ಇಂದಿನ ಪತ್ರಿಕೆಗಳು ಮತ್ತು ಕನ್ನಡ ಸಾಹಿತ್ಯ!
ಪತ್ರಿಕೆಗಳ ಈ ಧೋರಣೆಯಿಂದಾಗಿ ಉತ್ತಮ ಹಾಗೂ ಸತ್ವಯುತ ಕಥೆಗಳನ್ನು ರಚಿಸಬಲ್ಲ ಹೊಸ ಬರಹಗಾರರು ಅನುಭವಿಸುವ ಅಸಹಾಯಕತೆಯ ಬಗ್ಗೆ ಒಂದೆರಡು ಮಾತು ಹೇಳುವುದು ಈ ಸಂದರ್ಭದಲ್ಲಿ ಅಗತ್ಯ. ಗುಣದಲ್ಲಿ ಹಿರಿದಾದಂತೆ ಗಾತ್ರದಲ್ಲಿಯೂ ಸ್ವಲ್ಪ ಹಿರಿದಾಗಿರಬಹುದಾದ ಇವರ ಕಥೆಗಳಿಗೆ ನಿಯತಕಾಲಿಕಗಳಲ್ಲಿ ಸ್ಥಳವಿರುವುದಿಲ್ಲ. ಆಹ್ವಾನಿತ ಕಥೆಗಳೇ ಪ್ರಕಟವಾಗುವ ವಿಶೇಷಾಂಕಗಳಲ್ಲೂ ಹೊಸ ಬರಹಗಾರರಿಗೆ ಸ್ಥಾನವಿಲ್ಲ. ಸಂಕಲನಗಳನ್ನು ಹೊರತರುಲು ಇವರಿಗೆ ಏನೇನೋ ಅಡಚಣೆಗಳಿರುತ್ತವೆ.
ಹೀಗಾಗಿ ಉತ್ತಮ ಬರಹಗಾರನೊಬ್ಬನ ಸಾಹಿತ್ಯಕ ಅವಸಾನವಾಗಿಹೋಗುತ್ತದೆ. ನನ್ನ ಪರಿಚಿತರಲ್ಲಿ ಇಬ್ಬರು ಕಥೆಗಾರ ಗೆಳೆಯರಿದ್ದಾರೆ. ಅವರಲ್ಲೊಬ್ಬರು ಸಾಹಿತ್ಯವನ್ನು ಗಂಭೀರವಾಗಿ ತೆಗೆದುಕೊಂಡು ಸಾಹಿತ್ಯಕ ಮೌಲ್ಯಗಳುಳ್ಳ ಆದರೆ ಧೀರ್ಘವಾದ ಕಥೆಗಳನ್ನು ಬರೆದು ಪತ್ರಿಕೆಗಳಿಗೆ ಕಳುಹಿಸುತ್ತಾರೆ. ಕೆಲವು ಪತ್ರಿಕೆಗಳು ಕರುಣೆಯಿಟ್ಟು ಕಥೆಗಳನ್ನು ಜೋಪಾನವಾಗಿ ಹಿಂತಿರುಗಿಸುತ್ತವೆ. ಇತರ ಕೆಲವು ಪತ್ರಿಕೆಗಳು ವರ್ಷಗಳು ಕಳೆದರೂ ಮೌನ ಮುರಿಯುವುದಿಲ್ಲ. ಎರಡನೆಯಾತ ಎರಡು ಮೂರು ಪುಟಗಳ ಬಾಲಿಶ ಕಥೆಗಳನ್ನು ಬರೆಯುತ್ತಾರೆ. ಅವು ಪುಂಖಾನುಪುಂಖವಾಗಿ ಪ್ರಕಟವಾಗುತ್ತಿವೆ!
ಹೀಗಾಗಿ ಉತ್ತಮ ಆದರೆ ದೀರ್ಘ ಕಥೆಗಳನ್ನು ಬರೆಯುವ ಹೊಸ ಬರಹಗಾರರಿಗೆ ನಾನು ಹೇಳಬಯಸುವುದಿಷ್ಟೇ: ನಿಮ್ಮ ಕಥೆ ದೀರ್ಘವಾಗಿದ್ದಲ್ಲಿ ಅದನ್ನು ಪತ್ರಿಕೆಗಳಿಗೆ ಕಳುಹಿಸುವ ಮುನ್ನ ಒಮ್ಮೆ ಯೋಚಿಸಿ. ಕಥೆ ಹಿಂತಿರುಗಿ ಬಂದರೆ ನಿರಾಶರಾಗಬೇಡಿ.
ಹೊಸ ಬರಹಗಾರರು ಗಮನಿಸಬೇಕಾದ ಮತ್ತೊಂದು ವಿಷಯವಿದೆ. ನನ್ನ ಅನುಭವದ ಆಧಾರದ ಮೇಲೆ ನಾನೇ ಕಂಡುಕೊಂಡ ಈ ಸತ್ಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಇದು ನಿಮಗೆ ಖಂಡಿತಾ ಉಪಯೋಗಕ್ಕೆ ಬರುತ್ತದೆ.
ಸಂಪಾದಕರು ಬದಲಾದಂತೆ ಪತ್ರಿಕೆಯ ಧೋರಣೆಗಳೂ ಬದಲಾಗುತ್ತವೆ ಎಂಬುದು ನಿಮಗೆ ಗೊತ್ತೇ?
ನಾನು ‘ಧೀರ್ಘ’ ಸಣ್ಣಕಥೆಗಳನ್ನು ಬರೆಯಲಾರಂಭಿಸಿದ್ದು ಮೂರೂವರೆ-ನಾಲ್ಕು ವರ್ಷಗಳ ಹಿಂದೆ. ಮಾಸಪತ್ರಿಕೆಯಾಂದರಲ್ಲಿ ಎರಡು ವರ್ಷಗಳ ಆವಧಿಯಲ್ಲಿ ನನ್ನ ನಾಲ್ಕು ಕಥೆಗಳು ಪ್ರಕಟವಾದವು. ಅಷ್ಟೇ ಅಲ್ಲ ‘ಕಥೆ ಕಳುಹಿಸಿ’ ಎಂದು ಸಂಪಾದಕರು ಕೇಳಿ ಪ್ರೋತ್ಸಾಹಿಸಿದರು ಕೂಡಾ. ಆನಂತರ ವರ್ಷವಾಗುತ್ತಾ ಬಂದರೂ ನನ್ನ ಕಥೆಗಳೂ ಪ್ರಕಟವಾಗಲಿಲ್ಲ, ಹಿಂದಕ್ಕೆ ಬರಲೂ ಇಲ್ಲ. ಇದೇಕೆ ಹೀಗೆ ಎಂದು ಕುತೂಹಲದಿಂದ ಪತ್ರಿಕೆಯ ಕಾರ್ಯಾಲಯಕ್ಕೆ ಫೋನಾಯಿಸಿದೆ.
ಹಳೆಯ ಸಂಪಾದಕರು ನಿವೃತ್ತರಾಗಿ ಹೊರಟುಹೋಗಿದ್ದರು. ಅವರ ಸ್ಥಾನದಲ್ಲಿ ಹೊಸಬರು ಬಂದಿದ್ದರು. ನನ್ನನ್ನು ನಾನು ಪರಿಚಯಿಸಿಕೊಂಡೊಡನೇ ಅವರು ‘ಓ ಪ್ರೇಮ್ಶೇಖರ್ರಾ? ನಿಮ್ಮ ಕಥೆಗಳು ಸಿಕ್ಕಿವೆ. ಆದರೆ ನಾವು ಈಗಾಗಲೇ ನಿಮ್ಮ ಕಥೆಗಳನ್ನ ಸಾಕಷ್ಟು ಪ್ರಕಟಿಸಿಬಿಟ್ಟಿದ್ದೀವಿ. ಹೀಗಾಗಿ ಸದ್ಯಕ್ಕೆ ನಿಮ್ಮ ಕಥೆಗಳನ್ನ ಪ್ರಕಟಿಸೋದಿಲ್ಲ. ಮುಂದೆ ನೋಡೋಣ’ ಅಂದರು! ‘ಸರಿ ಸರ್’ ಎಂದು ಹೇಳಿ ಫೋನಿಟ್ಟೆ.
ನಾನು ಸುಮ್ಮನಾಗಲಿಲ್ಲ. ಆ ಪತ್ರಿಕೆಗೆ ಕಳುಹಿಸಿದ್ದ ‘ಸಂಬಂಧಗಳು’ ಹಾಗೂ ‘ಖೈದಿ’ ಕಥೆಗಳನ್ನು ಒಂದು ವರ್ಷದ ಆವಧಿಯಲ್ಲಿ ಮತ್ತೊಂದು ಮಾಸಿಕಕ್ಕೆ ಕಳುಹಿಸಿದೆ. ಎರಡೂ ಪ್ರಕಟವಾಗಿ ಬಲು ಜನಪ್ರಿಯತೆ ಗಳಿಸಿದವು.
ಸಂಪಾದಕರು ಬದಲಾಗದೇ ಉಳಿದಿರುವ ಒಂದು ಮಾಸಿಕದಲ್ಲಿ ನನ್ನ ಕಥೆಗಳು ವರ್ಷಕ್ಕೆ ಎರಡು ಮೂರರಂತೆ ಪ್ರಕಟವಾಗುತ್ತಲೇ ಇವೆ. ನನ್ನ ಕಥೆಗಳ ಬಗ್ಗೆ ಆ ಪತ್ರಿಕೆಯ ಧೋರಣೆಯಲ್ಲಿ ಈ ಮೂರು ವರ್ಷಗಳಲ್ಲಿ ಯಾವ ಬದಲಾವಣೆಯೂ ಆಗಿಲ್ಲ.
ಇದನ್ನು ಗಮನಿಸಿದಾಗ ನನಗನ್ನಿಸಿದ್ದು ಹೀಗೆ- ಪತ್ರಿಕೆಗಳು ಮನೆಗಳ ಹಾಗೆ, ಸಂಪಾದಕರು ಅಲ್ಲಿ ವಾಸಿಸುವ ಜನರ ಹಾಗೆ. ಒಂದು ಮನೆಯಲ್ಲಿ ವಾಸಿಸುವ ಜನರಿಗೆ ಹೇಗೋ ನಿಮ್ಮ ಬಗ್ಗೆ ಆದರ ಮೂಡಿರುತ್ತದೆ. ನೀವು ಹೋದಾಗಲೆಲ್ಲಾ ಅವರು ನಗುಮೊಗದಿಂದ ಆದರಿಸುತ್ತಾರೆ. ಕೆಲಕಾಲಾನಂತರ ಅವರು ಆ ಮನೆ ಬಿಟ್ಟು ಬೇರೆತ್ತಲೋ ಹೊರಟುಹೋಗುತ್ತಾರೆ. ಆ ಮನೆಗೆ ಬೇರೊಬ್ಬರು ವಾಸಕ್ಕೆ ಬರುತ್ತಾರೆ. ಮನೆ ಹಾಗೇ ಇದೆಯಲ್ಲ, ಅದೇ ಗೋಡೆಗಳು, ಅದೇ ಬಾಗಿಲು ಕಿಟಕಿಗಳು, ನಮಗೆ ಈಗಲೂ ಅಲ್ಲಿ ಅದೇ ಹಿಂದಿನ ಸ್ವಾಗತ ಸಿಗುತ್ತದೆ ಎಂದುಕೊಂಡು ನೀವು ಆ ಮನೆಗೆ ಹೋಗುತ್ತೀರಿ. ನಿಮ್ಮ ನಿರೀಕ್ಷೆಗೆ ವಿರುದ್ಧವಾಗಿ ಆ ಮನೆಯಲ್ಲಿ ಈಗಿರುವ ಜನ ನಿಮ್ಮನ್ನು ಆದರಿಸುವುದಿಲ್ಲ.
ಕಾರಣ ಇಷ್ಟೇ- ಆದರಿಸಲು ಅವರಿಗೆ ಅವರದೇ ಆದ ಸ್ನೇಹಿತರಿರುತ್ತಾರೆ. ನಿಮ್ಮನ್ನು ಆದರಿಸುವ ಆಗತ್ಯ ಅವರಿಗಿರುವುದಿಲ್ಲ. ಇನ್ನೊಂದು ಮನೆ. ಅಲ್ಲಿನ ನಿವಾಸಿಗಳಿಗೆ ನಿಮ್ಮ ಬಗ್ಗೆ ಮಮತೆ. ಅದು ಅವರದ್ದೇ ಸ್ವಂತ ಮನೆಯಾದ್ದರಿಂದ ಅವರು ಆ ಮನೆ ಬಿಟ್ಟು ಬೇರೆಡೆ ಹೋಗುವ ಮಾತೇ ಇಲ್ಲ. ಹೀಗಾಗಿ ನಿಮಗೆ ಆ ಮನೆಯಲ್ಲಿ ನಿರಂತರ ಸ್ವಾಗತ! ಆ ಸ್ವಾಗತದಲ್ಲಿ ಏರುಪೇರಾಗುವುದು ನಿಮ್ಮಿಂದ ಅಪಚಾರವೇನಾದರೂ ಘಟಿಸಿದರೆ ಮಾತ್ರ. ಹಾಗಾಗದಂತೆ ನೀವು ಎಚ್ಚರಿಕೆ ವಹಿಸಿದರಾಯಿತು.
ನಾನು ಏನು ಹೇಳಬೇಕೆಂದಿದ್ದೇನೆ ಎಂದು ನಿಮಗೆ ಹೊಳೆದುಹೋಗಿರಬೇಕಲ್ಲ? ಇರಲಿ, ಹೇಳಿಯೇ ಬಿಡುತ್ತೇನೆ. ಆರು ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ ಸಂಪಾದಕರು ಬದಲಾಗುವ ಪತ್ರಿಕೆಗಳಲ್ಲಿ ನಿಮ್ಮ ಅದೃಷ್ಟವನ್ನು ಪರೀಕ್ಷಿಸಲು ಹೋಗಬೇಡಿ. ಒಂದೇ ಒಡೆತನದಲ್ಲಿ, ಒಂದೇ ಸಂಪಾದಕವರ್ಗದ ಹಿಡಿತದಲ್ಲಿರುವ ಪತ್ರಿಕೆಗಳಲ್ಲಿ ವಿಶ್ವಾಸ ಗಳಿಸಿಕೊಳ್ಳಲು ಪ್ರಯತ್ನಿಸಿ. ಗಳಿಸಿದ ಮೇಲೆ ಅದನ್ನು ಉಳಿಸಿಕೊಳ್ಳಲು ನಿರಂತರ ಶ್ರಮಿಸಿ ಹಾಗೂ ಸಾಹಿತ್ಯಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿ.












Click it and Unblock the Notifications