ಕಣ್ಮರೆಕೂಡ ನೋವಲ್ಲವೆಂಬ ನಿಜದಲ್ಲಿ ಜಾಣಿಯ ನೆನಪು
ಅನಾಗರಿಕ ಬೆಂಗಳೂರಿನಲ್ಲಿ ಬೀಡಾಡಿ ನಾಯಿಗಳ ಹಾವಳಿ ಕುರಿತು ಒಂದೆಡೆ ಚರ್ಚೆ ನಡೆಯುತ್ತಿದ್ದರೆ ಇನ್ನೊಂದೆಡೆ ಹುಚ್ಚು ನಾಯಿಗಳ ಹಾವಳಿ ಅಷ್ಟೇ ವಿಪರೀತವಾಗುತ್ತಿದೆ. ಈ ಮಧ್ಯೆ ಇವ್ಯಾವುದರ ಪರಿವೆಯೂ ಇಲ್ಲದ ‘ದಟ್ಸ್ಕನ್ನಡ’ ಗೆಳತಿಯಾಬ್ಬರು ನೀಗಿಹೋದ ನಿಷ್ಪಾಪಿ ಸ್ನೇಹಿತೆಯಾಬ್ಬಳ ನೆನಪಿನಲ್ಲೀಗ ಭರವಸೆಗಳನ್ನು ಸಾಕುತ್ತಿದ್ದಾರೆ......
- ಗೀತಾಂಜಲಿ ಅರಕೇರಿ, ಬೆಂಗಳೂರು.
ಅಂದು ನಾನು ಎಂಜಿನೀಯರಿಂಗ್ ಓದುತ್ತಿದ್ದಾಗ ದೀಪಾವಳಿಗೆ ಊರಿಗೆ ಹೋದಾಗ, ಮನೆಯನ್ನು ಪ್ರವೇಶಿಸಿದ ತಕ್ಷಣ ನಾನು ಅಪರಿಚಿತಳಾದರೂ ನೀನು ಬಂದು ಸ್ವಾಗತಿಸಿ, ಅಪ್ಪಿಕೊಂಡು ಮುತ್ತನಿತ್ತೆ. ನನ್ನ ಮನಸ್ಸಿನಲ್ಲಿ ಯವುದೇ ಭಾವನೆಗಳು ಏಳಲೇ ಇಲ್ಲ. ನಿನ್ನ ಇರುವನ್ನು ನಿರೀಕ್ಷಿಸದೇ ಇದ್ದುದರಿಂದಲೋ ಏನೋ ನಿನ್ನತ್ತ ತಿರಸ್ಕಾರದಿಂದ ನೋಡುತ್ತ ಮನೆಯವರ ಆಯ್ಕೆಯನ್ನು ಹೀಗಳೆದೆ.
ನನ್ನ ಪ್ರೀತಿಯ ಪಾಲು ಕಡಿಮೆಯಾಗಬಹುದೆನೋ ಎಂಬ ಸ್ವಾರ್ಥ ಇರಬೇಕು. ನನ್ನ ಕೆಂಗಣ್ಣಿನ ನೋಟ ನಿನಗೆ ಯಾವ ಪ್ರಭಾವನ್ನು ಮಾಡದೇ ಮತ್ತೆ ಮತ್ತೆ ನನ್ನ ಸುತ್ತ ಮುತ್ತ ಸುಳಿದಾಡಿದೆ. ಹೀಗಿರಲು ಎದೆಯಲ್ಲಿ ಎಂಥದೋ ಪ್ರೀತಿಯು ಒಸರಲು ಶುರುವಿಟ್ಟಿತು.
ನಿನ್ನ ಸಹವಾಸ ಸಹ್ಯವಾಗತೊಡಗಿತು. ನಿನ್ನ ಒಡನಾಟ ಮುದ ನೀಡತೊಡಗಿತು. ನೀನು ನನ್ನ ಬದುಕಿನ ಒಂದು ಭಾಗವಾಗತೊಡಗಿದೆ. ಹಗಲಿರುಳು ನೆರಳಂತೆ ಇರತೊಡಗಿದೆ. ತಿಂಡಿಯಲ್ಲಿ ಪಾಲು ಪಡೆದೆ. ಸಿಹಿಮುತ್ತನಿಟ್ಟು ತಣಿಸಿದೆ. ವಾಯುವಿಹಾರದಲ್ಲಿ ಸಂಗಾತಿಯಾದೆ. ನಿದ್ರೆಗೂ ನನ್ನ ಮಡಿಲ ಬಯಸಿದೆ.
ಮತ್ತೆ ಕಾಲೇಜು ಆರಂಭವಾದ ಅನಿವಾರ್ಯತೆಯಿಂದ ನಾನು ವಾಪಸ್ಸಾಗುವಾಗ ನಿನ್ನ ಪ್ರೀತಿ ಅಪ್ಪುಗೆಯಲ್ಲಿ ನನ್ನ ತಬ್ಬಿ ಶುಭ ಕೋರಿದೆ. ಫೋನಲ್ಲಿ ನಿನ್ನ ಧ್ವನಿ ಆಗಲೇ ಮೊಳೆತ ಪ್ರೀತಿಗೆ ಸವಿನೆನಪಿನ ನೀರು ಗೊಬ್ಬರವಾಯಿತು. ಪ್ರತಿಸಲವೂ ರಜೆಗೆ ಬರುವಾಗ ನಿನ್ನ ಜೊತೆ ಕಾಲ ಕಳೆಯುವ ಪರಿಯನ್ನು ಊಹಿಸಿದಷ್ಟೂ ಊರಿಗೆ ಬರುವ ಹಂಬಲ ಹೆಚ್ಚಾಯಿತು.
ಇಂತು ಕಾಲ ಉರುಳಿರಲು ನನ್ನ ಸ್ವಾವಲಂಬನೆಯ ಆಶೆ ನಿನ್ನಿಂದ ಮತ್ತಷ್ಟು ದೂರ ಸೆಳೆದೊಯ್ಯಿತು. ಆದರೆ ನೀನು ನನ್ನ ಏಳ್ಗೆಗಾಗಿ ಹಾರೈಸಿ ಬೀಳ್ಕೊಟ್ಟೆ. ಅದೇ ಎಂದೂ ಕರಗದ ಸಿಹಿತನದಿಂದ. ನಾನು ಅರ್ಧ ಭೂಮಿಯನ್ನೆ ಸುತ್ತಿದರೂ ನಿನಗಾಗಿ ಯಾವ ಉಡುಗೊರೆಯನ್ನೂ ತರಲಿಲ್ಲ. ತರಬೇಕೆಂದು ಮುಟ್ಟಿದ್ದು ನಿನಗೆ ಸರಿಯಾಗದೆನೋ ಎಂಬ ಹಿಂಜರಿಕೆ.
ನೀನು ಮಾತ್ರ ನಾನು ಎಲ್ಲೇ ಹೋದರೂ ನನಗಾಗಿ ಸ್ವಸ್ಥಾನದಲ್ಲೇ ಕಾಯುತ್ತಲ್ಲಿದ್ದೆ. ಹೊರಗಡೆಯ ಒಡನಾಟ ನನ್ನನ್ನು ಹೊರಮುಖಿಯಾಗಿಸಿತು. ಜೀವನದಲ್ಲಿ ಬೇರೆ ಪಾತ್ರಗಳು ಪ್ರಾಮುಖ್ಯವೆನಿಸಿದವು. ಇದೆಲ್ಲಾ ನಿನಗೆ ತಿಳಿದೋ ತಿಳಿಯದೆಯೋ ಒಂದು ಚೂರೂ ಬೇಸರಿಸಿಕೊಳ್ಳದೇ ಸಹಕರಿಸಿದೆ. ನಿನ್ನ ಸ್ಥಾನವನ್ನು ನನ್ನಾಸೆಗಳಿಗೆ ಬಿಟ್ಟುಕೊಟ್ಟೆ. ಬೇರೆಯವರಿಗಾಗಿ ಸ್ವಸುಖವನ್ನು ತ್ಯಾಗ ಮಾಡಿದೆ. ಒಂದೊಮ್ಮೆ ನಿನಗೂ ಹೂವಿನ ಮೇಲಿನ ನೀರಹನಿಯ ಇರುವಂತೆ ಮುನಿಸಾದರೂ ಸಾವರಿಸಿಕೊಂಡೆ.
ನನ್ನ ಗಮನ ನಿನ್ನ ಕಡೆ ಕಡಿಮೆ ಎನಿಸಿದಾಗ, ನಿನಗೆ ಸ್ಪರ್ಧಿ ಬಂದಾಗ ಗುರ್ರ್ ಗುಟ್ಟಿದೆ. ಇದೆಲ್ಲದರ ಮಧ್ಯವೂ ಒಂಟಿತನವನ್ನು ಹತ್ತಿಕ್ಕಿ ಜೊತೆ ನೀಡಲು ಹವಣಿಸಿದೆ. ಸುರಕ್ಷತೆಯ ಸಂಕೇತವಾದೆ. ಸಮಾನ ಪ್ರೀತಿಯ ದ್ಯೋತಕವಾದೆ. ನಿಷ್ಠೆಗೆ ಹೆಸರಾದೆ. ನಿಸ್ವಾರ್ಥದ ತವರಾದೆ. ಆಗಾಗ್ಗೆ ನಿನ್ನ ಆರೋಗ್ಯ ಕಳವಳಗೊಂಡಾಗ ನಾನು ಚಿಂತಿಸಿ ನೊಂದು ಸರ್ವೇಶ್ವರನನ್ನು ಪ್ರಾರ್ಥಿಸಿದರ ಫಲವೋ ಏನೊ ಮತ್ತೆ ಸರಿಯಾದೆ. ದೃಢವಾದೆ.
ಹೀಗೆ ಸಾಗಿರಲು ಈ ಹನ್ನೆರಡು ವರ್ಷ ಕಾಲನ ಸಾಲ ನಿನ್ನನ್ನು ಸಾಕಷ್ಟು ಹಣ್ಣಾಗಿಸಿತ್ತು. ಮನೆಯಲ್ಲಿ ಬೇರೆ ಒಬ್ಬಂಟಿಯಾಗಿರುವದು ಬೇಸರವಾಯಿತೋ ಏನೋ ಈ ಸಲ ದೀಪಾವಳಿಯ ದಿನಗಳಲ್ಲಿ ನೀನು ಆಡಲಿಲ್ಲ , ಓಡಲಿಲ್ಲ, ಉಣ್ಣಲಿಲ್ಲ, ಕುಣಿಯಲಿಲ್ಲ. ಕೇವಲ ಮೌನಿಯಾದೆ. ನನ್ನ ಮುದ್ದುಗಳನ್ನು ಸಾವಧಾನವಾಗಿ ಸ್ವೀಕರಿಸಿದೆ. ಅಲ್ಲಿ ಮೊದಲಿದ್ದ ಹುಂಬತನವಿರಲಿಲ್ಲ , ತುಂಟತನವಿರಲಿಲ್ಲ. ದೀಪಾವಳಿಯ ಸಂಭ್ರಮ ಮುಗಿಯುತ್ತಿದ್ದಂತೆ ನಿನ್ನ ಹಣತೆಯ ಎಣ್ಣೆ ತೀರಿ ಜ್ಯೋತಿ ನಂದಿತು. ನಿನ್ನ ಅಚಲವಾದ ಶ್ರದ್ಧೆಯಿಂದ ಸೇವೆಗೈದು ಶಾಂತವಾದೆ.
ನಿನಗಾಗಿ ಆ ಭಗವಂತನಲ್ಲಿ ನಿನಗೆ ಉನ್ನತ ಜನ್ಮವನ್ನೇ ನೀಡೆಂದು ಪ್ರಾರ್ಥಿಸುತ್ತ ಅದು ಸಾಧ್ಯವಾಗುವದಾದರೆ ನಿನ್ನ ಕಣ್ಮರೆ ಕೂಡ ನೋವಲ್ಲವೆಂಬ ಸಮಾಧಾನದಲ್ಲೇ ನನ್ನ ಅಲೆದಾಟ ಮುಂದುವರೆಸಿದೆ. ಪೂರ್ಣ ಗುರಿ ತಿಳಿಯದೆ ಹೋದರೂ ಅದರ ಭಾಸವಿದೆ. ಅದನ್ನು ಸೇರುವ ತವಕವಿದೆ. ಇಂಥ ಗುರಿಗೆ ನೀನು ನೀಡಿದ ಸಹಚರ್ಯ ಹಚ್ಚ ಹಸಿರಾಗಿದೆ. ಹೆಚ್ಚೇನು ಬೇಕು? ಜಾಣಿ.












Click it and Unblock the Notifications