ತುಮಕೂರು ಸಾಹಿತ್ಯ ಸರಸ್ವತಿಯ ಕಗ್ಗೊಲೆ
*ಚ.ಹ. ರಘುನಾಥ
ತುಮಕೂರಿನಲ್ಲಿ ನಡೆಯಬೇಕಾಗಿದ್ದ 69 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿಂತದ್ದು ಯಾಕೆ ? ಸಾಹಿತ್ಯ ಹಬ್ಬದ ಆತಿಥ್ಯ ವಹಿಸುವಂಥ ಗೌರವ ಜಿಲ್ಲೆಗೆ ದೊರಕಿದ್ದರೂ, ಜಿಲ್ಲೆಯ ಜನ ಆ ಸಮ್ಮಾನವನ್ನು ದಕ್ಕಿಸಿಕೊಳ್ಳದಷ್ಟು ಅರಸಿಕರೆ ? ಉತ್ತರಗಳ ಜಾಡಿನ ಹಿಂದೆ ಸಾಗಿದರೆ ಎದುರಾಗುವುದು ಕೊಳಕು ರಾಜಕಾರಣದ ಸುಳಿ. ಸಾಹಿತ್ಯದ ಗಂಧ ಒಗ್ಗದ ಮೂರ್ಖರ ಮಂಗಾಟಗಳು ಹಾಗೂ ಜಾತಿ ರಾಜಕಾರಣದ ಕೊಳಚೆ.
39 ವರ್ಷಗಳ ಹಿಂದೆ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸುವ ಗೌರವ ಜಿಲ್ಲೆಗೆ ಸಿಕ್ಕಿತ್ತು . ಇಂಥಾ ಸಡಗರವನ್ನು ಮತ್ತೆ ಜಿಲ್ಲೆಯಲ್ಲಿ ನಡೆಸಬೇಕೆನ್ನುವ ಸಾಹಿತ್ಯಾಸಕ್ತರ ದಶಕಗಳ ಬಯಕೆಗೆ ಮೂರ್ತರೂಪು ಕೊಟ್ಟಿದ್ದು ಎಚ್. ಮರಿದೇವರು.
ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸಿಯೇ ನಡೆಸುತ್ತೇನೆ ಎಂದು ಚುನಾವಣೆಯಲ್ಲಿ ಆಶ್ವಾಸನೆ ಕೊಟ್ಟೇ ಕಸಾಪದ ಅಧ್ಯಕ್ಷ ಪದ ಏರಿದವರವರು. ಎರಡು ವರ್ಷಗಳಿಂದಲೂ ಜಿಲ್ಲೆಗೆ ಸಮ್ಮೇಳನದ ಆತಿಥ್ಯ ವಹಿಸಬೇಕೆಂದು, ಕೇಂದ್ರ ಕಸಾಪದ ಮೇಲೆ ಪ್ರಬಲವಾದ ಒತ್ತಡ ಹೇರುತ್ತಲೇ ಬಂದವರು. ಮರಿದೇವರೊಂದಿಗಿನ ಗೆಳೆತನದ ಕಾರಣದಿಂದಲೊ, ಅಥವಾ ಮರಿದೇವರ ಅದ್ಭುತ ಸಂಘಟನಾ ಸಾಮರ್ಥ್ಯ ಕಂಡಿದ್ದರಿಂದಲೊ, ಅಂತೂ ತುಮಕೂರಿಗೆ 69 ನೇ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸಲು ಕಸಾಪದ ಅಧ್ಯಕ್ಷ ಬಸವಾರಾಧ್ಯರು ಒಪ್ಪಿದ್ದರು.
ಬಾಗಲಕೋಟೆ ಸಮ್ಮೇಳನದ ಕೊನೆಗೆ ಮುಂದಿನ ಸಾಹಿತ್ಯ ಸಮ್ಮೇಳನ ತುಮಕೂರಿನಲ್ಲಿ ಎಂದು ಬಸವಾರಾಧ್ಯರು ಪ್ರಕಟಿಸಿದಾಗ, ತುಮಕೂರಿನ ಕಸಾಪ ಪ್ರತಿನಿಧಿಗಳು ಕುಣಿದು ಕುಪ್ಪಳಿಸಿ ಖುಷಿ ಹಂಚಿಕೊಂಡಿದ್ದರು. ಅದೆಲ್ಲಾ ಈಗ ಅಡಗಿದೆ. ಮರಿದೇವರು ತಮ್ಮ ತೋಟದಮನೆಯಲ್ಲಿ ಮಂಕಾಗಿ ಕುಳಿತಿದ್ದಾರೆ. ತುಮಕೂರಿನಲ್ಲಿ ಸಮ್ಮೇಳನ ರದ್ದಾಗಿದೆ. ಇಷ್ಟರಲ್ಲೇ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಸರಳವಾಗಿ ನಡೆಸಲಾಗುವುದು ಎಂದು ಬಸವಾರಾಧ್ಯ ಪ್ರಕಟಿಸಿದ್ದಾರೆ.
ಬಿಜ್ಜಳನ ಹಾಳು ಮಾಡಿದ ಕೊಂಡಿ ಮಂಚಣ್ಣನ ಕಥೆ ನಿಮಗೆ ಗೊತ್ತಲ್ಲವಾ ?
ತುಮಕೂರಿನಲ್ಲಿ ಸಮ್ಮೇಳನ ರದ್ದಾದದ್ದು ಏಕೆ ಎಂದರೆ ಮರಿದೇವರು ಹೇಳುವುದು ಮಂಚಣ್ಣನ ಕಥೆ. ಬಸವಣ್ಣನ ಮೇಲೆ ಬಿಜ್ಜಳ ಸಂಶಯ ತಾಳಿದ್ದಕ್ಕೆ, 12 ನೇ ಶತಮಾನದ ಕ್ರಾಂತಿಗೆ ಈ ಕೊಂಡಿ ಮಂಚಣ್ಣನೇ ಕಾರಣ ಅನ್ನುತ್ತಾರೆ ಮರಿದೇವರು. ಬಿಜ್ಜಳ ಯಾರು, ಬಸವಣ್ಣ ಯಾರು, ಕೊಂಡಿ ಮಂಚಣ್ಣ ಯಾರು ಎಂದರೆ ಅವರು ಎಲ್ಲಾ ನಿಮಗೇ ಗೊತ್ತಲ್ಲ ಅನ್ನುತ್ತಾರೆ. ಅವರು ಹೇಳುವ ಸ್ಪಷ್ಟವಾದ ಒಂದೇ ಮಾತೆಂದರೆ - ಎಲ್ಲದಕ್ಕೂ ಕಾರಣರು ಜಿಲ್ಲಾ ಉಸ್ತುವಾರಿ ಮಂತ್ರಿ ಟಿ.ಬಿ. ಜಯಚಂದ್ರ ಹಾಗೂ ಸಂಸದ ಬಸವರಾಜು. ಮರಿದೇವರು ವರ್ಣಿಸುವಂತೆ ಇವರಿಬ್ಬರು ಸಾಹಿತ್ಯ, ಸಂಸ್ಕೃತಿಯ ಗಂಧ ಗೊತ್ತಿಲ್ಲದ ಮುಠ್ಠಾಳರು, ಸ್ವಾರ್ಥಿಗಳು, ಅಸೂಯಾಪರರು.
ನಂಬಿಸಿ ನಡು ನೀರಿನಲ್ಲಿ ಕೈ ಬಿಟ್ಟರು : 39 ವರ್ಷಗಳ ನಂತರ ಜಿಲ್ಲೆಗೆ ದಕ್ಕಿದ್ದ ಗೌರವವನ್ನು ಇವರಿಬ್ಬರೂ ಮಣ್ಣುಗೂಡಿಸಿದರು. ಸಾಹಿತ್ಯದ ಗಂಧ ಗಾಳಿ ಇಲ್ಲದ ಈ ಮಂದಿಯಿಂದಾಗಿ ಜಿಲ್ಲೆಯ ಮಾನ ಮೂರಾಬಟ್ಟೆಯಾಯಿತು ಎಂದು ಮರಿದೇವರು ಅಲವತ್ತುಕೊಳ್ಳುತ್ತಾರೆ. ಇಷ್ಟಕ್ಕೂ, ಸಮ್ಮೇಳನ ರದ್ದಾಗುವುದಕ್ಕೂ, ಈರ್ವರು ರಾಜಕಾರಣಿಗಳಿಗೂ ಎತ್ತಣ ನಂಟು. ಮರಿದೇವರು ಹೇಳುತ್ತಾರೆ-
- ಸಮ್ಮೇಳನದ ಸಿದ್ಧತೆಗೆ ಸ್ವಾಗತ ಸಮಿತಿಯನ್ನು ರಚಿಸಲು ಕರೆಯುವ ಸಭೆಯನ್ನು ಜಯಚಂದ್ರ ಮುಂದೂಡುತ್ತಲೇ ಬಂದರು. ಸಂಪ್ರದಾಯದ ಪ್ರಕಾರ, ಜಿಲ್ಲಾ ಉಸ್ತುವಾರಿ ಸಚಿವರೇ ಸ್ವಾಗತ ಸಮಿತಿಯ ಅಧ್ಯಕ್ಷರಾಗಬೇಕಾದ್ದರಿಂದ ಜಯಚಂದ್ರ ಅವರನ್ನು ಬಿಟ್ಟು ಮುನ್ನಡೆಯುವಂತಿರಲಿಲ್ಲ .
- ಇಂದು ಮಾಡುವ, ನಾಳೆ ಮಾಡುವ ಎಂದು ಸಮ್ಮೇಳನವನ್ನು ಮುಂದೂಡುತ್ತಲೇ ಬಂದವರು ಜಯಚಂದ್ರ. ಯಾವತ್ತೂ ಅವರು ಸಮ್ಮೇಳನ ಮಾಡುವುದು ಬೇಡ ಅಂದದ್ದೇ ಇಲ್ಲ . ಆದರೆ, ಕೊನೆಹಂತದಲ್ಲಿ ಸಾಧ್ಯವಿಲ್ಲ ಎಂದು ಕೈ ಚೆಲ್ಲಿದರು. ಅದಕ್ಕೆ ಜಯಚಂದ್ರ ಕೊಟ್ಟ ಕಾರಣ- ಜಿಲ್ಲೆಯಲ್ಲಿ ರಸ್ತೆಗಳು ಸರಿಯಿಲ್ಲ . ರಾಜ್ಯದ ಎಲ್ಲಾ ಭಾಗಗಳ ಜನರು ತುಮಕೂರಿಗೆ ಬಂದು ಈ ರಸ್ತೆಗಳನ್ನು ನೋಡಿದರೆ ನನ್ನ ಮಾನ ಹೋಗುತ್ತೆ .
- ಜಯಚಂದ್ರ ಕೈ ಬಿಟ್ಟರೆ ನಾನಿದ್ದೇನೆ ಎಂದು ಸಂಸದ ಬಸವರಾಜು ಆಶ್ವಾಸನೆ ಕೊಟ್ಟಿದ್ದರು. ಆದರೆ, ಅವರಿಗೀಗ ಸಾಹಿತ್ಯ ಸಮ್ಮೇಳನದ ಭಾರ ಹೊರಲು ಸಾಧ್ಯವಿಲ್ಲವಂತೆ. ಅವರ ಹೆಗಲ ಮೇಲೆ ಸಿದ್ಧಗಂಗಾ ಶ್ರೀಗಳ ಗುರುವಂದನೆ ಕಾರ್ಯಕ್ರಮದ ಭಾರವಿದೆ. ಅದು 10 ಕೋಟಿ ರುಪಾಯಿಯ ಬಾಬತ್ತು .












Click it and Unblock the Notifications