‘ಮಾಮೂಲು’ ಪತ್ರಕರ್ತರ ಮಾಮೂಲಿ ಪ್ರಸಂಗಗಳು
ಇಲ್ಲಿ ಪತ್ರಕರ್ತ(?)ರಿಬ್ಬರ ಪ್ರತಾಪಗಳಿವೆ! ಇಂತಹ ಪ್ರತಾಪಗಳು ದಿನನಿತ್ಯ ನಡೆಯುತ್ತಲೇ ಇರುತ್ತವೆ. ಆದರೆ ಅವುಗಳು ವರದಿಯಾಗುವುದಿಲ್ಲ! ಇಂಥ ಪತ್ರಕರ್ತರ ‘ಪೆನ್ನು’, ಗನ್ನಿಗಿಂತಲೂ ಹೆಚ್ಚು ಪರಿಣಾಮಕಾರಿ! ಜೊತೆಗೆ ಅಪಾಯಕಾರಿ!
- ಕೆ. ರಾಮಣ್ಣ, ಪತ್ರಕರ್ತ, ಮೈಸೂರು
[email protected]
ಹಾವೇರಿ ತಹಸೀಲ್ದಾರ್ ಕೃಷ್ಣರಾಯರು ಬಹಳ ಆಚಾರವಂತರು, ನಿಸ್ಪೃಹರು, ಜನಾನುರಾಗಿಗಳು. ಅವರ ಮೂರನೇ ಮಗಳ ಮದುವೆ ಸಾಧಾರಣ ಮಟ್ಟದಲ್ಲಿ ಜರುಗಿತು. ಅವರು ಆ ಊರಿನ ಪತ್ರಕರ್ತರಿಗೆಲ್ಲಾ ಆಹ್ವಾನ ನೀಡಿದ್ದರು. ಕೆಲವರು ಮದುವೆ ಆರತಕ್ಷತೆಗೆ ಬಂದು ವಧೂವರರಿಗೆ ನಮಸ್ಕರಿಸಿ ಫಲತಾಂಬೂಲ ಪಡೆದು ವಾಪಸಾದರು. ಅಲ್ಲಿನ ಪ್ರಮುಖ ಪತ್ರಿಕೆಯಾಂದರ ವರದಿಗಾರ ರಾಜ್(ಹೆಸರು ಬದಲಿಸಿದೆ) ಬಂದಿದ್ದರು. ಆತ ಸಂಜೆ ಆರತಕ್ಷತೆ ಸಮಾರಂಭಕ್ಕೆ ಪೂರ್ತಿ ಇದ್ದುದ್ದಲ್ಲದೆ ರಾತ್ರಿ ಭೋಜನ ಕೂಟದಲ್ಲಿಯೂ (ಆಹ್ವಾನವಿಲ್ಲದಿದ್ದರೂ) ಹಾಜರಿದ್ದರಲ್ಲದೆ ನಂತರ ನಡೆದ ಪೂರ್ತಿ ವೈಯುಕ್ತಿಕ ಕಾರ್ಯಕ್ರಮವಾದ ‘ಫಸ್ಟ್ನೈಟ್’ನ ಕೊಠಡಿಯ ಅಲಂಕಾರ ನೋಡಬೇಕೆಂದು ತನ್ನ ಅಭಿಲಾಷೆ ವ್ಯಕ್ತಪಡಿಸಿದರು.
ಆಚಾರವಂತ ಕೃಷ್ಣರಾಯರು ಅದಕ್ಕೆ ಸಮ್ಮತಿಸಲಿಲ್ಲ. ತಹಸೀಲ್ದಾರರು ಸರಕಾರಿ ಸಂಬಳ ಪಡೆಯುತ್ತಿದ್ದು ಅವರು ಮಾಡುವ ಕಾರ್ಯಕ್ರಮವೆಲ್ಲಾ ಸಾರ್ವಜನಿಕರಿಗೆ ಪಾರದರ್ಶಕವಾಗಿರಬೇಕೆಂದೂ, ತತ್ಕಾರಣ ತಾನು ಆ ಕೊಠಡಿ ನೋಡಬಯಸಿರುವುದಾಗಿಯೂ ತಿಳಿಸಿದ. ಏನೇ ಆದರೂ ಅದಕ್ಕೆ ಅವಕಾಶ ಕೊಡುವುದಿಲ್ಲವೆಂದು ರಾಯರೂ ಅವರ ಕೆಲವು ಸಂಬಂಧಿಕರೂ ಪಟ್ಟುಹಿಡಿದಿದ್ದರಿಂದ ಆತ ಕೋಪ-ತಾಪ ವ್ಯಕ್ತಪಡಿಸುತ್ತಾ ಮದುವೆ ಮನೆಯಿಂದ ಹೊರಟು ಹೋದ.
ಮುಂದಿನ ಕಥೆ ಕೇಳಿ : ತಾನು ಒಬ್ಬ ಪತ್ರಿಕಾ ವರದಿಗಾರನಾಗಿದ್ದು, ತನಗೆ ಈ ಘಟನೆಯಿಂದ ಅವಮಾನವಾಗಿದೆಯೆಂದೂ ಇದರಿಂದಾಗಿ ಪತ್ರಿಕಾ ಸ್ವಾತಂತ್ರ್ಯಹರಣವಾಗಿದೆಯೆಂದೂ ಹಾರಾಡಿದ. ನಂತರ ತನ್ನೂರಿನ ಪತ್ರಕರ್ತರ ಸಂಘಕ್ಕೂ ದೂರು ಕೊಟ್ಟ. ಹಲವು ದಿನಗಳಿಂದ ತಟಸ್ಥವಾಗಿದ್ದ ಈ ಸಂಘ ಹಠಾತ್ತನೆ ಈ ವಿಷಯ ಕೈಗೆತ್ತಿಕೊಂಡು ಪತ್ರಿಕಾ ಸ್ವಾತಂತ್ರ್ಯಹರಣಕ್ಕಾಗಿ ಖಂಡನಾನಿರ್ಣಯ ಮಾಡಿ ತಹಸೀಲ್ದಾರ್ ಕೃಷ್ಣರಾಯರ ಬಗ್ಗೆ ಕೂಡಲೇ ಸರ್ಕಾರ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿತು. ಕೆಲವು ಪತ್ರಕರ್ತರು ಪ್ರಭಾವಶಾಲಿಗಳಾಗಿದ್ದುದ್ದರಿಂದ ಸಚಿವರೊಬ್ಬರು ಅವರ ಒತ್ತಾಯಕ್ಕೆ ಮಣಿದು ಇನ್ನೇನು ನಿವೃತ್ತರಾಗಲಿದ್ದ ತಹಸೀಲ್ದಾರ್ ಕೃಷ್ಣರಾಯರನ್ನು ಬೇರೆಡೆಗೆ ವರ್ಗ ಮಾಡಿಸಿದರು. ಆ ಪತ್ರಕರ್ತ ತನಗೆ ನ್ಯಾಯಸಿಕ್ಕಿತೆಂದು ಹಿರಿಹಿರಿ ಹಿಗ್ಗಿದ.
ಪತ್ರಿಕಾ ಸ್ವಾತಂತ್ರಹರಣ!
ಬಹಳ ವರ್ಷಗಳ ಹಿಂದೆ ಬಳ್ಳಾರಿಯಲ್ಲಿ ಪ್ರಜಾನೀತಿ ಪತ್ರಿಕೆಯ ವರದಿಗಾರ ಮೂರ್ತಿ(ಹೆಸರು ಬದಲಾಯಿಸಿದೆ) ಫೆಡರಲ್ ಬ್ಯಾಂಕಿನಿಂದ ಏನೋ ಕಾರಣ ನಮೂದಿಸಿ ಅಲ್ಲಿನ 15 ಸಾವಿರ ರೂ. ಸಾಲ ಪಡೆದಿದ್ದ. ಸಾಲ ಪಡೆದು 27 ತಿಂಗಳಾದರೂ ಒಂದು ನಯಾ ಪೈಸೆಯನ್ನೂ ಬ್ಯಾಂಕಿಗೆ ಕಟ್ಟಿರಲಿಲ್ಲ. ಬ್ಯಾಂಕಿನವರು ಪದೇಪದೇ ಫೋನ್ ಮೂಲಕವೂ ರಿಜಿಸ್ಟರ್ಡ್ ಅಂಚೆ ಮೂಲಕವೂ ತಗಾದೆ ಮಾಡುತ್ತಲೇ ಇದ್ದರು.
ಈತ ಯಾವುದಕ್ಕೂ ಜಗ್ಗಿರಲಿಲ್ಲ. ಬ್ಯಾಂಕಿನವರು ವಸೂಲಿಗಾಗಿ ಒಂದಿಬ್ಬರನ್ನು ಮೂರ್ತಿಯವರ ಮನೆಗೆ ಕಳುಹಿಸಿದ್ದರು. ಅವರುಗಳೂ ಆತನ ಮನೆ ಬಾಗಿಲಿಗೆ 2-3 ಬಾರಿ ಹೋಗಿ ವಾಪಸಾಗಿದ್ದರು. ಒಮ್ಮೆ ಮೂರ್ತಿ ಸಿಕ್ಕಿದ. ಆತನಿಗೂ ವಸೂಲಿಗೆ ಬಂದಿದ್ದವರಿಗೂ ಮಾತು ನಡೆಯಿತು. ಮೂರ್ತಿ, ಸಾಲಕೊಟ್ಟವರು ಬ್ಯಾಂಕಿನವರು- ನೀವ್ಯಾಕ್ರಿ ಮನೆ ಬಳಿ ಬಂದು ಗಲಾಟೆ ಮಾಡುತ್ತೀರಿ? ಅವರು ವಸೂಲಿಗೆ ಕೋರ್ಟಿಗೆ ಹೋಗಲಿ. ಇನ್ನೊಂದು ಬಾರಿ ನೀವು ನನ್ನ ಮನೆ ಬಾಗಿಲಿಗೆ ಬಂದರೆ ನಾನು ಸುಮ್ಮನಿರುವುದಿಲ್ಲ. ಪೊಲೀಸರಿಗೆ ದೂರು ನೀಡಿ ನೀವು ನನ್ನ ಮೇಲೆ ಕೈ ಮಾಡಲು ಬಂದಿದ್ದರೆಂದು ತಿಳಿಸುತ್ತೇನೆ - ಎಂದು ಗದರಿಸಿದ.
ವಸಲಿಗೆ ಬಂದಿದ್ದವರು ಹೆದರಿ ವಾಪಸಾದರು. ಮೂರ್ತಿ ಸುಮ್ಮನಾಗಲಿಲ್ಲ. ಅಲ್ಲಿನ ಪತ್ರಕರ್ತರ ಸಂಘಕ್ಕೆ ದೂರು ನೀಡಿ ಫೆಡರಲ್ ಬ್ಯಾಂಕಿನವರು ಸಾಲದ ವಸೂಲಿಗಾಗಿ ತನ್ನ ಮನೆಗೆ ರೌಡಿಗಳನ್ನು ಕಳುಹಿಸಿದ್ದರೆಂದೂ, ಇದರಿಂದಾಗಿ ಪತ್ರಿಕಾ ಸ್ವಾತಂತ್ರ್ಯಹರಣ ಮಾಡಿದಂತಾಗಿದೆಯೆಂದೂ ಹೇಳಿದ. ಸಂಘದಲ್ಲಿ ಈತನಿಗೆ ಬೆಂಬಲವಿದ್ದುದ್ದರಿಂದ ಈ ಪತ್ರಿಕಾ ಸ್ವಾತಂತ್ರ್ಯಹರಣದ ಕಾರ್ಯವನ್ನು ಖಂಡಿಸಿ ಸಂಘದವರು ಠರಾವು ಮಾಡಿದರಲ್ಲದೆ ಬ್ಯಾಂಕಿನ ಮೇಲೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಮೆರವಣಿಗೆ ಸಹ ನಡೆಸಿ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು. ಅಂದು ಜಿಲ್ಲಾಧಿಕಾರಿಯವರು ಕಾರ್ಯನಿಮಿತ್ತ ಬೇರೆ ಕಡೆ ಹೋಗಿದ್ದುದರಿಂದ ಅವರ ಸಹಾಯಕರೊಬ್ಬರು ಇವರ ದೂರನ್ನು ಸ್ವೀಕರಿಸಿದರು. ಜಿಲ್ಲಾಧಿಕಾರಿಗಳು ಊರಿನಲ್ಲೇ ಇದ್ದು, ಸ್ಥಳಕ್ಕೆ ಬಂದು ತಮ್ಮ ದೂರನ್ನು ಸ್ವೀಕರಿಸಿಲ್ಲವೆಂದು ಪತ್ರಕರ್ತರು ಹೌಹಾರಿದರು.
ಪೂರ್ಣ ವಿವರ ತಿಳಿಯದೇ ಇದ್ದ ಬೇರೆ ಊರಿನ ಹಲವಾರು ಪತ್ರಕರ್ತರ ಸಂಘದವರು ಪತ್ರಿಕಾ ಸ್ವಾತಂತ್ರ್ಯ ಹರಣವಾಯ್ತೆಂದೂ ಈ ಬಗ್ಗೆ ಸಂಬಂಧಪಟ್ಟವರ ಮೇಲೆ ಕ್ರಮಕೈಗೊಳ್ಳಬೇಕೆಂದೂ ಒತ್ತಾಯಿಸಿ ಠರಾವುಗಳನ್ನು ಅಂಗೀಕರಿಸಿ ಸರ್ಕಾರಕ್ಕೂ, ಕೆಲವು ಸಚಿವರುಗಳಿಗೂ ಪತ್ರ ಬರೆದರು. ಒಬ್ಬ ಸಚಿವರಂತೂ ಈ ಬಗ್ಗೆ ತೀವ್ರ ಆಸಕ್ತಿ ತೋರಿ ರಾಷ್ಟ್ರದ ನಾಲ್ಕನೇ ಅಂಗವಾದ ಪತ್ರಿಕಾ ಕ್ಷೇತ್ರಕ್ಕೆ ಇದು ತೀರಾ ಅವಮಾನಕರವಾದುದೆಂದೂ ಒಂದೆಡೆ ಭಾಷಣ ಮಾಡಿದರಲ್ಲದೆ ತಾವು ಈ ಬಗ್ಗೆ ಕ್ರಮಕೈಗೊಳ್ಳುವುದಾಗಿಯೂ ಹೇಳಿದರು.
ನಾಲ್ಕು ವರ್ಷಗಳುರುಳಿದರೂ ಮೂರ್ತಿಯವರ ಸಾಲದ ವಸೂಲಿ ಇನ್ನೂ ಆಗಿರಲಿಲ್ಲ. ಈ ವೇಳೆಗಾಗಲೇ ಬ್ಯಾಂಕಿನ ಮ್ಯಾನೇಜರ್ ಬೇರೆ ಊರಿಗೆ ವರ್ಗವಾದರಲ್ಲದೆ, ಜಿಲ್ಲಾಧಿಕಾರಿ ಸಹ ಬೇರೆಡೆಗೆ ವರ್ಗವಾದರು. ಅವರು ಈ ಊರಿನಲ್ಲಿ 4 ವರ್ಷಗಳಿಗೂ ಹೆಚ್ಚಿನ ಕಾಲ ಇದ್ದುದ್ದರಿಂದ ಈ ವರ್ಗಾವಣೆ ಸಾಮಾನ್ಯ ನೀತಿಯಂತೆ ನಡೆದಿತ್ತು. ಆದರೆ ಈ ಮೂರ್ತಿ ತನ್ನ ಪತ್ರಿಕೆಯಲ್ಲಿ ‘ಜಿಲ್ಲಾಧಿಕಾರಿ .....ರವರಿಗೆ ಎತ್ತಂಗಡಿ’ - ಎಂದು ಪ್ರಕಟಿಸಿ ತನ್ನ ಕೋಪ ಪ್ರದರ್ಶಿಸಿದ. ಬ್ಯಾಂಕಿನ ನೂತನ ಮ್ಯಾನೇಜರ್ ಅವರು ನನಗ್ಯಾಕೆ ಈ ‘ಉಸಾಬರಿ’ ಎಂದು ಸಾಲದ ವಸೂಲಿಗೆ ವಿರಾಮ ನೀಡಿ ಕುಳಿತಿದ್ದಾರೆ.
ಗಮನಿಸಿ :
For Journalists in the Making, Only : (India Only)












Click it and Unblock the Notifications