ಅಪೂರ್ವ ಎಂಬ ಅಪರೂಪದ ಕವಯಿತ್ರಿ!
ಕನ್ನಡದ ಬಾಲೆ ಬಿ.ವೈ.ಅಪೂರ್ವ ಅಯ್ಯಂಗಾರ್(ಭದ್ರಾವತಿ ಯೋಗೀಶ್ ಅಪೂರ್ವ ಅಯ್ಯಂಗಾರ್), ಕಾವ್ಯ ಬರೆಯಲು 5ನೇ ವಯಸ್ಸಿಗೇ ಪೆನ್ನನ್ನು ಕೈಗೆತ್ತಿಕೊಂಡರು. ನಂತರ ಅಲ್ಲಿಂದ ಇಲ್ಲಿಯತನಕ ಪೆನ್ನನ್ನು ಕೆಳಗಿಳಿಸಿಲ್ಲ ...
ಬಹುಭಾಷೆಗಳಲ್ಲಿ ಪದ್ಯಬರೆಯುವ ಈಕೆ, ಈಗಾಗಲೇ 2003ರ ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾಡ್ಸ್ನಲ್ಲಿ ಸೇರ್ಪಡೆಯಾಗಿದ್ದಾಳೆ. ಆ ಮೂಲಕ ಭಾರತದ ಅತ್ಯಂತ ಚಿಕ್ಕವಯಸ್ಸಿನ ಕವಯತ್ರಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾಳೆ. ಸಾಹಿತ್ಯಕ್ಕಾಗಿ ನೋಬೆಲ್ ಪ್ರಶಸ್ತಿ ಪಡೆಯಬೇಕು, ಮುಂದೊಂದು ದಿನ ಗಿನ್ನಿಸ್ ದಾಖಲೆ ಸೇರಬೇಕು ಎಂಬ ಕನಸೂ ಕೂಡ ಅಪೂರ್ವಳ ಕಂಗಳಲ್ಲಿದೆ.
ಭದ್ರಾವತಿಯ ಯೋಗೀಶ್ ಮತ್ತು ಚಿತ್ರದುರ್ಗದ ಸುಧಾ ದಂಪತಿಗಳ ಏಕೈಕ ಪುತ್ರಿ ಅರ್ಪೂರ್ವ. ಆಕೆ ಹುಟ್ಟಿದ್ದು ಚಿತ್ರದುರ್ಗದಲ್ಲಿ. ಯೋಗೇಶ್ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಅಪೂರ್ವ ಬೆಳೆದದ್ದು ಗೋವಾ ಮತ್ತು ಮದ್ರಾಸ್ನಲ್ಲಿ. 750ಕ್ಕೂ ಅಧಿಕ ಕವಿತೆಗಳನ್ನು ಬರೆದಿರುವ ಈಕೆ, ಮೂರ್ನಾಲ್ಕು ಭಾಷೆಗಳಲ್ಲಿ ಲೀಲಾಜಾಲವಾಗಿ ಮಾತನಾಡಬಲ್ಲಳು. ಮಾತೃಭಾಷೆ ತಮಿಳು, ಮನೆಮಾತು ಮಾತ್ರಕನ್ನಡವೇ.
ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಹೆಚ್ಚಾಗಿ ಕವಿತೆ ಬರೆದಿರುವ ಈಕೆ, ಸೃಜನಶೀಲತೆ ವಿಚಾರಕ್ಕೆ ಬಂದರೆ ಎರಡೂ ಭಾಷೆಗಳಲ್ಲಿ ಬರೆಯುವಾಗ ವಿಭಿನ್ನ ಸಾಧ್ಯತೆ ಇರುತ್ತದೆ. ಎರಡೂ ಭಾಷೆಗಳಲ್ಲಿ ವಿಭಿನ್ನ ಭಾವನೆಗಳನ್ನು ಕಾವ್ಯಕ್ಕಿಳಿಸಲು ಇಷ್ಟಪಡುತ್ತೇನೆ ಎನ್ನುತ್ತಾಳೆ.
ಕಾವ್ಯದ ಜೊತೆಗೆ ಹಾಡಬಹುದಾದ ಗೀತೆಗಳು, ಕಥೆ, ಪ್ರಬಂಧ ಮುಂತಾದ ಬರಹಗಳನ್ನು ಕೂಡ ಆಕೆ ಬರೆದಿದ್ದಾಳೆ. ಪ್ರೋತ್ಸಾಹ ದೊರೆತರೆ ಅವುಗಳನ್ನು ಪ್ರಕಟಿಸುವ, ಸಿಡಿ ರೂಪದಲ್ಲಿ ಹೊರತರುವ ಆಸಕ್ತಿಯೂ ಇದೆ.
ಕನ್ನಡದಲ್ಲೂ ಕೆಲವು ಪದ್ಯಗಳನ್ನು ಬರೆದದ್ದಿದೆ. ಅವುಗಳಿಗೆ ಇಂಗ್ಲಿಷ್ ಲಿಪಿ ಬಳಸಿದ್ದೇನೆ. ತೆಲುಗು ಮತ್ತು ಸಂಸ್ಕೃತದಲ್ಲೂ ಬರೆದಿದ್ದೇನೆ ಎನ್ನುವ ಅಪೂರ್ವ, ಒಟ್ಟು ನಾಲ್ಕು ಭಾಷೆಗಳಲ್ಲಿ ಬರೆಯುತ್ತಾಳೆ. ಪ್ರಸ್ತುತ ಹೈದರಾಬಾದಿನಲ್ಲಿ ನೆಲೆಸಿರುವ ಈಕೆ, ಸರೋಜನಿ ನಾಯ್ಡು ಹಾಗೆ ಶ್ರೇಷ್ಠ ಕವಯತ್ರಿಯಾಗಬೇಕು, ಶ್ರೇಷ್ಠ ಐಎಎಸ್ ಅಧಿಕಾರಿಯಾಗಬೇಕೆಂಬ ಗುರಿ ಹೊಂದಿದ್ದಾಳೆ.
ಸಾಧನೆಯ ಗರಿಗಳು : ಸಹಪಠ್ಯ-ಸಾಂಸ್ಕೃತಿಕ ಚಟುವಟಿಕೆಗಳಾದ ನೃತ್ಯ, ಚಿತ್ರಕಲೆ, ಕ್ರೀಡೆ ಮುಂತಾದವುಗಳಲ್ಲಿಯೂ ಅಪೂರ್ವಳದು ಎತ್ತಿದಕೈ. 10ನೇ ವಯಸ್ಸಿಗೇ ಅಪೂರ್ವಳ ಮೊದಲ ಕವನ ಸಂಕಲನ ಹೊರಬಂದಿತು. ಮುಂಬಯಿನ ಭಾರತೀಯ ವಿದ್ಯಾಭವನವು 1998-99ರಲ್ಲಿ ಈ ಕೃತಿ ಪ್ರಕಟಿಸಿದೆ. ‘ಶ್ರೀಸತ್ಯಪೂರ್ವ ಕಾವ್ಯ-ಮಗುವಿನಿಂದ 100 ಕವಿತೆಗಳು’ (Shri Satyapurva Poetry-100 poems by a child) ಎಂಬುದು ಕೃತಿಯ ಹೆಸರು. ಚಿಕ್ಕ ವಯಸ್ಸಿನಲ್ಲಿಯೇ ಅನೇಕ ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿರುವ ಅಪೂರ್ವಳ ಸಾಧನೆ ಅಪೂರ್ವವಾದುದೇ ಸರಿ.
ಜ್ಞಾನಪೀಠ ಪ್ರಶಸ್ತಿ ವಿಜೇತ ತೆಲುಗು ಕವಿ ಸಿ.ನಾರಾಯಣರೆಡ್ಡಿ ಈಕೆಯ ಪ್ರತಿಭೆಯನ್ನು ಮೆಚ್ಚಿ, ಪ್ರೋತ್ಸಾಹಿಸಿದ್ದಾರೆ. ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಚಂದ್ರಬಾಬು ನಾಯ್ಡು, ಮಕ್ಕಳ ದಿನಾಚರಣೆಯ ದಿನದಂದು ಅಪೂರ್ವಳನ್ನು ಅಭಿನಂದಿಸಿದ್ದಾರೆ.
ಆಕಾಶವಾಣಿ ಚೆನ್ನೈ ಮತ್ತು ಹೈದರಾಬಾದ್ನಲ್ಲಿ ತನ್ನದೇ ಕಾವ್ಯದ ಕುರಿತು ಆಕೆ ಕಾರ್ಯಕ್ರಮ ನಡೆಸಿಕೊಟ್ಟಿದ್ದಾಳೆ. ಇಂಟರ್ನ್ಯಾಷನಲ್ ಲೈಬ್ರರಿ ಆಫ್ ಪೊಯೆಟ್ಸ್(ಪೊಯೆಟ್ರಿಡಾಟ್ ಕಾಮ್) ಫ್ಲೋರಿಡಾ ಮತ್ತು ವಾಷಿಂಗ್ಟನ್ ಡಿಸಿಯಲ್ಲಿ ನಡೆಸಿದ, ಅಂತರಾಷ್ಟ್ರೀಯ ಕವಿಗಳ ಮೇಳ ಹಾಗೂ ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ್ದಾಳೆ. 2002ರಲ್ಲಿ ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಕವಯತ್ರಿಯರ ಸಮ್ಮೇಳನಕ್ಕೆ ಅಪೂರ್ವಳನ್ನು ಆಹ್ವಾನಿಸಲಾಗಿತ್ತು.
ಸಾಧಕಿಯ ಇನ್ನೊಂದು ಮುಖ : ತನ್ನ ಕವನ ಸಂಕಲನಗಳ ಮಾರಾಟದಿಂದ ಬಂದ ಹಣವನ್ನು ಗುಜರಾತ್ ಭೂಕಂಪ ಸಂತ್ರಸ್ತರ ನಿಧಿಗೆ ನೀಡಿದ ಅಪೂರ್ವ ತನ್ನಲ್ಲಿನ ಮತ್ತೊಂದು ಅಪೂರ್ವ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾಳೆ. ಅನಾಥ ಹಾಗೂ ಅಂಗವಿಕಲ ಮಕ್ಕಳ ನೆರವಿಗಾಗಿ ಮುಖ್ಯಮಂತ್ರಿ ನಿಧಿಗೂ ಆಕೆ ಹಣ ಕಳುಹಿಸಿದ್ದಾಳೆ.
ಅಪೂರ್ವ ಪೊಯೆಟ್ರಿ ಸೊಸೈಟಿ ಆಫ್ ಇಂಡಿಯಾದ ಅತ್ಯಂತ ಚಿಕ್ಕ ವಯಸ್ಸಿನ ಸದಸ್ಯೆ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಮಂತ್ರಿಯಾಗಿದ್ದಾಗ, ಅವರ 77ನೇ ಹುಟ್ಟುಹಬ್ಬದ ನಿಮಿತ್ತ ಕವಿತೆಯಾಂದನ್ನು ಬರೆದಿದ್ದಳು. ಅದಕ್ಕಾಗಿ ವಾಜಪೇಯಿಯವರಿಂದ ಪ್ರಶಂಸಾ ಪತ್ರ ಪಡೆದಿದ್ದಾಳೆ.
ಪ್ರಸ್ತುತ ಹೈದರಾಬಾದಿನಲ್ಲಿ ಬಿ.ಕಾಂ.,ಆನರ್ಸ್ ಎರಡನೇ ವರ್ಷದಲ್ಲಿ ಓದುತ್ತಿದ್ದಾಳೆ. ಅಪೂರ್ವಳ ಬರಹ ಮತ್ತು ಸಾಧನೆಗಳನ್ನು ಕುರಿತು, 6ಕ್ಕೂ ಹೆಚ್ಚು ಭಾಷೆಗಳ ವಿವಿಧ ಪತ್ರಿಕೆಗಳು ಬೆಳಕು ಚೆಲ್ಲಿವೆ. ಬನ್ನಿ... ಇಂತಹ ಪ್ರತಿಭೆ ಪರಮೋನ್ನತಿಗೇರಲು, ಆಕೆಯ ಕಾವ್ಯಾಧ್ಯಯನಕ್ಕೆ, ಪ್ರಕಟಣೆಗೆ-ಪ್ರತಿಭಾ ವಿಕಾಸಕ್ಕೆ ನೆರವಾಗೋಣ... ಆ ಮೂಲಕ ಕನ್ನಡದ ಪ್ರತಿಭೆಯಾಂದು ಕನ್ನಡವನ್ನೊಳಗೊಂಡು, ವಿಶ್ವ ಸಾರಸ್ವತ ಲೋಕದಲ್ಲಿ ಭಾಷಾತೀತವಾಗಿ ಬೆಳಗುವಂತೆ ಮಾಡೋಣ...











Click it and Unblock the Notifications