ಕಂಬಾರ: ಚಳವಳಿಯಿಂದ ಮಾರು ದೂರ...
ಪ್ರ: ಕಂಬಾರರು ಒಂದು ಸಾಹಿತ್ಯ ಚಳವಳಿಯ ಭಾಗವಾಗಲೇ ಇಲ್ಲ. ಅದರಿಂದ ದೂರ ಉಳಿದುಬಿಟ್ಟರು. ಇದಕ್ಕೇನು ಕಾರಣ? - ಸೋಮಸುಂದರ ಆರಾಧ್ಯ, ಬಸವಕಲ್ಯಾಣ
ಉ: ನಮ್ಮ ಯಾವ ಚಳವಳಿಯೂ ಕೂಡ, ನಮ್ಮ ಜೀವನದ ಸಹಜ ಭಾಗವಾಗಲೇ ಇಲ್ಲ. ಗೋಪಾಲಗೌಡರ ಸಮಾಜವಾದ ಒಂದನ್ನು ಬಿಟ್ಟು. ಆದ್ದರಿಂದ ನಾನು ಯಾವುದೇ ಸಾಹಿತ್ಯಕ ಚಳವಳಿ ಭಾಗ ಆಗಲಿಲ್ಲ. ನಮ್ಮ ಬದುಕಿನ ತುರ್ತು ಸಮಸ್ಯೆಗಳ ಕುರಿತು ಬರೆಯುವುದೇ ಸಮಸ್ಯೆಯಾಗಿತ್ತು. ನನಗೆ ಈಗಲೂ ಅಷ್ಟೇ.
ಪ್ರ: ನೀವು ಬರೆಯುತ್ತಿರುವ ಇತ್ತೀಚಿನ ಕೃತಿ ಯಾವುದು? ಅದರ ಆಶಯ ಏನು?- ಚಿದಾನಂದ, ಸಿಂಗಪೂರ್.
ಉ: ಡಾಲರ್ ಕಾಲೋನಿ. ಒಂದು ಕಾದಂಬರಿ. ವಸಾಹತುಶಾಹಿ ಪ್ರಭಾವದಿಂದ ಹೊರಬಂದೆವೆಂದು ಅಂದುಕೊಳ್ಳುತ್ತಿರುವಾಗಲೇ ಈಗ ಅದಕ್ಕಿಂತ ಭಯಾನಕವಾದ ಜಾಗತೀಕರಣ ನಮ್ಮಲ್ಲಿ ಬಂದು ಬಿಟ್ಟಿದೆ. 75 ವರ್ಷಗಳಿಂದ ಸ್ವದೇಶೀ ಮಂತ್ರ ಜಪಿಸುತ್ತಿದ್ದವರೇ, ಈಗ ಜಾಗತೀಕರಣದ ನೇತಾರರಾಗಿದ್ದಾರೆ. ಅದನ್ನು ಕುರಿತು ಬರೆಯಬೇಕಾದ ಅಗತ್ಯ ಲೇಖಕರಿಗೆ ಹಿಂದೆಂದಿಗಿಂತ ಹೆಚ್ಚಾಗಿದೆ. ಇದೇ ನನ್ನ ಇತ್ತೀಚಿನ ಕಾದಂಬರಿಯ ಆಶಯ.
ಪ್ರ: ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುಲಪತಿ ಆಗಿದ್ದ ನೀವು, ಕನ್ನಡದ ಬಗ್ಗೆ ಎಷ್ಟೆಲ್ಲಾ ಮಾತನಾಡುತ್ತೀರಿ. ಆದರೆ, ನಿಮ್ಮ ಮಕ್ಕಳಿಗೆ ಇಂಗ್ಲಿಷ್ ಎಂ.ಎ. ಎಂಫಿಲ್ ಮಾಡಿಸಿದ್ದು ಸರಿಯೇ? ಅದಕ್ಕೆ ನೀವು ವಿರೋಧ ಏಕೆ ಮಾಡಲಿಲ್ಲ? - ಮಂಜು, ಹಾಸನ.
ಉ: ನನ್ನ ಮಕ್ಕಳು ಬಿ.ಎ.ವರೆಗೆ ಕನ್ನಡ ವಿಷಯ ಓದಿದ್ದಾರೆ. ಕನ್ನಡದಲ್ಲಿ ಅವರು ಕಾವ್ಯ, ನಾಟಕ ಬರೆಯುತ್ತಾರೆ.
ಪ್ರ: ಸಿರಿಸಂಪಿಗೆಯಿಂದಾಚೆಗೆ ನೀವು ನಾಟಕಗಳನ್ನೇ ಬರೆದಿಲ್ಲ. ನಿಮ್ಮ ನಂತರದ ನಾಟಕಗಳು ಜೋಕುಮಾರ ಸ್ವಾಮಿ ಮುಂತಾದವುಗಳಷ್ಟು ಜನಪ್ರಿಯವೂ ಆಗಿಲ್ಲ. ಆ ಮಾಧ್ಯಮದ ಮೇಲೆ ನೀವು ಹಿಡಿತ ಕಳಕೊಂಡಿದ್ದೇ ಇದಕ್ಕೆ ಕಾರಣವೇ?- ಜಯಶ್ರೀ ನಾಗರಾಜ್, ಕ್ಯಾಲಿಫೋರ್ನಿಯಾ.
ಉ: ನನ್ನ ಇತ್ತೀಚಿನ ನಾಟಕ ‘ಮಹಾಮಾಯಿ’ ಅದು ಇಂಗ್ಲಿಷ್ನಲ್ಲೂ ಬಂದಿದೆ ಓದಿ.
ಪ್ರ: ಸಿನಿಮಾ ಮಾಡೋದು ಬಿಟ್ಟಿದ್ದು ಯಾಕೆ ಸಾರ್?
ಉ: ನನ್ನಿಂದ ಸಿನಿಮಾ ಮಾಡಿಸೋ ನಿರ್ಮಾಪಕರು ಬಂದಿಲ್ಲ ಅದಕ್ಕೆ
ಪ್ರ: ಚಕೋರಿ ಮಹಾಕಾವ್ಯದಲ್ಲಿ ನಿಮ್ಮ ಆರಂಭಿಕ ಕಾವ್ಯದ ಮಜಾ ಇಲ್ಲ . ಕವಿಯಾಗಿ ಕಂಬಾರ ಸೊರಗಿರೋದು ನಿಜವೇ?ಸಚ್ಚಿದಾನಂದ ಮೂರ್ತಿ, ನ್ಯೂಜರ್ಸಿ.
ಉ: ಇದ್ದಿರಬಹುದು.
ಪ್ರ: ಎಂಟನೇ ಜ್ಞಾನಪೀಠಕ್ಕೆ ನಾನೇ ಅರ್ಹ ಅಭ್ಯರ್ಥಿ ಎಂದು ಹೇಳಿಕೊಂಡು ನೀವು ಓಡಾಡುತ್ತಿದ್ದೀರಂತೆ. ಆ ಬಗ್ಗೆ ಸಾಕಷ್ಟು ಲಾಬಿ ಕೂಡ ಮಾಡುತ್ತಿದ್ದೀರಂತೆ ಹೌದೆ?- ಸಂಗೀತಾ ಜಯತೀರ್ಥ, ವಾಷಿಂಗ್ಟನ್ ಡಿ.ಸಿ.
ಉ: ಇಲ್ಲ.
ಪ್ರ: ಆರಂಭದ ದಿನಗಳಲ್ಲಿ ನಿಮಗಿದ್ದ ರಾಜಕೀಯ ಆಸಕ್ತಿ ಕ್ರಮೇಣ ಕುಗ್ಗಿದ್ದೇಕೆ? ಮಾವೋತ್ಸೆ ತುಂಗಾ, ಶಿವಪುರ ಮುಂತಾದ ಪ್ರಸ್ತಾಪಗಳು ನಂತರ ಕಾಣಸಿಕೊಂಡಿಲ್ಲವಲ್ಲ? - ಸೋಮಸುಂದರ ಆರಾಧ್ಯ, ಬಸವಕಲ್ಯಾಣ.
ಉ: ಹಾಗೇನಿಲ್ಲ. 20ನೇ ಶತಮಾನದ ಮನುಷ್ಯನ ದೈವ-ದುರ್ದೈವಗಳ ನಿರ್ಣಯವಾಗಿದ್ದೇ ರಾಜಕೀಯದಿಂದ. ಇನ್ನು ಮೇಲೆ ವೋಟು ಹಾಕುವ ಯಾವನಿಗೂ ರಾಜಕೀಯ ಚಿಂತನೆಯಿಂದ ಬಿಡುಗಡೆ ಇಲ್ಲ.
ಪ್ರ: ನೀವೆಲ್ಲ ಹೊಸಬರ ಸಾಹಿತ್ಯ ಓದೋಲ್ಲ ಅನ್ನೋ ಮಾತಿದೆ. ನೀವು ಈಚೆಗೆ ಓದಿರುವ ಒಳ್ಳೆಯ ಕೃತಿ ಯಾವುದು? ಹೊಸಬರದಾಗಿದ್ದರೆ ಉತ್ತಮ? - ಮುರಳೀಧರ ವಸಿಷ್ಠ, ಮೈಸೂರು.
ಉ: ಆ ಮಾತು ಸುಳ್ಳು. ಅಗ್ರಹಾರ ಕೃಷ್ಣಮೂರ್ತಿಯವರ ನೀರು, ಗೀತಾಂಜಲಿ ಅವರ ಕನಸುಗಳು ಚೆಲ್ಲಿವೆ, ರೂಪಾ ಹಾಸನ ಅವರ ಒಂದಿಷ್ಟು ಹಸಿರು ಹುಲ್ಲು.... (ತಮ್ಮ ಡೈರಿ ತೆರೆದು, ಹೊಸಬರ 11 ಕೃತಿಗಳ ಪಟ್ಟಿಯನ್ನೇ ನೀಡಿದರು)
ಪ್ರ: ಸಾರ್ ನಿಮ್ಮ ನಾಟಕಗಳು ಕಾರ್ನಾಡರ ನಾಟಕಗಳಂತೆ ಮತ್ತೆ ಮತ್ತೆ ಪ್ರದರ್ಶನವಾಗುತ್ತಿಲ್ಲ ಏಕೆ ಸಾರ್?- ನಾರಾಯಣಮೂರ್ತಿ, ಕೋರಮಂಗಲ.
ಉ: ಗೊತ್ತಿಲ್ಲ ನಾರಾಯಣಮೂರ್ತಿ.
ಪ್ರ: ನೀವು ತುಂಬಾ ಆಶಾವಾದಿ ಅಂತಾ ಕಾಣತ್ತೆ (ಜ್ಞಾನಪೀಠ ಪ್ರಶಸ್ತಿ ಬಗ್ಗೆ) ನಿಮಗೆ ಅಕಸ್ಮಾತ್ ಈ ಬಾರಿ ಪ್ರಶಸ್ತಿ ಬರಲಿಲ್ಲಾ ಅಂದರೆ ನಿಮ್ಮ ಮುಂದಿನ ಹೆಜ್ಜೆ ಏನು ಅಂತ ತಿಳಿಯಬಹುದೇ?- ಲೀನಾ, ಊರು ತಿಳಿಸಿಲ್ಲ.
ಉ: ಬರೆಯುತ್ತೇನೆ. ಪ್ರಶಸ್ತಿ ಬರಲಿ ಎಂದು ಯಾವತ್ತೂ ಬರೆದಿಲ್ಲ. ಬರೆದದ್ದಕ್ಕೆ ಪ್ರಶಸ್ತಿ ಬಂದರೆ ಬೇಡ ಅನ್ನೋಲ್ಲಾ.
ಪ್ರ: ಕಥಾವಸ್ತು ಒಂದೇ ಆದರೂ ಕಥಾನಕ ಶೈಲಿಯ ನಾಗಮಂಡಲಕ್ಕೆ ಸಿಕ್ಕಷ್ಟು ಪ್ರಚಾರ,ಪ್ರಶಸ್ತಿ, ನಿಮ್ಮ ಜನಪದ ಅಭಿವ್ಯಕ್ತಿಯ ಸಿರಿಸಂಪಿಗೆಗೆ ಸಿಗಲಿಲ್ಲ ಏಕೆ? - ಮಂಜುನಾಥ, ಕೋಲಾರ.
ಉ: ಅದು ನಿಮಗೇ ಗೊತ್ತು..
ಪ್ರ: ಇತ್ತೀಚಿನ ದಿನಗಳಲ್ಲಿ (ವರ್ಷಗಳಲ್ಲಿ) ಲೇಖಕರು, ಕನ್ನಡ ಚಳವಳಿಗಾರರು, ಕನ್ನಡ ಸಂಘ-ಸಂಸ್ಥೆಗಳು ಪ್ರಶಸ್ತಿಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ದಾರೆ ಏಕೆ?- ಶಾಲಿನಿ ರಾಮಕೃಷ್ಣ, ನೇಪಾಳ.
ಉ: ಹಾಗೇನಿಲ್ಲ.
ಪ್ರ: ಸಾರ್, ನಿಮ್ಮ ನಾಟಕಗಳನ್ನು ನಮ್ಮ ನಾಡಿನಲ್ಲಿ ಪ್ರದರ್ಶಿಸುವ ಯೋಜನೆ ಇದೆಯೇ? ನಾನು ಜೋಕುಮಾರ ಸ್ವಾಮಿ, ಸಿರಿಸಂಪಿಗೆ, ಅಂಗಿಮೇಲಂಗಿ, ಕರಿಮಾಯಿ ನೋಡಲು ಉತ್ಸುಕಳಾಗಿದ್ದೇನೆ- ರೂಪಾ ಗ್ಲಾಡ್ಸನ್, ದುಬೈ.
ಉ: ನೀವು ಆಮಂತ್ರಿಸಿದರೆ, ಈ ನಾಟಕಗಳನ್ನು ಪ್ರದರ್ಶಿಸಲು ಅನೇಕ ಕನ್ನಡ ನಾಟಕ ತಂಡಗಳು ಸಿದ್ಧವಾಗಿವೆ.
ಪ್ರ: ನೀವು ಹಂಪಿ ಕನ್ನಡ ವಿ.ವಿ. ಕುಲಪತಿಗಳಾಗಿದ್ದಾಗ, ನೀವು ನೀಡಿದ ಮಹತ್ವದ ಕೊಡುಗೆ ಏನು?- ಪ್ರಹ್ಲಾದ ಜಮಖಂಡಿ, ಸೇಂಟ್ಪಾಲ್, ಮಿನಿಸೋಟ.
ಉ: ಆ ವಿಶ್ವವಿದ್ಯಾಲಯಕ್ಕೆ ಸರಿಯಾದ ಅಸ್ತಿಭಾರ ಹಾಕಿದ್ದೇನೆ.
ಪ್ರ: ಎಸ್.ಎಲ್. ಭೈರಪ್ಪ ಹಾಗೂ ಚಂದ್ರಶೇಖರ ಕಂಬಾರರ ನಡುವೆ 8ನೇ ಜ್ಞಾನಪೀಠ ಪ್ರಶಸ್ತಿಗೆ ಸ್ಪರ್ಧೆ ಏರ್ಪಟ್ಟಿದೆ. ಭಾರಿ ಲಾಬಿಯೂ ನಡೆಯುತ್ತಿದೆ ಎಂದು ಪತ್ರಿಕೆಯಾಂದು ವರದಿ ಮಾಡಿದೆ. ನೀವೇನಂತೀರಿ?
ಉ: ಇದು ತಪ್ಪು ಅಭಿಪ್ರಾಯ.
ಪ್ರ1: ಬಹುರಾಷ್ಟ್ರೀಯ ಕಂಪನಿಗಳು (ಎಂಎನ್ಸಿ) ಕನ್ನಡ ಕಲಿಯಬೇಕು ಎನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಪ್ರ2: ಕನ್ನಡ ಕಲಿಸಲು ಸೂಕ್ತ ವೇದಿಕೆಯೇ ಇಲ್ಲದಿರುವಾಗ, ಎಂಎನ್ಸಿಗಳು ಹೇಗೆ ಕನ್ನಡ ಕಲಿಯಲು ಸಾಧ್ಯ?
ಪ್ರ3: ಕನ್ನಡ - ಕರ್ನಾಟಕದ ಪರಂಪರೆ ಹಾಗೂ ಶ್ರೀಮಂತ ಸಂಸ್ಕೃತಿಯನ್ನು ಉಳಿಸುವಲ್ಲಿ ಅಮೆರಿಕ, ಕೆನಡ, ಯು.ಕೆ. ಮತ್ತಿತರ ರಾಷ್ಟ್ರಗಳಲ್ಲಿರುವ ಕನ್ನಡಿಗರ ಪಾತ್ರ ಏನು? - (ಈ 3 ಪ್ರಶ್ನೆಗಳು ವೆಂಕಟಪ್ಪ ಕುಮಾರಸ್ವಾಮಿ ಅವರದು)
ಉ1: ಕರ್ನಾಟಕದಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳು ಖಂಡಿತಾ ಕನ್ನಡ ಕಲಿಯಬೇಕು ಮತ್ತು ತಮ್ಮ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು.
ಉ2: ಕನ್ನಡ ಬಾರದವರಿಗೆ ಕನ್ನಡ ಕಲಿಸಲು ಕೆಲವು ಸಂಸ್ಥೆಗಳಿವೆ ಎಂದು ಕೇಳಿದ್ದೇನೆ. ಇಲ್ಲದಿದ್ದರೆ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ವಿಶ್ವವಿದ್ಯಾಲಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳು ಇಂತರ ಕೋರ್ಸ್ಗಳನ್ನು ಆರಂಭಿಸಬೇಕು.
ಉ3: ಕನ್ನಡ ಸಂಸ್ಕೃತಿ - ಪರಂಪರೆ ಉಳಿಸಲು ಆ ದೇಶದಲ್ಲಿರುವವರು ಕಡ್ಡಾಯವಾಗಿ ಮನೆಯಲ್ಲಿ, ತಮ್ಮ ಮಕ್ಕಳೊಂದಿಗೆ ಹಾಗೂ ಕನ್ನಡದ ಗೆಳೆಯರೊಂದಿಗೆ ಕನ್ನಡದಲ್ಲೇ ಮಾತನಾಡಬೇಕು. ತಮ್ಮ ಅನುಭವವನ್ನು ಕನ್ನಡದಲ್ಲಿ ಬರೆದು ಪ್ರಕಟಿಸಬೇಕು.
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications