ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದಿನ ಪತ್ರಿಕೆಗಳು ಮತ್ತು ಕನ್ನಡ ಸಾಹಿತ್ಯ!

By Staff
|
Google Oneindia Kannada News


ಪ್ರಸ್ತುತ ಕನ್ನಡ ಪತ್ರಿಕೆಗಳ ಸಂಖ್ಯೆ ಹೆಚ್ಚಿವೆ. ಅದೇ ರೀತಿ ಓದುಗರ ಸಂಖ್ಯೆ, ಕತೆಗಾರರ ಸಂಖ್ಯೆಯೂ ಹೆಚ್ಚಿದೆ. ಆದರೆ ಕತೆಗಳ ಗುಣಮಟ್ಟ? ಪತ್ರಿಕಾ ಸಂಪಾದಕರ ಯೋಚನಾ ಲಹರಿ? ಗೊಂದಲಕಾರಿ... ಜೊತೆಗೆ ಅಪಾಯಕಾರಿ! ನಮ್ಮ ಬರಹಗಾರರನ್ನು ಪತ್ರಿಕೆಗಳು ಹೇಗೆ ಗುರುತಿಸುತ್ತವೆ ಮತ್ತು ಹೇಗೆ ದುಡಿಸಿಕೊಳ್ಳುತ್ತವೆ? ಕೇಳಿ; ಒಬ್ಬ ಲೇಖಕರ ಅನುಭವ!

Premshekhar, Pondicherryಸಾಮಾನ್ಯವಾಗಿ ಸಾಹಿತ್ಯ ಜನಸಾಮಾನ್ಯರಿಗೆ ತಲುಪುವುದು ಪತ್ರಿಕೆಗಳು ಹಾಗೂ ನಿಯತಕಾಲಿಕಗಳ ಮೂಲಕ. ಹೀಗೆ ಬರಹಗಾರರು ಮತ್ತು ಓದುಗರ ನಡುವೆ ಸೇತುವೆಯಂತೆ ಕೆಲಸ ಮಾಡುವ ಪತ್ರಿಕೆಗಳು ಹೊಸ ಸತ್ವಯುತ ಬರಹಗಾರರ ಸೃಷ್ಟಿಯಲ್ಲಿ, ಅವರ ಬರಹಗಳನ್ನು ಓದುಗರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪ್ರಜಾವಾಣಿ ದೀಪಾವಳಿ ವಿಶೇಷಾಂಕಗಳು ಸೃಷ್ಟಿಸಿದಷ್ಟು ಉತ್ತಮ ಕಥೆಗಾರರನ್ನು ಬಹುಶಃ ರಾಜ್ಯದ ಯಾವ ವಿಶ್ವವಿದ್ಯಾಲಯದ ಕನ್ನಡ ವಿಭಾಗವೂ ಸೃಷ್ಟಿಸಿಲ್ಲ. ಹಾಗೆಯೇ ಜಿ ಎಸ್‌ ಸದಾಶಿವ ಅವರ ಸಂಪಾದಕತ್ವದಲ್ಲಿ ‘ ಮಯೂರ’ ಮಾಸಿಕ ಉತ್ತಮ ಸಾಹಿತ್ಯಸೃಷ್ಟಿಗೆ ನೀಡಿದ ಪ್ರೋತ್ಸಾಹ ಅದ್ವಿತೀಯ.

ಅದೆಲ್ಲವೂ ಈಗ ಬರೀ ನೆನಪು ಮಾತ್ರ. ಸಾಹಿತ್ಯದ ಬಗೆಗೆ ಇಂದಿನ ಕನ್ನಡ ಪತ್ರಿಕೆಗಳ ಧೋರಣೆಯಲ್ಲಿ ಕಂಡುಬರುತ್ತಿರುವ ನಕಾರಾತ್ಮಕತೆ ಚಿಂತಿಸುವಂತೆ ಮಾಡುತ್ತದೆ. ಒಂದುಕಾಲದಲ್ಲಿ ಒಳ್ಳೆಯ ಕಥೆಗಳನ್ನು ಪ್ರೋತ್ಸಾಹಿಸಿ ಉತ್ತಮ ಕಥಾಪರಂಪರೆ ಬೆಳೆಯುವುದಕ್ಕೆ ಕಾರಣವಾದ ಹಲವಾರು ಜನಪ್ರಿಯ ಪತ್ರಿಕೆಗಳ ಧೋರಣೆ ಈಗ ಬದಲಾಗಿಹೋಗಿದೆ. ಪ್ರಕಟಣೆಗೆ ಕಥೆಗಳನ್ನು ಆಯ್ಕೆ ಮಾಡುವಾಗ ಹೆಚ್ಚಿನ ಸಂಪಾದಕರು ಉಪಯೋಗಿಸುವ ಮಾನದಂಡ ಕೇವಲ ಕಥೆಯ ಗಾತ್ರ ಮಾತ್ರವೇನೋ ಅನಿಸುತ್ತದೆ.

ಈ ದಿನಗಳಲ್ಲಿ ಜನಪ್ರಿಯ ಸಾಪ್ತಾಹಿಕ, ಮಾಸಿಕಗಳಲ್ಲಿ ಪ್ರಕಟವಾಗುವ ಬಾಲಿಶ ಕಥೆಗಳನ್ನು ನೋಡಿದಾಗ ಒಂದೆರಡು ಪುಟಗಳಿಗೆ ಸೀಮಿತವಾದ ಕಥೆ ಹೇಗಿದ್ದರೂ ಪ್ರಕಟವಾಗುತ್ತದೆ ಎಂದು ನನಗನಿಸುತ್ತದೆ! ಆ ಕಥೆಗಳ ಒಂದೇ ಒಂದು ಒಳ್ಳೆಯ ಗುಣವೆಂದರೆ ಅವು ಬೇಗನೆ ಮುಗಿದುಹೋಗುತ್ತವೆ!

ಕೆಲವು ಪತ್ರಿಕೆಗಳಂತೂ ‘ಕಾರ್ಡಿನಲ್ಲಿ ಕಥೆ’ ಎಂಬ ಅಸಡ್ಡಾಳ ಪದ್ಧತಿಯನ್ನು ಹುಟ್ಟುಹಾಕಿಕೊಂಡಿವೆ. ಇಂಥಾ ಕಥೆಗಳಿಗೂ ದಿನಪತ್ರಿಕೆಯ ಮೂರನೇ ಪುಟದಲ್ಲಿ ಪ್ರಕಟವಾಗುವ ವರದಿಗಳಿಗೂ ಹೆಚ್ಚಿನ ಸಂದರ್ಭಗಳಲ್ಲಿ ಯಾವ ವ್ಯತ್ಯಾಸವೂ ಇರುವುದಿಲ್ಲ. ಈ ಕಥೆಗಳನ್ನು ತುಂಬಾ ಜನ ಓದುಗರು (?) ಬಹುವಾಗಿ ಇಷ್ಟಪಡುತ್ತಾರೆ. ಅಷ್ಟೆ ಅಲ್ಲ, ‘ಓದುವ ಶ್ರಮವನ್ನು ಕಡಿಮೆ ಮಾಡಿದ ಈ ಕಥೆ ನನಗೆ ತುಂಬಾ ಇಷ್ಟವಾಯಿತು’ ಎಂದು ಪತ್ರಿಕೆಗೆ ಪತ್ರವನ್ನೂ ಬರೆಯುತ್ತಾರೆ ಹಾಗೂ ಈ ಪತ್ರಗಳನ್ನು ಪತ್ರಿಕೆಗಳು ನಾಚಿಕೆಯಿಲ್ಲದೇ ಪ್ರಕಟಿಸುತ್ತವೆ.

ಓದುವಂತಹ ಒಂದು ಸುಂದರ, ರಮ್ಯ, ಸಂತೋಷದಾಯಕ ಅನುಭವವನ್ನು ‘ಶ್ರಮ’ ಎಂದು ಭಾವಿಸುವ ಇಂಥಾ ಓದುಗರಿಂದ ಸಾಹಿತ್ಯ ಉದ್ಧಾರವಾದೀತೆ? ಇಂಥವರ ಇಷ್ಟಾನಿಷ್ಟಗಳಿಗೆ ತಕ್ಕಂತೆ ತಮ್ಮ ಧೋರಣೆಯನ್ನು ರೂಪಿಸಿಕೊಳ್ಳುವ ಪತ್ರಿಕೆಗಳಿಂದ ಉತ್ತಮ ಸಾಹಿತ್ಯವನ್ನು ನಿರೀಕ್ಷಿಸಬಹುದೇ? ಇಂಥವರಿಗಾಗಿ ನಾವು ಸಾಹಿತ್ಯ ಸೃಷ್ಟಿಸಬೇಕೆ?

ಒಂದು ಎರಡು ಪುಟಗಳ ಕಥೆಗಳನ್ನು ಪ್ರಕಟಿಸಿದರೆ ಒಂದು ಸಂಚಿಕೆಯಲ್ಲಿ ಹೆಚ್ಚು ಕಥೆಗಳನ್ನು ಪ್ರಕಟಿಸಬಹುದು ಎನ್ನುವುದು ಸಂಪಾದಕರುಗಳ ಆಶಯವಾಗಿರಬಹುದು. ಆದರೆ ಅವರು ಮರೆತ ವಿಷಯವೊಂದಿದೆ. ಅದೆಂದರೆ- ‘ಹತ್ತು ಕಟ್ಟೋಕಿಂತ ಒಂದು ಮುತ್ತು ಕಟ್ಟಿ ನೋಡು.’ ಹತ್ತು ಬಾಲಿಶ ಕಥೆಗಳನ್ನು ಪ್ರಕಟಿಸುವುದಕ್ಕಿಂತ ಒಂದೆರಡು ಉತ್ತಮ ಕಥೆಗಳನ್ನು ಪ್ರಕಟಿಸಿದರೆ ಸಾಹಿತ್ಯವೂ ಉದ್ಧಾರವಾಗುತ್ತದೆ, ಪತ್ರಿಕೆಯ ಮೌಲ್ಯವೂ ಹೆಚ್ಚುತ್ತದೆ. ಅಲ್ಲದೇ ಒಂದು ಉತ್ತಮ ಕಥೆಯನ್ನು ಪ್ರಕಟಿಸಿದರೆ ಸಾವಿರಾರು ಸಾಹಿತ್ಯಾಭಿಮಾನಿಗಳಿಗೆ ಸಂತಸವುಂಟಾಗುತ್ತದೆ.

ಹತ್ತು ಬಾಲಿಶ ಕಥೆಗಳನ್ನು ಪ್ರಕಟಿಸಿದರೆ ಕೇವಲ ಹತ್ತು ವ್ಯಕ್ತಿಗಳಿಗೆ ಮಾತ್ರ ಸಂತೋಷವಾಗುತ್ತದೆ. ತಾವು ಎಷ್ಟು ಜನಕ್ಕೆ ಸಂತೋಷವನ್ನುಂಟುಮಾಡಬೇಕೆಂದು ಪತ್ರಿಕೆಗಳು ನಿರ್ಧರಿಸಬೇಕು.

ಈಗಿನ ಪತ್ರಿಕೆಗಳಲ್ಲಿ ಸಾಹಿತ್ಯಕ ಮೌಲ್ಯಗಳುಳ್ಳ ಉತ್ತಮ ಕಥೆಗಳು ಕಾಣಬರುವುದೇ ಇಲ್ಲ. ಪ್ರಸಿದ್ಧ ಕಥೆಗಾರರ ಕಥೆಗಳು ಅಲ್ಲಿ ಪ್ರಕಟವಾಗುವುದಿಲ್ಲ. ಯಶವಂತ ಚಿತ್ತಾಲ, ಯು. ಆರ್‌. ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಜಯಂತ ಕಾಯ್ಕಿಣಿ, ಕುಂವೀ, ಕೇಶವ ಮಳಗಿ, ವಿವೇಕ ಶಾನಭಾಗ ಅವರುಗಳ ಕಥೆಗಳನ್ನು ನೀವು ಪತ್ರಿಕೆಗಳಲ್ಲಿ ಕಾಣಲಾರಿರಿ. ಯಾಕೆಂದರೆ ಕಾರ್ಡಿನಲ್ಲಿ ಕಥೆ ಬರೆಯುವುದು, ಒಂದೆರಡು ಪುಟಗಳ ಕಥೆ ಗೀಚುವುದು ಅವರಿಗೆ ಗೊತ್ತಿಲ್ಲ. ಅವರುಗಳು ಬರೆಯುವ ಕಥೆಗಳು ಸತ್ವಯುತವಾಗಿರುತ್ತವೆ, ಹಾಗೇ ಧೀರ್ಘವಾಗಿರುತ್ತವೆ. ನಮ್ಮ ಪತ್ರಿಕೆಗಳಿಗೆ ಅಂತಹ ಧೀರ್ಘ ಕಥೆಗಳು ಬೇಕಾಗಿಲ್ಲ. ಈ ಕಥೆಗಾರರ ಸೊಗಸಾದ ಕಥೆಗಳು ಬೇಕಾದರೆ ನಾವು ವಿಶೇಷಾಂಕಗಳಿಗೆ ಅಥವಾ ಕಥಾಸಂಗ್ರಹಗಳಿಗೆ ಕಾಯಬೇಕು.

ಇಂದಿನ ಪತ್ರಿಕೆಗಳಲ್ಲಿ ಅರ್ಥಪೂರ್ಣ ವಿಮರ್ಶೆಯಾಗಲೀ, ಸಾಹಿತ್ಯಕ ಚರ್ಚೆಯಾಗಲೀ ಕಾಣಬರುವುದಿಲ್ಲ. ‘ಲಿಟರರಿ ಜರ್ನಲ್‌’ಗಳೆಂದು ಹೇಳಿಕೊಳ್ಳುವ ಪತ್ರಿಕೆಗಳಲ್ಲಿ ಇವು ಕಾಣಸಿಕ್ಕದರೂ ಅವು ಕೆಲವೇ ಕೆಲವು ಬರಹಗಾರರಿಗೆ ಸೀಮಿತವಾಗಿರುತ್ತವೆ. ಸಾಮಾನ್ಯವಾಗಿ ಒಬ್ಬನೇ ವ್ಯಕ್ತಿ ಮಾಲೀಕ, ಸಂಪಾದಕ, ಪ್ರಕಾಶಕ ಎಲ್ಲವೂ ಆಗಿರುವ ಇಂತಹ ಪತ್ರಿಕೆಗಳಲ್ಲಿ ಆ ವ್ಯಕ್ತಿಯ ಗೆಳೆಯರು ಮತ್ತು ಪರಿಚಯಸ್ಥರಿಗಷ್ಟೇ ಸ್ಥಾನವಿರುತ್ತದೆ.

ಸಂಪಾದಕರ ಹುಟ್ಟೂರಿನ ಕಡೆಯವರು ಅಥವಾ ಸೈದ್ಧಾಂತಿಕ ಬಂಧುಗಳ ಬರಹಗಳೇ ಮತ್ತೆ ಮತ್ತೆ ಕಾಣಿಸಿಕೊಂಡು ಕಿರಿಕಿರಿ ಉಂಟು ಮಾಡುತ್ತವೆ. ಈ ಬರಹಗಳು ಉತ್ತಮವಲ್ಲ ಎಂದು ನಾನು ಹೇಳುತ್ತಿಲ್ಲ. ಇವು ಮಾತ್ರ ಉತ್ತಮವೇ ಎಂಬುದಷ್ಟೇ ನನ್ನ ಪ್ರಶ್ನೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X