ವೃತ್ತಿ ಬದುಕಿಗೆ ಬನವಾಸಿ ಬಳಗದ ಮಾರ್ಗದರ್ಶನ
-
ಪ್ರವೀಣ.ಬಿ.ಎಸ್
ಮತ್ತು
ಅರ್ಚನ
ಭಾಗವತ್
[email protected]
ಈ ಹಿಂದೆ ನಡೆದ ಮೂರು ಕಾರ್ಯಕ್ರಮಗಳಲ್ಲಿ ಅಭ್ಯರ್ಥಿಗಳು ಬಯಸಿದ್ದ ಎಲ್ಲಾ ವಿಷಯಗಳನ್ನು ಬಳಸಿಕೊಳ್ಳಲಾಗಿತ್ತು. ಆದ ಕಾರಣ ಈ ಸಲ ಹೊಸದಾದ ವಿಭಿನ್ನ ಪ್ರಯೋಗವನ್ನು ಮಾಡಲು ಬನವಾಸಿ ಬಳಗ ತೀರ್ಮಾನಿಸಿತ್ತು. ಸುಮ್ಮನೆ ಕೇಳಿ ಹೋಗುವುದರ ಬದಲು, ಶಿಬಿರಾರ್ಥಿಗಳು ಪಾಲ್ಗೊಳ್ಳುವ ಹಾಗೆ ಕಾರ್ಯಕ್ರಮವನ್ನು ರೂಪಿಸಿದ್ದೆವು.
ಸರಿಯಾಗಿ 10.30ಗಂಟೆಗೆ ಕುಮಾರಿ ಅರ್ಚನ ಅವರ ಪ್ರಾರ್ಥನೆಯಿಂದ ಶುರುವಾದ ಕಾರ್ಯಕ್ರಮ, 3 ಕಲಾಪಗಳಲ್ಲಿ ನಡೆಯಿತು. 2005ನೇ ಇಸವಿಯಲ್ಲಿ ಪದವಿ ಪಡೆದ ಸುಮಾರು 50ಕ್ಕು ಹೆಚ್ಚಿನ ವಿದ್ಯಾರ್ಥಿಗಳು ಕಾರ್ಯಕ್ರಮದ ಲಾಭವನ್ನು ಪಡೆದರು.
ನಾವು ಗಮನಿಸಿದ ಹಾಗೆ -ನಮ್ಮ ಕನ್ನಡಿಗರು ತಾವಗಿಯೇ ಇತರರ ಜೊತೆ ಪರಿಚಯ ಮಾಡಿಕೊಳ್ಳುವುದಿಲ್ಲ, ತಾವಾಯಿತು ತಮ್ಮ ಕೆಲಸವಾಯಿತು ಅನ್ನುವ ಹಾಗೆ ಇರುತ್ತಾರೆ. ಇದನ್ನು ತಪ್ಪಿಸಿ, ಹೆಚ್ಚು ಹೆಚ್ಚು ಜನರೊಂದಿಗೆ ಬೆರೆಯಲು ನೆರವಾಗುವಂತೆ, ICE-BREAKING ಆಟವನ್ನು ಆಡಿಸಲಾಯಿತು. ಸಂಪರ್ಕಜಾಲದ ಕೊರತೆ ನಮ್ಮ ಕನ್ನಡಿಗರಲ್ಲಿ ಎದ್ದು ಕಾಣುತ್ತದೆ, ಇದನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯಕ್ರಮ ನಡೆಸಿದೆವು. ಇಲ್ಲಿ ವಿಧ್ಯಾರ್ಥಿಗಳು ಹೊಸಬರನ್ನು ಪರಿಚಯ ಮಾಡಿಕೊಂಡು, ಚರ್ಚೆ ಮಾಡಿ ಅವರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುವ ಒಂದು ಅಣಕು ಆಟ ಬಹಳ ಯಶಸ್ವಿಯಾಯಿತು.
ಬಹಳಷ್ಟೂ ವಿಧ್ಯಾರ್ಥಿಗಳಿಗೆ ITES ಬಗ್ಗೆ ಒಂದು ತಪ್ಪು ಅಭಿಪ್ರಾಯವಿದೆ, ಇದನ್ನು ಆಯ್ಕೆ ಮಾಡಿದರೆ ಅವರ ವ್ರತ್ತಿಜೀವನಕ್ಕೆ ಹಾನಿಕರವಾಗಬಹುದು ಎಂದು ಅವರ ಅಭಿಪ್ರಾಯ, ಅದರೆ ಸುರೇಶ್ ಅವರು ಇದರ ಬಗ್ಗೆ ಅದ್ಭುತವಾಗಿ ತಿಳಿಸಿಕೊಟ್ಟರು. ಅಲ್ಲದೇ ತಪ್ಪು ಅಭಿಪ್ರಾಯಗಳನ್ನು ಹೊಗಲಾಡಿಸಿದರು.
ಇದು ಕೇವಲ ಗ್ರಾಹಕ ಸೇವೆಗಳಿಗೆ ಮೀಸಲಾಗಿಲ್ಲ ಎಂಬ ಅಂಶವನ್ನು ತಿಳಿಸಿಕೊಟ್ಟ ಸುರೇಶ್, ಈ ಕ್ಷೇತ್ರದಲ್ಲಿ ಇರುವ ತಾಂತ್ರಿಕ ಅವಕಾಶಗಳ ಬಗ್ಗೆ ಮಾಹಿತಿ ಕೊಟ್ಟರು. ಈ ಕ್ಷೇತ್ರಕ್ಕೆ ಬಂದು ವಿಫುಲ ಅವಕಾಶಗಳನ್ನು ಬಳಸಿಕೊಂಡು, ವೃತ್ತಿಜೀವನದ ಮೆಟ್ಟಿಲನ್ನು ಏರುವ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಇಂದು ಯಾವುದೆ IT ಕ್ಷೇತ್ರದಲ್ಲಿ Group discussion ಬಹಳ ಪ್ರಾಮುಖ್ಯತೆ ಪಡೆದಿದೆ. ಈ ನಿಟ್ಟಿನಲ್ಲಿ , ಗುಂಪು ಚರ್ಚೆಯನ್ನು ಆಯೋಜಿಸಲಾಗಿತ್ತು. ಎಲ್ಲರೊಡನೆ ಚರ್ಚಿಸುವ ಮೂಲಕ ತಮ್ಮಲ್ಲಿನ ಸ್ಟೇಜ್ ಫಿಯರ್ ತೊಲಗಿಸಲು ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ನೆರವಾಗಿರಬಹುದು. ‘ಐ.ಟಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಮೀಸಲು’ ಮತ್ತು ‘ ಸೌರವ್ ಗಂಗೂಲಿ ಭಾರತ ತಂಡಕ್ಕೆ ಬೇಕೆ?’ ಈ ವಿಷಯಗಳ ಮೇಲೆ ಸುಮಾರು 20 ಮಂದಿ ಕಾರ್ಯಕ್ರಮದಲ್ಲಿ ಚರ್ಚಿಸಿದರು. ಚರ್ಚೆಯ ನಂತರ ಅವರು ಮಾಡಿದ ತಪ್ಪುಗಳನ್ನು ತೋರಿಸಿ, ಹೇಗೆ ತಿದ್ದಿಕೊಳ್ಳಬೇಕು ಎಂದು ಹೇಳಿಕೊಡಲಾಯಿತು.
ಅಲ್ಲದೇ ಇವರ ಅನುಕೂಲಕ್ಕೆ ಬರಲಿ ಎಂದು ನಮ್ಮ ಬಳಗವು ಸಿದ್ದ ಪಡಿಸಿದ್ದ, 4 ಪುಟಗಳ ಲೇಖನವನ್ನು ಎಲ್ಲರಿಗೂ ಹಂಚಲಾಯಿತು.
ನಮಗೆ ಪಠ್ಯದಲ್ಲಿ ಹೇಳಿಕೊಡುವ ಅನೇಕ ಪಾಠಗಳು ಇಂದು ಅಪ್ರಸ್ತುತ, ಇಂದಿನ ಜಗತ್ತಿನಲ್ಲಿ ಸ್ಪರ್ಧಾತ್ಮಕ ಯುಗದಲ್ಲಿ ಯಾವ ಹೊಸ ತಂತ್ರಜ್ಞಾನಗಳನ್ನು ಕಲಿಯಬೇಕು ಎಂದು ಮಧ್ಯಾಹ್ನದ ಕಲಾಪದಲ್ಲಿ ಸಂಪಿಗೆ ಶ್ರೀನಿವಾಸ್ ಅವರು ಉತ್ತಮ ಮಾಹಿತಿಯನ್ನು ಒದಗಿಸಿದರು.
ಕಳೆದ ಬಾರಿ ಹೆಚ್ಚು ಪ್ರಶಂಸೆಗೆ ಒಳಗಾಗಿದ್ದ ರೂಪ ಶ್ರೀಧರ್ ಅವರ ವ್ಯಕ್ತಿ-ವಿಕಾಸನ ಬೆಳವಣಿಗೆ ಕಾರ್ಯಕ್ರಮ 2 ಗಂಟೆಗಳ ಕಾಲ ನಡೆಯಿತು. ಹಿಂದಿನ ಕಾರ್ಯಕ್ರಮಗಳ ಫಲವೋ ಎಂಬಂತೆ, ನಿರ್ಭಯದಿಂದ ಅನೇಕ ಅಭ್ಯರ್ಥಿಗಳು ಪ್ರಶ್ನೆಗಳನ್ನು ಕೇಳಿ ತಮ್ಮ ಸಂದೇಹಗಳನ್ನು ನಿವಾರಿಸಿಕೊಂಡರು.
Java, OOPS, Comp Networks, OS, C++, CU ಗಳ ಮೇಲೆ ಆಧಾರಿತ ತಾಂತ್ರಿಕ ಸಂದರ್ಶನದ ಕಾರ್ಯಕ್ರಮವನ್ನು 4-5 ಅಭ್ಯರ್ಥಿಗಳ ಮೇಲೆ ಪ್ರಾಯೋಗಿಕವಾಗಿ ನಡೆಸಿ, ಯಾವ ರೀತಿ ಪ್ರಶ್ನೆಗಳಿಗೆ ಯಾವ ರೀತಿ ಉತ್ತರಗಳನ್ನು ಕೊಡಬೇಕು ಎಂದು ತಿಳಿಸಿಕೊಡಲಾಯಿತು. ಕುಮಾರಿ ಸೌಮ್ಯ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದವರಿಗೆ ವಂದಿಸುತ್ತ, ಕಾರ್ಯಕ್ರಮಕ್ಕೆ ತೆರೆ ಎಳೆದರು.
ಮುಂದಿನ ಕಾರ್ಯಕ್ರಮಗಳನ್ನು ಕರ್ನಾಟಕದ ಇತರ ಭಾಗಗಳಿಗೂ ವಿಸ್ತರಿಸಿ, ಅಲ್ಲಿರುವ ಪ್ರತಿಬೆಗಳಿಗೆ ನಮ್ಮ ಕೈಲಾದ ಸಹಾಯವನ್ನು ಮಾಡಲು ತಿರ್ಮಾನಿಸಿದ್ದೇವೆ. ಮುಂದಿನ ಕಾರ್ಯಕ್ರಮ ಮೈಸೂರಿನಲ್ಲಿ ನಡೆಯುತ್ತದೆ. ಹೀಗೆ ಕರ್ನಾಟಕದ ಮೂಲೆಮೂಲೆಗೂ ನಮ್ಮ ಕಾರ್ಯಕ್ರಮದ ಸುವಾಸನೆಯನ್ನು ಹಂಚಲು ನಮಗೆ ಓದುಗ ಪ್ರಭುಗಳ ಸಹಾಯಬೇಕು. ನೀವು ನಿಮ್ಮ ಊರಿನಲ್ಲಿ ಓದಿದ ಶಾಲಾ-ಕಾಲೇಜುಗಳಲ್ಲಿ ಈ ಕಾರ್ಯಕ್ರಮವನ್ನು ನಡೆಸಲು ಬಯಸಿದರೆ ನಮ್ಮನ್ನು ಸಂಪರ್ಕಿಸಿ.