ಕರ್ನಾಟಕದ ಸುವರ್ಣ ಪುಟಗಳು!
ಇತಿಹಾಸ-ಪರಂಪರೆಯ ಅರಿವು ಮೂಡಿದಾಗ, ನಾಡು-ನುಡಿ ಪ್ರೀತಿ ತನ್ನಷ್ಟಕ್ಕೆ ತಾನೇ ಚಿಗುರುತ್ತದೆ. ಈ ನಿಟ್ಟಿನಲ್ಲೊಂದು ವಿಶೇಷ ಲೇಖನ ನಿಮ್ಮ ಮುಂದಿದೆ.
- ಆನಂದ್.ಜಿ., ಬೆಂಗಳೂರು
[email protected]
ಕರ್ನಾಟಕ ರಾಜ್ಯ ಏಕೀಕರಣವಾಗಿ ಇದೇ ನವೆಂಬರ್ 1ಕ್ಕೆ ಐವತ್ತು ವರ್ಷಗಳಾದವು. ಈ ವರ್ಷವನ್ನು ನಾಡಿನಾದ್ಯಂತ ಸಡಗರ ಸಂಭ್ರಮಗಳಿಂದ ಆಚರಿಸಲಾಗುತ್ತಿದೆ. ಹೀಗೆ ಸಂಭ್ರಮಿಸಲು ಇರುವ ಕಾರಣಗಳನ್ನು ಅರಿಯಬೇಕೆಂದರೆ, ನಾವು ಇತಿಹಾಸದ ಪುಸ್ತಕಗಳತ್ತ ಹೊರಳಿ ನೋಡಬೇಕು.
ಕನ್ನಡಿಗರ ಚರಿತ್ರೆಯ ಪುಟಗಳಲ್ಲಿ ಬಂಗಾರದ ಅಕ್ಷರಗಳೇ ಕಾಣುವುದು. ಕನ್ನಡ ನಾಡಿನ ಇತಿಹಾಸ ಎರಡು ಸಾವಿರ ವರ್ಷಗಳಿಗೂ ಮಿಗಿಲಾದದ್ದು. ರಾಮಾಯಣದ ಧೀರ ಹನುಮ ಹುಟ್ಟಿದ ನಾಡು ನಮ್ಮದು. ಅಂದಿನ ಕಿಷ್ಕಿಂಧಾ ನಗರವೇ ಇಂದಿನ ಹಂಪೆ. ಮಹಾಭಾರತದಲ್ಲೂ ಕರ್ನಾಟಕದ ಉಲ್ಲೇಖವಿದೆ.
ಕನ್ನಡ ನಾಡು ಸಮೃದ್ಧವೂ, ಸಂಪದ್ಭರಿತವೂ ಆಗಿದ್ದು ವೈಭವದ ನೆನ್ನೆಗಳು ಕನ್ನಡಿಗರದ್ದಾಗಿತ್ತು. ಯಾವುದೇ ರಾಷ್ಟ್ರ ಉನ್ನತಿ ಸಾಧಿಸಿದೆ ಎನ್ನುವುದನ್ನು ಅಳೆಯುವ ಮಾನದಂಡಗಳನ್ನು ಅನುಸರಿಸಿಯೇ ಕನ್ನಡ ನಾಡಿನ ಇತಿಹಾಸವನ್ನು ನೋಡೋಣ.
- ಸೈನ್ಯಬಲ ಯಾವುದೇ ರಾಷ್ಟ್ರದ ಬೆನ್ನೆಲುಬು. ಕನ್ನಡ ಸಾಮ್ರಾಜ್ಯದ ಮೊಟ್ಟ ಮೊದಲ ರಾಜ, ಸ್ವಾಭಿಮಾನದ ಪ್ರತೀಕವಾದ ಕದಂಬ ವಂಶಜ ಮಯೂರವರ್ಮ.
- ಬಾದಾಮಿಯ ಚಾಲುಕ್ಯ ದೊರೆ ಇಮ್ಮಡಿ ಪುಲಿಕೇಶಿಯನ್ನು ದಕ್ಷಿಣಾಪಥೇಶ್ವರ ಎನ್ನುತ್ತಿದ್ದರು. ಅರವತ್ತು ಸಾವಿರ ಆನೆಗಳನ್ನು ಹೊಂದಿದ್ದ ಸೈನ್ಯ ಅವನದ್ದು. ಉತ್ತರದ ಹರ್ಷವರ್ಧನನನ್ನು ನರ್ಮದೆಯ ತಟದಲ್ಲಿ ಸೋಲಿಸಿ ಪರಮೇಶ್ವರ ಎನ್ನಿಸಿಕೊಂಡ ಅವನು.
- ರಾಷ್ಟ್ರಕೂಟರ ಮೂರನೆಯ ಗೋವಿಂದನ ಆಳ್ವಿಕೆ ಶ್ರೀಲಂಕದ ಅನುರಾಧಪುರದಿಂದ ಉತ್ತರ ಹಿಮಾಲಯದವರೆಗೆ, ವಾರಣಾಸಿಯಿಂದ ಗುಜರಾತಿನ ಭುಜ್ನವರೆಗೆ ಹಬ್ಬಿತ್ತು.
- ಪ್ರಜಾಹಿತಕ್ಕಾಗಿ ತನ್ನ ಕೈಬೆರಳನ್ನೇ ಕೊಲ್ಲೂರು ಮೂಕಾಂಬಿಕೆಗೆ ಅರ್ಪಿಸಿದ ಜನಾನುರಾಗಿ ರಾಜ ನೃಪತುಂಗ ನಮ್ಮವನು.
- ವಿಜಯನಗರದ ಶ್ರೀಕೃಷ್ಣದೇವರಾಯನ ಸೈನ್ಯ ಹದಿನೇಳು ಲಕ್ಷ ಸೈನಿಕರಿಂದ ಕೂಡಿತ್ತು. ಸಂಪತ್ತಿನ ದೃಷ್ಟಿಯಿಂದ ನೋಡಿದರೆ, ನಾವೆಲ್ಲಾ ತಿಳಿದಂತೆ ವಿಜಯನಗರ ಸಾಮ್ರಾಜ್ಯದ ಬೀದಿ ಬೀದಿಗಳಲ್ಲಿ ಮುತ್ತು ರತ್ನಗಳನ್ನು ಸೇರಿನಲ್ಲಿ ಅಳೆದು ಕೊಡುತ್ತಿದ್ದ ಐತಿಹ್ಯ ನಮ್ಮದು.
- ಅಧ್ಯಾತ್ಮದ ಬೆಳಕನ್ನು ಇಡಿಯ ಭಾರತಕ್ಕೆ ಬೆಳಗಿದ ಅನೇಕ ಪುಣ್ಯಪುರುಷರ ಕಾರ್ಯಕ್ಷೇತ್ರ ಕರ್ನಾಟಕ. ಶಂಕರರು, ರಾಮಾನುಜರು, ಮಧ್ವಾಚಾರ್ಯರು, ಬಸವಣ್ಣನಂತಹ ದಿವ್ಯಪುರುಷರು ನಮ್ಮವರು. ಜೈನಧರ್ಮ ಉನ್ನತಿ ಕಂಡದ್ದೂ ಈ ನೆಲದಲ್ಲೇ.
- ಜ್ಞಾನ - ವಿಜ್ಞಾನ - ತಂತ್ರಜ್ಞಾನಗಳ ಉತ್ತುಂಗಕ್ಕೆ ಸಾಕ್ಷಿ ಬೇಲೂರು, ಐಹೊಳೆ, ಪಟ್ಟದಕಲ್ಲು, ಅಜಂತ, ಎಲ್ಲೋರಗಳ ದೇಗುಲಗಳ ವಿನ್ಯಾಸಗಳಲ್ಲಿವೆ.
- ಹಂಪೆಯ ವಿರೂಪಾಕ್ಷ ದೇಗುಲದ ರಂಧ್ರಬಿಂಬ ತಂತ್ರಜ್ಞಾನ, ಕಲ್ಲಿನ ರಥ, ಸಂಗೀತ ಸ್ವರಗಳನ್ನು ಹೊರಡಿಸುವ ಕಂಬಗಳ ವಿಜಯ ವಿಠ್ಠಲ ದೇವಸ್ಥಾನ, ಹವಾನಿಯಂತ್ರಣ ವ್ಯವಸ್ಥೆ ಹೊಂದಿರುವ ಅಂತಃಪುರ, ನೀರಾವರಿ ಕಾಲುವೆಗಳು ತಂತ್ರಜ್ಞಾನದ ಉತ್ತುಂಗಕ್ಕೆ ಸಾಕ್ಷಿಯಾಗಿವೆ.
- ಭಾರತದಲ್ಲಿ ಮೊಟ್ಟಮೊದಲ ಕ್ಷಿಪಣಿ ತಯಾರಿಸಿದವನು ಶ್ರೀರಂಗಪಟ್ಟಣದ ದೊರೆ ಟಿಪ್ಪು ಸುಲ್ತಾನ್. ಕನ್ನಡಿಗರು ಸಾಗರೋತ್ತರ ವ್ಯಾಪಾರದಲ್ಲೂ ಮುಂದಿದ್ದರು. ಅಂದು ಇರಾಣ, ಈಜಿಪ್ಟ್ ದೇಶಗಳೂ ಸೇರಿದಂತೆ ಅನೇಕ ದೇಶಗಳೊಡನೆ ವ್ಯಾಪಾರ ವಹಿವಾಟು ಹೊಂದಿದ್ದರು. ಟಾಲೆಮಿ, ಹ್ಯು-ಯೆನ್-ತ್ಸಾಂಗ್, ಅಬ್ದುಲ್ ರಜಾಕ್ನಂತಹ ಅನೇಕ ವಿದೇಶಿ ಯಾತ್ರಿಕರು ಈ ಬಗ್ಗೆ ಪ್ರವಾಸ ಕಥನಗಳಲ್ಲಿ ಬರೆದಿದ್ದಾರೆ.
- ಕನ್ನಡ ಭಾಷೆ. ಎರಡು ಸಾವಿರಕ್ಕೂ ಮಿಗಿಲಾದ ಹಳಮೆಯನ್ನು ಹೊಂದಿರುವ ಕನ್ನಡ, ವಿಶ್ವ ಸಾಹಿತ್ಯದಲ್ಲಿ ಗೌರವ ಪಡೆದಿದೆ. ಪಂಪ, ರನ್ನ, ಪೊನ್ನ, ರಾಘವಾಂಕ, ಜನ್ನ, ಶ್ರೀ ವಿಜಯ, ಕೇಶಿರಾಜ, ಮುದ್ದಣ, ಸರ್ವಜ್ಞರಿಂದ ಬೇಂದ್ರೆ, ಕುವೆಂಪುರವರೆಗಿನ ಸಾಹಿತ್ಯ ಪರಂಪರೆ ಉತ್ಕೃಷ್ಟವಾಗಿದೆ. ದೇಶದ ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿ ವಿಜೇತರು ಕನ್ನಡಿಗರೇ ಆಗಿದ್ದಾರೆ.
- ವಿಶ್ವದ ಅತ್ಯಂತ ತಾರ್ಕಿಕವಾದ, ನಿಸ್ಸಂದಿಗ್ಧವಾದ ಲಿಪಿಯಿಂದ ಭೂಷಿತವಾದ ಕನ್ನಡ ಸುಂದರ ಮತ್ತು ಸಮೃದ್ಧವಾದ ಭಾಷೆಯಾಗಿದೆ. ಪ್ರಕೃತಿ ಮಾತೆ ತನ್ನ ವಿಶೇಷ ಕರುಣೆಯಿಂದ ಕನ್ನಡ ನಾಡನ್ನು ಹರಸಿದ್ದಾಳೆ. ವೈವಿಧ್ಯಪೂರ್ಣವೂ, ನಿತ್ಯಹರಿದ್ವರ್ಣದ ಕಾಡುಗಳು, ನಿತ್ಯ ಮೈದುಂಬಿ ಹರಿಯುವ ನದಿಗಳ ವರವನ್ನು ನೀಡಿರುವ ತಾಯಿ ಕನ್ನಡನಾಡನ್ನು ಪ್ರಕೃತಿ ವಿಕೋಪಗಳಿಂದ ಮುಕ್ತವಾಗಿಟ್ಟಿದ್ದಾಳೆ.











Click it and Unblock the Notifications