ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತುಂ ತುಂ ತುಂ ತುಂಬಿ ಬಂದಿತ್ತಾ .. ಸಮ್ಮೇಳನದ ಸುದ್ದಿ ತುಣುಕುಗಳು..
*ಇನ್ಫೋ ಇನ್ಸೈಟ್
ಎಪ್ಪತ್ತನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬೆಳಗಾವಿಯಲ್ಲಿ ನಡೆಸುವ ನಿರ್ಣಯದೊಂದಿಗೆ ಭಾನುವಾರ ತುಮಕೂರು ಸಾಹಿತ್ಯ ಸಮ್ಮೇಳನ ಕೊನೆಗೊಂಡಿತು. ಸಮ್ಮೇಳನದ ವೈಶಿಷ್ಟ್ಯಗಳನ್ನು ಪಟ್ಟಿ ಮಾಡುವುದಾದರೆ-
- ಗುಬ್ಬಿವೀರಣ್ಣ ವೇದಿಕೆಯಲ್ಲಿ ಸಮಾರೋಪ ಸಮಾರಂಭ ನಡೆಯುತ್ತಿದ್ದಂತೆಯೇ ಸಭಾಂಗಣದಿಂದ ಫರ್ಲಾಂಗ್ ದೂರದ ಕಾಲೇಜಿನಲ್ಲಿ ‘ಸಿನಿಮಾ ಅಭಿರುಚಿ ನಿರ್ಮಾಣ’ ಗೋಷ್ಠಿ ಏರ್ಪಾಡಾಗಿತ್ತು. ವಿಚಾರ ಗೋಷ್ಠಿಗೆ ಕೇವಲ 28 ಮಂದಿ ಪ್ರೇಕ್ಷಕರು. ವೇದಿಕೆಯಲ್ಲಿ 8 ಮಂದಿ ಮಾತುಗಾರರಿದ್ದರು.
- ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವ್ಯವಸ್ಥೆ ಕಂಡು ಬರಲು ಕಾರಣ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಷ್ಕಿೃಯತೆ ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಹರಿಕೃಷ್ಣ ಪುನರೂರು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು. ಅದಕ್ಕೆ ಅವರು ನೀಡಿದ ಕಾರಣಗಳು - ಜಿಲ್ಲಾ ಕಸಾಪ ಅಧ್ಯಕ್ಷರು ಮೆರವಣಿಗೆಯಲ್ಲಿ 3 ತಾಸುಗಳ ಕಾಲ ಸಮ್ಮೇಳನಾಧ್ಯಕ್ಷರೊಂದಿಗೆ ಇರಬೇಕಾಗಿರಲಿಲ್ಲ. ಅವರು ಸಮ್ಮೇಳನದ ವ್ಯವಸ್ಥೆಯ ಅಚ್ಚುಕಟ್ಟುತನದತ್ತ ಗಮನಹರಿಸಬೇಕಿತ್ತು. ಪ್ರತಿನಿಧಿಗಳಿಗೆ ಹಂಚಲು ಸುಮಾರು 30 ಸಾವಿರ ಬ್ಯಾಡ್ಜ್ಗಳು, ಪೆನ್ಗಳು ಮತ್ತು ಕಿಟ್ಗಳನ್ನು ನೀಡಲಾಗಿತ್ತು. ಅವುಗಳನ್ನೆಲ್ಲ ಏನು ಮಾಡಿದರು ಎಂಬುದೇ ತಿಳಿಯದು ...ಹೀಗೆ.
- ‘ಕರ್ನಾಟಕ ಅಭಿವೃದ್ಧಿ- ಪರ್ಯಾಯ ಚಿಂತನೆ’ ಗೋಷ್ಠಿಯಲ್ಲಿ ‘ಕೃಷಿ ಸಮಸ್ಯೆ ಮತ್ತು ಸವಾಲುಗಳು’ ವಿಷಯದ ಬಗ್ಗೆ ಪ್ರಬಂಧ ಮಂಡಿಸಿದ ರಾಜ್ಯ ರೈತಸಂಘ(ಪು)ದ ಅಧ್ಯಕ್ಷ ಪುಟ್ಟಣ್ಣಯ್ಯ ರೈತನೇ ದೇಶದ ಮೊದಲ ಸಾಹಿತಿ ಎಂದು ಸಾರಿದರು. ನಿರ್ಣಯ ಗೋಷ್ಠಿಯಲ್ಲಿ ರೈತರ ಬಗ್ಗೆ ಚಕಾರವೆತ್ತದಿರುವ ಬಗ್ಗೆ ಪುಟ್ಟಣ್ಣಯ್ಯ ಅನುಯಾಯಿಗಳು ಸಭೆಯಲ್ಲಿ ಘೋಷಣೆಗಳನ್ನೂ ಕೂಗಿದರು.
- ಸಾಹಿತ್ಯ ಸಮ್ಮೇಳನ ಸಭಾಂಗಣದ ಆವರಣದಲ್ಲಿ ತಮಿಳುನಾಡು ಮೂಲದ್ದು ಎನ್ನಲಾದ ಕನ್ನಡ ವಿರೋಧಿ ಸಂಘಟನೆಯಾಂದರ ಸದಸ್ಯರು ತಮಿಳು ಕರಪತ್ರಗಳನ್ನು ಹಂಚಿ ಕನ್ನಡ ವಿರೋಧಿ ಘೋಷಣೆಗಳನ್ನು ಕೂಗಿದಾಗ, ನಾಲ್ವರನ್ನು ಪೊಲೀಸರು ಬಂಧಿಸಿದರು. ತಿರುವಳ್ಳುವರ್ ಪ್ರತಿಮೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಬೇಕು ಎಂಬುದು ಅವರ ಆಗ್ರಹ.
- ಮೂರೂ ದಿನಗಳ ಕಾಲ ಚಿತ್ರಕಲಾ ಪ್ರದರ್ಶನ ವೀಕ್ಷಿಸಲು ಜನ ಮುಗಿಬೀಳುತ್ತಿದ್ದರು. ಒಂದೇ ಕೃತಿ ಖರೀದಿಗೆ ಜಟಾಪಟಿ ನಡೆಸಿದರು.
- ಬೆಂಗಳೂರಿನ ಕಲಾವಿದ ಮೋಹನ್ ಸಮ್ಮೇಳನದಲ್ಲಿ ಮಾರ್ಬಲ್ ಪೌಡರ್ನಿಂದ ತಯಾರಿಸಿರುವ ದೇವರ ಪ್ರತಿಮೆಗಳನ್ನು ಮಾರಾಟಕ್ಕೆ ಇಟ್ಟಿದ್ದು, ಈ ಪ್ರತಿಮೆಗಳಿಗೆ ತುಂಬಾ ಬೇಡಿಕೆ ಇತ್ತು.
- ಸಮ್ಮೇಳನಾಧ್ಯಕ್ಷ ಯು.ಆರ್. ಅನಂತಮೂರ್ತಿ ವೇದಿಕೆಯಿಂದ ಇಳಿಯುತ್ತಲೇ ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವ ಆಸೆಯಿಂದ ಅಭಿಮಾನಿಗಳು ಮುಗಿ ಬೀಳುತ್ತಿದ್ದರು. ಅನಂತಮೂರ್ತಿಯವರು ಊಟಕ್ಕೆ ಕುಳಿತಿದ್ದಾಗಲಂತೂ ಫೋಟೋ ಸೆಷನ್ಗೆ ಭಾರೀ ಬೇಡಿಕೆ ಇತ್ತು.
- ಮೈಸೂರಿನ ಪ್ರಸಾರಾಂಗ ಪುಸ್ತಕ ಮಳಿಗೆಗಳಲ್ಲಿ ಪುಸ್ತಕ ಕೊಳ್ಳುವುದು ದುಸ್ತರವೆಂಬಷ್ಟು ರಶ್ಶು. ಸೆಕೆಂಡ್ ಹ್ಯಾಂಡ್ ಬುಕ್ಸ್ ಎಂಬ ಮಳಿಗೆಯಲ್ಲೂ ತರಕಾರಿ ರಾಶಿ ಹಾಕಿದಂತೆ ಪುಸ್ತಕಗಳನ್ನು ರಾಶಿ ಹಾಕಿದ್ದರು. ಜನರು ಪುಸ್ತಕಗಳನ್ನು ಆಯುತ್ತಲೇ ಇದ್ದರು.
- ಸಮ್ಮೇಳನದಲ್ಲಿ ರಾತ್ರಿ ಹೊತ್ತೂ ಗೋಷ್ಠಿಗಳಲ್ಲಿ ಭಾಗವಹಿಸಲು ಕಿಕ್ಕಿರಿದು ತುಂಬಿದ್ದ ಜನರನ್ನು ಕಂಡು ಕೃಷಿ ಸಚಿವ ಟಿ.ಬಿ. ಜಯಚಂದ್ರ, ತಮಗೆ ಈ ದೃಶ್ಯ ಕಂಡು ಸಿಕ್ಕಾಪಟ್ಟೆ ಖುಷಿಯಾಗಿದೆ ಎಂದು ಪತ್ರಿಕೆಗಳಿಗೆ ಸಂದರ್ಶನ ನೀಡುತ್ತಿದ್ದರು.
- ರಿಯಾಯಿತಿ ದರದ ಪುಸ್ತಕಗಳಿಗೆ, ಉತ್ತರ ಕರ್ನಾಟಕದ ಕರದಂಟು ಪ್ಯಾಕೆಟ್ಗಳಿಗೆ, ಸಭಾಂಗಣದ ಹೊರಗಡೆ ಇದ್ದ ಸ್ಟಾಲ್ಗಳಲ್ಲಿ ಚೌಕಾಸಿ ಜೋರಾಗಿತ್ತು.
- ಕವಿಗೋಷ್ಠಿಗೆ ಇದ್ದುದು ಕಡಿಮೆ ಜನ. ಅವರಲ್ಲಿ ಅರ್ಧ ಮಂದಿ ತೂಕಡಿಸುತ್ತಿದ್ದರು.
Story first published: Thursday, February 28, 2002, 5:30 [IST]