ಸಾಮಾಜಿಕ ಕ್ರಾಂತಿಯ ಹರಿಕಾರ, ವಿಶ್ವಗುರು
- ಧರಣೇಶ ಕರ್ಜಗಿ
ವಿಜಾಪುರ ಜಿಲ್ಲೆಯಲ್ಲಿ 12ನೇ ಶತಮಾನದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಬಸವಣ್ಣನವರು ಪುರೋಹಿತ-ಶಾಹಿಯ ವಿರುದ್ಧ ಬಂಡೆದ್ದರು. ಜಾತಿ, ಮತ, ಸಂಪ್ರದಾಯಕ್ಕೆ ತಿಲಾಂಜಲಿ ನೀಡಿ ಕೂಡಲ ಸಂಗಮನ ಆಶ್ರಯದಲ್ಲಿ ಅಧ್ಯಯನ ಮಾಡಿ, ಕಲ್ಯಾಣವನ್ನು ಕ್ರಾಂತಿಯ ಕ್ಷೇತ್ರವನ್ನಾಗಿ ರೂಪಿಸಿ ಆ ಮೂಲಕ ಕಾರ್ಯ ಸಾಧನೆ ಮಾಡಿ ಕೂಡಲ ಸಂಗಮನಾಥನಲ್ಲೇ ಲೀನರಾಗಿರುವುದು ಬಸವಣ್ಣ ಅವರ ಜೀವನದ ವಿಸ್ಮಯ ಸತ್ಯ.
ರಾಜಾ ಬಿಜ್ಜಳನ ಸ್ಥಾನದಲ್ಲಿ ಅವರು ಇದ್ದುದು ಅಲ್ಪಕಾಲವಾದರೂ ಆ ಅವಧಿಯಲ್ಲಿ ಅವರು ಮಾಡಿದ ಸಾಧನೆ ಅಭೂತಪೂರ್ಣ.
ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು ಹೇಳಿರುವ ‘ಬಸವೇಶ್ವರರರು ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ’ ಎಂದು ಮಾತಿನ ಮಹತ್ವ ತಿಳಿಸಿದರು. ಅನುಭವ ಮಂಟಪದ ಶರಣರಿಗೆ ‘ಅಣ್ಣ’ನಾದ ಬಸವಣ್ಣನವರು, ಸಾಮಾಜಿಕ ಕ್ರಾಂತಿಗೆ ಹೊಸ ಆಯಾಮ ನೀಡಿ, ಕಲ್ಯಾಣದಲ್ಲಿ ಕ್ರಾಂತಿಯ ಕಹಳೆಯೂದಿದರು. ಮೂರ್ತಿ ಪೂಜೆ ಖಂಡಿಸಿ ಲಿಂಗಪೂಜೆ ಆಚರಣೆಗೆ ತಂದು, ಧರ್ಮದ ಹೆಸರಿನಲ್ಲಿ ಅಂಧರಾಗಿದ್ದವರಿಗೆ ಭಕ್ತಿಯ ಬೆಳಕು ತೋರಿಸಿ, ಲಿಂಗಪೂಜೆ ಕಲಿಸಿ‘ಕರಸ್ಥಳ’ದಲ್ಲಿಯೇ ಈಶ್ವರನನ್ನು ಸಾಕ್ಷಾತ್ಕರಿಸಬಹುದು ಎಂಬ ಸತ್ಯವನ್ನು ಅರುಹಿದರು.
ಇಬ್ಬರನ್ನು ಮದುವೆಯಾಗಿದ್ದ ಬಸವಣ್ಣನವರು ದಾಂಪತ್ಯ ಜೀವನದಿಂದ ಅಧ್ಯಾತ್ಮ ಸಾಧನೆಗೆ ಯಾವುದೇ ಅಡ್ಡಿಯಿಲ್ಲ ಎಂಬುದನ್ನು ತೋರಿಸಿಕೊಟ್ಟ ಮಹಾನ್ಸಾಧಕರು.
ಸ್ತ್ರೀಯರಿಗೆ ಸಂಗಾತಿಗಳ ಆಯ್ಕೆಗೆ, ವಿಧವೆಯರಿಗೆ ಪುನರ್ವಿವಾಹಕ್ಕೆ ಬಸವಣ್ಣನವರು ಅವಕಾಶ ನೀಡಿದರು. ಸ್ತ್ರೀಯರಿಗಾಗುತ್ತಿರುವ ಅಪಮಾನಗಳನ್ನು ತೊಡೆದು ಅವರ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಬಲ್ಲ ಸಹಾಯ, ಸಹಕಾರಗಳನ್ನು ಸಮಾಜದಲ್ಲಿ ಒದಗಿಸುವ ಮೂಲಕ ಅವರಿಗೆ ಉನ್ನತ ಸ್ಥಾನ ಕಲ್ಪಿಸುವಲ್ಲಿ ಶ್ರಮಿಸಿದವರು.
12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಮಾಡಿದ ಕ್ರಾಂತಿಯಿಂದ ಅವರು ಎಲ್ಲರ ಮನೆ-ಮನಗಳನ್ನು ಬೆಳಗಿ, ಅಂತರ್ಜಾತಿ ವಿವಾಹ ಮಾಡಿಸಿ ಜಾತಿ, ಮತ ಎಂಬ ಪಿಡುಗನ್ನು ತೊಲಗಿಸಿದರು. ನೀತಿಯ ತಳಹದಿಯ ಮೇಲೆ ಸಮಾಜವನ್ನು ಕಟ್ಟಬಯಸಿದ ಮನಶುದ್ಧಿ, ಅಂಗಶುದ್ಧಿ, ವಾಕ್ಶುದ್ಧಿ ಎಂಬ ತ್ರಿವಿಧ ಶುದ್ಧಿ ಮಾಡಿ ಸಮಾಜಕ್ಕೆ ನವಚೈತನ್ಯ, ತತ್ತ್ವಾದರ್ಶನಗಳನ್ನು ನೀಡಿದರು. ಅವರು ಬರೀ ಭಾರತಕ್ಕಷ್ಟೇ ಅಲ್ಲ ಸಮಗ್ರ ಕುಲಕ್ಕೆ ಸಂಬಂಧಿಸಿದವರು. ಆದ್ದರಿಂದ ವಿಶ್ವಗುರು ಬಸವಣ್ಣ ಆದರು.
ಯೋಗದಲ್ಲಿ, ಜ್ಞಾನದಲ್ಲಿ, ತಾತ್ವಿಕ ಬೋಧನೆಯಲ್ಲಿ, ಅನುಭಾವದಲ್ಲಿ ಬಸವಣ್ಣವರನ್ನು ಮೀರಿಸುವ ಶರಣರು ಅಂದೂ ಹಲವರಿದ್ದರು. ಅವರೆಲ್ಲ ಬಸವಣ್ಣನವರೊಡನೆ ಚಿಂತನೆ ನಡೆಸಿ ಆದರ್ಶ ಸಮಾಜಕ್ಕೆ ನಾಂದಿ ಹಾಡಿದರು.
ಬಸವಣ್ಣ ನಿರಂತರ ಚಲಿಸುವ ಚೇತನ. ಅವರಿಗೆ ನಿನ್ನೆ-ಇಂದು ಎಂಬುದಿರಲಿಲ್ಲ. ಅವರು ಎಲ್ಲ ಕಾಲಕ್ಕೂ ಸಲ್ಲುವಂಥವರು. ‘ನಾಳೆ ಮಾಡುವುದನ್ನು ಇಂದು ಮಾಡು, ಇಂದು ಮಾಡುವುದನ್ನು ಈಗಲೇ ಮಾಡು’ ಎಂದು ನುಡಿಮುತ್ತು ಹೇಳಿದವರು.
‘ಇಲ್ಲಿ ಸಲ್ಲದವನು ಅಲ್ಲಿ ಸಲ್ಲನಯ್ಯ’ಎಂಬ ನೇರ ನುಡಿಯಿಂದ ಮೈಗಳ್ಳರನ್ನು ಎಚ್ಚರಿಸಿ,‘ಕಾಯಕವೇ ಕೈಲಾಸ’ ಎಂದು ಕೆಲಸದ ಮಹತ್ವವನ್ನು ಸಾರಿದರು. ಪ್ರತಿಯಾಬ್ಬರೂ ಕಾಯಕ ಮಾಡಿಯೇ ಜೀವಿಸಬೇಕು. ಕಾಯಕವನ್ನು ಯಾರು ಮನಶುದ್ಧವಾಗಿ, ನಿಷ್ಠೆ, ಏಕಾಗ್ರತೆಯಿಂದ ಮಾಡುತ್ತಾರೋ ಅವರಿಗೆ ಪ್ರತಿಫಲ ಹುಡುಕಿಕೊಂಡು ಬರುತ್ತದೆ ಎಂಬ ಸತ್ಯವನ್ನು ತಿಳಿಸಿದರು. ಹೀಗಾಗಿ ಅವರು ಲೋಕದ ಬದುಕಿಗೆ, ಇಲ್ಲಿ ಬದುಕು ನಡೆಸುವವರಿಗೆ ಆಪ್ತ ಬಂಧುವಷ್ಟೇ ಅಲ್ಲ ಆಪದ್ಭಾಂಧವರೂ ಆಗುತ್ತಾರೆ.
(ಸ್ನೇಹ ಸೇತು : ವಿಜಯಕರ್ನಾಟಕ)












Click it and Unblock the Notifications