ಮೈಸೂರಿನಲ್ಲಿ ಇನ್ನೊಂದು ಹಣತೆ ಬೆಳಗತೊಡಗಿದೆ
ಶತಾಯುಷಿ, ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್ ಸ್ಮಾರಕ ಸೇವಾ ಸಂಸ್ಥೆ ಕುರಿತು ಎರಡು ಮಾತು.
- ಮಾಗಲು ಮಲ್ಲಿಕಾರ್ಜುನ, ಮೈಸೂರು
[email protected]
ಸಾಮಾಜಿಕ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೇ ಮೀಸಲಾದ ಕೇಂದ್ರವೊಂದು ಇತ್ತೀಚೆಗೆ ಜನ್ಮತಾಳಿ ಗರಿಗೆದರಿ ಮೆಲ್ಲಮೆಲ್ಲನೆ ಹಾರಾಡತೊಡಗಿದೆ. ಅದೇ ಶತಾಯುಷಿ, ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್ ಸ್ಮಾರಕ ಸೇವಾ ಸಂಸ್ಥೆ.
2004 ರಲ್ಲಿ ಉದಯಿಸಿದ ಈ ಸೇವಾಸಂಸ್ಥೆಗೆ ಟಿ. ವಿ. ಗಿರೀಶ್ ಅವರು ಅಧ್ಯಕ್ಷರು. ಅವರು ಕರ್ಣಾಟಕ ಬ್ಯಾಂಕ್ನ ಮಾಜಿ ಅಧಿಕಾರಿಗಳು; ಖ್ಯಾತ ಕವಿ ಗೋಪಾಲ ಕೃಷ್ಣ ಅಡಿಗರ ಸಹೋದ್ಯೋಗಿಯಾಗಿ, ಉಡುಪಿಯ ಪೂರ್ಣಪ್ರಜ್ಞ ಸಂಜೆ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದವರು. ಈಗ ಹವ್ಯಾಸಿ ಪತ್ರಕರ್ತರು. ಇಳಿವಯಸ್ಸಿನಲ್ಲೂ ಪಾದರಸದಂತೆ ಚಟುವಟಿಕೆಯುಳ್ಳ ಗಿರೀಶ್ ಅವರೇ ಸಂಸ್ಥೆಯ ಜೀವನಾಡಿ.
ಮೈಸೂರಿನಲ್ಲಿ ಪ್ರವಾಸೋದ್ಯಮಿಯಾಗಿರುವ ಎಸ್. ಜೆ. ಅಶೋಕ ಅವರು ಸಂಸ್ಥೆಯ ಕಾರ್ಯದರ್ಶಿಗಳು. ಇವರ ಕಚೇರಿಯೇ ಈಗ ತಾತ್ಕಾಲಿಕವಾಗಿ ಸಂಸ್ಥೆಯ ಆಡಳಿತ ಕಛೇರಿಯೂ ಹೌದು. ಸಂಸ್ಥೆಯ ಸೇವಾ ಚಟುವಟಿಕೆಗಳಿಗೆ ಬಹುಜನರ ಬೆಂಬಲ ಅಯಾಚಿತವಾಗಿ ಹರಿದು ಬರುತ್ತಲೇ ಇದೆ. ಸಮಾನ ಮನಸ್ಕರ ಸಹಾಯ, ಸಹಕಾರಗಳನ್ನು ಸಮಯೋಚಿತವಾಗಿ, ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ಇರುವ ಸ್ವಯಂಸೇವಕರ ತಂಡವೇ ಸಂಸ್ಥೆಯ ಬೆನ್ನೆಲುಬಾಗಿದೆ.
ಪ್ರಖ್ಯಾತ ಹಿರಿಯ ಲೇಖಕರು, ಕಲಾವಿದರೂ, ಕೆನರಾ ಬ್ಯಾಂಕ್ನ ನಿವೃತ್ತ ಸಹಾಯಕ ಪ್ರಧಾನ ಪ್ರಬಂಧಕರೂ ಆಗಿದ್ದ ಎಚ್. ಜಿ. ಸೋಮಶೇಖರ ರಾವ್; ರಂಗಭೂಮಿ, ಚಲನಚಿತ್ರ, ಸಾಧನೆ, ನಾಕುತಂತಿ ಮೆಗಾ ಧಾರಾವಾಹಿಗಳ ಖ್ಯಾತ ಕಿರುತೆರೆ ನಿರ್ದೇಶಕರೂ ಆದ ಬಿ. ಸುರೇಶ; ಬಿ. ಕೆ. ಸತ್ಯನಾರಾಯಣ, ಎಸ್. ವೆಂಕಟೇಶ, ಡಿ.ಎಸ್.ಎಸ್. ಗಣೇಶ್, ಬೆಂಗಳೂರಿನ ಮೆಸರ್ಸ್ ಸೂರ್ಯ ಎಂಟರ್ಪ್ರೈಸಸ್, ಎನ್. ಜಿ. ಅಶ್ವಿನ್ ಮುಂತಾದವರ ಶ್ರೀರಕ್ಷೆ ಸಂಸ್ಥೆಗೆ ಇದೆ. ಶ್ರೀ ಯೋಗಾನರಸಿಂಹ ದೇವಸ್ಥಾನ ಪ್ರತಿಷ್ಠಾನದ ಪ್ರೊ. ಭಾಷ್ಯಂ ಸ್ವಾಮಿಗಳ ಶುಭಾಶೀರ್ವಾದವೂ ಇವರ ಮೇಲಿದೆ.
ಈ ಸೇವಾ ಸಂಸ್ಥೆಯು ಯಶಸ್ವಿಯಾಗಿ ನೇರವೇರಿಸಿರುವ ಕಾರ್ಯಕ್ರಮಗಳ ವಿಹಂಗಮ ನೋಟ :
ಸಾಂಸ್ಕೃತಿಕ ಸಂಘಗಳ ತೌರೂರಾದ ಮೈಸೂರಿನಲ್ಲಿ ಇತ್ತೀಚೆಗೆ ತಾನೇ ಪ್ರಾರಂಭವಾಗಿದ್ದರೂ ಹಲವಾರು ಉತ್ತಮ ಕಾರ್ಯಕ್ರಮಗಳನ್ನ ನಡೆಸಿದ ಹೆಮ್ಮೆ ಈ ನಿಟ್ಟೂರು ಸ್ಮಾರಕ ಸೇವಾ ಸಂಸ್ಥೆಯ ಹೆಗ್ಗಳಿಕೆ.
ಆಗಸ್ಟ್ 24, 2ಂಂ5 ರಂದು ನಿಟ್ಟೂರು ರವರ 103ನೇ ಜನ್ಮ ದಿನಾಚರಣೆಯನ್ನು ಮೈಸೂರಿನ ಶ್ರೀ ಗುರು ರೆಸಿಡೆನ್ಸಿ ಸಭಾಂಗಣದಲ್ಲಿ ಸಂಸ್ಥೆ ಆಚರಿಸಿತು. ಪಿ. ಡಿ. ಜಿ. ಶ್ರೀಗುರು ರವರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮೇಯರ್ ಆರ್. ಜಿ. ನರಸಿಂಹ ಅಯ್ಯಂಗಾರ್ ರವರು ಉದ್ಘಾಟನೆ ಮಾಡಿದರು. ಕಾವ್ಯಾಲಯ ಪ್ರಕಾಶನದ ಸಿ. ಕೆ. ಕೃಷ್ಣಮೂರ್ತಿ, ವಾರ್ತಾ ಇಲಾಖೆ ಹಿರಿಯ ಅಧಿಕಾರಿ ಎ. ಎನ್. ಪ್ರಕಾಶ್ ಮತ್ತು ಹಿರಿಯ ಪತ್ರಕರ್ತ ಕೃಷ್ಣವಟ್ಟಂ ಅವರುಗಳು ಮುಖ್ಯ ಅತಿಥಿಗಳಾಗಿ ಬಂದಿದ್ದರು.
ಸೆಪ್ಟಂಬರ್ 05 ರಂದು ಶಿಕ್ಷಕರ ದಿನಾಚರಣೆಯನ್ನ ಸಂಸ್ಥೆಯ ಆವರಣದಲ್ಲಿ ಆಚರಿಸಿದಾಗ ವಿಶೇಷ ಅತಿಥಿಗಳಾಗಿ ಮಹಾವೀರ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಕಾರ್ಯದರ್ಶಿಗಳಾದ ಡಾ।। ಎಂ. ದೇಜಮ್ಮ ಅವರು ಬಂದಿದ್ದರು.
ರಾಜ್ಯೋತ್ಸವ ಸುವರ್ಣ ಕರ್ನಾಟಕ ದಿನಾಚರಣೆಯನ್ನು ನವಂಬರ್ 20 ರಂದು ಸಂಸ್ಥೆ ನಗರದ ಪತ್ರಕರ್ತರ ಭವನದಲ್ಲಿ ಆಚರಿಸಿತು. ಸಿ. ಕೆ. ಕೆ. ಮೂರ್ತಿ, ರಾಜಶೇಖರ ಕದಂಬ, ಮಂಡ್ಯ ರಮೇಶ್ ಮತ್ತು ಇತರರು ಅತಿಥಿಗಳಾಗಿ ಬಂದಿದ್ದರು.
ಮೈಸೂರು ವಿಜಯನಗರದಲ್ಲಿರುವ ಶ್ರೀಯೋಗಾನರಸಿಂಹಸ್ವಾಮಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರಾದ ಪ್ರೊ। ಭಾಷ್ಯಂ ಸ್ವಾಮಿಯವರಿಗೆ ‘ಗುರುವಂದನಾ’ ಕಾರ್ಯಕ್ರಮವನ್ನು ಮಾರ್ಚ್ 15, 2006 ರಂದು ಹಮ್ಮಿಕೊಳ್ಳಲಾಗಿತ್ತು. ಶ್ರೀ ಯೋಗಾನರಸಿಂಹ ಸ್ವಾಮಿ ದೇವಸ್ಥಾನ ಸನ್ನಿಧಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ
ನಟರತ್ನಾಕರ ಡಾ।। ಮಾಸ್ಟರ್ ಹಿರಣಯ್ಯನವರು ‘ಗುರುವಂದನೆ ಸಮರ್ಪಣೆ’ ಮಾಡಿದರು. ಚೇತನ್ ರಾಮರಾವ್ ಅವರು ಉದ್ಘಾಟಿಸಿದರು. ಡಾ।। ಎಸ್. ಪಿ. ಯೋಗಣ್ಣ ಅವರ ಅಧ್ಯಕ್ಷತೆಯ ಈ ಸಮಾರಂಭಕ್ಕೆ ಡಾ।। ಎಂ. ದೇಜಮ್ಮ, ಪ್ರೊ. ಎಚ್. ಎಸ್. ಗೋಪಿನಾಥ್ ಮತ್ತು ಪತ್ರಕರ್ತ ಈಚನೂರು ಕುಮಾರ್ ಅವರುಗಳು ಅತಿಥಿಗಳಾಗಿ ಬಂದಿದ್ದರು.
ಮೇ 01 ರಂದು ಸಂಸ್ಥೆ ತನ್ನ ಕಚೇರಿಯ ಆವರಣದಲ್ಲಿ ನಿಟ್ಟೂರು ಶ್ರೀನಿವಾಸರಾವ್ ಸ್ಮಾರಕ ‘‘ಉಚಿತ ವಾಚನಾಲಯ’’ ಪ್ರಾರಂಭಿಸಿತು. ಈ ವಾಚನಾಲಯವನ್ನು ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಕರ್ಣಾಟಕ ಬ್ಯಾಂಕ್ ಬಿ. ಎಸ್. ಪ್ರಭಾಕರ್ ಅವರು ಉದ್ಘಾಟಿಸಿದರು. ಪ್ರೊ. ಟಿ. ಆರ್. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು.
ಜುಲೈ 30, 2006ರ ಭಾನುವಾರ ಬೆಳಗ್ಗೆ ಮೈಸೂರಿನ ಝಾನ್ಸಿ ರಾಣಿ ಲಕ್ಷ್ಮೀಬಾಯಿ (ಜೆ.ಎಲ್.ಬಿ.) ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಈ ಸಂಸ್ಥೆಯ ಆಶ್ರಯದಲ್ಲಿ ‘‘ಪತ್ರಿಕೋದ್ಯಮ’’ ವಿಚಾರ ಸಂಕೀರಣ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಚಂದ್ರಶೇಖರ ಕುಕ್ಕಿಕಟ್ಟಿ, ಮಳಲಿ ನಟರಾಜ್ ಕುಮಾರ್, ಈಚನೂರು ಕುಮಾರ್, ಮಾಜಿ ಮೇಯರ್ಗಳಾದ ಆರ್. ಜಿ. ನರಸಿಂಹ ಐಯ್ಯಂಗಾರ್, ಟಿ. ಎಸ್. ರವಿಶಂಕರ್ ಮತ್ತು ಅಮೆರಿಕನ್ನಡದ ಸಂಪಾದಕಿ ನಾಗಲಕ್ಷ್ಮಿ ಹರಿಹರೇಶ್ವರ ಅವರು ಮುಖ್ಯ ಅತಿಥಿಗಳಾಗಿ ಬರುತ್ತಾರೆ. ಅಧ್ಯಕ್ಷತೆಯನ್ನು ಶಿಕಾರಿಪುರ ಹರಿಹರೇಶ್ವರ ಅವರು ವಹಿಸುತ್ತಾರೆ.
ಇಂತಹುದೇ ಸಾಂಸ್ಕೃತಿಕ ಸಮಾಜ ಸೇವಾ ಕಾರ್ಯಕ್ರಮಗಳನ್ನು ಅರ್ಥವತ್ತಾಗಿ ನಿರ್ವಹಿಸುತ್ತಾ ತನ್ನ ಧ್ಯೇಯೋದ್ದೇಶಗಳನ್ನು ಸಂಸ್ಥೆ ಈಡೇರಿಸಿಕೊಳ್ಳಲಿ -ಎಂದು ಮೈಸೂರಿನ ಜನತೆ ಹಾರೈಸುತ್ತಾರೆ.
**
ಸಂಪರ್ಕಕ್ಕೆ ಸಂಸ್ಥೆಯ ವಿಳಾಸ:
ಶತಾಯುಷಿ, ನ್ಯಾಯಮೂರ್ತಿ ಶ್ರೀ ನಿಟ್ಟೂರು ಶ್ರೀನಿವಾಸರಾವ್ ಸ್ಮಾರಕ ಸೇವಾ ಸಂಸ್ಥೆ,
ಕೇರಾಫ್ ಎಸ್. ಜಿ. ಅಶೋಕ,
ನಂ. 92/1ಎ, ಕೆ.ಆರ್.ಎಸ್. ಮುಖ್ಯರಸ್ತೆ,
ಗೋಕುಲ 1ನೇ ಹಂತ, ಮೈಸೂರು-570 002, ದೂರವಾಣಿ: 0821-2 513 823











Click it and Unblock the Notifications