ಕನ್ನಡಿಗರೇ, ಏನಾಗಿದೆ ನಿಮಗೆ? ನೀವೇಕೆ ಹೀಗೆ?


ಸಂಗೀತದಲ್ಲಿ, ಕರ್ನಾಟಕ ಸಂಗೀತಕ್ಕೆ ಶಾಸ್ತ್ರೀಯ ರೂಪ ಕೊಟ್ಟ ಖ್ಯಾತಿ ಪುರಂದರದಾಸರದ್ದಾದರೆ, ದಾಸಪಂಥವನ್ನು ಆರಂಭ ಮಾಡಿ ಭಕ್ತಿಪಥದ ಮೂಲಕ ಸಾಮನ್ಯ ಮನುಷ್ಯನನ್ನು ಮುಕ್ತಿಯ ಪಥಕ್ಕೆ ಕೊಂಡ್ಯೊಯ್ದ ದಾಸಪದಗಳ ಭಂಡಾರ ಬಹುಶಃ ವಿಶ್ವವಾಙ್ಮಯದಲ್ಲೇ ಸಾರಿಸಾಟಿ ಇಲ್ಲದ ಸಾಧನೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾಂದೇ 6 ರಾಷ್ಟ್ರೀಕೃತ ಬ್ಯಾಂಕುಗಳ ಹುಟ್ಟೂರು ಎನ್ನುವ ವಿಷಯ ಕನ್ನಡಿಗರ ವ್ಯವಹಾರ ಕುಶಲತೆಗೆ ಸಾಕ್ಷಿ.

ಆಚಾರ್ಯತ್ರಯರಲ್ಲಿ ದ್ವೈತ ಸಿದ್ಧಾಂತವನ್ನು ಪ್ರಚುರಪಡಿಸಿದ ಆಚಾರ್ಯ ಮಧ್ವರು ಕನ್ನಡಿಗರಾದರೆ, ಶ್ರಿವೈಷ್ಣವತತ್ವದ ಪ್ರತಿಪಾದಕರಾದ ರಾಮಾನುಜಾಚಾರ್ಯರು ನೆಲೆ ಕಂಡದ್ದು ಕರ್ನಾಟಕದಲ್ಲಿ. ಭರತಖಂಡದ ಖ್ಯಾತ ಅರಸುಮನೆತನಗಳಾದ ರಾಷ್ಟ್ರಕೂಟ, ಚಾಲುಕ್ಯ, ಗಂಗರು, ಕದಂಬರು, ಹೊಯ್ಸಳರು, ಮೈಸೂರಿನ ಒಡೆಯರನ್ನೂ ಕೊಟ್ಟ ಕನ್ನಡಿಗರು, ಮುತ್ತು ರತ್ನಗಳನ್ನು ಬಳ್ಳ ಬಳ್ಳದಲ್ಲಿ ಅಳೆದ ವಿಜಯನಗರದ ವಂಶಸ್ತರಾದ ಕನ್ನಡಿಗರು, 2000 ವರ್ಷ ಇತಿಹಾಸ ಉಳ್ಳ ಕನ್ನಡ ನಾಡು, ನುಡಿ, ಕೆಲವು ಹೊರರಾಜ್ಯದ ಭಾಷಿಕರಿಗೆ ಡೊಗ್ಗು ಸಲಾಮು ಹೊಡೆಯುವಷ್ಟು ದುರ್ಬಲವೇ?

ಗಮನಿಸಿ. ಕನ್ನಡದ ಪ್ರಥಮ ರಾಷ್ಟ್ರಕವಿ ಗೋವಿಂದ ಪೈ ಅವರು, ಇದ್ದದ್ದು ಮಂಜೇಶ್ವರದಲ್ಲಿ. ಮಾತೃಭಾಷೆ ಕೊಂಕಣಿ. ಸಾಹಿತ್ಯ ಕೃಷಿಯೆಲ್ಲ ಕನ್ನಡದಲ್ಲಿ. ಕನ್ನಡದ ಪ್ರಥಮ ನಿಘಂಟು ಬರೆದ ಕಿಟ್ಟೆಲ್‌ ಭಾರತೀಯನೇ ಅಲ್ಲ. ವಿದೇಶಿಯಾದ ಕಿಟ್ಟೆಲ್‌, ಕನ್ನಡ ನುಡಿಯ ಮೋಡಿಗೆ ಒಳಗಾಗಿ ಕನ್ನಡಿಗನಾಗಿ ಅಮರನಾದ. ಕನ್ನಡದ ಆಸ್ತಿ ಮಾಸ್ತಿ ಅವರ ಮಾತೃಭಾಷೆ ತಮಿಳು. ನಾಕುತಂತಿ ಮೀಟಿದ ಅಂಬಿಕಾತನಯದತ್ತರ ಮಾತೃಭಾಷೆ ಮರಾಠಿ. ಭಾರತ ಸಿಂಧು ರಶ್ಮಿಯನ್ನು ಬೆಳಗಿದ ಗೋಕಾಕರ ಮಾತೃಭಾಷೆ ಮರಾಠಿ, ವೃತ್ತಿಯಲ್ಲಿ ಆಂಗ್ಲ ಭಾಷೆಯ ಪ್ರಾಧ್ಯಾಪಕ. ಯಯಾತಿ, ನಾಗಮಂಡಲ, ತುಘಲಕ್‌ನಂತಹ ಶ್ರೇಷ್ಠ ನಾಟಕ ಕೊಟ್ಟ ಗಿರೀಶ್‌ ಕಾರ್ನಾಡ್‌ ಅವರ ಮಾತೃಭಾಷೆ ಕೊಂಕಣಿ. ಆಂದರೆ, ಕನ್ನಡದ 7 ಜ್ಞಾನಪೀಠ ವಿಜೇತರಲ್ಲಿ ನಾಲ್ವರು ಅನ್ಯ ಮಾತೃಭಾಷೆಯವರು!

ಈ ಪಟ್ಟಿ ಬೆಳೆಸುತ್ತಾ ಹೋದರೆ ಇನ್ನೂ ದೊಡ್ಡದಾಗುತ್ತದೆ. ‘ಯೂ ಆರ್‌ ಫ್ರಮ್‌ ಅಯರ್ಲಾಂಡ್‌ ಐ ಆ್ಯಮ್‌ ಫ್ರಮ್‌ ಅಯ್ಯರ್‌ ಲಾಂಡ್‌’ ಎಂದು ಕುಚೋದ್ಯವಾಡಿದ ‘ಕನ್ನಡಕ್ಕೊಬ್ಬರೇ’ ಟಿ ಪಿ ಕೈಲಾಸಮ್‌, ರತ್ನದಂತಹ ಪದಗಳ್‌ ಆಡಿದ ಜಿ ಪಿ ರಾಜರತ್ನಮ್‌, ಕೈಯಾರ ಕಿಞ್ಞಣ್ಣ ರೈ, ಪಂಜೆ ಮಂಜೇಶರಾಯರು, ನಾ ಕಸ್ತೂರಿ, ತಮಿಳು ಮಾತೃ ಭಾಷಿಕ ರಾಗಿದ್ದು, ಆಮೆರಿಕಾದಲ್ಲಿ ವಾಸವಾಗಿದ್ದು ಕನ್ನಡದಲ್ಲಿ ಕೃಷಿಮಾಡಿದ ಎ.ಕೆ.ರಾಮಾನುಜಮ್‌......

ಅಂದರೆ, ಕನ್ನಡಕ್ಕೆ, ಹೊರಭಾಷೆಯವರಿಂದ ಅಮೂಲ್ಯ ಸೇವೆ ಸಂದಿದೆ. ಕನ್ನಡ ಭಾಷೆಗೆ, ಮೈಸೂರಿನ ಮಲ್ಲಿಗೆಯ ಮೋಡಿಗೆ ಅದೆಷ್ಟೋ ಚೇತನಗಳು ಸಿಲುಕಿವೆ. ಹಾಗೆಂದು, ಹೊರಭಾಷೆಯವರನ್ನು ಕರೆದು, ಅವರ ಆಟಾಟೋಪಗಳಿಗೆ ಮಣೆ ಹಾಕಬೇಕೇ? ಅವರ ಗೂಂಡಾಗಿರಿಗೆ ಬಗ್ಗಿ ತೆವಳಿ ಪದಸೆಲೆಯಬೇಕೆ? ಸಲ್ಲ. ಸೆಟೆದು ನಿಂತರೆ, ಜಗವನಾಳಿದ ಆಂಗ್ಲ ಸರ್ಕಾರಕ್ಕೇ ಜೀವದಾಸೆ ಬಿಟ್ಟು ಸವಾಲು ಹಾಕಿದ ಕಿತ್ತೂರಿನ ನೆನಪು ಇನ್ನೂ ಹಸಿರಾಗೇ ಇದೆ. ಆದರೆ ಹೊರಭಾಷೆಯ ಜನರನ್ನು ಕನ್ನಡದ ತೆಕ್ಕೆಗೆ ತರುವ ಕೆಲಸವಾಗುತ್ತಿದೆಯೇ? ಕನ್ನಡದ ಕಸ್ತೂರಿಯನ್ನು ಮನೆ ಮನೆಗೆ ಹಂಚುವ ಕೆಲಸವಾಗುತ್ತಿದೆಯೇ?

ಗಮನಿಸಿ. ಕನ್ನಡದ ಸೊಬಗಿಗೆ ಮಾರುಹೋದ ಬೇಂದ್ರೆ, ತಾವೇ ಶ್ರೇಷ್ಠ ಕವಿಯಾದ್ದದಲ್ಲದೇ, ಆಂಗ್ಲ ಭಾಷೆಯಲ್ಲಿ ಕೃಷಿ ಮಾಡುತ್ತಿದ್ದ ಗೋಕಾಕರಿಗೆ ಕನ್ನಡದ ಹುಚ್ಚು ಹಚ್ಚಿದರು. ಕನ್ನಡಕ್ಕೆ ಮಾರು ಹೋದ ಕೈಲಾಸಮ್‌, ತಾವೇ ಸೇವೆ ಸಲ್ಲಿಸಿದ್ದಲ್ಲದೆ, ಕೆ.ವಿ.ಅಯ್ಯರ್‌ ಎಂಬ ಇನ್ನೊಬ್ಬನ್ನನ್ನು ಕನ್ನಡಕ್ಕೆ ಮತಾಂತರಿಸಿ, ಸಾಹಿತ್ಯದ ಓರೆಕೋರೆಗಳನ್ನು ತಿದ್ದಿ ಶಾಂತಲೆಯಂತಹ ಮಹಾನ್‌ ಕೃತಿಯ ರಚನೆಗೆ ಪ್ರೇರಕರಾಗಿ ನಿಂತರು. ಮೈಸೂರಿನಲ್ಲಿ ಅಧ್ಯಾಪಕರಾಗಿ ಬಂದ ಮಲಯಾಳಿ ನಾ. ಕಸ್ತೂರಿಗೆ ಕನ್ನಡದ ಮೋಡಿ ಮಾಡಿ, ಕನ್ನಡಿಗರು ಒಬ್ಬ ಶ್ರೇಷ್ಠ ಹಾಸ್ಯಸಾಹಿತಿಯನ್ನು ಪಡೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+