‘ಜಗದ ಕವಿ, ಯುಗದ ಕವಿ, ವರಕವಿ ಬೇಂದ್ರೆ’ - ಒಂದು ಸ್ಮರಣೆ
ಬೇಂದ್ರೆ ನಮ್ಮನ್ನಗಲಿ 25 ವರ್ಷಗಳಾದವು(ಅಕ್ಟೋಬರ್ 26,1981). ಕರ್ನಾಟಕಕ್ಕೆ ಈಗ ಸುವರ್ಣ ವರ್ಷ. ಈ ವರ್ಷ ಬೇಂದ್ರೆಯವರಿಗೆ ರಾಷ್ಟ್ರ ಕವಿ ಪ್ರಶಸ್ತಿಯನ್ನು ಯಾಕೆ ಕೊಡಬಾರದು?
- ಡಾ।‘ಜೀವಿ’ ಕುಲಕರ್ಣಿ, ಮುಂಬಯಿ
[email protected]
‘‘ಹಿಂದಾಗಲಿಲ್ಲ, ಮುಂದಾಗಲಾರ, ಕವಿ ಕಾಳಿದಾಸ ನೀನು
ರಸವತಿಯು ನಿನ್ನ ಸರಸತಿಯು, ಸವಿಗೆ ತುಟಿಮುದ್ದು ಹಾಲು ಜೇನು’’
ಎಂದು ಬೇಂದ್ರೆಯವರು ಕಾಳಿದಾಸನ ಮೇಘದೂತ ಕನ್ನಡಿಸುವಾಗ ಬರೆದಿದ್ದಾರೆ. ಅದೇ ಮಾತನ್ನು ನಾ ಸ್ವಲ್ಪ ಬದಲಿಸಿ ಹೀಗೆ ಹೇಳಬಹುದು.
‘‘ಹಿಂದಾಗಲಿಲ್ಲ, ಮುಂದಾಗಲಾರ, ‘ಅಂಬಿಕಾತನಯ’ ನೀನು
ರಸವತಿಯು ನಿನ್ನ ಸರಸತಿಯು, ನಿನ್ನ ಕಾವ್ಯ ಹಾಲು ಜೇನು.’’
ಕವಿ ಬೇಂದ್ರೆಯವರು ಜಂಗಮರು, ಅವಧೂತರು, ಯೋಗ-ಭೋಗ ಸಮನ್ವಯಾಚಾರ್ಯರು. ಬೇಂದ್ರೆಯವರು ‘ನಾನು’ ಎಂಬ ಪದ್ಯದಲ್ಲಿ ಹೀಗೆ ಹೇಳುತ್ತಾರೆ :
‘‘ವಿಶ್ವ ಮಾತೆಯ ಗರ್ಭ ಕಮಲಜಾತ-ಪರಾಗ
ಪರಮಾಣು ಕೀರ್ತಿ ನಾನು ।
ಭೂಮಿತಾಯಿಯ ಮೈಯ ಹಿಡಿಮಣ್ಣ ಗುಡಿಗಟ್ಟಿ
ನಿಂತಂಥ ಮೂರ್ತಿ ನಾನು !
*
ಭರತಮಾತೆಯ ಕೋಟಿ ಕಾರ್ತಿಕೋತ್ಸವದಲ್ಲಿ
ಮಿನುಗುತಿಹ ಜ್ಯೋತಿ ನಾನು ।
ಕನ್ನಡದ ತಾಯಿ ತಾವರೆಯ ಪರಿಮಳವುಂಡು
ಬೀರುತಿಹ ಗಾಳಿ ನಾನು !
*
ನನ್ನ ತಾಯಿಯ ಹಾಲು ನೆತ್ತರವ ಕುಡಿದಂಥ
ಜೀವಂತ ಮಮತೆ ನಾನು ।
ಈ ಐದು ಐದೆಯರ ಪಂಚಪ್ರಾಣಗಳಾಗಿ
ಈ ಜೀವ ದೇಹನಿಹನು !
*
ಹೃದಯಾರವಿಂದದಲ್ಲಿರುವ ನಾರಾಯಣನೆ
ತಾನಾಗಿ ದತ್ತ ನರನು ।
ವಿಶ್ವದೊಳನುಡಿಯಾಗಿ ಕನ್ನಡಿಸುತಿಹನಿಲ್ಲಿ
ಅಂಬಿಕಾತನಯನಿವನು !
(‘ಗಂಗಾವತರಣ’)












Click it and Unblock the Notifications