ಹಬ್ಬ ಮಾಡೋಣ ಬನ್ನಿರೋ, ಕೂಡಿ ನಲಿಯೋಣ ಬನ್ನಿರೋ
- ಬಾಲಾಜಿ ರಾವ್
[email protected]
ಹಿಂದೆ ಹಬ್ಬಗಳಲ್ಲಿದ್ದ ಚೈತನ್ಯ, ಪ್ರಭೆ, ವಿಲಾಸ, ವೈಭವ, ಶ್ರದ್ದೆ ಎಲ್ಲವೂ ಮಾಯವಾಗಿ ಪ್ರಸ್ತುತ ಒಳಜ್ವರವೊಂದು ಜನ ಜೀವನವನ್ನು ಹೊಕ್ಕಿದೆ. ಅದು ಹಬ್ಬಗಳನ್ನು ಶೋಷಿಸುತ್ತಿರುವಂತೆ ಕಾಣುತ್ತಿದೆ. ತಮ್ಮ ದೇಶ, ಅದರ ಆಚರಣೆ, ನಂಬಿಕೆಗಳು ಅನೇಕ ಪ್ರಭಾವಕ್ಕೊಳಗಾಗಿ ತನ್ನ ವ್ಯಕ್ತಿತ್ವದ ಚಹರೆಗಳನ್ನು ಕಳೆದುಕೊಂಡು ತನ್ನ ಸ್ವರೂಪವನ್ನು ನಾಶಮಾಡಿ ಕೊಳ್ಳುತ್ತಿವೆ. ಶಾಂತಿ ಅಳಿದಿದೆ, ಬೇಸರ ಮೂಡಿದೆ. ಕಾರಣ ಇಂದಿನ ವರ್ಗ ಹಬ್ಬ ಹರಿದಿನಗಳ ಹೆಸರಿನಲ್ಲಿ ಮಾಡುತ್ತಿರುವ ಒಂದು ರೀತಿಯ ಮೋಸ ವಂಚನೆ ಎಂದೂ ಹೇಳಬಹುದು.
ಹಿಂದಿನ ವರ್ಗ ಹಬ್ಬಗಳ ಹಿಂಡನ್ನು ಸ್ವೀಕರಿಸಲು ಜಾತಕ ಪಕ್ಷಿಯಂತೆ ಕಾಯುತ್ತಿದ್ದರು. ಅವರಲ್ಲಿದ್ದ ಸಂಭ್ರಮ, ಆಚರಣೆ, ಆಸಕ್ತಿ ಇಂದು ನೆರಳಷ್ಟೆ. ಹಬ್ಬ ಬಂತೆಂದರೆ ಹಸೆಗಳು, ತೋರಣಗಳು, ದಿಂಡುಗಳು, ಹೂವುಗಳು ಪ್ರತಿ ಮನೆಯಲ್ಲೂ ರಾರಾಜಿಸುತ್ತಿದ್ದವು. ಹೆಂಗಳೆಯರ ಕೈಯಿಂದ ವಧುವಿನಂತೆ ಅಲಂಕಾರ ಮಾಡಿಕೊಂಡು ಹಸೆಗಳಂತು ಪೈಪೋಟಿ ಎಂಬಂತೆ ಮನೆಗಳ ಬೀದಿಗಳನ್ನು ತುಂಬುಕೊಳ್ಳುತ್ತಿದ್ದವು. ಹಿಂದೆ ಹಬ್ಬ ಹರಿದಿನಗಳ ಮುಂಚೆ ಅಂದರೆ ರಾತ್ರಿಯೇ ರಂಗವಲ್ಲಿಯಿಂದ ಅಲಂಕರಿಸುವ ಪದ್ದತಿಯು ಪೂರ್ವಾಚಾರಿತವಾಗಿ ಬಂದಿದೆಯೇನೊ ಎಂಬಂತೆ ಅನ್ನಿಸುತ್ತಿದ್ದವು.
ಇನ್ನು ಹಬ್ಬ ಹರಿದಿನಗಳಂದು ಕೇಳಬೇಕೆ, ಆಕಾಶವು ನಿರ್ಮಲವಾಗಿ ನಿರಭ್ರವಾಗಿ ಜ್ಯೋತಿರ್ಮಯವಾಗಿರುವಾಗ ಮಹಿಳೆಯರು ಹಾಡುತ್ತ , ತಮ್ಮ ಮನೆ ಮುಂದಿನ ಬೀದಿಯನ್ನು ಸಾರಿಸಿ ಗುಡಿಸಿ ರಂಗವಲ್ಲಿಯನ್ನಿಡುತ್ತಿದ್ದ ದೃಶ್ಯಗಳು, ಆ ಪಿಸು ಮಾತುಗಳು, ಮಿದು ನಗೆಗಳು ಇಂದು ನೆನಪಷ್ಟೆ. ಅಂದಿನ ಆ ದೃಶ್ಯಗಳು, ಆ ಉತ್ಸಾಹಗಳು ಇಂದು ಎಲ್ಲಿಯು ಕಂಡುಬರುವುದಿಲ್ಲ .
ಹಬ್ಬಗಳು ತಮ್ಮ ಹಿಂದಿನ ಸೊಬಗನ್ನು ಕಳೆದುಕೊಂಡಿವೆ. ಅಂದಿನ ಉಲ್ಲಾಸವೆಲ್ಲಿ ? ಶ್ರದ್ಧೆಯೆಲ್ಲ್ಲಿ ? ಸಂಭ್ರಮವೆಲ್ಲಿ ? ಚೈತನ್ಯವೆಲ್ಲಿ ? ವೈಭವವೆಲ್ಲಿ ? ಎಂಬ ಕೊರಗು ಕಾಡುತ್ತಲೆ ಇದೆ. ಇದಕ್ಕೆ ಕಾರಣ, ನಗರ ಹೈಟೆಕ್ ಸಿಟಿಯಾಗಿದೆ. ಅಲ್ಲದೆ ಇಂದಿನ ವರ್ಗವು ದಿನದ 24 ಗಂಟೆಗಳಲ್ಲಿ ಅರ್ಧ ಭಾಗ ಕೆಲಸ ಕಛೇರಿಗಳಲ್ಲೇ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ.
ಎಲ್ಲಿ ನೋಡಿದರು ಬರೀ ಆಧುನಿಕತೆಯೇ ಎದ್ದು ಕಾಣುತ್ತಿದೆ , ತಂತ್ರಕಜ್ಞಾನದ ಭೂತವೆ ಹೆಚ್ಚಾಗಿ ಮನುಷ್ಯನ ಸುಖ ನೆಮ್ಮದಿಯಾಂದಿಗೆ ಹೋರಾಡುತ್ತಿದೆ . ಮನುಷ್ಯ ಇದಕ್ಕೆ ತನ್ನ ಜೀವನವನ್ನೇ ಮುಡುಪಾಗಿಟ್ಟಿದ್ದಾನೇನೊ ಅನ್ನಿಸುತ್ತಿದೆ. ಆದರೆ ಹಬ್ಬ ಹರಿದಿನಗಳಂದಾದರು ಮನುಷ್ಯನ ಚೈತನ್ಯ ಒಂದು ಬಗೆಯ ಉತ್ಕರ್ಷವನ್ನು ಪಡೆದುಕೊಂಡು, ಮನುಷ್ಯ ತನ್ನ ಅಹಂಕಾರದಿಂದ ತತ್ಕಾಲವಾದರು ಬಿಡುಗಡೆಗೊಂಡು, ಒಂದು ಬಗೆಯ ನೆಲೆಯನ್ನು ಪಡೆಯುತ್ತದೆ ಎನ್ನುವಷ್ಟರಲ್ಲಿ ಆತನು ಹಣದ ಮತ್ತು ಆಧುನಿಕತೆಯ ಮೋಹದಿಂದ ಅವುಗಳನ್ನು ದೂರವಿಡಲು ಹಿಂಜರಿಯುವುದಿಲ್ಲ.
ಹಿಂದಿನ ವಿಲಾಸ ವೈಭವಗಳನ್ನು ಕಳೆದುಕೊಂಡು ಕೇವಲ ನೆರಳಿನಂತೆ ಬದುಕುತ್ತಿದ್ದಾನೆ. ಎಷ್ಟೋ ಮಂದಿ ಈ ಭೂತದಿಂದ (ತಂತ್ರಜ್ಞಾನ) ತಮ್ಮ ತಾಯಿ, ತಂದೆ, ಪುಟ್ಟ ಮಕ್ಕಳು, ಇವರ ಪ್ರೀತಿಯಿಂದ ದೂರವಿದ್ದು ಅವರ ಸಂಪರ್ಕವಿಲ್ಲದೆ ತಮ್ಮ ಆಸೆ ಆಕಾಂಕ್ಷೆಗಳನ್ನು ಬಿಟ್ಟು , ಈ ಆಚರಣೆಗಳಿಂದ ದೂರವಿದ್ದಾರೆ. ಅವರೆಲ್ಲ ನಿಜವಾಗಿ ಆ ಅನುಭವಗಳನ್ನು ಸವಿಯಲು ಹಾಗದೇ ಒದ್ದಾಡುತ್ತಿದ್ದಾರೆ. ಇದರಿಂದ ಆತ ಸಮಾಜದಲ್ಲಿ ತನ್ನ ಗೌರವ ಘನತೆಗಳನ್ನು ಹೆಚ್ಚಿಸಿಕೊಳ್ಳಲು, ಹಣ ಸಂಪಾದಿಸಲು ದಾರಿಮಾಡಿಕೊಳ್ಳಬಹುದೆ ಹೊರತು, ಸುಖ ನೆಮ್ಮದಿಯ ಶಾಂತಿಯನ್ನಲ್ಲ. ಶ್ರೀಮಂತರಿಗೆ ಹಣವಿದ್ದರು ನೆಮ್ಮದಿಯಿಲ್ಲ, ಬಡವರಿಗೆ ನೆಮ್ಮದಿಯಿದ್ದರು ಹಣವಿಲ್ಲ ಅನ್ನೊ ಹಾಗೆ ಹಬ್ಬಗಳು ಆಚರಣೆಯಲ್ಲಿದ್ದರು ತಮ್ಮ ಶ್ರೀಮಂತಿಕೆ, ವೈಭವ ಮತ್ತು ತಮ್ಮತನವನ್ನ ಕಳೆದುಕೊಂಡಿವೆ.
ಮನುಷ್ಯನ ಮನಸ್ಸು ಹಬ್ಬ ಹರಿದಿನ, ಸಾಹಿತ್ಯ, ಕಲೆ, ಮತ್ತು ಮನೋರಂಜನೆಯತ್ತ ಹರಿಯುವುದು ಇಲ್ಲದಂತಾಗಿದೆ. ಅಗಸರಿಲ್ಲದೆ ಮಡಿಯಿಲ್ಲ, ಕುಂಬಾರರಿಲ್ಲದೆ ಹೊಸ ಮಡಿಕೆಯಿಲ್ಲ, ಹರಿಜನರಿಲ್ಲದೆ ತಮಟೆ ವಾದ್ಯಗಳಿಲ್ಲ, ನಾಯಿಂದರಿಲ್ಲದೆ ಓಲಗವಿಲ್ಲ, ವಾಜರರಿಲ್ಲದೆ ಸೌಟಿಲ್ಲ ಹೀಗೆಯೆ ಒಬ್ಬರ ಸಹಾಯ ಸಹಕಾರಗಳು ಇನ್ನೊಬ್ಬರಿಗೆ ದೊರೆಯದ್ದಿದ್ದರೆ ಕೆಲವು ಕೆಲಸಗಳು ಸಾಗುವುದಿಲ್ಲ. ಹಾಗೆಯೆ ಹಬ್ಬಗಳು ಕುಟುಂಬದವರೆಲ್ಲರು ಇಲ್ಲದೆ ಸಾಗುವುದಿಲ್ಲ. ಬಂಧು ಬಾಂಧವರು, ಗಂಡನ ಮನೆಗೆ ತೆರಳಿರುವ ಹೆಣ್ಣು ಮಕ್ಕಳು ಎಲ್ಲರೂ ಹಬ್ಬಗಳಿಗೆ ಒಂದೆಡೆ ಸೇರುವ ಕಾಲ ಇಲ್ಲದಂತಾಗಿದೆ. ಕಾರಣಾಂತರಗಳಿಂದ ಮುಖ ಮುನಿಸಿದ್ದರು ಹಬ್ಬದ ನೆಪದಲ್ಲಿ ಒಂದಾಗುವ ದಯ ಇಂದು ಎಲ್ಲೂ ಕಾಣುವುದಿಲ್ಲ.
ಹಬ್ಬಗಳ ಆಚರಣೆಯಿಂದ ಇಹ ಪರಗಳ ಸಾರ್ಥಕ್ಯವನ್ನು ಕಂಡುಕೊಳ್ಳಬಹುದು. ನಾಗರಿಕ ಬದುಕಿನಲ್ಲಿ ಸಿಗದ ಸುಖ-ಸಂತೋಷ, ಸಹಜತೆಗಳನ್ನು ಸರಳವಾಗಿ ಹಬ್ಬಗಳಲ್ಲಿ ಅನುಭವಿಸಬಹುದು. ಕೆಲವು ಸಂದರ್ಭಗಳಲ್ಲಿ ಹಬ್ಬಗಳು ಜನರ ಅಂಧಶ್ರದ್ದೆ, ಅಜ್ಞಾನಗಳ ಕುರುಹಾಗಿ ಕಂಡರು ಅವುಗಳಲ್ಲಿ ಅರ್ಥವಿಲ್ಲದೆ ಇಲ್ಲ. ಪ್ರತಿಯಾಂದು ನಂಬಿಕೆಯು ಕಾಲಕಾಲಕ್ಕೆ ಬದಲಾಗಿರುತ್ತದೆ. ಇವುಗಳನ್ನು ಮನಗಂಡರೆ ಹಬ್ಬಗಳ ಉದ್ದೇಶ ವ್ಯಾಪ್ತಿ ಸ್ಪಷ್ಟವಾಗುತ್ತದೆ.












Click it and Unblock the Notifications