ಮೈಸೂರು ಕನ್ನಡ ಶಾಲೇಲಿ ನೃಪತುಂಗ ಶಾಲಾ ದಿನಾಚರಣೆ
*ದಟ್ಸ್ಕನ್ನಡ ಬ್ಯೂರೋ
ಮಾರ್ಚ್ 2002 : ಕನ್ನಡ ನರ್ಸರಿ ಶಾಲೆಗಳನ್ನು ತೆರೆಯಲು ಕರ್ನಾಟಕ ಸರ್ಕಾರ ನಿರ್ಧರಿಸಿತು.
ಏಪ್ರಿಲ್ 2002 : ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯಗೊಳಿಸಲು ಕೋರ್ಟಿಗೆ ಹೋಗಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ತೀರ್ಮಾನಿಸಿದರು.
ಆಗಸ್ಟ್ 2002 : ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯಗೊಳಿಸಬೇಕೆ, ಬೇಡವೇ ಎಂಬ ವಿಷಯದಲ್ಲಿ ಇನ್ನೂ ಚರ್ಚೆಯಾಗಬೇಕು ಎಂದು ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಪುಗ್ಗ ಬಿಟ್ಟರು. ಬರಗೂರರಿಗೆ ಇದರಿಂದ ಕೋಪ ಬಂತು.
ಜನವರಿ 2003 : ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಬರಗೂರರ ಅವಧಿ ಪೂರೈಸಿತು. ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬರಗೂರರನ್ನು ವಾಚಾಮಗೋಚರ ಹೊಗಳಿ, ಬೀಳ್ಕೊಟ್ಟರು.
*
ಬರಗೂರು ಬಂದರು, ಹೋದರು. ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಕಡ್ಡಾಯವಾಗಲಿಲ್ಲ. ಈ ಕನ್ನಡ ಮಾಧ್ಯಮದ ಚರ್ಚೆ ಇಂದು- ನಿನ್ನೆಯದಲ್ಲ. ಸೊಲ್ಲು ಜೋರಾಗುವುದು, ಹಾಗೆಯೇ ತಣ್ಣಗಾಗುವುದು ಇದ್ದೇ ಇದೆ. ಹಿಂದೆ ಗೋಕಾಕ್ ಚಳವಳಿ ಎಬ್ಬಿಸಿದ ಕನ್ನಡಾಭಿಮಾನದ ಅಲೆಯಲ್ಲೇ ಮೈಸೂರಿನ ರಾಮಕೃಷ್ಣ ನಗರದಲ್ಲಿ ಒಂದು ಕನ್ನಡ ಮಾಧ್ಯಮ ಶಾಲೆ ತಲೆ ಯೆತ್ತಿದ್ದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ‘ಕನ್ನಡ ವಿಕಾಸ ವಿದ್ಯಾ ಸಂಸ್ಥೆ’ ಎಂಬ ಈ ಶಾಲೆಯಲ್ಲಿ ಎಲ್ಕೆಜಿಯಿಂದ ಎಸ್ಸೆಸ್ಸೆಲ್ಸಿವರೆಗೆ ಕನ್ನಡದಲ್ಲೇ ಪಾಠ. ಮೇಲಾಗಿ ಇದು ಶಾಶ್ವತ ಅನುದಾನ ರಹಿತ ಶಾಲೆ.
ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮದ ಅನುಷ್ಠಾನದ ಬಗ್ಗೆ ವೃಥಾ ಬೊಬ್ಬೆ, ಕೆಲಸ ಶೂನ್ಯ ಎಂಬಂತಿರುವ ಇವತ್ತಿನ ಪರಿಸ್ಥಿತಿಯಲ್ಲಿ ಕನ್ನಡ ವಿಕಾಸ ವಿದ್ಯಾ ಸಂಸ್ಥೆ ಕಷ್ಟದಲ್ಲಿದೆ. ಇಲ್ಲಿರುವುದು ಕೇವಲ 167 ವಿದ್ಯಾರ್ಥಿಗಳು. ಶಿಕ್ಷಕ ವರ್ಗದ ಸಂಖ್ಯೆ 13. ಡೊನೆಷನ್ನು ಹಾಳು ಮೂಳು ಅಂತ ವಸೂಲು ಮಾಡದ ಈ ಕನ್ನಡ ಕಳಕಳಿಯ ಶಾಲೆಗೆ ಮಕ್ಕಳನ್ನು ಸೇರಿಸಲು ಹಿಂದೂಮುಂದು ನೋಡುವ ಜಾಯಮಾನದ ಜನ ಒಂದು ಕಡೆ. ಇದರತ್ತ ಕಣ್ಣೆತ್ತೂ ನೋಡದ ಸರ್ಕಾರ ಇನ್ನೊಂದು ಕಡೆ.
ಕಷ್ಟಗಳ ನಡುವೆಯೇ ಏಗುತ್ತಿರುವ ಈ ಶಾಲೆ ಇವತ್ತು (ಜ.24) ನೃಪತುಂಗ ಕನ್ನಡ ಶಾಲಾ ದಿನಾಚರಣೆಯ ತಯಾರಿಯಲ್ಲಿದೆ. ಸಂಜೆ 5.30 ಗಂಟೆಗೆ ಮಕ್ಕಳಿಂದ ಮನರಂಜನೆ. ಮೈಸೂರು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಗೋಪಾಲ್ ಸಮಾರಂಭದ ಮುಖ್ಯ ಅತಿಥಿ. ಶಾಲೆಯ ಧರ್ಮದರ್ಶಿ ಡಾ. ವಿ.ಪಿ. ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಇಷ್ಟು ದಿನ ಅಮೆರಿಕೆಯಲ್ಲಿದ್ದು, ಈಗ ಮೈಸೂರಲ್ಲಿ ನೆಲೆಯೂರಿರುವ ನಾಗಲಕ್ಷ್ಮಿ ಹರಿಹರೇಶ್ವರ ಅವರು ಬಹುಮಾನ ವಿತರಿಸುವರು.
ಮಾಲೇಗೌಡ ನಿರ್ದೇಶಿಸಿರುವ ನಾಗಚಂದ್ರ ವಿರಚಿತ ‘ಚಂದ್ರಹಾಸ’ ನಾಟಕವನ್ನು ಶಾಲೆಯ 16 ಮಕ್ಕಳು ಪ್ರದರ್ಶಿಸಲಿದ್ದಾರೆ. ಅಂದಹಾಗೆ, ಶಾಲೆಯಂತೆ ಅದರ ಮನರಂಜನೆಯೂ ಕನ್ನಡಮಯವಾಗಿರುವುದು ವಿಶೇಷ !
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications