ಔಟ್ಸೋರ್ಸಿಂಗ್ ! ಔಟ್ಸೋರ್ಸಿಂಗ್ !
-
ರಘುನಾಥ್.
ಪಿ.ಜಿ.
ಬೆಂಗಳೂರು
[email protected]
BASIC PRINCIPLES OUTSOURCING : ಮೌಲ್ಯ ಗುತ್ತಿಗೆ.
ನಮ್ಮ ದೇಶದಲ್ಲಿ ಈಗ ಎಲ್ಲಿಗೆ ಹೋದರೂ, ನೋಡಿದರೂ, ಕೇಳಿದರೂ ಒಂದೇ ಮಂತ್ರ Outsourcing Outsourcing. ಔಟ್ಸೋರ್ಸಿಂಗ್ ಎಂಬುದೀಗ ರಾಮ ಮಂತ್ರ! ಇದು ಪಾಶ್ಚಾತ್ಯರು ನಮಗೆ ತೋರುತ್ತಿರುವ, ನೀಡುತ್ತಿರುವ ಅಕ್ಷಯ (ಭಿಕ್ಷಾ) ಪಾತ್ರೆ. ಇದರಲ್ಲಿ ಕೆಲಸ ಕಂ ಕೂಲಿ ನಿನ್ನದು, ಲಾಭ ಹಾಗೂ ಉಳಿತಾಯ ನನ್ನದು ಎಂಬ (ಅ) ವ್ಯವಹಾರ ತಂತ್ರ.
ನಮ್ಮ ತಂತ್ರಜ್ಞರಲ್ಲಿರುವ ಅಮೂಲ್ಯ ಬುದ್ಧಿ ಸಂಪತ್ತು ಹಾಗೂ ಸಮಯವನ್ನು ಕಡಿಮೆ ಖರ್ಚಿನಲ್ಲಿ ವಶ ಮಾಡಿಕೊಳ್ಳಲು ಪಾಶ್ಚಾತ್ಯರು ಬೀಸಿರುವ ಎಂಬ ಮೋಹದ ಬಲೆ- ಔಟ್ಸೋರ್ಸಿಂಗ್. ಇದರಿಂದ ಅವರ ಆರ್ಥಿಕ ಮೌಲ್ಯ ಹೆಚ್ಚಾಗುತ್ತಿದ್ದು ನಮ್ಮವರು ಮಂಕುತನಕ್ಕೆ ಮಂಡಿಗೆ ತಿನ್ನುತ್ತಿದ್ದಾರೆ. ಅರ್ಥಾತ್ ಗಂಟೂ ಉಳಿಯಿತು ನಂಟೂ ಬೆಳೆಯಿತು. ಇಲ್ಲಿ ಅವರ ಉದ್ದೇಶ ಕೇವಲ ಆರ್ಥಿಕ ಲಾಭ ಮಾತ್ರ. ಅಲ್ಲಿ ಸ್ಥಳವಿಲ್ಲ , ಸಮಯವೂ ಇಲ್ಲ ಎನ್ನುವ ಬೇರೆಲ್ಲಾ ಸಮಸ್ಯೆಗಳು ಯಾವಾಗಲೋ ಔಟ್ಸೋರ್ಸ್ ಆಗಿದ್ದವು. ಭಾರತದಲ್ಲಿರುವಷ್ಟು ಜ್ಞಾನ ಸಂಪತ್ತು ಬೇರೆಲ್ಲೂ ಸಿಕ್ಕದು, ಅದೂ ಅಗ್ಗಕ್ಕೆ ! ಆ ಕಾರಣದಿಂದಲೇ ಕಡಿಮೆ ಬೆಲೆಗೆ ಔಟ್ಸೋರ್ಸಿಂಗ್ ಎನ್ನುವ ಮಂತ್ರದ ಮೂಲಕ ಭಾರತೀಯರ ಜ್ಞಾನವನ್ನು ಖರೀದಿ ಮಾಡಲಾಗುತ್ತಿದೆ.
ಇನ್ನು, ನಾವು ಭಾರತೀಯರು ಯಾವಾಗಲೂ ಅನುಕರಣೆಯಲ್ಲಿ ಒಂದು ಕೈ ಮುಂದು. ಪಾಶ್ಚಾತ್ಯರು ಮಾಹಿತಿ ತಂತ್ರಜ್ಞಾನವನ್ನು ಮಾತ್ರ ಔಟ್ಸೋರ್ಸಿಂಗ್ ಎಂದು ನಮಗೆ ಧಾರೆ ಎರೆಯುತ್ತಿದ್ದರೆ, ನಾವು ನಮ್ಮಲ್ಲಿ ಏನೇನು ಇದೆಯೋ ಅದೆಲ್ಲವನ್ನೂ Out-source ಮಾಡುತ್ತಿದ್ದೇವೆ. ಯಾವುದಾದರೂ ಸರಿ, ನಮ್ಮದೆಂದು ಯಾವುದೂ ಇಲ್ಲ, ಎಲ್ಲಾ Out-source ಅಷ್ಟು ಉದಾರಿಗಳು ನಾವು. ಮಹಾತ್ಮರು ಹೇಳಿದ್ದ ಮಾತನ್ನು ನಾವು ಅಕ್ಷರಃ ಪಾಲಿಸುತ್ತೇವೆ - ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸು ಎಂಬ ನುಡಿಯನ್ನು . ವಾ ! ಎಂಥ ಅದ್ಭುತ! ನಮ್ಮನ್ನು ನೋಡಿಯೇ ಮಹಾತ್ಮರು ಈ ಮಾತು ಹೇಳಿರಬೇಕು.
ಪರೀಕ್ಷೆ ಮಾಡಿ ನೋಡಿ, ನಮ್ಮಲ್ಲಿ ನಮ್ಮದೆಂದು ಯಾವುದಾದರೂ ಏನಾದರೂ ಉಳಿದಿದೆಯಾ ? (I am sorry if u feel I am wrong). ಇದೆಯೆಂದು ಧೈರ್ಯವಾಗಿ ನಾವು ಹೇಳಬಹುದಾ ? ಒಮ್ಮೆ ನಮ್ಮ ದೇಶದ ಪರಿಸ್ಥಿತಿ ನೋಡುವ. ನಮ್ಮ ದೇಶವನ್ನು ನಾವು ಪೂರ್ಣ ನಮ್ಮದು ಎಂದು ಹೇಳುವ ಸ್ಥಿತಿ ಇದೆಯಾ, ಇಲ್ಲ . ಪಕ್ಕದಲ್ಲಿ ಯಾರೋ ಕೂಗುತ್ತಿದ್ದಾರೆ - ನಿಮ್ಮ ರುಂಡ ನಮ್ಮದು, ಹತ್ತಿರ ಬಂದೀರಿ ಜೋಕೆ ಎಂದು! ಇನ್ನು ಪಾದದಲ್ಲೋ ಅವರು ಯಾವಾಗಲೂ ಒಂದು ಕಾಲು ಆಚೆ ಇಟ್ಟು ಮಾತಾಡುವವರೇ, ಆದಷ್ಟು ಬೇಗ ನಮ್ಮನ್ನು Out-source ಮಾಡಿ ಎಂದು. ಹೀಗಿರಬೇಕಾದರೆ ಎಲ್ಲಿದೆ ಸೋರ್ಸ್ ನಮ್ಮಲ್ಲಿ ಔಟ್ಸೋರ್ಸ್ ಮಾಡಲು.
ಬೇಡ, ದೇಶದ ಉಸಾಬರಿ ನಮಗ್ಯಾಕೆ, ನಮ್ಮದೇ ನೂರೆಂಟು ಅಂತೀರಾ. ಅಲ್ಲೂ ತಾನೇ ಏನಿದೆ ಸೋರ್ಸ್ ನಮ್ ಹತ್ತಿರ. ಎಲ್ಲಾ ಆಡಿಸುವವರ ಇಚ್ಛೆ. ಕುಣಿ ಎಂದಾಗ ಕುಣಿಯಬೇಕೇ ಹೊರತು ನಾವೇ ಸ್ವತಃ ಒಂದೂ ಹೆಜ್ಜೆ ಎತ್ತಿಡುವ ಹಾಗಿಲ್ಲ. ತಿಳಿದವರು ಹೇಳುವುದಿಲ್ಲವಾ ! ಯಾವುದೂ ನಮ್ಮ ಕೈಯಲ್ಲಿಲ್ಲ. ಎಲ್ಲಾ ಆ ದೇವನಾಡಿಸುವ ಗೊಂಬೆಯಾಟ. ಬೇಕಾದರೆ ನಮ್ಮ ಧರ್ಮಣ್ಣನವರನ್ನೋ ಸಿಂಗ್ ಅಣ್ಣನವರನ್ನೋ ಕೇಳಿ, ಬೇಡ ಅವರನ್ನು ನೋಡಿದರೆ ಗೊತ್ತಾಗಲ್ವೇ, ಇಬ್ಬರೂ ಇರುವುದು ಔಟ್ಸೋರ್ಸ್ ಆಗೀಯೇ, ಆಡುತ್ತಿರುವುದೂ ಗೊಂಬೆಯಾಟವೇ ಎಂದು. ಇತ್ತ ದೇವುರವರು, ರಾಮಣ್ಣನವರು ಧರ್ಮಣ್ಣನವರನ್ನು ಔಟ್ಸೋರ್ಸ್ ಮಾಡುತ್ತಿದ್ದರೆ, ಅತ್ತ ಆ ಮಹಾ ಮಾತೆ ಸಿಂಗ್ಣ್ಣನವರನ್ನು ಔಟ್ಸೋರ್ಸ್ ಮಾಡಿದ್ದಾರೆ.
ಏನ್ರೀ ಮತ್ತೇ ಅದೇ ರಾಗ ಹಾಡ್ತಾಯಿದೀನಿ ಅಂತೀರಾ, ಬೇಡ ಬಿಡಿ, ಯಾವುದನ್ನು ನಾವು ಔಟ್ಸೋರ್ಸ್ ಮಾಡೋದಿಕ್ಕಾಗೋದಿಲ್ಲವೋ ಅದರ ಉಸಾಬರಿಯೇಕೆ ? ಸರಿ ಅದೂ ನಿಜಾನೆ. ಹೋಗ್ಲಿ ನಂದು, ನಮ್ಮದು ಎಂದು ನಾವು ಮನಃಪೂರ್ತಿ ಹೇಳೋಕೇನಾದರೂ ಉಳಿದಿದೆಯಾ ? ಏನೂ ಕಾಣ್ತಾಯಿಲ್ಲ . ಹುಟ್ಟಿದ ಮಗುವಿಗೆ ಎದೆಹಾಲು ಕುಡಿಸಲೂ ಅಮ್ಮಂದಿರಿಗೆ ಆಗೋಲ್ಲ , ಒಂದು ವೇಳೆ ಆದರೂ ಅಷ್ಟು ಸಮಯ ಸಹನೆ ಎಲ್ಲಿದೆ. ಮಗು ಅತ್ತರೆ ಫೆರೆಕ್ಸ್ ಅಂತಾರೆ, ಇನ್ನೂ ಚಂಡಿ ಹಿಡಿದರೆ ಕ್ರೀಚ್ಗೋ ಬೇಬಿ ಸಿಟ್ಟಿಂಗ್ಗೋ ಹಾಕ್ತಾರೆ, ಇದಲ್ಲವಾ ಔಟ್ಸೋರ್ಸ್; ತಾಯ್ತತನದ ಔಟ್ಸೋರ್ಸ್. ಅಷ್ಟ್ಯಾಕೆ ಮಕ್ಕಳ ಹೆರುವುದೂ ಸಹ ಮಾಡುತ್ತಿದ್ದಾರೆ ಔಟ್ಸೋರ್ಸ್. ಮೊಮ್ಮಗಳ ಭ್ರೂಣ ಅಮ್ಮನ ಹೊಟ್ಟೆಯಲ್ಲಿ , ಇದು ಸಹಾ ಒಂಥರ ಔಟ್ಸೋರ್ಸ್ ಅಲ್ಲವಾ !
ಇನ್ನು ಅಪ್ಪಂದಿರದ್ದೋ ಕೇಳ್ಲೇ ಬೇಡಿ, ಏನು ಕೇಳಿದರೂ ನೊ ಅನ್ನೋ ಆನ್ಸರ್ ಗೊತ್ತೇ ಹೊರತು ಬೇರೇನೂ ಗೊತ್ತಿರೋದಿಲ್ಲ. ಎಲ್ಲದಕ್ಕೂ ಅಮ್ಮನ ಕೇಳು ಇಲ್ಲಾಂದ್ರೆ ಅವಳನ್ನ ಕೇಳು. ಏಕೆಂದರೆ ಅವರ ಸೋರ್ಸ್ ಇರುವುದೇ ಅವ್ರಿಬ್ಬರ ಹತ್ತಿರ ತಾನೇ. ಹುಟ್ಟುತಾ ಅಮ್ಮನಿಗೆ ಔಟ್ಸೋರ್ಸ್, ಮದುವೆಯಾದ ಮೇಲೆ ಹೆಂಡತಿಗೆ ಔಟ್ಸೋರ್ಸ್. ಇನ್ನೇನುಳಿದಿದೆ ಅಪ್ಪಂದಿರ ಹತ್ತಿರ ಔಟ್ಸೋರ್ಸ್ ಆಗಲು, ಔಟ್ಸೋರ್ಸ್ ಮಾಡಲು.
ಇನ್ನು ಮಕ್ಕಳೋ ಆ ದೇವರೇ ಕಾಪಾಡಬೇಕು. ಅಪ್ಪ ಅಮ್ಮಂದಿರು ಅವರ ಆಸೆಗಳ ತೀರಿಸಲಿರುವ ಮನೀ ಸೋರ್ಸ್ಗಳೇ ಹೊರತು ಬೇರೆ ಏನಕ್ಕೂ ಅವರ ಸೋರ್ಸ್ ಬೇಡ. ಸ್ವಲ್ಪ ಮನೀ ಸೋರ್ಸ್ ಮಕ್ಕಳ ಹತ್ತಿರ ಜಾಸ್ತಿಯಾಗುತ್ತಿದ್ದ ಹಾಗೆ ಮಾಡ್ತಾರೆ ಅಪ್ಪ ಅಮ್ಮಂದಿರ ಔಟ್ಸೋರ್ಸ್ ಅನಾಥಾಶ್ರಮಕ್ಕೋ, ವೃದ್ಧಾಶ್ರಮಕ್ಕೋ. ಅದಕ್ಕೇ ಅಲ್ವಾ ಆ ಮಹಾತಾಯಿ ಬಿರ್ಲಾ ಅಮ್ಮ ಮಾಡಿದ್ದು ತನ್ನೆಲ್ಲಾ ಆಸ್ತೀನ ಔಟ್ಸೋರ್ಸ್, ಪುಣ್ಯಾತ್ಮ ಶ್ರೀ ಲೋಧಾನಿಗೆ.
ಈಗ ಹೇಳಿ ನೋಡುವ, ಉಳಿದಿದೆಯಾ ನಮ್ಮ ಬಳಿ ಏನಾದರೂ ಸೋರ್ಸ್ ? ಔಟ್ಸೋರ್ಸ್ ಮಾಡಲು, ಇದ್ದರೂ ಅವು ಕೆಲವೇ ಕೆಲವು ಸೋರ್ಸ್ಗಳು, ಅವೂ ಆಗಲಾರಂಬಿಸಿವೆ ಔಟ್ಸೋರ್ಸ್ ಅರ್ಥಾತ್ ಮೌಲ್ಯಗಳ ಅಪಮೌಲ್ಯ. ಅದಕೇ ವಿದೇಶಿಯರು ಮಾಡುತ್ತಿರುವುದು ಔಟ್ಸೋರ್ಸ್, ಅವರಲ್ಲಿರುವ ಥಳಕು ಬಳಕೆಲ್ಲಾ ನಮಗೆ ಔಟ್ಸೋರ್ಸ್ ಮಾಡಿ ನಮ್ಮಲ್ಲಿರುವ ಅಮೂಲ್ಯವಾದ ಸೋರ್ಸ್ಗಳಾದ ಯೋಗ, ಸಸ್ಯಹಾರಿ ಜೀವನ, ಆರ್ಯುವೇದ, ಸಾಮಾಜಿಕ ಚಿಂತನೆ, ಕಳಕಳಿ ಇನ್ನೂ ಹಲವಾರು ಮೌಲ್ಯಗಳನ್ನು ನಮ್ಮಿಂದ ಔಟ್ಸೋರ್ಸ್ ಮಾಡಿಸಿಕೊಂಡು ಸುಖಿಗಳಾಗಲು ಹೊರಟಿದ್ದಾರೆ ನಮ್ಮನ್ನು ದುಖಿಃಗಳನ್ನಾಗಿಸುತ್ತಾ, ಅವರ ಸೋರ್ಸ್ ತುಂಬಿಸುತ್ತಾ , ನಮ್ಮ ಬರಿದಾಗಿಸುತ್ತಾ.. .. !
ಅಂದಹಾಗೆ, ನೀವಿನ್ನೂ ಔಟ್ಸೋರ್ಸ್ ಆಗಿಲ್ಲವಾ ? ಇಲ್ಲವಾದರೆ, ಅಭಿನಂದನೆಗಳು !