ಎಸ್ಸೆಂ ಕೃಷ್ಣ ಪಾದಯಾತ್ರೆ ಜಾತ್ರೆಗೆ ಜೈ ಎಂದ ಡಾ.ಅನಂತಮೂರ್ತಿ
ಬೆಂಗಳೂರು : ಕಾವೇರಿಗಾಗಿ ಹೋರಾಡುತ್ತಿರುವ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಖ್ಯಮಂತ್ರಿ ಕೃಷ್ಣ ನಡೆಸುತ್ತಿರುವ ಪಾದಯಾತ್ರೆಯಲ್ಲಿ ರಾಜಕಾರಣಿಗಳು ಹಾಗೂ ಮಠಾಧೀಶರ ಜೊತೆಗೆ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಯು. ಆರ್. ಅನಂತಮೂರ್ತಿ ಕೂಡ ಪಾಲ್ಗೊಂಡಿದ್ದಾರೆ.
ಅಧಿಕಾರದಲ್ಲಿರುವವರು ಜನರ ಜೊತೆಗೆ ಮಾತನಾಡದಿದ್ದಾಗ ಮಂದಿ ಸಿಟ್ಟುಗೊಳ್ಳುವುದು ಸಹಜ.ಆದ್ದರಿಂದ ಜನರ ಜೊತೆ ಸ್ಪಂದಿಸಲು ಎಸ್ಸೆಂ ಕೃಷ್ಣರು ಕೈಗೊಂಡಿರುವ ಈ ಪಾದಯಾತ್ರೆ ಸರಿಯಾದ ಕ್ರಮವೇ ಆಗಿದೆ ಎಂದು ಅನಂತಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಬಸ್ಸಿಗೆ ಕಲ್ಲು ಹೊಡೆಯುವ ಮೂಲಕ ಪ್ರತಿಭಟನೆ ಮಾಡುವುದರಿಂದ ಏನು ಲಾಭ.. ನಾವೇ ನಮ್ಮ ಆಸ್ತಿ ಪಾಸ್ತಿಗಳನ್ನು ಪುಡಿಗಟ್ಟುವುದು ನ್ಯಾಯವೇ ?ಕಾವೇರಿ ಜಲಾನಯನ ಪ್ರದೇಶದಲ್ಲಿನ ರೈತರು ಸಿಟ್ಟುಗೊಂಡು ತಮ್ಮ ವಸ್ತುಗಳನ್ನು ತಾವೇ ಪುಡಿಗಟ್ಟುತ್ತಿದ್ದಾರೆ. ಅಧಿಕಾರದಲ್ಲಿರುವವರು ಜನರಿಂದ ದೂರವಿದ್ದಾಗ ಇಂತಹ ವ್ಯಗ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ.
ಕಾವೇರಿ ವಿಷಯ ತುಂಬಾ ಸೂಕ್ಷ್ಮವಾದುದು. ಈ ವಿಷಯದ ಬಗ್ಗೆ ಮಾತನಾಡುವಾಗ ಯಾವುದೇ ಮಂತ್ರಿಗೆ ಜನರ ಬೆಂಬಲ ಬೇಕಾಗುತ್ತದೆ. ಕೃಷ್ಣ ಅವರಿಗೆ ಪಾದಯಾತ್ರೆಯಿಂದಾಗಿ ಬೆಂಬಲ ಬಂದಿದೆ. ಈ ಮೂಲಕ ಇನ್ನಷ್ಟು ಬೆಂಬಲ ಬರುತ್ತದೆ ಎಂದು ಅನಂತಮೂರ್ತಿ ತಮ್ಮ ವಿಶ್ವಾಸ ವ್ಯಕ್ತಪಡಿಸಿದರು.
ಸಾಹಿತಿಗಳಾದ ಚಂದ್ರಶೇಖರ ಕಂಬಾರ, ಬರಗೂರು ರಾಮಚಂದ್ರಪ್ಪ, ಬೇಲಿ ಮಠದ ಶಿವರುದ್ರ ಸ್ವಾಮೀಜಿ ಮತ್ತಿತರರು ಕೃಷ್ಣ ಪಾದಯಾತ್ರೆಯನ್ನು ಬೆಂಬಲಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications