್ಲಿ ಈ ವಿಷಯ ಪರಿಣಾಮಕಾರಿಯಾಗಿ ಚಿತ್ರಿತವಾಗುವುದಿಲ್ಲ.
ಕೇವಲ ‘‘ಆವರಣ’’ದ ಆಧಾರದ ಮೇಲೆ ಭೈರಪ್ಪನವರು ಸಾಹಿತಿಯೇ ಅಲ್ಲ ಎಂದು ಅನಂತಮೂರ್ತಿಯವರು ಘೋಷಿಸಿದ್ದನ್ನು ನೋಡಿದರೆ ಒಂದು ಕಾಲದಲ್ಲಿ ಬುದ್ಧಿಜೀವಿಯಾಗಿದ್ದ ಅವರೀಗ ಒಬ್ಬ ‘‘ಲದ್ದಿಜೀವಿ’’ಯಾಗಿ ಬದಲಾಗಿಹೋಗಿದ್ದಾರೆ ಎಂದೆನಿಸುತ್ತದೆ. ಅಥವಾ ಅವರು ಮೊದಲಿನಿಂದಲೂ ಲದ್ದಿಜೀವಿಯಾಗಿಯೇ ಇದ್ದರೇನೋ. ನಾವೇ ತಪ್ಪಾಗಿ ತಿಳಿದುಕೊಂಡಿದ್ದೆವೇನೋ. ಸಾಹಿತ್ಯದ ಬಗೆಗಿನ ‘‘ಕಮಿಟ್ಮೆಂಟ್’’ ಗಮನಿಸಿದರೆ ಅನಂತಮೂರ್ತಿಯವರಿಗಿಂತ ಭೈರಪ್ಪನವರು ಉನ್ನತ ಮಟ್ಟದಲ್ಲಿದ್ದಾರೆ.
ಅನಂತಮೂರ್ತಿಗೆ ಆಸೆ ಜಾಸ್ತಿ..
ಅನಂತಮೂರ್ತಿಯವರು ಮಹತ್ವಾಕಾಂಕ್ಷಿ. ಅವರ ಗುರಿಗಳು ಅನೇಕ. ತಮ್ಮ ವಿವಿಧ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಅವರು ಸಾಹಿತ್ಯವನ್ನು ಉಪಯೋಗಿಸಿಕೊಂಡರು. ಪದವಿ ಪುರಸ್ಕಾರಗಳನ್ನು ದಕ್ಕಿಸಿಕೊಂಡರು. ‘‘ನಾನು ಕನ್ನಡಕ್ಕಾಗಿ ಬಹಳಷ್ಟು ಮಾಡಿದ್ದೇನೆ, ನನಗೆ ಓಟು ಕೊಡಿ’’ ಎಂದು ಕೇಳಿಕೊಂಡು ರಾಜ್ಯಸಭೆಯ ಚುನಾವಣೆಗೂ ನಿಂತರು! ನಿಸ್ವಾರ್ಥ ಮನದಿಂದ ಅವರೆಂದೂ ಸಾಹಿತ್ಯ ಸೇವೆ ಮಾಡಿದಂತೆ ಕಾಣುವುದಿಲ್ಲ.
ಆದರೆ ಭೈರಪ್ಪನವರ ವಿಚಾರ ಬೇರೆ. ಉತ್ತರ ಭಾರತದಲ್ಲಿ ಊರೂರು ಅಲೆಯುವ ತಮ್ಮ ಕೇಂದ್ರ ಸರಕಾರದ ನೌಕರಿಯಲ್ಲೇ ತೃಪ್ತಿ ಪಟ್ಟುಕೊಂಡು ಸಿಕ್ಕಿದ ಬಿಡುವಿನಲ್ಲಿ ಸಾಹಿತ್ಯಕೃಷಿ ನಡೆಸಿದರು. ಯಾವ ಪದವಿಯನ್ನೂ ಪ್ರಶಸ್ತಿಯನ್ನೂ ಬಯಸಲಿಲ್ಲ. ಭೈರಪ್ಪನವರು ತಮ್ಮ ಕೃತಿಗಳಲ್ಲಿ ಪ್ರತಿಪಾದಿಸುವ ವಿಚಾರಗಳಿಗೆ ನಮ್ಮ ಅಕ್ಷೇಪಣೆಗಳೇನೇ ಇರಲಿ, ಅವರು ಸಾಹಿತ್ಯವನ್ನು ಒಂದು ಏಣಿಯಾಗಿ ಎಂದೂ ಉಪಯೋಗಿಸಿಕೊಳ್ಳಲಿಲ್ಲ ಎಂಬ ಸತ್ಯವನ್ನು ನಾವು ಗುರುತಿಸಬೇಕು. ನಿಜ ಹೇಳಬೇಕೆಂದರೆ ಜ್ಞಾನಪೀಠ ಎಂಬ ‘‘ಸಾಹಿತ್ಯ’’ ಪ್ರಶಸ್ತಿಗೆ ಅನಂತಮೂರ್ತಿಯವರಿಗಿಂತಲೂ ಭೈರಪ್ಪನವರು ಹೆಚ್ಚು ಅರ್ಹರು.
ಭೈರಪ್ಪನವರ ವಿಚಾರಗಳು..
ಇನ್ನು ‘‘ಆವರಣ’’ದ ವಸ್ತುವಿಷಯದ ಮೇಲೆ ಅನಂತಮೂರ್ತಿಯವರ ಆಕ್ರೋಶದ ಬಗ್ಗೆ ಎರಡು ಮಾತು. ಹಿಂದೂ ಧರ್ಮದ ಹುಳುಕುಗಳ ಬಗ್ಗೆ ಬರೆಯುವ, ಬೇರೊಬ್ಬರು ಬರೆದರೆ ಬೆನ್ನು ತಟ್ಟುವ ನಮ್ಮ ಈ ಲದ್ದಿಜೀವಿಗಳು ಮುಸ್ಲಿಂ ಧರ್ಮದ ಕೊಳಕುಗಳ ಬಗ್ಗೆ ಯಾರಾದರೂ ಬರೆದರೆ ಹೀಗೇಕೆ ಕೆಂಡ ಕಾರುತ್ತಾರೆ? ಇಷ್ಟಕ್ಕೂ ‘‘ಆವರಣ’’ದಲ್ಲಿ ಭೈರಪ್ಪನವರು ಬರೆದಿರುವುದೇನೂ ಅವರ ಕಲ್ಪನೆಯಲ್ಲ.
ನಾಶವಾದ ಹಿಂದೂ ಮಂದಿರಗಳ ಬಗ್ಗೆ ಅವರು ವಿವರಗಳನ್ನು ಪಡೆದಿರುವುದು ಅವುಗಳನ್ನು ನಾಶ ಮಾಡಿದ ಅರಸರ ಆಸ್ಥಾನದಲ್ಲಿದ್ದ ‘‘ಅಧಿಕೃತ ಇತಿಹಾಸಕಾರ’’ರ ಬರವಣಿಗೆಗಳಿಂದಲೇ. ಜತೆಗೇ ಜಿಹಾದ್ ಬಗ್ಗೆ, ಜಿಹಾದಿಯೊಬ್ಬನಿಗೆ ಸ್ವರ್ಗದಲ್ಲಿ ಸಿಗುವ ಭೋಗದ ಬಗ್ಗೆ (ಎರಡಕ್ಕೆ ಮಾಡದ, ಉಚ್ಚೆ ಹೊಯ್ಯದ, ಹೂಸು ಬಿಡದ, ಮುಟ್ಟಾಗದ, ಹೆರದ, ಕನ್ಯಾಪೊರೆಯಿನ್ನೂ ಹರಿಯದಿರದ ದುಂಡುಮೊಲೆಯ ‘‘ಹ್ಯೂರಿ’’ ಎಂಬ ಎಪ್ಪತ್ತೆರಡು ಚಿರಯುೌವನೆಯರು!) ಕುರಾನ್ನಲ್ಲೇ ಇದೆ! ಕುರಾನ್ ಓದಲಾಗದಿದ್ದರೆ ಇಸ್ಲಾಮಿಕ್ ವಿದ್ವಾಂಸರಾದ ಅನ್ವರ್ ಶೇಖ್ ಮುಂತಾದವರ ಬರಹಗಳನ್ನೇ ನೋಡಿ.












Click it and Unblock the Notifications