ಕನ್ನಡ ಸಾಹಿತ್ಯ ಪರಿಷತ್ತಿಗೆ ಆರ್ಥಿಕ ಮುಗ್ಗಟ್ಟು , ನೆರವಿಗೆ ಪುನರೂರು ಮನವಿ
ಧಾರವಾಡ: ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಸುಗಮವಾಗಿ ನಡೆಸಿಕೊಂಡು ಬರಲು ಅನುಕೂಲವಾಗುವಂತೆ ಸಾಹಿತ್ಯಾಭಿಮಾನಿಗಳು ಉದಾರ ನೆರವು ನೀಡಬೇಕೆಂದು ಕಸಾಪ ಅಧ್ಯಕ್ಷ ಹರಿಕೃಷ್ಣ ಪುನರೂರು ಮನವಿ ಮಾಡಿಕೊಂಡಿದ್ದಾರೆ.
ಅನೇಕ ದಾನಿಗಳು ಪರಿಷತ್ತಿನಲ್ಲಿ ದತ್ತಿನಿಧಿ ಸ್ಥಾಪಿಸಿದ್ದರೂ ಪರಿಷತ್ತು ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದೆ. ಪರಿಷತ್ತಿನ ಕಾರ್ಯ ಚಟುವಟಿಕೆಗಳಿಗೆ ಹಣದ ಕೊರತೆಯಿದ್ದು ದೈನಂದಿನ ಚಟುವಟಿಕೆಗಳನ್ನು ತೂಗಿಸಿಕೊಂಡು ಹೋಗುವುದೇ ಕಷ್ಟವಾಗಿದೆ. ಸಾಹಿತ್ಯಾಭಿಮಾನಿಗಳು, ಪೋಷಕರು, ದಾನಿಗಳು ಪರಿಷತ್ತಿಗೆ ಉದಾರ ನೆರವು ನೀಡಬೇಕೆಂದು ಪುನರೂರು ಮನವಿ ಮಾಡಿದರು. ಅವರು, ಗುರುವಾರ ಜರುಗಿದ ಚಾವುಂಡರಾಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಎಸ್.ಪಿ.ಪಾಟೀಲರಿಗೆ ಚಾವುಂಡರಾಯ ಪ್ರಶಸ್ತಿ ಪ್ರದಾನ
ಕಸಾಪ ಮೂಲಕ ಶ್ರವಣಬೆಳಗೊಳದ ಶ್ರೀಕ್ಷೇತ್ರ ನೀಡುವ ಚಾವುಂಡರಾಯ ಪ್ರಶಸ್ತಿಯನ್ನು ಕರ್ನಾಟಕ ವಿವಿಯ ನಿವೃತ್ತ ಪ್ರಾಧ್ಯಾಪಕ ಎಸ್.ಪಿ.ಪಾಟೀಲರಿಗೆ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ನ. ವಜ್ರಕುಮಾರ ಪ್ರದಾನ ಮಾಡಿದರು.
ಚಾವುಂಡರಾಯ ಪುರಾಣದ ಮೇಲೆ ಸಂಶೋಧನೆ ನಡೆಸಿರುವ ಪಾಟೀಲರು, 50 ಕೃತಿಗಳನ್ನು ರಚಿಸುವ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕಾಣಿಕೆ ನೀಡಿದ್ದಾರೆ ಎಂದು ಕೃತಿಕಾರರನ್ನು ಹರಿಕೃಷ್ಣ ಪುನರೂರು ಶ್ಲಾಘಿಸಿದರು. ಪಾಟೀಲರಿಗೆ ಪ್ರಶಸ್ತಿ ನೀಡುವ ಮೂಲಕ ಪರಿಷತ್ತು ಉತ್ತರ ಕರ್ನಾಟಕದ ಲೇಖಕರನ್ನು ಗುರ್ತಿಸುವ ಸಂಪ್ರದಾಯಕ್ಕೆ ನಾಂದಿ ಹಾಡಿದೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಾ.ಬಿ.ಆರ್. ಪಾಟೀಲ್ ಹೇಳಿದರು.
ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೀರಣ್ಣ ರಾಜೂರ, ಶ್ರವಣಬೆಳಗೊಳ ಜೈನಮಠದ ಪ್ರತಿನಿಧಿ ಎಚ್.ಎಸ್.ರಾಜೇಂದ್ರ ಕುಮಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)
Do you want to help Kannada Sahitya Parishad?