‘ತಾವೇ ಸರಿ ಎನ್ನುವ ಅಹಂಕಾರಿ ಅನಂತಮೂರ್ತಿ ಅಧ್ಯಕ್ಷರಾಗಲು ಅನರ್ಹರು’
ತುಮಕೂರು: ತಾವೇ ಸರಿ, ತಾವು ಮಾಡಿದ್ದೇ ಸರಿ ಎಂಬ ಅಹಂಕಾರದಿಂದ ವರ್ತಿಸುತ್ತಿರುವ ಡಾ. ಯು.ಆರ್. ಅನಂತಮೂರ್ತಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲು ಅನರ್ಹರು ಎಂದು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಡಿ ಅಧ್ಯಕ್ಷ ಪ್ರೊ. ಸಿ.ಎಚ್. ಮರಿದೇವರು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ 1989ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಡಾ. ಆರ್.ಸಿ. ಹಿರೇಮಠ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಕೇಂದ್ರ ಸಾಹಿತ್ಯ ಪರಿಷತ್ತಿನ ಕ್ರಮವನ್ನು ವಿರೋಧಿಸಿರುವ ಅನಂತಮೂರ್ತಿ ಅವರು, ತುಮಕೂರು ಸಮ್ಮೇಳನದ ಅಧ್ಯಕ್ಷರಾಗಲು ಅನರ್ಹರು ಎಂದು ಅವರು ಪ್ರತಿಪಾದಿಸಿದ್ದಾರೆ.
ಹಿರೇಮಠ್ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ತಪ್ಪು ಎನ್ನುವುದಾದರೆ, ಅನಂತಮೂರ್ತಿ ಆಯ್ಕೆ ಶುದ್ಧಾಂಗ ತಪ್ಪು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃತಿಗಳನ್ನು ಹೊರತಂದಿರುವ ಹಿರೇಮಠ್ರ ಆಯ್ಕೆ ಅತ್ಯಂತ ಸೂಕ್ತ ಎಂದೂ ಸಮರ್ಥಿಸಿಕೊಂಡಿದ್ದಾರೆ.
1989ರಲ್ಲಿ ಹಿರೇಮಠ್ರ ಆಯ್ಕೆಯನ್ನು ತಾವು ಮಾತ್ರ ವಿರೋಧಿಸಿದ್ದಾಗಿ ಅನಂತಮೂರ್ತಿ ಪತ್ರಿಕೆಯಾಂದರ ಸಂದರ್ಶನದಲ್ಲಿ ತಿಳಿಸಿದ್ದು ನಾಡಿನ ಬಹುತೇಕ ಸಾಹಿತಿಗಳನ್ನು ಕೆರಳಿಸಿದೆ. ಶುಕ್ರವಾರ 50 ಹಿರಿಯ ಸಾಹಿತಿಗಳು- ಬರಹಗಾರರು ಮೂರ್ತಿ ಅವರ ಈ ಹೇಳಿಕೆ ಖಂಡಿಸಿದ್ದರು.
ಕೊನೆ ಮಾತು : ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಮಹಾತ್ಮಾ ಗಾಂಧೀ ಅವರು ತುಮಕೂರಿಗೆ ಆಗಮಿಸಿದ್ದಾಗ, ಈ ಹೊತ್ತು 69ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗುತ್ತಿರುವ ಸರಕಾರಿ ಕಿರಿಯ ಕಾಲೇಜು ಮೈದಾನದಲ್ಲಿ ಬಹಿರಂಗ ಭಾಷಣ ಮಾಡಿ, ಶಾಂತಿ ಮಂತ್ರವನ್ನು ಪ್ರತಿಪಾದಿಸಿದ್ದರು. ಆದರೆ, ಈ ಹೊತ್ತು ಸಾಹಿತ್ಯ ಸಂಭ್ರಮಕ್ಕೆ ಮೊದಲೇ ಸಾಹಿತಿಗಳ ನಡುವಿನ ಸಮರದ ಗಮಲು ಮೂಗಿಗೆ ತಟ್ಟುತ್ತಿದೆ.(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications