ಪೇಪರ್ ಪಾರಾಯಣ ಅಲ್ಲ ಪುರಾಣ!
ದುಡ್ಡು
ಕೊಟ್ಟು
ಪತ್ರಿಕೆ
ಓದೋರು,
ಪುಕಸಟ್ಟೆ
ಪತ್ರಿಕೆ
ಓದೋರು,
ಇಣುಕಿ
ನೋಡಿ
ಪತ್ರಿಕೆ
ಓದೋರು,
ಪತ್ರಿಕೆ
ಓದದಿದ್ದರೂ
ಕೈಯಲ್ಲಿಡಿದು
ಸುತ್ತಾಡೋರು
ನಮ್ಮ
ನಡುವೆ
ಇದ್ದಾರೆ.
ಅವರ
ಸುದ್ದಿ
ಬಿಡಿ,
ಈ
ಪತ್ರಿಕೆ
ಪುರಾಣ
ಓದಿ!
-
ಆರ್.ಶರ್ಮಾ,
ತಲವಾಟ
[email protected]
ಭೀಕರ ಅಪಘಾತದ ಸುದ್ದಿ ಓದುವಾಗ ಅಯ್ಯೋ...ಜತೆಗೆ ಛೆ..ಛೆ..ಛೇ ಎಂದು ತಮ್ಮಷ್ಟಕ್ಕೆ ಲೊಚಗುಟ್ಟಿ ಅಕಸ್ಮಾತ್ ಮತ್ಯಾರಾದರೂ ಪಕ್ಕದಲ್ಲಿದ್ದರೆ ಅವರ ಮಂಡೆಗೂ ತಮ್ಮ ಕಾಲಕೆಟ್ಟುಹೋಯಿತು ಎಂಬ ಅಭಿಪ್ರಾಯವನ್ನು ತಳ್ಳಿ, ಕೊನೆಯ ಪುಟದಲ್ಲಿ ಸೋತ ಕ್ರಿಕೇಟಿಗರ ಬಗ್ಗೆ ನಮ್ಮವರ ಹಣೆ ಬರಹವೇ ಇಷ್ಟು ಎಂದು ತಲೆಕೆಡಿಸಿಕೊಂಡು, ಗೆದ್ದ ಸುದ್ದಿಯಿದ್ದರೆ ನಾನು ಮೊದಲೇ ಹೇಳಿದ್ದೆ ಎಂದು ಇವರು ಹೇಳಿದ್ದಕ್ಕೆ ಅವರು ಗೆದ್ದರೇನೋ ಎನ್ನುವ ಮುಖಭಾವ, ಮಧ್ಯ ಪುಟಕ್ಕೆ ಬಂದಾಗ ಇದಪ್ಪಾ ಸಂಪಾದಕೀಯ ಎನ್ನುವ ಮೆಚ್ಚುಗೆ, ವ್ಯಂಗ್ಯಚಿತ್ರ ನೋಡಿ ತಮ್ಮಷ್ಟಕ್ಕೆ ಒಂದು ಮುಗುಳ್ನಗೆ, ಹೀಗೆ ಚಿತ್ರವಿಚಿತ್ರವಾಗಿ ಅಭಿನಯಿಸುತ್ತಾ ಮಡಚಿ ಬದಿಗಿಡುವಷ್ಟರಲ್ಲಿ ಕೆಲವರಿಗೆ ಕಾಫಿ ಕುಡಿದದ್ದೇ ನೆನಪಿರುವುದಿಲ್ಲ. ಇನ್ನು ಕೆಲವರ ಕಾಫಿ ಆರಿ ತಣ್ಣಗಾಗಿಬಿಡುತ್ತದೆ.
ದಿನಪತ್ರಿಕೆಯ ಪಠಣದ ವಿಚಾರದಲ್ಲಿ ಒಬ್ಬೊಬ್ಬರದು ಒಂದೊಂದು ಸಮಯ, ಕಾಫಿ ಜತೆ ಪಠಣ ಹಲವರದಾದರೆ, ದೇಹಬಾಧೆ ತೀರಿಸಿಕೊಳ್ಳುವ ಜಾಗಕ್ಕೆ ಪೇಪರ್ ಒಯ್ದು ಓದುತ್ತಾ ಕೆಲಸ ಮುಗಿಸುವ ಕೆಲವರೂ ಇದ್ದಾರೆ. ಆಫೀಸಿಗೆ ಹೋಗುವ ದಾರಿಯಲ್ಲಿ ಮುಖಪುಟ ಓದುತ್ತಾ ಸಾಗುವವರಿಗೇನು ಕೊರತೆಯಿಲ್ಲ. ಬಸ್ಸಿನ ಮೇಲೆ ಕುಳಿತು ಪ್ರಯಾಣದ ತ್ರಾಸು ಕಳೆಯಲು ಪೇಪರ್ ಓದುವ ಸಮಯವನ್ನು ಮೀಸಲಿಟ್ಟರೆ, ಮತ್ತೆಕೆಲವರು ಪಕ್ಕದವರು ಪೇಪರ್ ಮಡಚುವುದನ್ನೇ ಕಾಯುತ್ತಾ ಸ್ವಲ್ಪ ಹೆಚ್ಚು ಕಮ್ಮಿ ಕಸಿದುಕೊಳ್ಳಲು ತಯಾರಾಗಿರುತ್ತಾರೆ.
ಇನ್ನು ಕೆಲವರು ಆಫೀಸಿನಲ್ಲಿ ಆರಂಭದ ಒಂದೂವರೆ ತಾಸು ಪೇಪರ್ ಓದುವ ಅಭ್ಯಾಸಕ್ಕಾಗಿ ಮೀಸಲಿಡುತ್ತಾರೆ. ಹಣಕೊಟ್ಟು ಓದುವವರು,ಬಿಟ್ಟಿ ಓದುವವರು,ಗ್ರಂಥಾಲಯದ ಮೊರೆಹೋಗುವವರು,ಅಂಗಡಿಯಲ್ಲಿ ಮಾರಾಟಕ್ಕಿಟ್ಟ ಪತ್ರಿಕೆಯ ಹಿಂದೆಮುಂದೆ ತಿರುವಿ ಅಷ್ಟಕ್ಕೆ ಸಮಾಧಾನ ಹೊಂದುವವರು, ಅಂಗಡಿಯಲ್ಲಿಯೇ ಎಲ್ಲಾ ಪತ್ರಿಕೆಗಳನ್ನು ಸಂಪೂರ್ಣ ಓದುವವರು ಇತ್ತೀಚೆಗೆ ಹೊಸತಾಗಿ ಸೇರ್ಪಡೆಯಾದ ಇಂಟರ್ನೆಟ್ ಓದುಗರು ಹೀಗೆ ಓದುಗರ ಪಟ್ಟಿ ಬೆಳೆಯುತ್ತಾ ಸಾಗುತ್ತದೆ.
ಪತ್ರಿಕೆಯನ್ನು ಓದುವ ಪರಿ ಇದಾದರೆ, ಪತ್ರಿಕೆಯಲ್ಲಿನ ವಿಷಯಗಳನ್ನು ಓದುವ ವಿಧಾನ ಇನ್ನೊಂದಿದೆ. ಬಹಳಷ್ಟು ಜನ ಮುಖಪುಟ ಮೊದಲು,ನಂತರ ಹಿಂದಿನ ಪುಟ ಇವಿಷ್ಟೆ ಸಾಕು ಅವರಿಗೆ. ಇನ್ನು ಕೆಲವರಿಗೆ ಕೊನೆಯ ಪುಟ ಮಾತ್ರ ಸಾಕು.ಮತ್ತಿಷ್ಟು ಜನರಿಗೆ ಸ್ಥಳೀಯ ಸುದ್ದಿಯಿರುವ 2 ಹಾಗು 3ನೇ ಪುಟವೂ ಬೇಕು. ಹಾಗೂ ಅಪರೂಕ್ಕೊಬ್ಬರಿಗೆ ಇಡೀ ಪತ್ರಿಕೆಯನ್ನೂ,ಪ್ರಿಂಟೆಡ್ ಎಂಡ ಪಬ್ಲಿಷರ್ಸ್ ತನಕವೂ ನಿತ್ಯ ಓದಲೇಬೇಕು. ಈ ರೀತಿ ಪೇಪರ್ ಓದುವ ಹುಚ್ಚು ಕೆಲವೊಮ್ಮೆ ಸ್ವಾರಸ್ಯಕರ ಪ್ರಸಂಗ ನಿರ್ಮಾಣಗೊಂಡು ಚರ್ಚೆಗೆ ಗ್ರಾಸವಾಗುತ್ತದೆ. ಅಂಥಹವರೊಬ್ಬರು ನಮ್ಮೂರಿನಲ್ಲಿದ್ದರು.
ಯಕ್ಷಗಾನ ಅವರ ಆಸಕ್ತಿದಾಯಕ ಕ್ಷೇತ್ರ,ಅಪರೂಪಕ್ಕೊಮ್ಮೆ ಜನರ ಒತ್ತಾಯದ ಮೇರೆಗೆ ಶ್ರಾದ್ಧದೂಟಕ್ಕೆ ಹೋಗುತ್ತಿದ್ದುದು ಉಂಟು. ಒಮ್ಮೆ ಆಪ್ತರೊಬ್ಬರು ಅವರನ್ನು ಶ್ರಾದ್ಧದೂಟದ ಭಟ್ಟರಾಗಿ ಆಹ್ವಾನಿಸಿದ್ದರು. ಶ್ರಾದ್ಧದೂಟದ ಪುರೋಹಿತರಾಗಿ ಹೋಗುವ ದಿನ ಪೇಪರ್ ಭಟ್ಟರ ಕೈಗೆ ಸಿಗುವಷ್ಟರಲ್ಲಿ ಮಧ್ಯಾಹ್ನ 1 ಗಂಟೆಯಾಗಿತ್ತು. ಪೇಪರ್ ಸಿಗದೆ ಹಪಹಪಿಸುತ್ತಿದ್ದ ಭಟ್ಟರು ಕೈಗೆ ಪೇಪರ್ ಸಿಕ್ಕೊಡನೆ ಅದರಲ್ಲಿ ಮಗ್ನರಾಗಿ ಇಹವನ್ನೇ ಮರೆತರು. ಅತ್ತ ತಿಥಿ ಮನೆಯಲ್ಲಿ ಭಟ್ಟರ ಬರುವಿಕೆಗಾಗಿ ಎರಡುವರೆವರೆಗೂ ಕಾದು ನಂತರ ಇವರನ್ನು ಹುಡುಕುತ್ತಾಬಂದರು.