ಸಿಪಿಕೆಗೆ ಚಿ.ನಾ.ಮಂಗಳ, ಅಕಬರ ಆಲಿಗೆ ರನ್ನ ಪ್ರಶಸ್ತಿ
ಬೆಂಗಳೂರು : ಜನಪ್ರಿಯ ಚುಟುಕು ಕವಿಗಳಾದ ಡಾ. ಎಂ. ಅಕಬರ ಅಲಿ ಹಾಗೂ ಡಾ. ಸಿ. ಪಿ. ಕೃಷ್ಣಕುಮಾರ್ ಬೆಂಗಳೂರಿನ ಅತ್ತಿಮಬ್ಬೆ ಪ್ರತಿಷ್ಠಾನ ನೀಡುವ ರನ್ನ ಸಾಹಿತ್ಯ ಪರಿಷತ್ತು ಪುರಸ್ಕಾರ ಹಾಗೂ ಚಿ.ನಾ.ಮಂಗಳ ಪುರಸ್ಕಾರಕ್ಕೆ ಕ್ರಮವಾಗಿ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಮಾರ್ಚ್ 30ರ ಭಾನುವಾರ ಸಂಜೆ ಮೈಸೂರಿನ ಇಂಜಿನಿಯರ್ಗಳ ಸಂಸ್ಥೆಯ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಹಿರಿಯ ಸಾಹಿತಿ ದೇ. ಜವರೇಗೌಡ ಅವರು ಪ್ರಶಸ್ತಿ ಪ್ರದಾನ ಮಾಡುವರು.
ಪ್ರೊ. ಎನ್. ಬಸವಾರಾಧ್ಯ, ಪ್ರೊ. ಚಂಪಾ ಹಾಗೂ ಡಾ. ವರದಾ ಶ್ರೀನಿವಾಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವರು. ಇಳಿ ಸಂಜೆ ಏಳು ಗಂಟೆಗೆ ಕವಿ ಗೋಷ್ಠಿಯನ್ನೂ ಆಯೋಜಿಸಲಾಗಿದೆ ಎಂದು ಅತ್ತಿಮಬ್ಬೆ ಪ್ರತಿಷ್ಠಾನದ ನಿರ್ದೇಶಕಿ ಪಿ. ಮನೋಹರಿ ಪಾರ್ಥ ಸಾರಥಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರನ್ನ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿರುವ ಡಾ.ಎಂ.ಅಕಬರ ಆಲಿ ಅವರು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಹನಿಗವನ ಪ್ರಾಕಾರದ ಬೆಳವಣಿಗೆಗೆ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಚಿ.ನಾ.ಮಂಗಳ ಪ್ರಶಸ್ತಿಗೆ ಆಯ್ಕೆಯಾಗಿರುವ ಡಾ.ಸಿ.ಪಿ.ಕೃಷ್ಣಕುಮಾರ್ ಕೂಡ ಹನಿಗವನಗಳ ಮೂಲಕವೇ ಜನಪ್ರಿಯರಾದರವರು. ಸಿ.ಪಿ.ಕೆ. ಎಂದೇ ಓದುಗ ವಲಯದಲ್ಲಿ ಪ್ರಸಿದ್ಧರಾದ ಕೃಷ್ಣಕುಮಾರ್ ಪ್ರಕಾಂಡ ವಿದ್ವಾಂಸರೂ ಹೌದು.
(ಇನ್ಫೋ ವಾರ್ತೆ)