ಮನೆ ಕಟ್ಟಿದವರೇ ಮನೆ ಬಿಟ್ಟು ಹೋದಾರೇ ...

ಬೇರೆಯಾಗುತ್ತೇವೆ ಅಂತ ಹೋರಾಡುವಾಗ ಇರುವ ಜೋಶ್‌ನಲ್ಲಿ ‘ಮುಂದೆ ಸುಖವಾಗಿರುತ್ತೇವೆ’ ಎನ್ನುವ ಕನಸಿನ ಗೋಪುರ ಇರುತ್ತದೆ. ಆದರೆ ಜಗಳವಾಡಿ ಒಡೆಯುತ್ತಿರುವುದಕ್ಕಿಂತ ಜತೆಯಾಗಿ ಕಷ್ಟ ಸುಖ ಹಂಚಿಕೊಳ್ಳುವುದು ಸಿಹಿ ಅಲ್ಲವೇ ? ನಿಮ್ಮ ಜಂಕ್ತಿಯಡಿಯಲ್ಲಿ ನಾವು ಇರಲು ಬಯಸುವುದಿಲ್ಲ ಅಂತ ಉತ್ತರ ಕರ್ನಾಟಕದವರು ಚೊಂಬು ಚೆರಿಗೆ ಹಿಡಿದುಕೊಂಡು ಹೊಸಿಲ ಬಳಿ ಜಗಳವಾಡುವುದನ್ನು ನೋಡಿದಾಗ ಇದೇ ಮಂದಿ ಒಂದು ಕಾಲದಲ್ಲಿ ಏಕೀಕರಣದ ಮಂತ್ರ ಜಪಿಸುತ್ತಾ ಲಾಟಿ ಏಟು ತಿಂದು ರಕ್ತ ಹರಿಸಿದ್ದು ನೆನಪಾಗುತ್ತದೆ.

ಆವತ್ತು

ಸರಿಯಾಗಿ ನಲ್ವತ್ತೇಳು ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಒಂದು ದೊಡ್ಡ ಗಲಾಟೆಯಾಗಿತ್ತು. ಹುಬ್ಬಳ್ಳಿಯ ಹಿರಿಯ ತಲೆಗಳಿಗೆಲ್ಲ ಅಲ್ಲಿನ ನೆಹರೂ ಮೈದಾನಕ್ಕೆ ಹೋಗುವಾಗ ಗುಳಕವ್ವನ ಕಟ್ಟೆ ಯ ಹೆಸರಿನ ನೆನಪಾಗುತ್ತಿರಬಹುದು. ಅದೇ ಕಟ್ಟೆಯ ಜಾಗ ಈಗ ಮೈದಾನವಾಗಿದೆ. ಆ ಕಟ್ಟೆಯಲ್ಲಿ 1953ರ ಏಪ್ರಿಲ್‌ 19ರಂದು 25 ಸಾವಿರಕ್ಕೂ ಮಿಕ್ಕಿ ಜನ ಸೇರಿದ್ದರು. ಅದೇ ದಿನ ಹುಬ್ಬಳ್ಳಿ ಪುರಸಭೆಯಲ್ಲಿ ಪ್ರದೇಶ ಕಾಂಗ್ರೆಸ್‌ ಸಮಿತಿ ಸಭೆ ಸೇರಿತ್ತು. ಬೆಳಗಾಂ ನಮಗೆ ಬೇಕು, ಕರ್ನಾಟಕ ಒಂದಾಗಬೇಕು ಅಂತ ಕಚೇರಿ , ಮನವಿ, ಮಾತುಕತೆ, ಸಮಿತಿಗಳಲ್ಲಿ ನಡೆದ ಚರ್ಚೆ, ವ್ಯವಹಾರಗಳೊಂದೂ ಕರ್ನಾಟಕವನ್ನು ಕಟ್ಟುವುದರಲ್ಲಿ ಸಫಲವಾಗದೇ ಇದ್ದಾಗ ಜನ ರೋಸಿ ಹೋಗಿದ್ದರು. ಕಾರ್ಯ ಸಾಧನೆಗಾಗಿ ಕೈಗೆ ಕಲ್ಲೆತ್ತಿಕೊಂಡಿದ್ದರು. ಕಲ್ಲು ತೂರಾಟ, ಹೊಡೆದಾಟ, ಲಾಠಿ ಚಾರ್ಜು ನಡೆದಿದ್ದವು. ಈ ಗಲಾಟೆಯಲ್ಲಿದ್ದವರೆಲ್ಲ ಹುಬ್ಬಳ್ಳಿ, ಬಿಜಾಪುರ, ಬೆಳಗಾವಿ, ಬಿಜಾಪುರ, ಬೈಲಹೊಂಗಲದ ಕನ್ನಡಿಗರು. ನಾವು ಉತ್ತರದವರು, ಬೇರೆಯಾಗಬೇಕು ಎನ್ನುವ ತಿಳಿ ಆಲೋಚನೆಯಾದರೂ ಅವಾಗವರ ನ್ಯೂರಾನ್‌ಗಳಲ್ಲಿ ಸುಳಿದಿರುವ ಸಾಧ್ಯತೆ ಇಲ್ಲವೇ ಇಲ್ಲ.

ಅಂದಿನಿಂದ ಕರ್ನಾಟಕ ಏಕೀಕರಣದ ಕೆಲಸ ಚುರುಕಾಯಿತು. ಬೆಳಗಾಂನ್ನು ಗಿಟ್ಟಿಸಿಕೊಳ್ಳಲು, ಕಾಸರಗೋಡನ್ನು ಉಳಿಸಿಕೊಳ್ಳಲು, ಸೊಲ್ಲಾಪುರವನ್ನು ಕನ್ನಡ ನಕ್ಷೆಯಲ್ಲಿ ಬರೆಯಲು, ಪಾವಗಡವನ್ನು ದಕ್ಕಿಸಿಕೊಳ್ಳುವುದಕ್ಕೆ ಉತ್ತರ ದಕ್ಷಿಣ ಎನ್ನುವ ಭೇಧವಿಲ್ಲದೇ ಸರಕಾರದೊಡನೆ ಜಗಳ ಕಾದರು. ಇದು ಹುಬ್ಬಳ್ಳಿಯ ಕತೆ ಮಾತ್ರವಲ್ಲ. 1890 ರ ಕಾಲ, ಧಾರವಾಡದಲ್ಲಿ ಆರಂಭವಾದ ಕರ್ನಾಟಕ ವಿದ್ಯಾವರ್ಧಕ ಸಂಘ ವಾಗ್ಭೂಷಣ ಪತ್ರಿಕೆಯ ಮೂಲಕ ಕನ್ನಡ ಮಂದಿಯ ನ್ನು ಒಂದು ಸೂರಿನಡಿ ತರುವುದಕ್ಕೆ ಆಲೂರು ವೆಂಕಟರಾಯರು ಬೆವರು ಹರಿಸಿದರು. ಆಲೂರು ವೆಂಕಟರಾಯರ ಕರ್ನಾಟಕ ಗತ ವೈಭವ ಗ್ರಂಥದಲ್ಲಿ ಕನ್ನಡ ಜನತೆಯ ರೊಚ್ಚು ಕೆಚ್ಚುಗಳ ಪ್ರತೀಕವಾಗಿತ್ತು. ಏಕೀಕರಣ ಹೋರಾಟದತ್ತ ಉದಾಸೀನವಾಗಿದ್ದ ಯಾರೇ ಆದರೂ ಚಳವಳಿಯಲ್ಲಿ ಬಂದು ಸೇರಿಕೊಳ್ಳುವ ಸ್ಫೂರ್ತಿ ತುಂಬಿತ್ತು.

ಇವತ್ತು

ಏಕೀಕರಣಕ್ಕಾಗಿ ನಡೆದ ಹೋರಾಟಗಳು ನೆನಪಿನಂಗಳದಿಂದ ಒಳಗೆ ಸರಿಯುವ ಮುಂಚೆಯೇ ಅಪಸ್ವರ ಕೇಳಿಬರುವುದಕ್ಕೆ ಕಾರಣವೇನು ? ಹಿರಿಯರು ಕಷ್ಟ ಪಟ್ಟು ಕಟ್ಟಿಟ್ಟದ್ದನ್ನು ಒಡೆಯುವುದೇ ಇವರ ಗುರಿಯೆಂದು ಹೇಳೋಣವೇ, ರಾಜಕೀಯ, ಅಧಿಕಾರಗಳ ದಾಹ ಎನ್ನೋಣವೇ ? ಇವುಗಳೇ ಕಾರಣವಾಗಿದ್ದರೆ ಪ್ರತ್ಯೇಕ ಧ್ವಜ ಊರುವುದಕ್ಕೆ ಮೊನ್ನಿನ ಜೂನ್‌ 21ನ್ನೇ ಉತ್ತರದವರು ಕಾಯುತ್ತಿರಲಿಲ್ಲ ಎನಿಸುತ್ತದೆ.

ಏಕೀಕರಣವಾಗಿ 44 ವರ್ಷಗಳಲ್ಲಿ ಸಭೆ, ಸಮಾರಂಭ, ಗೌಜಿ ಗದ್ದಲಗಳು ನಡೆಯುವುದು, ಕಟ್ಟಡಗಳು, ಕಚೇರಿಗಳು ತಳವೂರುವುದು, ಪೆನ್ಶನರ್ಸ್‌ ಪಾರಡೈಸ್‌ ಬೆಂಗಳೂರಿನಲ್ಲಿ . ಮತ್ತೆ ಎರಡ್ಹೆಜ್ಜೆ ಮುಂದುವರೆದು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು, ವಾಣಿಜ್ಯ ನಗರ ಮಂಗಳೂರು... ಹೀಗೆಯೇ. ಪ್ರಗತಿ ಪಥದಲ್ಲಿ ಉತ್ತರ ಕರ್ನಾಟಕದ ಹೆಸರು ಬರುವುದು ಅಪರೂಪಕ್ಕೇ. ಬಂದೇ ಬರುತಾವ ಕಾಲ ಎಂದು ಕಾಯುತ್ತಾ ಕುಳಿವರ ಸಿಟ್ಟು ಸ್ಫೋಟಿಸುವುದಕ್ಕೆ ಒಂದು ನೆಪ ಬೇಕಿತ್ತಷ್ಟೇ. ಎಲ್ಲ ದಿಕ್ಕಿನಿಂದಲೂ ಚಳವಳಿ ಮಾಡಿ ಕರ್ನಾಟಕವನ್ನು ಒಂದು ಮಾಡಲು ದುಡಿದವರಿಗೆ ಯಾವ ಕಡೆಯಲ್ಲಿಯೂ ಮಣೆ ಸಿಗದಿದ್ದಾಗ ಎಳೆಯನ್ನೇ ಕಡಿದುಕೊಳ್ಳುವ ನಿರ್ಧಾರ ಹೊರ ಬಂದರೆ ಅದಕ್ಕ್ಯಾರೂ ಆಶ್ಚರ್ಯ ಪಡಬೇಕಾಗಿಲ್ಲ.

ಏಕೀಕರಣಕ್ಕೆ ಹೋರಾಡಿದ ಕೈಯಾರ ಕಿಞಣ್ಣ ರೈಗಳು ಕಾಸರಗೋಡಿನಲ್ಲಿ ಕನ್ನಡ ಧ್ವಜ ಹಾರಲಿದೆ ಎನ್ನುವ ನಂಬಿಕೆಯನ್ನು ಎಂದೂ ಬಿಟ್ಟವರಲ್ಲ. ‘ಬರ್ಲಿನ್‌ ಗೋಡೆ ಎಂಭತ್ತು ವರ್ಷಗಳ ನಂತರ ಪುಡಿಯಾಗಲಿಲ್ಲವೇ ? ಕಾಸರಗೋಡಿನಲ್ಲಿ ಕನ್ನಡ ಬಾವುಟ ಹಾರಿಯೇ ತೀರುತ್ತದೆ’ ಎನ್ನುತ್ತಾರೆ. ಇಂತಹ ಆಸೆಗಳನ್ನಿಟ್ಟುಕೊಂಡ ತಲೆ ನೆರೆತ ಹಿರಿಯರಿಗೆ ಬಹುಶಃ ಸಾಂಕೇತಿಕ ಧ್ವಜಾರೋಹಣದ ಹಿಂದಿರುವ ನೋವು ಅರ್ಥವಾದೀತು. ಮೊನ್ನೆ ಧಾರವಾಡದಲ್ಲಿ ಧ್ವಜಾರೋಹಣ ನಡೆದಾಗ ಚಳವಳಿಕಾರರು ಆಡಿದ ಮಾತುಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು. ನಮ್ಮ ಎಲ್ಲಾ ಕನಸುಗಳು ಭಗ್ನವಾಗಿವೆ. ಏಕೀಕರಣದ ಉದ್ದೇಶ ಸಂಪೂರ್ಣ ವಿಫಲವಾಗಿದೆ. ಅನಾದರ- ಅವಮಾನವನ್ನ ನಾವಿನ್ನು ಸಹಿಸೆವು ಎನ್ನುವ ಅತೃಪ್ತರ ಮಾತುಗಳನ್ನು ಸಹನೆಯಿಂದ ಕೇಳಿಸಿಕೊಳ್ಳುವ ತಾಳ್ಮೆ ಎಲ್ಲರದಾದಲ್ಲಿ ಮನೆ ಒಡಕಿನ ಬಿರುಕುಗಳನ್ನು ಮುಚ್ಚುವ ದಾರಿ ಕಂಡೀತೇನೊ. ಎಲ್ಲಾ ಚೆನ್ನಾಗಿದ್ದು ಉದ್ದಟತನದಿಂದ ಬೇರೆ ಹೋಗುವ ಮಾತಾಡುತ್ತಿದ್ದಾರೆ ಎನ್ನುವ ಅವಕಾಶವೇ ಇಲ್ಲಿ ಇಲ್ಲ. ಅವರು ಖುಷಿಯಿಂದ ಹೋಗುವ ಸೊಲ್ಲೆತ್ತಿಲ್ಲ ಎನ್ನುವುದನ್ನೂ ನಾವು ಗಮನಿಸಬೇಕು. ನಮ್ಮ ಊರಿನಲ್ಲೂ ಕಚೇರಿ, ಕಟ್ಟಡಗಳು, ಆಧುನಿಕತೆ, ಅಭಿವೃದ್ಧಿ ಆಗಬೇಕು, ಸರಕಾರ ಕ್ಷೇಮ ಕೇಳಬೇಕು ಅಂತ ಆಸೆ ಪಟ್ಟವರನ್ನು ಕಣ್ಣೆತ್ತಿ ನೋಡದಿದ್ದರೆ ಆಗುವ ನೋವು ದುಗುಡಗಳು ಕಟ್ಟೆಯಾಡೆದು ಸಿಟ್ಟಾಗುತ್ತವೆ. ನಮ್ಮವರ ಎದೆಯ ಭಾರ, ನಿಟ್ಟುಸಿರುಗಳನ್ನು ಕೇಳಿಸಿಕೊಳ್ಳುವ ಜವಾಬ್ದಾರಿ ಈಗ ಎಲ್ಲ ಕನ್ನಡಿಗರ ಮುಂದಿದೆ.

ಮುಖಪುಟ / ಸಾಹಿತ್ಯ ಸೊಗಡು


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+