ಅನಂತಮೂರ್ತಿ ಎಂಥ ಲಾಬಿಗೂ ರೆಡಿ: ಮುಂದಿನ ಲಾಬಿ ನೊಬೆಲ್?
ಧಾರವಾಡ : ಜ್ಞಾನಪೀಠ ಪುರಸ್ಕೃತ ಲೇಖಕ ಯು.ಆರ್.ಅನಂತಮೂರ್ತಿ 69 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕುರಿತು ಹಿರಿಯ ಪತ್ರಕರ್ತ ಪ್ರಪಂಚ ಪತ್ರಿಕೆಯ ಪಾಟೀಲ ಪುಟ್ಟಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜ್ಞಾನಪೀಠ ಸೇರಿದಂತೆ ಎಲ್ಲ ಪ್ರಶಸ್ತಿಗಳಿಗೂ ಲಾಬಿ ನಡೆಸಿರುವ ಅನಂತಮೂರ್ತಿ ನೊಬೆಲ್ ಪ್ರಶಸ್ತಿಗೆ ಲಾಬಿ ನಡೆಸಿದರೂ ಆಶ್ಚರ್ಯವಿಲ್ಲ ಎಂದು ಅನಂತಮೂರ್ತಿ ಆಯ್ಕೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪಾಪು ತೀರ ಅಸಮಾಧಾನ ಸೂಚಿಸಿದ್ದಾರೆ.
ಸಮ್ಮೇಳನದ ಅಧ್ಯಕ್ಷರ ಆಯ್ಕೆಯ ಕುರಿತ ಮಾನದಂಡಗಳೇ ನನಗೆ ಅರ್ಥವಾಗುತ್ತಿಲ್ಲ . ಒಂದೂ ಪುಸ್ತಕ ಬರೆಯದವರು ಸಮ್ಮೇಳನ ಅಧ್ಯಕ್ಷರಾಗಿದ್ದಾರೆ. ದೇಜಗೌ ಅವರು 50 ನೇ ವಯಸ್ಸಿನಲ್ಲಿಯೇ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅಧ್ಯಕ್ಷರ ಆಯ್ಕೆಯಲ್ಲಿ ಕಸಾಪ ಸದಸ್ಯರು ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸಿದಾಗ ಮಾತ್ರ ಅಧ್ಯಕ್ಷರ ಆಯ್ಕೆಯ ಕುರಿತು ಜನರಲ್ಲಿ ಗೌರವ ಭಾವ ಮೂಡುತ್ತದೆ ಎಂದು ಪಾಪು ಅಭಿಪ್ರಾಯಪಟ್ಟರು.
ಅಧ್ಯಕ್ಷರ ಆಯ್ಕೆಗೆ ಚಲಾವಣೆಯಲ್ಲಿ ತಮ್ಮ ಹೆಸರು ಇದ್ದುದರ ಬಗ್ಗೆ ತಮಗೇನೂ ತಿಳಿಯದು. ಈ ಬಗ್ಗೆ ಯಾರೂ ನನ್ನಲ್ಲಿ ಏನನ್ನೂ ಪ್ರಸ್ತಾಪಿಸಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು. ಅಧ್ಯಕ್ಷರ ಆಯ್ಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿ ಕಸಾಪ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಪುಂಡಲೀಕ ಹಾಲಂಬಿ ರಾಜಿನಾಮೆ ನೀಡಿರುವುದರಲ್ಲಿ ಅರ್ಥವಿಲ್ಲ , ಸಾಹಿತ್ಯದಲ್ಲಿ ಮೀಸಲಾತಿಗೆ ಅವಕಾಶವಿಲ್ಲ ಎಂದು ಪಾಪು ಅಭಿಪ್ರಾಯಪಟ್ಟರು.
ಹೆಚ್ಚಿನ ಓದಿಗೆ..
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications