ಮಡಿವಂತಿಕೆ ತೊರೆಯಿರಿ, ಕನ್ನಡವನ್ನು ಉಳಿಸಿ ಬೆಳೆಸಿರಿ- ಹುಬ್ಬಳ್ಳಿಯಲ್ಲಿ ಪಾಪು
ಹುಬ್ಬಳ್ಳಿ: ಇತರ ಭಾಷೆಗಳ ಸೂಕ್ತ ಶಬ್ದಗಳನ್ನು ಕನ್ನಡದಲ್ಲಿ ಅಳವಡಿಸಿಕೊಳ್ಳುವ ಮೂಲಕ ಕನ್ನಡವನ್ನು ಶ್ರೀಮಂತಗೊಳಿಸಬೇಕೆಂದು ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಸಲಹೆ ಮಾಡಿದ್ದಾರೆ.
ವಿವಿಧ ಭಾಷೆಗಳೊಂದಿಗೆ ಕನ್ನಡ ಬೆರೆಯುತ್ತಿದ್ದು, ಇವತ್ತು ಕನ್ನಡವನ್ನು ಸರಳಗೊಳಿಸುವ ಕೆಲಸ ನಡೆಯಬೇಕಾಗಿದೆ. ಅತ್ಯಂತ ಕ್ಲಿಷ್ಟ ಪದಗಳ ಬಳಕೆಯನ್ನು ಆಡಳಿತದಲ್ಲಿ ತಡೆಗಟ್ಟಬೇಕು ಎಂದು ಪಾಪು ಸಲಹೆ ಮಾಡಿದರು. ಸವಣೂರಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಜನತೆಯತ್ತ ಕನ್ನಡ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇತರ ಭಾಷೆಗಳ ಶಬ್ದಗಳನ್ನು ಅರಗಿಸಿಕೊಳ್ಳುವ ಗುಣದಿಂದಲೇ ಇಂಗ್ಲೀಷ್ ಭಾಷೆ ಇಂದು ಜಾಗತಿಕ ಮನ್ನಣೆ ಪಡೆದಿದೆ. ಕನ್ನಡ ಕೂಡ ಇದೇ ಹಾದಿಯಲ್ಲಿ ನಡೆಯಬೇಕು. ಆದರೆ ಇಂದು ಕನ್ನಡ ಭಾಷಾಭಿಮಾನ ಕಡಿಮೆಯಾಗುತ್ತಿದ್ದು , ಇತಿಹಾಸ- ಪರಂಪರೆ ಬಗೆಗಿನ ಅಜ್ಞಾನವೂ ಹೆಚ್ಚುತ್ತಿದೆ ಎಂದು ಪಾಪು ವಿಷಾದಿಸಿದರು. ಕನ್ನಡವನ್ನು ಬದುಕಿಸುವ ಕೆಲಸ ಕನ್ನಡಿಗರಿಂದಲೇ ಆಗಬೇಕಿದೆ ಎನ್ನುವುದನ್ನು ಅವರು ಒತ್ತಿ ಹೇಳಿದರು.
ಉತ್ತರ ಕರ್ನಾಟಕದಲ್ಲಿ ಪ್ರಗತಿ ಕೇವಲ ಮಾತಿನ ರೂಪದಲ್ಲಿ ಇದೆಯೇ ಹೊರತು ಕಾರ್ಯರೂಪದಲ್ಲಿ ಇಲ್ಲ . ಈ ಕಾರಣದಿಂದ ರೂಪುಗೊಂಡ ಚಳವಳಿಯಲ್ಲಿ ಪ್ರತ್ಯೇಕ ರಾಜ್ಯ ರಚನೆ ಹೋರಾಟದ ದನಿಗಳೂ ಕೇಳಿಸಿಕೊಳ್ಳುತ್ತಿವೆ ಎಂದು ಪಾಪು ಹೇಳಿದರು.
ರಾಜ್ಯ ಸಾಹಿತ್ಯ ಅಕಾಡೆಮಿ ಸದಸ್ಯ ಸತೀಶ ಕುಲಕರ್ಣಿ, ಡಾ.ಕೆ.ಆರ್.ದುರ್ಗಾದಾಸ್, ಡಾ.ಕಾ.ವೆಂ.ಶ್ರೀನಿವಾಸ ಮೂರ್ತಿ, ರಾಜಪ್ಪ ದಳವಾಯಿ, ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ರಾಮಚಂದ್ರೇಗೌಡ, ಸವಣೂರು ಕಾಲೇಜಿನ ಪ್ರಾಂಶುಪಾಲ ವಿ.ಪಿ.ಸಮೋರಕರ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಸಾಹಿತ್ಯ
ಸೊಗಡು